Mysore MUDA Scam | ದೇವೇಗೌಡರ ವಿರುದ್ಧ ಬಿಎಸ್‌ವೈ ಆರೋಪ: ಸಿಬಿಐ ತನಿಖೆ ಸವಾಲೆಸೆದ ಕಾಂಗ್ರೆಸ್

ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಮೈಸೂರಿನ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ 14 ವರ್ಷ ಹಳೆಯ ಕಡತಗಳನ್ನು ಬಹಿರಂಗಪಡಿಸುವ ಮೂಲಕ ಕಾಂಗ್ರೆಸ್‌, ಹಗರಣದ ವಿಷಯದಲ್ಲಿ ತನ್ನ ವಿರುದ್ಧ ತೋಳೇರಿಸಿರುವ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದೆ.

Update: 2024-07-13 11:57 GMT

ರಾಜ್ಯ ರಾಜಕಾರಣದಲ್ಲಿ ಭಾರೀ ಸದ್ದು ಮಾಡುತ್ತಿರುವ ಮೈಸೂರಿನ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ 14 ವರ್ಷ ಹಳೆಯ ಕಡತಗಳನ್ನು ಬಹಿರಂಗಪಡಿಸುವ ಮೂಲಕ ಕಾಂಗ್ರೆಸ್‌, ಹಗರಣದ ವಿಷಯದಲ್ಲಿ ತನ್ನ ವಿರುದ್ಧ ತೋಳೇರಿಸಿರುವ ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದೆ.

2011 ಮಾರ್ಚ್‌ 3ರಂದು ಅಂದಿನ ಸಿಎಂ ಬಿ ಎಸ್ ಯಡಿಯೂರಪ್ಪ ಅವರು ವಿಧಾನ ಪರಿಷತ್ತಿನ ಸಭಾಪತಿಗಳಿಗೆ ದಾಖಲೆಗಳನ್ನು ಸಲ್ಲಿಸಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ವಿರುದ್ಧ ಮಾಡಿದ್ದ ಗಂಭೀರ ಆರೋಪದ ದಾಖಲೆಗಳನ್ನು ಕಾಂಗ್ರೆಸ್‌ ಇದೀಗ ಬಿಡುಗಡೆ ಮಾಡಿದ್ದು, ಜೆಡಿಎಸ್‌ ಅಧಿನಾಯಕ ದೇವೇಗೌಡರು ತಮ್ಮ ಕುಟುಂಬಕ್ಕೆ 48 ನಿವೇಶನಗಳ ಹಂಚಿಕೆ ಮಾಡಿರುವುದಾಗಿ ಬಿಜೆಪಿ ನಾಯಕ ಬಿ ಎಸ್‌ ಯಡಿಯೂರಪ್ಪ ದೂರು ನೀಡಿದ್ದರು. ಅವರ ಅಷ್ಟು ಆರೋಪಗಳು ವಿಧಾನ ಪರಿಷತ್ತಿನ ನಡವಳಿಕೆಗಳಲ್ಲಿ ದಾಖಲಾಗಿವೆ. ಆ ಬಗ್ಗೆ ಸಿಬಿಐ ತನಿಖೆಗೆ ಈಗ ಬಿಜೆಪಿ ಒತ್ತಾಯಿಸುವುದೇ? ಎಂದು ಸವಾಲೆಸೆದಿದೆ.

ಈ ವಿಚಾರವಾಗಿ ಶನಿವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಕಾಂಗ್ರೆಸ್‌ ಮುಖಂಡ, ಮಾಜಿ ಎಂಎಲ್‌ಸಿ ರಮೇಶ್‌ ಬಾಬು, ʻʻಯಡಿಯೂರಪ್ಪ ಆರೋಪದಲ್ಲಿ ಎಚ್. ಡಿ ಕುಮಾರಸ್ವಾಮಿ ರವರಿಗೆ 300 x 200 ಅಡಿ ಅಳತೆಯ (ಸುಮಾರು 60,000 ಅಡಿ) ನಿವೇಶನ ಸಂಖ್ಯೆ17(ಬಿ) ಹಂಚಿಕೆಯಾಗಿರುವುದಾಗಿ ಹೇಳಿದ್ದಾರೆ. ಅದೇ ರೀತಿ ಅವರ ಕುಟುಂಬದ ಸವಿತಾ Co/ ಬೀರೇಗೌಡ ಎಂಬುವರಿಗೆ 130x 110 ಅಡಿ (ಸುಮಾರು 14,300 ಅಡಿ) ಅಕ್ರಮ ಹಂಚಿಕೆಯ ಕುರಿತು ಆರೋಪ ಮಾಡಿದ್ದಾರೆ. ಆ ಕುರಿತು ಸಿಬಿಐ ತನಿಖೆಗೆ ಬಿಜೆಪಿ ಒತ್ತಾಯಿಸುವುದೇ?ʼʼ ಎಂದು ಪ್ರಶ್ನೆ ಮಾಡಿದ್ದಾರೆ.

ʻʻವಿಧಾನ ಪರಿಷತ್ತಿನಲ್ಲಿ ಅಂದು ಮಾತನಾಡುವಾಗ ಬಿ ಎಸ್ ಕೆ ಮೈನಿಂಗ್ ಕಂಪನಿಯಿಂದ ದೇವೇಗೌಡರ ಕುಟುಂಬದವರಿಗೆ 167 ಕೋಟಿ ಜಮಾ ಆಗಿದೆ ಎಂದೂ ಯಡಿಯೂರಪ್ಪ ಆರೋಪಿಸಿದ್ದಾರೆ. ಮುಂದುವರಿದು ಜಂಥ್ಯಾಂಕ್ಸ್ ಜಂತಕಲ್ ಎಂಟರ್ಪ್ರೈಸಸ್ ಲೀಜ್ 40 ವರ್ಷ ನವೀಕರಣ ಮಾಡಿ ಅದರಲ್ಲಿ ಇವರ ಕುಟುಂಬದವರು ಪಾರ್ಟ್‌ನರ್ ಇದ್ದಾರೆ ಎಂದು ಆರೋಪಿಸಿದ್ದಾರೆ.‌ ಯಡಿಯೂರಪ್ಪ ಅವರು ಅಂದು ತಾವು ಮಾಡಿದ ಆರೋಪಗಳಿಗೆ ಪೂರಕವಾಗಿ ದಾಖಲೆಗಳನ್ನು ಸಭಾಪತಿಗಳಿಗೆ ಸದನದಲ್ಲೇ ಮಂಡಿಸಿದ್ದರುʼʼ ಎಂದು ವಿವರಿಸಿದ್ದಾರೆ. ಅಲ್ಲದೆ, ಸಭಾಪತಿಗಳಿಗೆ ಯಡಿಯೂರಪ್ಪ ಸಲ್ಲಿಸಿದ್ದರು ಎನ್ನಲಾದ ದಾಖಲೆಗಳನ್ನು ಕೂಡ ರಮೇಶ್‌ ಬಾಬು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಿದರು.

ʻʻಅಂದಿನ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರು ಸದನದಲ್ಲಿ ಮುಡಾ ಅಕ್ರಮ ನಿವೇಶನ ಹಂಚಿಕೆ ಕುರಿತು ದೇವೇಗೌಡರ ಕುಟುಂಬದ ಮೇಲೆ ಮಾಡಿರುವ ಗಂಭೀರ ಆರೋಪದ ಕುರಿತು ತನಿಖೆಗೆ ಒತ್ತಾಯಿಸಲು ತಾಕತ್ತು ಇದೆಯೇ? ಯಡಿಯೂರಪ್ಪನವರು ದಾಖಲೆಗಳನ್ನು ಸಭಾಪತಿಗಳಿಗೆ ಮಂಡಿಸಿದರೂ ಇಲ್ಲಿಯವರೆಗೆ ಬಿಜೆಪಿ ಯಾವ ಕಾರಣಕ್ಕೆ ಮೌನವಾಯಿತು?ʼʼ ಎಂದು ಪ್ರಶ್ನಿಸಿದ್ದಾರೆ.

ʻʻಅವಕಾಶವಾದದ ರಾಜಕಾರಣ ಮತ್ತು ಅನುಕೂಲ ಸಿಂಧು ರಾಜಕಾರಣಕ್ಕೆ ಶರಣಾಗಿರುವ ಬಿಜೆಪಿ, ಮುಡಾ ಹಗರಣದಲ್ಲಿ ಯಾವ ಯಾವ ಬಿಜೆಪಿ ನಾಯಕರು ಎಷ್ಟು ಎಷ್ಟು ನಿವೇಶನಗಳನ್ನು ಪಡೆದುಕೊಂಡಿದ್ದಾರೆ ಎಂಬುದನ್ನು ಬಹಿರಂಗಗೊಳಿಸಲಿ. ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೇ ಮೈಸೂರಿನ ಮುಡಾ ದಲ್ಲಿ ಹೆಚ್ಚು ಹಗರಣಗಳು ನಡೆದಿವೆʼʼ ಎಂದಿದ್ದಾರೆ.

ʻʻಭೂಸ್ವಾಧೀನ ಪ್ರಕ್ರಿಯೆಯಲ್ಲಿ ಪರಿಹಾರ ರೂಪದಲ್ಲಿ ಭೂ ಮಾಲೀಕರಿಗೆ ನಿವೇಶನ ನೀಡಿರುವುದನ್ನು ಬಿಜೆಪಿ ರಾಜಕೀಯ ಕಾರಣಕ್ಕಾಗಿ ಆರೋಪ ಮಾಡುತ್ತಿದೆ. ಆದರೆ ಯಾವುದೇ ಭೂಮಿಯನ್ನು ಕಳೆದುಕೊಳ್ಳದೆ ತಮ್ಮ ರಾಜಕೀಯ ಪ್ರಭಾವದ ಮೂಲಕ ಒಂದೇ ಕುಟುಂಬ 48 ನಿವೇಶನಗಳನ್ನು ಪಡೆದುಕೊಂಡ ಅಕ್ರಮ ಕುರಿತು ಬಿಜೆಪಿ ಚಕಾರ ಎತ್ತುವುದಿಲ್ಲ ಏಕೆ? ಅದೇ ರೀತಿ ಒಬ್ಬನೇ ವ್ಯಕ್ತಿಗೆ ಯಾವ ಆಧಾರದ ಮೇಲೆ 60 ಸಾವಿರ ಅಡಿ ಅಳತೆಯ ನಿವೇಶನ ಮಂಜೂರಾಗಿತ್ತು? ಸದನದ ಒಳಗೆ ದಾಖಲೆಯಿಟ್ಟು ಮಾತನಾಡಿದ ಯಡಿಯೂರಪ್ಪನವರಿಗೆ ಈಗ ಅದೇ ವಿಷಯವನ್ನು ಸಾರ್ವಜನಿಕವಾಗಿ ಮಾತನಾಡಲು ಸಾಧ್ಯವಾಗುತ್ತಿಲ್ಲ ಏಕೆ?ʼʼ ಎಂದು ರಮೇಶ್‌ ಬಾಬು ಪ್ರಶ್ನೆ ಮಾಡಿದ್ದಾರೆ.

ಮುಡಾ ಹಗರಣದ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬೀದಿ ಹೋರಾಟ ಆರಂಭಿಸಿರುವ ಬಿಜೆಪಿ ಮತ್ತು ಜೆಡಿಎಸ್‌ ಮೈತ್ರಿಕೂಟಕ್ಕೆ ಈ ಮೂಲಕ ಕಾಂಗ್ರೆಸ್‌ ಭರ್ಜರಿ ತಿರುಗೇಟು ನೀಡಿದ್ದು, ಈ ಬಗ್ಗೆ ಪ್ರತಿಪಕ್ಷಗಳ ಪ್ರತಿಕ್ರಿಯೆ ಕುತೂಹಲ ಮೂಡಿಸಿದೆ.

Tags:    

Similar News