ಕನ್ನಡಿಗರಿಗೆ ಮೀಸಲಾತಿ | ನಾಲಿಗೆ ಬಿಗಿ ಹಿಡಿದು ಮಾತಾಡಿ: ಮಸೂದೆ ವಿರೋಧಿಗಳಿಗೆ ನಾರಾಯಣ ಗೌಡ ಎಚ್ಚರಿಕೆ

ರಾಜ್ಯದ ಎಲ್ಲಾ ಖಾಸಗಿ ಉದ್ಯಮಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಡ್ಡಾಯಗೊಳಿಸುವ ವಿಧೇಯಕಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಆದರೆ ಈ ಮಸೂದೆಗೆ ಉದ್ಯಮಿಗಳಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

Update: 2024-07-17 13:55 GMT
ಟಿ.ಎ. ನಾರಾಯಣಗೌಡರು
Click the Play button to listen to article

ರಾಜ್ಯದ ಎಲ್ಲಾ ಖಾಸಗಿ ಉದ್ಯಮ, ಕೈಗಾರಿಕೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಡ್ಡಾಯಗೊಳಿಸುವ ವಿಧೇಯಕಕ್ಕೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಆದರೆ ಈ ಮಸೂದೆಗೆ ಉದ್ಯಮಿಗಳಿಂದ ಭಾರೀ ವಿರೋಧ ವ್ಯಕ್ತವಾಗುತ್ತಿದೆ.

ಇದೀಗ ಈ ವಿವಾದದ ಕುರಿತು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣ ಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ಕನ್ನಡಿಗರಿಗೆ ಉದ್ಯೋಗದಲ್ಲಿ ಮೀಸಲಾತಿ ನೀಡುವುದನ್ನು ವಿರೋಧಿಸುವ ಉದ್ಯಮಿಗಳು ದೇಶದ್ರೋಹಿಗಳು. ಇಂಥ ದೇಶದ್ರೋಹಿಗಳನ್ನು ಹೇಗೆ ವಿರೋಧಿಸುವುದು ಎಂಬುದು ನಮಗೆ ಗೊತ್ತಿದೆ. ಹೀಗಾಗಿ ಇವರು ತಮ್ಮ ನಾಲಿಗೆ ಬಿಗಿಹಿಡಿದು ಮಾತಾಡುವುದು ಒಳ್ಳೆಯದು" ಎಂದು ಅವರು ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, "ಇಂದು ಬೆಳಿಗ್ಗೆಯಷ್ಟೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ, ಖಾಸಗಿ ವಲಯದಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ವಿಧೇಯಕಕ್ಕೆ ಸಚಿವ ಸಂಪುಟದ ಅನುಮೋದನೆ ಪಡೆದಿರುವುದಕ್ಕೆ ಅಭಿನಂದಿಸಿ, ಕೃತಜ್ಞತೆ ಸಲ್ಲಿಸಿದೆ. ಇದು ಎಂದೋ ಆಗಬೇಕಿದ್ದ ಕಾರ್ಯ. ಸಿದ್ಧರಾಮಯ್ಯ ಅವರ ಕನ್ನಡ ಕಾಳಜಿ ಮತ್ತು ಬದ್ಧತೆಯಿಂದ ಈಗ ಅದು ಸಾಧ್ಯವಾಗುತ್ತಿದೆ" ಎಂದಿದ್ದಾರೆ.

"ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಒದಗಿಸುವ ವಿಧೇಯಕ ವಿಧಾನಮಂಡಲದ ಉಭಯದ ಅಧಿವೇಶನಗಳಲ್ಲಿ ಮಂಡನೆಯಾಗಿ ಅಂಗೀಕಾರವಾಗಬೇಕಿದೆ. ಜನಪ್ರತಿನಿಧಿಗಳು ಸರ್ವಾನುಮತದಿಂದ ಈ ವಿಧೇಯಕವನ್ನು ಅನುಮೋದಿಸಿ, ಅಂಗೀಕಾರ ನೀಡುತ್ತಾರೆಂಬ ವಿಶ್ವಾಸವಿದೆ. ಕನ್ನಡಿಗರ ಬಹುದಿನಗಳ ಕನಸು ನನಸಾಗಲಿದೆ. ಕನ್ನಡನಾಡಿನ ಮಕ್ಕಳು ನಿರುದ್ಯೋಗದಿಂದ ನರಳುವುದು ತಪ್ಪುತ್ತದೆ" ಎಂದು ಅವರು ಹೇಳಿದ್ದಾರೆ.

"ಕರ್ನಾಟಕ ರಕ್ಷಣಾ ವೇದಿಕೆ ಕಳೆದ ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡಬೇಕೆಂಬ ಹೋರಾಟವನ್ನು ನಡೆಸುತ್ತಲೇ ಬಂದಿದೆ. ಜುಲೈ 1ರಂದು ರಾಜ್ಯದ ಎಲ್ಲ 31 ಜಿಲ್ಲಾ ಕೇಂದ್ರಗಳಲ್ಲಿ ಲಕ್ಷಾಂತರ ಕರವೇ ಕಾರ್ಯಕರ್ತರು ಧರಣಿ ಸತ್ಯಾಗ್ರಹ ನಡೆಸಿ ಕಾನೂನು ಜಾರಿಗೆ ಒತ್ತಾಯಿಸಿದ್ದರು. ನಮ್ಮ ಚಳವಳಿ ಕೊನೆಗೂ ಫಲ ಕಂಡಿದೆ" ಎಂದೂ ಗೌಡರು ಹೇಳಿದ್ದಾರೆ.

"ಈ ಬೆಳವಣಿಗೆಗಳ ಮಧ್ಯೆ ಕೆಲ ಕಾರ್ಪೊರೇಟ್ ವಲಯದ ಪ್ರಚಾರಪ್ರಿಯ ಉದ್ಯಮಿಗಳು ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ವಿಧೇಯಕಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಅವರು ಎತ್ತುತ್ತಿರುವ ಆಕ್ಷೇಪಗಳನ್ನೂ ಗಮನಿಸಿದ್ದೇನೆ. ಇಂಥ ಕೂಗುಮಾರಿಗಳಿಗೆ ಸರ್ಕಾರ ಕವಡೆ ಕಾಸಿನ ಕಿಮ್ಮತ್ತೂ ನೀಡಕೂಡದು. ಇವರು ಕನ್ನಡದ್ರೋಹಿಗಳು" ಎಂದು ಹೇಳಿರುವ ಅವರು, "ವಿಧೇಯಕ ಜಾರಿಗೆ ತಂದರೆ ಕರ್ನಾಟಕದಲ್ಲಿರುವ, ಅದರಲ್ಲೂ ವಿಶೇಷವಾಗಿ ಬೆಂಗಳೂರಿನಲ್ಲಿರುವ ಉದ್ಯಮಿಗಳು ಬೇರೆ ರಾಜ್ಯಕ್ಕೆ ವಲಸೆ ಹೋಗಬೇಕಾಗುತ್ತದೆ ಎಂದು ಒಬ್ಬ ಉದ್ಯಮಿ ಹೇಳಿದ್ದಾರೆ. ಇಂಥ ಬ್ಲಾಕ್ ಮೇಲ್ ಹೇಳಿಕೆಗಳನ್ನು ನಾವು ಹಲವಾರು ವರ್ಷಗಳಿಂದ ಕೇಳುತ್ತಲೇ ಬಂದಿದ್ದೇವೆ. ಇಂಥ ಬ್ಲಾಕ್ ಮೇಲರ್ ಗಳು ನಿಜವಾದ ಅರ್ಥದಲ್ಲಿ ದೇಶದ್ರೋಹಿಗಳು" ಎಂದು ವಾಗ್ದಾಳಿ ನಡೆಸಿದ್ದಾರೆ.

ಗಂಟುಮೂಟೆ ಕಟ್ಟಿ ಹೊರಡಿ

"ಯಾರಿಗಾದರೂ ಕರ್ನಾಟಕದಲ್ಲಿ ಉದ್ಯಮ ನಡೆಸುವುದು ಕಷ್ಟವಾದರೆ ಸಹಜವಾಗಿ ಅವರು ತಮ್ಮ ರಾಜ್ಯಗಳಿಗೋ, ಇನ್ಯಾವುದೋ ರಾಜ್ಯಗಳಿಗೋ ಹೋಗುತ್ತಾರೆ, ಬ್ಲಾಕ್ ಮೇಲ್ ಮಾಡಿಕೊಂಡು ಬೇಳೆ ಬೇಯಿಸಿಕೊಳ್ಳುವುದಿಲ್ಲ. ಇವರಿಗೆ ಕರ್ನಾಟಕದಲ್ಲೇ ಇರಿ ಎಂದು ನಾವ್ಯಾರೂ ದುಂಬಾಲು ಬಿದ್ದಿಲ್ಲ. ಹೀಗೆ ಬ್ಲಾಕ್ ಮೇಲ್ ಮಾಡುವವರು ಗಂಟುಮೂಟೆ ಕಟ್ಟಿ ಹೊರಡುವುದು ಒಳ್ಳೆಯದು. ಕರ್ನಾಟಕಕ್ಕೆ ಈ ಕಾರ್ಪೊರೇಟ್ ಉದ್ಯಮಗಳು ಬರುವುದಕ್ಕೆ ಮುನ್ನವೂ ವೈಭವದ ನಾಡು ನಮ್ಮದಾಗಿತ್ತು. ಇವರು ಇದ್ದರೂ, ಇಲ್ಲದೇ ಇದ್ದರೂ ಕರ್ನಾಟಕ ಇತ್ತು, ಇದೆ ಮತ್ತು ಮುಂದೆಯೂ ಇರುತ್ತದೆ. ಕನ್ನಡನಾಡು ಎಂದಿಗೂ ದಿವಾಳಿಯಾಗುವುದಿಲ್ಲ. ನಿಜ ಹೇಳಬೇಕೆಂದರೆ ಈ ವ್ಯಾಪಾರಿ ಸಮೂಹ ಇಲ್ಲಿಗೆ ಬರುವುದಕ್ಕೆ ಮುನ್ನವೇ ನಾಡು ನೆಮ್ಮದಿಯಾಗಿತ್ತು" ಎಂದು ನಾರಾಯಣ ಗೌಡ ಕಿಡಿಕಾರಿದ್ದಾರೆ.

"ಉದ್ಯೋಗ ಮೀಸಲಾತಿ ವಿಧೇಯಕ ಕುರಿತಾಗಿ ಅಪಸ್ವರ ಎತ್ತುತ್ತಿರುವವರನ್ನು ಗಮನಿಸುತ್ತಿದ್ದೇವೆ. ಇವರು ಪ್ರತಿನಿಧಿಸುವ ಸಂಸ್ಥೆಗಳ ವಿರುದ್ಧ ಹೋರಾಟಕ್ಕೆ ನಾವು ಸಜ್ಜಾಗಿದ್ದೇವೆ. ಕನ್ನಡಿಗರನ್ನು ವಿರೋಧಿಸುವ ಇಂಥ ದೇಶದ್ರೋಹಿಗಳನ್ನು ಹೇಗೆ ವಿರೋಧಿಸುವುದು ಎಂಬುದು ನಮಗೆ ಗೊತ್ತಿದೆ. ಹೀಗಾಗಿ ಇವರು ತಮ್ಮ ನಾಲಿಗೆ ಬಿಗಿಹಿಡಿದು ಮಾತಾಡುವುದು ಒಳ್ಳೆಯದು" ಎಂದು ಎಚ್ಚರಿಕೆ ನೀಡಿರುವ ಗೌಡರು, "ರಾಜ್ಯ ಸರ್ಕಾರ ಇಂಥ ಭ್ರಷ್ಟ, ನಾಡದ್ರೋಹಿ, ದೇಶದ್ರೋಹಿ, ಸಮಾಜಘಾತಕ ಶಕ್ತಿಗಳ ಅರಚಾಟಕ್ಕೆ ಧೃತಿಗೆಡಬಾರದು. ನಿಮ್ಮನ್ನು ಆಯ್ಕೆ ಮಾಡಿರುವುದು ಕರ್ನಾಟಕದ ಸಾಮಾನ್ಯ ಜನತೆಯೇ ಹೊರತು, ಈ ಕಾರ್ಪೊರೇಟ್ ಕುಳಗಳಲ್ಲ. ಈಗ ನಡೆಯುತ್ತಿರುವ ಅಧಿವೇಶನದಲ್ಲೇ ವಿಧೇಯಕ ಮಂಡನೆಯಾಗಬೇಕು. ಸರ್ಕಾರದೊಂದಿಗೆ ನಾವು ಇರುತ್ತೇವೆ. ಅದ್ಯಾರು ತಡೆಯುವರೋ ನೋಡೋಣ" ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.

Tags:    

Similar News