ಹೈಕೋರ್ಟ್ ಆದೇಶ ಉಲ್ಲಂಘನೆ; ಆರ್ಟಿಒ ಅಧಿಕಾರಿಗಳಿಂದ 100 ಕ್ಕೂ ಹೆಚ್ಚು ಬೈಕ್ ಟ್ಯಾಕ್ಸಿಗಳ ವಶ
ಸಾರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರಿನ ಕೇಂದ್ರ, ಪಶ್ಚಿಮ, ದಕ್ಷಿಣ, ಉತ್ತರ, ಪೂರ್ವ ವಲಯ, ಎಲೆಕ್ಟ್ರಾನಿಕ್ ಸಿಟಿ ಮತ್ತು ಕೆಆರ್ ಪುರಂ ಸೇರಿದಂತೆ ಇತರೆಡೆಗಳಲ್ಲಿ ಕಾರ್ಯಾಚರಣೆ ನಡೆಸಿ, ಹೈಕೋರ್ಟ್ ಆದೇಶ ಉಲ್ಲಂಘಿಸಿ ಬೈಕ್ ಟ್ಯಾಕ್ಸಿ ಸೇವೆ ಒದಗಿಸುತ್ತಿದ್ದ 103 ಬೈಕ್ ಟ್ಯಾಕ್ಸಿ ಸವಾರರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.;
ಸಾಂದರ್ಭಿಕ ಚಿತ್ರ
ರಾಜ್ಯದಲ್ಲಿ ಬೈಕ್ ಟಾಕ್ಸಿಗಳ ಸಂಚಾರಕ್ಕೆ ಸೋಮವಾರದಿಂದ ಕಡಿವಾಣ ಬಿದ್ದಿದೆ. ಆದರೆ, ಹೈಕೋರ್ಟ್ ಆದೇಶದ ಹೊರತಾಗಿಯೂ ಸಂಚರಿಸುತ್ತಿದ್ದ ಬೈಕ್ ಟ್ಯಾಕ್ಸಿ ಸವಾರರಿಗೆ ಬಿಸಿ ಮುಟ್ಟಿಸಿರುವ ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳು ಬೆಂಗಳೂರಿನ ವಿವಿಧೆಡೆ ಕಾರ್ಯಾಚರಣೆ ನಡೆಸಿ, 103 ಬೈಕ್ ಟ್ಯಾಕ್ಸಿಗಳನ್ನು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಕೇಂದ್ರ ವಲಯ, ಪಶ್ಚಿಮ, ದಕ್ಷಿಣ, ಉತ್ತರ, ಪೂರ್ವ ವಲಯ, ಎಲೆಕ್ಟ್ರಾನಿಕ್ ಸಿಟಿ ಮತ್ತು ಕೆ.ಆರ್ ಪುರಂ ಸೇರಿದಂತೆ ಇತರೆ ಕಡೆಗಳಲ್ಲಿ ಆದೇಶ ಉಲ್ಲಂಘಿಸಿ ಪ್ರಯಾಣಿಕರಿಗೆ ಸೇವೆ ಒದಗಿಸುತ್ತಿದ್ದ 103 ಬೈಕ್ ಟ್ಯಾಕ್ಸಿ ಸವಾರರ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಅನುಮತಿಯಿಲ್ಲದೆ ಬೈಕ್ ಟ್ಯಾಕ್ಸಿ ಚಲಾಯಿಸಿದ ಹಾಗೂ ಸಾಕಷ್ಟು ದಾಖಲೆಗಳಿಲ್ಲದ ಕಾರಣ ಸವಾರರಿಗೆ 5,000 ರೂ. ದಂಡ ವಿಧಿಸಲಾಗಿದೆ ಎಂದು ಆರ್ಟಿಒ ಅಧಿಕಾರಿಗಳು ತಿಳಿಸಿದ್ದಾರೆ.
ಹೈಕೋರ್ಟ್ ನಿರ್ದೇಶನದಂತೆ ಅನುಮತಿ ಇಲ್ಲದೇ ವಾಹನ ಓಡಿಸುತ್ತಿದ್ದ ಬೈಕ್ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಿದ್ದೇವೆ. ದಂಡದ ಮೊತ್ತ ಪಾವತಿಸಿದರೆ ಎರಡು ದಿನಗಳ ಬಳಿಕ ವಾಹನಗಳನ್ನು ಬಿಡುಗಡೆ ಮಾಡುತ್ತೇವೆ ಎಂದು ಸಾರಿಗೆ ಅಧಿಕಾರಿ ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ಮೋಟಾರು ವಾಹನ ಕಾಯ್ದೆಯ ಸೆಕ್ಷನ್ 93 ರ ಅಡಿ ನಿಯಮ ರೂಪಿಸುವವರೆಗೆ ರಾಪಿಡೊ, ಉಬರ್ ಮತ್ತು ಓಲಾ ಸೇರಿದಂತೆ ಎಲ್ಲಾ ಬೈಕ್ ಟ್ಯಾಕ್ಸಿ ನಿರ್ವಾಹಕರು ತಮ್ಮ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ಹೈಕೋರ್ಟ್ ಏ.2 ರಂದು ಆದೇಶ ನೀಡಿತ್ತು. ಆದರೂ, ರಾಪಿಡೊ, ಉಬರ್ ಬೈಕ್ಗಳ ಮೂಲಕ ಕೊರಿಯರ್, ಪಾರ್ಸೆಲ್ ಸೇವೆಗಳನ್ನು ನೀಡಲು ಮುಂದಾಗಿದ್ದವು.
ಸಂಸದ ಪಿ.ಸಿ.ಮೋಹನ್ ಆಕ್ರೋಶ
ಸಂಸದ ಪಿ.ಸಿ.ಮೋಹನ್ ಅವರು ತಮ್ಮ ʼಎಕ್ಸ್ʼ ಖಾತೆಯಲ್ಲಿ “ಕರ್ನಾಟಕ ಹೈಕೋರ್ಟ್ ಬೈಕ್ ಟ್ಯಾಕ್ಸಿಗಳನ್ನು ನಿಷೇಧಿಸಿದೆ. ಆದರೆ, ಸಂಗ್ರಹಕಾರರು (ಅಗ್ರಿಗೇಟರ್) ‘ಬೈಕ್ ಪಾರ್ಸೆಲ್’ ಸೋಗಿನಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಪ್ರಯಾಣಿಕರನ್ನು ಪಾರ್ಸೆಲ್ ರೂಪದಲ್ಲಿ ಕರೆದೊಯ್ಯುತ್ತಿದ್ದಾರೆ. ಕರ್ನಾಟಕ ಸರ್ಕಾರ ಕಾನೂನನ್ನು ಜಾರಿಗೆ ತರಲು ವಿಫಲವಾಗಿದೆ. ಸಂಗ್ರಹಕಾರರು (ಅಗ್ರಿಗೇಟರ್) ಕಾನೂನಿಗಿಂತ ಮೇಲಿದ್ದಾರೆಯೇ?” ಎಂದು ಪೋಸ್ಟ್ ಮಾಡಿದ್ದಾರೆ.
“ಇದು ಬೈಕ್ ಟ್ಯಾಕ್ಸಿಗಳನ್ನು ಬೆಂಬಲಿಸುವ ಅಥವಾ ವಿರೋಧಿಸುವ ಬಗ್ಗೆ ಅಲ್ಲ. ಇದು ಕಾನೂನನ್ನು ಎತ್ತಿಹಿಡಿಯುವ ಬಗ್ಗೆ. ಯಾವುದೇ ಸಂಗ್ರಹಕಾರರು `ಬೈಕ್ ಪಾರ್ಸೆಲ್ ಅಥವಾ `ಮೋಟೋ ಕೊರಿಯರ್' ಸೋಗಿನಲ್ಲಿ ಕರ್ನಾಟಕ ಹೈಕೋರ್ಟ್ ಆದೇಶ ಉಲ್ಲಂಘಿಸಲು ಸಾಧ್ಯವಿಲ್ಲ. ಇದು ನ್ಯಾಯಾಲಯದ ತಿರಸ್ಕಾರ ಮತ್ತು ನ್ಯಾಯಾಂಗ ಅಧಿಕಾರಕ್ಕೆ ಸವಾಲು ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.
ʼಬೈಕ್ ಪಾರ್ಸೆಲ್ʼ ಸೇವೆ ತೆಗೆದುಹಾಕಿದ ಮೂರು ಆಪ್ಗಳು
ಹೈಕೋರ್ಟ್ ಆದೇಶ ಹಾಗೂ ಸರ್ಕಾರದ ಎಚ್ಚರಿಕೆಯ ಬಳಿಕ ಮೂರು ಪ್ರಮುಖ ಕಾರ್ಯಕಾರಕ ಪ್ಲಾಟ್ಫಾರ್ಮ್ಗಳಾದ ರಾಪಿಡೊ, ಉಬರ್ ಮತ್ತು ಓಲಾ ಸೋಮವಾರ ತಮ್ಮ ಅಪ್ಲಿಕೇಶನ್ಗಳಿಂದ ʼಬೈಕ್ ಪಾರ್ಸೆಲ್ʼ ಸೇವೆ ತೆಗೆದುಹಾಕಿವೆ.
"ಹೈಕೋರ್ಟ್ ಆದೇಶದ ಮೇರೆಗೆ ಜೂನ್ 16 ರಿಂದ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಕಾರ್ಯಾಚರಣೆ ಸ್ಥಗಿತಗೊಳಿಸುವ ಕಠಿಣ ನಿರ್ಧಾರವನ್ನು ಉಬರ್ ತೆಗೆದುಕೊಂಡಿದೆ. ಇದು ತಮ್ಮ ದೈನಂದಿನ ಅಗತ್ಯಗಳಿಗಾಗಿ ಬೈಕ್ ಟ್ಯಾಕ್ಸಿ ಅವಲಂಬಿಸಿರುವ ಸಾವಿರಾರು ಸವಾರರ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಎಲ್ಲರಿಗೂ ಸುರಕ್ಷಿತ, ಪ್ರವೇಶಿಸಬಹುದಾದ ಮತ್ತು ಕೈಗೆಟುಕುವ ಆಯ್ಕೆಗಳನ್ನು ಸಕ್ರಿಯಗೊಳಿಸುವ ಪ್ರಗತಿಪರ ನೀತಿ ಚೌಕಟ್ಟನ್ನು ರೂಪಿಸಲು ನಾವು ಕರ್ನಾಟಕ ಸರ್ಕಾರದೊಂದಿಗೆ ತೊಡಗಿಸಿಕೊಳ್ಳುತ್ತೇವೆʼʼ ಎಂದು ಉಬರ್ ವಕ್ತಾರರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಜೂನ್ 16 ರಿಂದ ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಹೈಕೋರ್ಟ್ ಆದೇಶಕ್ಕೆ ಅನುಸಾರ ಸ್ಥಗಿತಗೊಳಿಸಲಾಗುವುದು ಎಂದು ತನ್ನ ಗ್ರಾಹಕರಿಗೆ ಅಧಿಸೂಚನೆಯಲ್ಲಿ ರಾಪಿಡೊ ತಿಳಿಸಿದೆ.