ಬೆಂಗಳೂರಿನಲ್ಲಿ ಸಿಮೆಂಟ್ ಮಿಕ್ಸರ್ ಲಾರಿಯ ನಿರ್ಲಕ್ಷ್ಯಕ್ಕೆ ಒಂದು ವರ್ಷದ ಕಂದಮ್ಮ ಬಲಿ

ಮನೆ ಆವರಣದೊಳಗೆ ಆಟವಾಡುತ್ತಿದ್ದ ಮಗು ಪ್ರಣವ್ ಮೇಲೆ ಕುಸಿದ ಗೋಡೆಯ ಅವಶೇಷಗಳು ಬಿದ್ದಿವೆ. ತೀವ್ರವಾಗಿ ಗಾಯಗೊಂಡ ಮಗುವನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದೆ.

Update: 2025-11-08 04:07 GMT

ಸಾಂದರ್ಭಿಕ ಚಿತ್ರ

Click the Play button to listen to article

ನಗರದ ಕುಂದಲಹಳ್ಳಿ ಕಾಲೋನಿಯಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದರಲ್ಲಿ, ಸಿಮೆಂಟ್ ಮಿಕ್ಸರ್ ಲಾರಿಯ ಅಜಾಗರೂಕತೆಯಿಂದಾಗಿ ವಿದ್ಯುತ್ ಕಂಬ ಉರುಳಿ, ಮನೆ ಆವರಣದ ಗೋಡೆ ಕುಸಿದು ಆಟವಾಡುತ್ತಿದ್ದ ಒಂದು ವರ್ಷದ ಎಂಟು ತಿಂಗಳ ಮಗು ದಾರುಣವಾಗಿ ಸಾವನ್ನಪ್ಪಿದೆ. ಸಿದ್ದಪ್ಪ ಮತ್ತು ಲಾವಣ್ಯ ದಂಪತಿಯ ಏಕೈಕ ಪುತ್ರ ಪ್ರಣವ್ ಮೃತಪಟ್ಟ ದುರ್ದೈವಿ.

ಶುಕ್ರವಾರ, ನವೆಂಬರ್ 7ರಂದು ಸಂಜೆ ಸುಮಾರು 3:15ರ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸಮೀಪದ ಹೊಸ ಮನೆಯೊಂದರ ಮೋಲ್ಡಿಂಗ್ ಕಾಮಗಾರಿ ಮುಗಿಸಿ ವಾಪಸಾಗುತ್ತಿದ್ದ ಸಿಮೆಂಟ್ ಮಿಕ್ಸರ್ ಲಾರಿ, ಪ್ರಣವ್ ಮನೆಯ ಮುಂದಿನ ರಸ್ತೆಯಲ್ಲಿ ಚಲಿಸುತ್ತಿತ್ತು. ಈ ವೇಳೆ, ಲಾರಿಯ ಮೇಲ್ಭಾಗವು ರಸ್ತೆಯ ಮೇಲೆ ಹಾದು ಹೋಗಿದ್ದ ವಿದ್ಯುತ್ ತಂತಿಗೆ ತಗುಲಿದೆ. ಇದನ್ನು ಗಮನಿಸದ ಚಾಲಕ, ಲಾರಿಯನ್ನು ಮುಂದಕ್ಕೆ ಚಲಾಯಿಸಿದ್ದರಿಂದ ವಿದ್ಯುತ್ ತಂತಿ ಸಮೇತ ಕಂಬವೇ ಕಿತ್ತುಬಂದು, ನೇರವಾಗಿ ಪ್ರಣವ್ ಮನೆಯ ಕಾಂಪೌಂಡ್ ಮೇಲೆ ಬಿದ್ದಿದೆ.

ಈ ಸಂದರ್ಭದಲ್ಲಿ, ಮನೆ ಆವರಣದೊಳಗೆ ಆಟವಾಡುತ್ತಿದ್ದ ಮಗು ಪ್ರಣವ್ ಮೇಲೆ ಕುಸಿದ ಗೋಡೆಯ ಅವಶೇಷಗಳು ಬಿದ್ದಿವೆ. ತೀವ್ರವಾಗಿ ಗಾಯಗೊಂಡ ಮಗುವನ್ನು ತಕ್ಷಣವೇ ಸಮೀಪದ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮಗು ಕೊನೆಯುಸಿರೆಳೆದಿದೆ. ಮುದ್ದಾದ ಮಗನನ್ನು ಕಳೆದುಕೊಂಡ ಪೋಷಕರಾದ ಸಿದ್ದಪ್ಪ ಮತ್ತು ಲಾವಣ್ಯ ಅವರ ಆಕ್ರಂದನ ಮುಗಿಲು ಮುಟ್ಟಿದ್ದು, ಇಡೀ ಪ್ರದೇಶದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದೆ.

ಘಟನೆಗೆ ಸಂಬಂಧಿಸಿದಂತೆ ಎಚ್‌ಎಎಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದುರಂತಕ್ಕೆ ಕಾರಣನಾದ ಲಾರಿ ಚಾಲಕ ಘಟನೆಯ ನಂತರ ಸ್ಥಳದಿಂದ ಪರಾರಿಯಾಗಿದ್ದು, ಆತನ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಮೃತ ಮಗುವಿನ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.

Tags:    

Similar News