ಮೆಟ್ರೋ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ಗಳಿಗೆ ಅನುಮತಿ: 'ಎಲ್ಲಿ ಅಡಗಿದೆ ನಿಮ್ಮ ಸ್ವಾಭಿಮಾನ' ಎಂದು ಡಿಕೆಶಿ ಪ್ರಶ್ನಿಸಿದ ಜೆಡಿಎಸ್
ಮೆಟ್ರೊದಲ್ಲಿ ಅಮುಲ್ಗೆ ಅವಕಾಶ ನೀಡುವ ಮೂಲಕ ಕರ್ನಾಟಕದ ನಂದಿನಿ ಹಾಲಿನ ಬ್ರಾಂಡ್ಗೆ ಧಕ್ಕೆ ತರಲಾಗುತ್ತಿದೆ ಎಂದು ಜೆಡಿಎಸ್ ಇದೇ ವೇಳೆ ಆರೋಪಿಸಿದೆ.;
ಬೆಂಗಳೂರಿನ 10ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳಲ್ಲಿ ಗುಜರಾತ್ನ ಅಮುಲ್ ಹಾಲಿನ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ನೀಡಿರುವ ನಿರ್ಧಾರವನ್ನು ಜೆಡಿಎಸ್ ಬಲವಾಗಿ ವಿರೋಧಿಸಿದೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ನೇರವಾಗಿ ತನ್ನ ಸೋಶಿಯಲ್ ಮೀಡಿಯಾ ಖಾತೆಯ ಮೂಲಕ ತರಾಟೆಗೆ ತೆಗೆದುಕೊಂಡಿದ್ದು, ಈಗ ನಿಮ್ಮ ಸ್ವಾಭಿಮಾನ ಎಲ್ಲಿ ಅಡಗಿದೆ ಎಂದು ಪ್ರಶ್ನಿಸಿದೆ.
ಮೆಟ್ರೊದಲ್ಲಿ ಅಮುಲ್ಗೆ ಅವಕಾಶ ನೀಡುವ ಮೂಲಕ ಕರ್ನಾಟಕದ ನಂದಿನಿ ಹಾಲಿನ ಬ್ರಾಂಡ್ಗೆ ಧಕ್ಕೆ ತರಲಾಗುತ್ತಿದೆ ಎಂದು ಜೆಡಿಎಸ್ ಇದೇ ವೇಳೆ ಆರೋಪಿಸಿದೆ.
ಜೆಡಿಎಸ್ನ ಅಧಿಕೃತ 'ಎಕ್ಸ್' (ಹಿಂದಿನ ಟ್ವಿಟರ್) ಹ್ಯಾಂಡಲ್ನಲ್ಲಿ ಪ್ರಕಟಿಸಲಾದ ಟ್ವೀಟ್ನಲ್ಲಿ, "ಕಮಿಷನ್ ಆಸೆಗೆ ಸ್ವಾಭಿಮಾನ ಮಾರಿಕೊಂಡ ಡಿಕೆಶಿ! ಚುನಾವಣೆಗೂ ಮುಂಚೆ 'ನಂದಿನಿ ಉಳಿಸಿ' ಎಂದು ಪುಂಗಿ ಬಿಡುತ್ತಿದ್ದ ಡಿಕೆಶಿ, ಇಂದು ಹೊರ ರಾಜ್ಯಗಳ ಹಾಲಿನ ಉತ್ಪನ್ನಗಳಿಗೆ ಮಣೆ ಹಾಕಿದ್ದಾರೆ. ನಮ್ಮ ರೈತರ ಹಾಗೂ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ನಂದಿನಿಯನ್ನು ಮರೆತು, ಅಮುಲ್ಗೆ ರತ್ನ ಕಂಬಳಿ ಹಾಸಿದ್ದಾರೆ" ಎಂದು ನೇರವಾಗಿ ಆರೋಪಿಸಲಾಗಿದೆ.
ರೈತರು ಮತ್ತು ನಂದಿನಿ ಬ್ರಾಂಡ್ ಮೇಲೆ ಪರಿಣಾಮ
ಈ ನಡೆಯಿಂದಾಗಿ ಕರ್ನಾಟಕದ ರೈತರಿಗೆ ನೇರವಾಗಿ ಪರಿಣಾಮ ಬೀರುತ್ತಿದ್ದು, ನಂದಿನಿ ಬ್ರಾಂಡ್ನ ಮಾರುಕಟ್ಟೆ ಪ್ರಾಬಲ್ಯಕ್ಕೆ ಧಕ್ಕೆ ಉಂಟಾಗಿದೆ ಎಂದು ಜೆಡಿಎಸ್ ಹೇಳಿಕೊಂಡಿದೆ. 2023ರ ವಿಧಾನಸಭಾ ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷವು ಅಮುಲ್ನ ಪ್ರವೇಶವನ್ನು ತೀವ್ರವಾಗಿ ವಿರೋಧಿಸಿ, "ನಂದಿನಿ ಉಳಿಸಿ" ಎಂಬ ಪ್ರಚಾರ ನಡೆಸಿತ್ತು. ಈ ನಡೆಯನ್ನು ನೇರವಾಗಿ ಪ್ರಶ್ನಿಸಿರುವ ಜೆಡಿಎಸ್. ಅಧಿಕಾರಕ್ಕೆ ಬಂದ ಬಳಿಕ, ನಂದಿನಿಯನ್ನು ಉಳಿಸುವ ಬದಲು ಹೊರ ರಾಜ್ಯಗಳ ಹಾಲಿನ ಉತ್ಪನ್ನಗಳಿಗೆ ಅವಕಾಶ ನೀಡಿರುವುದು ಖಂಡನಾರ್ಹ ಹೇಳಿದೆ.
ಜೆಡಿಎಸ್ ಟ್ವೀಟ್ನಲ್ಲಿ ಏನಿದೆ?
ಕಮಿಷನ್ ಆಸೆಗೆ ಸ್ವಾಭಿಮಾನ ಮಾರಿಕೊಂಡ ಡಿಕೆ ಶಿವಕುಮಾರ್. ಡೂಪ್ಲಿಕೇಟ್ ಸಿಎಂ ಡಿಕೆಶಿಯ, ನವರಂಗಿ ಆಟ ಮತ್ತೊಮ್ಮೆ ಬಯಲಾಗಿದೆ. ಚುನಾವಣೆಗೂ ಮುಂಚೆ #SaveNandini , ಕನ್ನಡಿಗರ ಆತ್ಮಗೌರವ ಮಾರಾಟಕ್ಕಿಲ್ಲ ಎಂದು ಪುಂಗಿ ಬಿಡುತ್ತಿದ್ದ ಡಿಕೆಶಿ, ಕಮಿಷನ್ ಆಸೆಗೆ ಇಂದು ಹೊರ ರಾಜ್ಯಗಳ ಹಾಲಿನ ಉತ್ಪನ್ನಗಳಿಗೆ ಮಣೆ ಹಾಕಿದ್ದಾರೆ.
ಬೆಂಗಳೂರಿನಲ್ಲಿ 10ಕ್ಕೂ ಹೆಚ್ಚು ಮೆಟ್ರೋ ನಿಲ್ದಾಣಗಳಲ್ಲಿ ಹೊರ ರಾಜ್ಯದ ಹಾಲಿನ ಉತ್ಪನ್ನಗಳ ಮಾರಾಟ ಮಳಿಗೆಗೆ ಅವಕಾಶ ನೀಡಲಾಗಿದೆ. ನಮ್ಮ ರೈತರ ಹಾಗೂ ಕನ್ನಡಿಗರ ಸ್ವಾಭಿಮಾನದ ಸಂಕೇತವಾಗಿರುವ ನಂದಿನಿ ಬ್ರಾಂಡ್ ಅನ್ನು ತನ್ನ ಪ್ರಚಾರಕ್ಕೆ ಬಳಸಿಕೊಂಡ @INCKarnataka ಇದೀಗ ಅಧಿಕಾರಕ್ಕೆ ಸಿಕ್ಕ ಬಳಿಕ ನಂದಿನಿಯನ್ನು ಮರೆತು, ಹೊರ ರಾಜ್ಯಗಳ ಹಾಲಿನ ಉತ್ಪನ್ನಗಳಿಗೆ ರತ್ನ ಕಂಬಳಿ ಹಾಸಿದೆ.
ನಂದಿನಿ ಹಾಲಿನ ಉತ್ಪನ್ನಗಳಿಗೆ ಸ್ಪರ್ಧಾತ್ಮಕವಾಗಿ ಮಾರುಕಟ್ಟೆ ಸೃಷ್ಟಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದ್ದು, ಕನ್ನಡಿಗರ ಹೆಮ್ಮೆಯ ಬ್ರಾಂಡ್ "ನಂದಿನಿ"ಯ ಹಿತಾಸಕ್ತಿಗೆ ಧಕ್ಕೆ ತರುತ್ತಿದೆ ಎಂದು ಹೇಳಿದೆ.
2023ರ ಡಿಕೆಶಿ ಟ್ವೀಟ್ ಏನು?
2023ರ ಏಪ್ರಿಲ್ 10ರಂದು ಟ್ವೀಟ್ ಮಾಡಿದ್ದ ಡಿಕೆ ಶಿವಕುಮಾರ್ ಅವರು, ಕನ್ನಡಿಗರ ಆತ್ಮಗೌರವ ಮಾರಾಟಕ್ಕಿಲ್ಲ, ನಮ್ಮ ಸ್ವಾಭಿಮಾನ ಅಡವಿಡಲು ಸಿದ್ಧರಿಲ್ಲ. ನಂದಿನಿ ಕನ್ನಡಿಗರ ನಾಡಿ ಮಿಡಿತ. ಬಿಜೆಪಿಯ ಕೊನೆಗಾಲ ಸನ್ನಿಹಿತ ಎಂದ ಬರೆದುಕೊಂಡಿದ್ದರು.