RCB Champion | ಈ ಸಲ ಕಪ್ ನಮ್ದೆ- ತಪ್ಪೂ ನಮ್ಮದೇ; ಸರ್ಕಾರದ ವೈಫಲ್ಯಕ್ಕೆ ಎಲ್ಲೆಡೆ ಆಕ್ರೋಶ
ಆರ್ಸಿಬಿ ಅಭಿಮಾನಿಗಳ ಸಂಭ್ರಮ , ಹುಮ್ಮಸ್ಸು ಅರಿಯದೇ ರಾಜ್ಯ ಸರ್ಕಾರ ಆತುರದಲ್ಲಿ ಕೈಗೊಂಡ ಕಾರ್ಯಕ್ರಮದಿಂದಾಗಿ ಕಾಲ್ತುಳಿತ ಸಂಭವಿಸಿ ಹತ್ತು ಮಂದಿ ಅಮಾಯಕ ಅಭಿಮಾನಿಗಳು ಪ್ರಾಣ ಕಳೆದುಕೊಂಡಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರದ ವೈಫಲ್ಯವೇ ಕಾರಣ ಎಂಬ ಆರೋಪಗಳು ಕೇಳಿ ಬಂದಿವೆ.;
ಗಾಯಗೊಂಡ ಆರ್ಸಿಬಿ ಅಭಿಮಾನಿಗಳನ್ನು ಅಂಬುಲೆನ್ಸ್ನಲ್ಲಿ ಕರೆದೊಯ್ಯಲಾಯಿತು
ಐಪಿಎಲ್ ಚಾಂಪಿಯನ್ ಟ್ರೋಫಿಯೊಂದಿಗೆ ತವರಿನಲ್ಲಿ ವಿಜಯೋತ್ಸವ ಆಚರಿಸಲು ಬಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡಕ್ಕೆ ಸಂಭ್ರಮದ ಬದಲು ತನ್ನ ಅಭಿಮಾನಿಗಳ ಸಾವಿನ ಸೂತಕ ಬರಸಿಡಿಲಂತೆ ಬಡಿದಿದೆ.
ಐಪಿಎಲ್ ಟೂರ್ನಿ ಆರಂಭವಾದ 18 ವರ್ಷಗಳ ನಂತರ ಆರ್ಸಿಬಿ ತಂಡ ಟ್ರೋಫಿ ಗೆದ್ದ ಸಂಭ್ರಮದಲ್ಲಿ ಇಡೀ ರಾಜ್ಯವೇ ಮುಳುಗಿತ್ತು. ಆರ್ಸಿಬಿ ಗೆಲುವಿನ ಸಂಭ್ರಮ ಸಿಲಿಕಾನ್ ಸಿಟಿಯನ್ನು ಬಣ್ಣ ಬಣ್ಣದ ಸಿಡಿಮದ್ದುಗಳಿಗೆ ಜಗಮಗಿಸುವಂತೆ ಮಾಡಿತ್ತು. ಆದರೆ, ಅಭಿಮಾನಿಗಳ ಸಂತಸ, ಹುಮ್ಮಸ್ಸು, ಆರ್ಸಿಬಿ ತಂಡದ ಮೇಲಿನ ವ್ಯಾಮೋಹ ಅರಿಯದ ಸರ್ಕಾರ ಆತುರದಲ್ಲಿ ಕೈಗೊಂಡ ಕಾರ್ಯಕ್ರಮವೇ ಹತ್ತು ಮಂದಿ ಅಮಾಯಕ ಅಭಿಮಾನಿಗಳ ಸಾವಿಗೆ ಕಾರಣವಾಗಿದೆ.
ದಿಢೀರ್ ಕಾರ್ಯಕ್ರಮ ನಿಗದಿ
ಮಂಗಳವಾರ ರಾತ್ರಿ ಅಹಮದಾಬಾದ್ನಲ್ಲಿ ನಡೆದ ಐಪಿಎಲ್ ಫೈನಲ್ ಪಂದ್ಯದಲ್ಲಿ ಆರ್ಸಿಬಿ ತಂಡವು ಎದುರಾಳಿ ಪಂಜಾಬ್ ಕಿಂಗ್ಸ್ ತಂಡವನ್ನು ಆರು ರನ್ಗಳಿಂದ ಮಣಿಸಿ ಟ್ರೋಫಿಗೆ ಮುತ್ತಿಡುತ್ತಿದ್ದಂತೆ ಸಂಭ್ರಮಾಚರಣೆ ಗರಿಗೆದರಿತ್ತು. ಆರ್ಸಿಬಿ ತಂಡದ ಜೊತೆಯಲ್ಲೇ ಸಂಭ್ರಮಾಚರಣೆಗೆ ನಿರ್ಧರಿಸಿದ ರಾಜ್ಯ ಸರ್ಕಾರ, ಅಗತ್ಯ ಪೂರ್ವ ಸಿದ್ಧತೆಗಳಿಲ್ಲದೇ ಕಾರ್ಯಕ್ರಮ ನಿಗದಿಪಡಿಸಿತು.
ವಿಧಾನಸೌಧದ ಮೆಟ್ಟಿಲು ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಏಕಕಾಲದಲ್ಲಿ ಕಾರ್ಯಕ್ರಮ ನಿಗದಿ ಮಾಡುತ್ತಿದ್ದಂತೆ ಅಭಿಮಾನಿಗಳ ದಂಡು ಜಮಾಯಿಸಿತು. ಈ ವೇಳೆ ಕಾಲ್ತುಳಿತ ಸಂಭವಿಸಿ 10 ಕ್ಕೂ ಹೆಚ್ಚು ಅಭಿಮಾನಿಗಳು ಮೃತಪಟ್ಟಿದ್ದು, ಇದಕ್ಕೆ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂಬ ಟೀಕೆಗಳು ಕೇಳಿಬರುತ್ತಿವೆ.
ಮೇರೆ ಮೀರಿದ್ದ ಸಂಭ್ರಮಾಚರಣೆ
ಮಂಗಳವಾರ ರಾತ್ರಿ ಆರ್ಸಿಬಿ ತಂಡ ಭರ್ಜರಿ ಜಯ ಗಳಿಸುತ್ತಿದ್ದಂತೆ ರಾಜಧಾನಿಯಲ್ಲಿ ಪಟಾಕಿಗಳ ಸದ್ದು ಜೋರಾಗಿತ್ತು. ಬೆಂಗಳೂರಿನ ಮೂಲೆ ಮೂಲೆಯಲ್ಲೂ ಅಭಿಮಾನಿಗಳ ಹರ್ಷೋದ್ಘಾರ, ರಸ್ತೆಗಳಲ್ಲಿ ನೃತ್ಯ ಮೇರೆ ಮೀರಿತ್ತು. ಮಂಗಳವಾರ ರಾತ್ರಿ ಕೂಡ ಅಭಿಮಾನಿಗಳನ್ನು ನಿಯಂತ್ರಿಸುವುದು ಪೊಲೀಸರಿಗೆ ಕಷ್ಟಕರವಾಗಿತ್ತು. ಇದೆಲ್ಲಾವನ್ನೂ ಗಮನಿಸಿದ್ದ ರಾಜ್ಯ ಸರ್ಕಾರ ದಿಢೀರನಢ ಆರ್ಸಿಬಿ ತಂಡವನ್ನು ಕರೆಸಿ, ವಿಧಾನಸೌಧ ಹಾಗೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ನಿಗದಿ ಮಾಡುವ ಮೂಲಕ ಎಡವಟ್ಟು ಮಾಡಿತು. ಜೊತೆಗೆ ರಸ್ತೆಯ ಎರಡೂ ಬದಿಗಳಲ್ಲಿ ಅಭಿಮಾನಿಗಳ ಜಮಾವಣೆಗೆ ಅವಕಾಶ ಮಾಡಿದ್ದರಿಂದ ಕಾಲ್ತುಳಿತ ಸಂಭವಿಸಿತು.
ಪೊಲೀಸರ ಎಚ್ಚರಿಕೆ ನಿರ್ಲಕ್ಷಿಸಿದ ಸರ್ಕಾರ
ಆರ್ಸಿಬಿ ತಂಡದ ವಿಜಯೋತ್ಸವ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸುವ ಕುರಿತು ಪೊಲೀಸರು ಸರ್ಕಾರಕ್ಕೆ ಮೊದಲೇ ಸುಳಿವು ನೀಡಿದ್ದರು. ಆದಾಗ್ಯೂ ರಾಜ್ಯ ಸರ್ಕಾರ ಯಾವುದೇ ಪೂರ್ವ ಸಿದ್ಧತೆ ಕೈಗೊಳ್ಳದೇ ಎರಡು ಕಡೆ ಕಾರ್ಯಕ್ರಮ ಆಯೋಜಿಸಿತು. ಆದರೆ, ಪ್ರವಾಹೋಪಾದಿಯಲ್ಲಿ ಬಂದ ಅಭಿಮಾನಿಗಳನ್ನು ನಿಯಂತ್ರಿಸಲು ಹೆಚ್ಚಿನ ಪೊಲೀಸ್ ಸಿಬ್ಬಂದಿ ನಿಯೋಜಿಸಿರಲಿಲ್ಲ. ಇದೂ ಕೂಡ ಕಾಲ್ತುಳಿತಕ್ಕೆ ಪ್ರಮುಖ ಕಾರಣ ಎಂದು ಆರೋಪಿಸಲಾಗಿದೆ.
ಇನ್ನು ಆರ್ಸಿಬಿ ಆಟಗಾರರನ್ನು ತೆರೆದ ವಾಹನದಲ್ಲಿ ಮೆರವಣಿಗೆ ನಡೆಸಲು ಸರ್ಕಾರ ನಿರ್ಧರಿಸಿತ್ತು. ಆದರೆ, ಪರಿಸ್ಥಿತಿಯ ಗಂಭೀರತೆ ಅರಿತ ಪೊಲೀಸರು ತೆರೆದ ವಾಹನದಲ್ಲಿ ಮೆರವಣಿಗೆಗೆ ಅನುಮತಿ ನಿರಾಕರಿಸಿದರು. ಸರ್ಕಾರದ ಒತ್ತಡ ಹಾಕಿದರೂ ಭದ್ರತೆಯ ಕಾರಣಗಳನ್ನು ನೀಡಿ ಮೆರವಣಿಗೆಗೆ ಅನುಮತಿ ನಿರಾಕರಿಸಿತು.
ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ಜನಸ್ತೋಮ
ವಿಧಾನಸೌಧದ ಬಳಿಕ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದ್ದರಿಂದ ಬಹುತೇಕ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜಮಾಯಿಸಿದ್ದರು. ಕಡಿಮೆ ಸಂಖ್ಯೆಯಲ್ಲಿದ್ದ ಪೊಲೀಸರು ಆರ್ಸಿಬಿ ಅಭಿಮಾನಿಗಳನ್ನು ನಿಯಂತ್ರಿಸಲು ಹರಸಾಹಸಪಟ್ಟರು.
ಆರ್ಸಿಬಿ ತಂಡದ ಆಗಮನಕ್ಕೂ ಮುನ್ನವೇ ನೂಕುನುಗ್ಗಲು ಉಂಟಾಗಿದ್ದರಿಂದ ಪೊಲೀಸರು ಲಘು ಲಾಠಿ ಪ್ರಹಾರವನ್ನೂ ನಡೆಸಬೇಕಾಯಿತು. ಈ ವೇಳೆ ಹಲವರು ಅಸ್ವಸ್ಥರಾದ ಅಭಿಮಾನಿಗಳನ್ನು ಆಸ್ಪತ್ರೆಗಳಿಗೆ ಸಾಗಿಸಲಾಯಿತು. ಒಟ್ಟಾರೆ ಘಟನೆಯಲ್ಲಿ ಹತ್ತಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 20 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಅವ್ಯವಸ್ಥೆಗೆ ಸಿಎಂ ಅಸಮಾಧಾನ
ಆರ್ಸಿಬಿ ಆಟಗಾರರನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಆಗಮಿಸಿದ್ದು, ಸೂಕ್ತ ಸಿದ್ಧತೆ ಮಾಡಿಕೊಳ್ಳದೇ ಕಾರ್ಯಕ್ರಮ ಆಯೋಜನೆ ಮಾಡಿದ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯ ಅವರೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆರ್ಸಿಬಿ ತಂಡದ ಆಟಗಾರರನ್ನು ಕರೆತರುವ ಮಾರ್ಗದಲ್ಲಿ ಯಾವುದೇ ಪೂರ್ವ ಸಿದ್ಧತೆ ಕೈಗೊಳ್ಳದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸಿಎಂ ಅವರು ಆರ್ಸಿಬಿ ತಂಡವು ವಿಧಾನಸೌಧ ಮೆಟ್ಟಿಲುಗಳ ಮೇಲೆ ಬಂದ ನಂತರ ಸಿಎಂ ಹೊರಗೆ ಬಂದಿದ್ದರು. ಸರ್ಕಾರದ ಭದ್ರತಾ ಲೋಪಗಳಿಂದಲೇ ಕಾಲ್ತುಳಿತ ಸಂಭವಿಸಿದೆ ಎಂಬ ಪ್ರತಿಪಕ್ಷಗಳು ಹಾಗೂ ಸಾರ್ವಜನಿಕರು ಆಕ್ರೋಶ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದೆ.