ಹಿಂದೂಗಳ ಹೆಸರಿಟ್ಟುಕೊಂಡು ನೆಲೆಸಿದ ಪಾಕ್‌ ಪ್ರಜೆಗಳು: ದಾವಣಗೆರೆಯಲ್ಲಿ ಓರ್ವ ಮಹಿಳೆಯ ಬಂಧನ

ಜಿಗಣಿಯಲ್ಲಿ ಸೆರೆ ಸಿಕ್ಕಿರುವ ಪಾಕಿಸ್ತಾನ ಪ್ರಜೆಗಳು ಕುರಿತು ಹೆಚ್ಚಿನ ತನಿಖೆಗಾಗಿ ಪೊಲೀಸರ 4 ತಂಡಗಳನ್ನು ರಚಿಸಲಾಗಿದೆ. ಡಿವೈಎಸ್ಪಿ ಮೋಹನ್‌ ಕುಮಾರ್ ನೇತೃತ್ವದಲ್ಲಿ 4 ತಂಡಗಳು ತನಿಖೆ ನಡೆಸಲಿವೆ.

Update: 2024-10-02 14:40 GMT

ಜಿಗಣಿಯಲ್ಲಿ ಪಾಕ್ ಪ್ರಜೆಗಳ ಬಂಧನ ಬೆನ್ನಲ್ಲೇ ಹಿಂದೂಗಳ ಹೆಸರು ಇಟ್ಟುಕೊಂಡು ದಾವಣಗೆರೆಯಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

ದಾವಣಗೆರೆಯ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ವಾಸವಿದ್ದ ಪಾಕಿಸ್ತಾನದ ಮಹಿಳೆ ಫಾತಿಮಾ ಬಂಧಿತ ಆರೋಪಿ.

ನಕಲಿ ದಾಖಲೆ ಸೃಷ್ಟಿಸಿಕೊಂಡು ಭಾರತದಲ್ಲಿ ನೆಲೆಸಿರುವ ಕುರಿತು ಖಚಿತ ಮಾಹಿತಿ ಆಧರಿಸಿ ಫಾತಿಮಾಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿ ದಾವಣಗೆರೆಯ ಅಲ್ತಾಫ್ ಎಂಬುವರನ್ನು ವಿವಾಹವಾಗಿದ್ದರು.

ಈಗಾಗಲೇ ಮೊಹಮದ್ ಹನೀಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದು, ಈತ ಕೂಡ ಪಾಕಿಸ್ತಾನದ ಪ್ರಜೆಯಾಗಿದ್ದಾನೆ. ಮೊಹಮದ್ ಹನೀಫ್ ಸೊಸೆ, ಮಗಳು, ಅಳಿಯನನ್ನೂ ಪೊಲೀಸರು ಖೆಡ್ಡಾಕ್ಕೆ ಬೀಳಿಸಿದ್ದಾರೆ.

ರಶೀದ್ ಅಲಿ ಸಿದ್ದಿಕಿ ಎಂಬಾತನ ಮಾವ ಮೊಹಮ್ಮದ್ ಹನೀಫ್ ಬೆಂಗಳೂರಿನಲ್ಲಿ ಸೆರೆ ಸಿಕ್ಕಿರುವ ಪ್ರಮುಖ ಆರೋಪಿ. ಸಿದ್ದಿಕಿ ಮೊಹಮ್ಮದ್ ಯಾಸಿನ್ (ಮಗ), ಜೈನಾಬಿ ನೂರ್ (ಸೊಸೆ), ಫಾತಿಮಾ (ಮಗಳು), ಅಲ್ತಾಫ್ ಬಂಧಿತರು.

ಬಂಧಿತರ ಪೈಕಿ ರಶೀದ್ ಅಲಿ ಸಿದ್ದಿಕಿ ಶಂಕರ್ ಶರ್ಮಾ(48) ಎಂದು ಹೆಸರಿಟ್ಟುಕೊಂಡಿದ್ದರೆ, ಆಯೇಷಾ ಹನೀಫ್ (ಆಶಾ ಶರ್ಮಾ) (38), ಮೊಹಮ್ಮದ್ ಹನೀಫ್ (ರಾಮ್ ಬಾಬಾ ಶರ್ಮಾ) (73), ರುಬೀನಾ (ರಾಣಿ ಶರ್ಮಾ) (61) ಎಂಬ ಹೆಸರಿಟ್ಟುಕೊಂಡು ಭಾರತದಲ್ಲಿ ನೆಲೆಸಿದ್ದರು.

ಈ ಮಧ್ಯೆ ಬೆಂಗಳೂರಿನ ಜಿಗಣಿಯಲ್ಲಿ ಸೆರೆಸಿಕ್ಕಿರುವ ಪಾಕಿಸ್ತಾನ ಪ್ರಜೆಗಳು ಕುರಿತು ಹೆಚ್ಚಿನ ತನಿಖೆಗಾಗಿ ಪೊಲೀಸರ 4 ತಂಡಗಳನ್ನು ರಚಿಸಲಾಗಿದೆ. ಡಿವೈಎಸ್ಪಿ ಮೋಹನ್‌ಕುಮಾರ್ ನೇತೃತ್ವದಲ್ಲಿ 4 ತಂಡಗಳನ್ನು ತನಿಖೆ ನಡೆಸಲಿವೆ. ಅಲ್ಲದೇ ಇನ್ನಷ್ಟು ಮಂದಿ ಬೆಂಗಳೂರಿನಲ್ಲಿ ಬೀಡುಬಿಟ್ಟಿರುವ ಮಾಹಿತಿ ಇದ್ದು, ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ ಎನ್ನಲಾಗಿದೆ.

ಬನ್ನೇರುಘಟ್ಟ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಕೃಷ್ಣಕುಮಾರ್, ಜಿಗಣಿ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ಮಂಜುನಾಥ್, ಅತ್ತಿಬೆಲೆ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರಾಘವೇಂದ್ರ, ಸರ್ಜಾಪುರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ನವೀನ್ ಕುಮಾರ್ ಅವರ ನೇತೃತ್ವದಲ್ಲಿ ನಾಲ್ಕು ತಂಡಗಳನ್ನು ರಚನೆ ಮಾಡಲಾಗಿದೆ. ಈ ತಂಡಗಳು ದೆಹಲಿ, ಚೆನ್ನೈ ಬೆಳಗಾವಿ, ಮುಂಬೈ ಸೇರಿ ಹಲವೆಡೆ ತೆರಳಿ ಮಾಹಿತಿ ಕಲೆ ಹಾಕಲಿವೆ. ಪಾಕಿಸ್ತಾನ ಪ್ರಜೆಗಳಿಗೆ ನಕಲಿ ಆಧಾರ್ ಸೇರಿದಂತೆ ಅಗತ್ಯ ದಾಖಲೆ ಮಾಡಿಕೊಟ್ಟವರ ಕುರಿತಾಗಿಯೂ ತನಿಖೆ ತೀವ್ರಗೊಳಿಸಲಾಗಿದೆ.

Tags:    

Similar News