ಮೈಸೂರು ಮೃಗಾಲಯದ ಹಿರಿಯಾನೆ ಪದ್ಮಾವತಿ ನಿಧನ: ದಸರಾ ಸಂಭ್ರಮದ ನಡುವೆ ಸೂತಕ
ವಯಸ್ಸಾದ ಕಾರಣ, ನಾಲ್ಕು ವರ್ಷಗಳ ಹಿಂದೆ ಪದ್ಮಾವತಿಯನ್ನು ಮೈಸೂರಿನ ಕೂರ್ಗಳ್ಳಿಯಲ್ಲಿರುವ ಚಾಮುಂಡಿ ವನ್ಯಜೀವಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು.;
ಪದ್ಮಾವತಿ ಆನೆ
ವಿಶ್ವವಿಖ್ಯಾತ ದಸರಾ ಮಹೋತ್ಸವದ ಆನೆಗಳ ಮೆರವಣಿಗೆಯ ಸಿದ್ಧತೆ ಮತ್ತು ಆನೆ ದಿನಾಚರಣೆಯ ಸಂಭ್ರಮದ ನಡುವೆಯೇ ಮೈಸೂರು ಮೃಗಾಲಯದಲ್ಲಿ ಸೂತಕದ ಛಾಯೆ ಆವರಿಸಿದೆ. ಮೃಗಾಲಯದ ಅತ್ಯಂತ ಹಿರಿಯ ನಿವಾಸಿಗಳಲ್ಲಿ ಒಂದಾಗಿದ್ದ 71 ವರ್ಷದ 'ಪದ್ಮಾವತಿ' ಎಂಬ ಹೆಣ್ಣಾನೆ, ವಯೋಸಹಜ ಅನಾರೋಗ್ಯದಿಂದಾಗಿ ಗುರುವಾರ ಸಂಜೆ ಮೃತಪಟ್ಟಿದೆ.
ಪದ್ಮಾವತಿಯು 1973ರಲ್ಲಿ ನಡೆದ ಖೆಡ್ಡಾ ಕಾರ್ಯಾಚರಣೆಯ ಸಮಯದಲ್ಲಿ ರಕ್ಷಿಸಲಾದ ಆನೆಯಾಗಿದ್ದು, ಕಳೆದ 53 ವರ್ಷಗಳಿಂದ ಮೃಗಾಲಯದ ಆರೈಕೆಯಲ್ಲಿತ್ತು. ಅವಳ ಜನನವು ಸುಮಾರು 1953-54ರಲ್ಲಿ ಆಗಿರಬಹುದು ಎಂದು ಮೃಗಾಲಯದ ಆಡಳಿತ ಮಂಡಳಿ ಅಂದಾಜಿಸಿದೆ. ಪದ್ಮಾವತಿಯು ಗಜಲಕ್ಷ್ಮೀ, ಕೋಮಲ ಮತ್ತು ಪ್ರಸಿದ್ಧ ದಸರಾ ಆನೆ ಅಭಿಮನ್ಯು ಸೇರಿದಂತೆ ಮೂರು ಮರಿಗಳಿಗೆ ಜನ್ಮ ನೀಡಿದ್ದಳು.
ವಯಸ್ಸಾದ ಕಾರಣ, ನಾಲ್ಕು ವರ್ಷಗಳ ಹಿಂದೆ ಪದ್ಮಾವತಿಯನ್ನು ಮೈಸೂರಿನ ಕೂರ್ಗಳ್ಳಿಯಲ್ಲಿರುವ ಚಾಮುಂಡಿ ವನ್ಯಜೀವಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿತ್ತು. ಪ್ರವಾಸಿಗರಿಂದ ದೂರವಿರುವ ಈ ಕೇಂದ್ರದಲ್ಲಿ ವಯಸ್ಸಾದ ಮತ್ತು ಅನಾರೋಗ್ಯ ಪೀಡಿತ ಆನೆಗಳು ಮಾನವ ಹಸ್ತಕ್ಷೇಪವಿಲ್ಲದೆ ಪ್ರಶಾಂತ ಪರಿಸರದಲ್ಲಿ ಬದುಕಲು ವ್ಯವಸ್ಥೆ ಮಾಡಲಾಗುತ್ತದೆ.
ಕಳೆದ ಬುಧವಾರದವರೆಗೂ ಪದ್ಮಾವತಿ ಆರೋಗ್ಯವಾಗಿದ್ದು, ಓಡಾಡಿಕೊಂಡಿದ್ದಳು. ಆದರೆ ವಯೋಸಹಜ ದೌರ್ಬಲ್ಯದ ಲಕ್ಷಣಗಳು ಕಾಣಿಸಿಕೊಳ್ಳಲಾರಂಭಿಸಿದ್ದವು. ಗುರುವಾರ ಬೆಳಿಗ್ಗೆ, ಮಲಗಿದ್ದ ಆನೆಗೆ ಮೇಲೆಳಲು ಸಾಧ್ಯವಾಗಲಿಲ್ಲ. ತಕ್ಷಣವೇ ಮೃಗಾಲಯದ ಪಶುವೈದ್ಯಕೀಯ ತಂಡವು ಸ್ಥಳಕ್ಕೆ ಧಾವಿಸಿ, ತೀವ್ರ ವೈದ್ಯಕೀಯ ಆರೈಕೆ ಮತ್ತು ಚಿಕಿತ್ಸೆಯನ್ನು ನೀಡಿತು. ಆದಾಗ್ಯೂ, ಚಿಕಿತ್ಸೆ ಫಲಕಾರಿಯಾಗದೆ ಗುರುವಾರ ಸಂಜೆ 5:10ಕ್ಕೆ ಪದ್ಮಾವತಿ ಕೊನೆಯುಸಿರೆಳೆದಳು.
ದಶಕಗಳ ಕಾಲ ಮೃಗಾಲಯದ ಸಿಬ್ಬಂದಿ, ಸಂದರ್ಶಕರು ಮತ್ತು ವನ್ಯಜೀವಿ ಉತ್ಸಾಹಿಗಳ ಹೃದಯದಲ್ಲಿ ವಿಶೇಷ ಸ್ಥಾನವನ್ನು ಗಳಿಸಿದ್ದ ಪದ್ಮಾವತಿಯ ಅಗಲಿಕೆಗೆ ಮೃಗಾಲಯದ ಆಡಳಿತ ಮಂಡಳಿಯು ತೀವ್ರ ದುಃಖ ವ್ಯಕ್ತಪಡಿಸಿದೆ.