RCB Champion | ʼನಾವು ಸೋಲಲ್ಲ, ಹಿಂದೆ ಸರಿಯಲ್ಲ; ಎದೆ ತಟ್ಟಿ ನಿಲ್ತೀವಿ - ಗೆಲ್ತೀವಿ ; ರಾಜಕೀಯ ಚರ್ಚೆಗೆ ಗ್ರಾಸವಾದ ಡಿಕೆಶಿ ಪೋಸ್ಟ್‌

ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ತಮ್ಮ ʼಎಕ್ಸ್ʼ ಖಾತೆಯಲ್ಲಿ ಹಾಕಿರುವ ಪೋಸ್ಟ್ ಆರ್‌ಸಿಬಿ ಯಶೋಗಾಥೆಯ ಬಣ್ಣನೆಯೋ ಅಥವಾ ಸ್ವಪಕ್ಷದಲ್ಲಿನ ರಾಜಕೀಯ ಎದುರಾಳಿಗಳಿಗೆ ನೀಡಿರುವ ಸಂದೇಶವೋ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.;

Update: 2025-06-05 01:31 GMT

ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ತಮ್ಮ ಬೆಂಗಾವಲಿನಲ್ಲಿ ಆರ್‌ಸಿಬಿ ತಂಡವನ್ನು ಕರೆತಂದರು

ಐಪಿಎಲ್-18ನೇ ಆವೃತ್ತಿಯ ಚಾಂಪಿಯನ್ ಆಗಿ ಹೊರಹೊಮ್ಮಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಅದ್ಧೂರಿ ಸ್ವಾಗತ ದೊರೆತಿದೆ. ಆರ್‌ಸಿಬಿ ತಂಡದ ಜೊತೆಗೆ ಅಭಿಮಾನಿಗಳು ವಿಜಯೋತ್ಸವದಲ್ಲಿ ಮುಳುಗೇಳುತ್ತಿದ್ದಾರೆ. ಇತ್ತ ರಾಜ್ಯ ಸರ್ಕಾರ ಕೂಡ ಆರ್‌ಸಿಬಿ ತಂಡವನ್ನು ವಿಧಾನಸೌಧದ ಐತಿಹಾಸಿಕ ಮೆಟ್ಟಿಲುಗಳ ಮೇಲೆ ಸನ್ಮಾನಿಸಿದೆ.

ಆರ್‌ಸಿಬಿ ತಂಡದ ಆಗಮನದಿಂದ ಸನ್ಮಾನದವರೆಗೂ ಖುದ್ದು ಮೇಲ್ವಿಚಾರಣೆ ನಡೆಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕ್ರೀಡಾಭಿಮಾನದ ಜೊತೆಯಲ್ಲೇ ನೀಡಿರುವ ಪರೋಕ್ಷ ರಾಜಕೀಯ ಸಂದೇಶ ಇದೀಗ ನಾನಾ ಚರ್ಚೆಗಳಿಗೆ ಎಡೆ ಮಾಡಿಕೊಟ್ಟಿದೆ.

ತಮ್ಮ ʼಎಕ್ಸ್ʼ ಖಾತೆಯಲ್ಲಿ ಹಾಕಿರುವ ಪೋಸ್ಟ್ ಆರ್‌ಸಿಬಿ ಯಶೋಗಾಥೆಯ ಬಣ್ಣನೆಯೋ ಅಥವಾ ಸ್ವಪಕ್ಷದಲ್ಲಿನ ರಾಜಕೀಯ ಎದುರಾಳಿಗಳಿಗೆ ನೀಡಿರುವ ಸಂದೇಶವೋ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿ ಬರುತ್ತಿವೆ.

ಎಚ್ಎಎಲ್ ವಿಮಾನ ನಿಲ್ದಾಣದಿಂದ ಆರ್‌ಸಿಬಿ ತಂಡದ ಬಸ್ಸನ್ನು ತಮ್ಮ ಬೆಂಗಾವಲಿನಲ್ಲಿ ಕರೆತಂದ ಡಿ.ಕೆ. ಶಿವಕುಮಾರ್ ಅವರು ವಿಧಾನಸೌಧದ ಎದುರು ಆಟಗಾರರಿಗೆ ಹೂಗುಚ್ಛ ನೀಡುವ ಮೂಲಕ ಸ್ವಾಗತಿಸಿದರು. ಈ ಚಿತ್ರಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡು ಅದಕ್ಕೆ ಶೀರ್ಷಿಕೆ ನೀಡಿದ್ದಾರೆ.

ʼನಾವು ಸೋಲಲ್ಲ, ಹಿಂದೆ ಸರಿಯಲ್ಲ; ಎದೆ ತಟ್ಟಿ ನಿಲ್ತೀವಿ - ಗೆಲ್ತೀವಿ!ʼ ಎಂಬ ಶೀರ್ಷಿಕೆಯು ಸಿಎಂ ಸ್ಥಾನ ಬದಲಾವಣೆಗೆ ತಾವು ಹಿಡಿದಿರುವ ಪಟ್ಟು ಬಿಡುವುದಿಲ್ಲ ಎಂಬ ಸಂದೇಶ ಸಾರಿದಂತೆಯೂ ಭಾಸವಾಗುತ್ತಿದೆ.

ಇದೇ ಸೆಪ್ಟೆಂಬರ್ ಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರ್ಣಗೊಳಿಸಲಿದೆ. ಸರ್ಕಾರ ರಚನೆ ಸಂದರ್ಭದಲ್ಲಿ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಮಧ್ಯೆ ನಡೆದಿದೆ ಎನ್ನಲಾದ ಅಧಿಕಾರ ಹಂಚಿಕೆ ಒಪ್ಪಂದದಂತೆ ಇಬ್ಬರೂ ನಾಯಕರಿಗೆ ತಲಾ ಎರಡೂವರೆ ವರ್ಷ ಅಧಿಕಾರ ಹಂಚಿಕೆ ಎನ್ನಲಾಗಿತ್ತು. ಈ ಕುರಿತು ಕಾಂಗ್ರೆಸ್‌ ನಾಯಕರಲ್ಲಿ ಸಾಕಷ್ಟು ಚರ್ಚೆ, ಅಸಮಾಧಾನ ಸೃಷ್ಟಿಯಾಗಿ ಭಿನ್ನಮತಕ್ಕೂ ಆಸ್ಪದ ನೀಡಿತ್ತು.

ಈಗ ಸಿದ್ದರಾಮಯ್ಯ ಅವರು ಸಿಎಂ ಆಗಿ ಸೆಪ್ಟೆಂಬರ್‌ ತಿಂಗಳಿಗೆ ಎರಡೂವರೆ ವರ್ಷವಾಗಲಿದೆ. ಡಿ.ಕೆ. ಶಿವಕುಮಾರ್‌ ಬೆಂಬಲಿಗರು ತೆರೆಮರೆಯಲ್ಲಿ ಮುಖ್ಯಮಂತ್ರಿ ಬದಲಾವಣೆ ಪಟ್ಟು ಹಿಡಿದಿದ್ದಾರೆ. ಒಂದು ವೇಳೆ ಅಧಿಕಾರ ಹಂಚಿಕೆಯಂತೆ  ಹಸ್ತಾಂತರ ನಡೆದರೆ ಮುಂದಿನ ಎರಡೂವರೆ ವರ್ಷಕ್ಕೆ ಡಿ.ಕೆ. ಶಿವಕುಮಾರ್ ಸಿಎಂ ಆಗಿ ಅಧಿಕಾರ ವಹಿಸಲಿಕೊಳ್ಳಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

Tags:    

Similar News