ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ಮೇಲೆ ಲೋಕಾಯುಕ್ತ ದಿಢೀರ್‌ ಭೇಟಿ

ಕೇಂದ್ರ ಕಚೇರಿಯಲ್ಲಿ ವಾಯು ಮತ್ತು ಜಲ ಕಾಯ್ದೆಗಳ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಸ್ವೀಕರಿಸುವ ಅರ್ಜಿಗಳನ್ನು ಪರಿಶೀಲನೆ ನಡೆಸಲಾಯಿತು.;

Update: 2025-06-25 14:40 GMT

ಕರ್ತವ್ಯ ಲೋಪ, ಭ್ರಷ್ಟಾಚಾರ ಆರೋಪಗಳ ಹಿನ್ನೆಲೆಯಲ್ಲಿ ಎಂ.ಜಿ.ರಸ್ತೆಯಲ್ಲಿನ ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಕಚೇರಿ ಸೇರಿದಂತೆ ವಲಯ ಕಚೇರಿಗಳ ಮೇಲೆ ಬುಧವಾರ ಲೋಕಾಯುಕ್ತ ನ್ಯಾ.ಬಿ.ಎಸ್‌.ಪಾಟೀಲ್‌ ನೇತೃತ್ವದಲ್ಲಿ ದಿಢೀರ್‌ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಕೇಂದ್ರ ಕಚೇರಿಗೆ ನ್ಯಾ.ಬಿ.ಎಸ್‌.ಪಾಟೀಲ್‌ ಭೇಟಿ ನೀಡಿದರೆ, ಶಿವನಗರ, ಬಸವೇಶ್ವರನಗರ ಮತ್ತು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿನ ವಲಯ ಕಚೇರಿಗಳಿಗೆ ಉಪಲೋಕಾಯುಕ್ತ ನ್ಯಾ.ಬಿ.ವೀರಪ್ಪ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಹಲವು ಲೋಪದೋಷಗಳು ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು. 

ಕೇಂದ್ರ ಕಚೇರಿಯಲ್ಲಿ ವಾಯು ಮತ್ತು ಜಲ ಕಾಯ್ದೆಗಳ ಉಲ್ಲಂಘನೆಗಳಿಗೆ ಸಂಬಂಧಿಸಿದಂತೆ ಸ್ವೀಕರಿಸುವ ಅರ್ಜಿಗಳನ್ನು ಪರಿಶೀಲನೆ ನಡೆಸಲಾಯಿತು. ಈ ವೇಳೆ ಪ್ರತಿಯೊಂದು ಅರ್ಜಿಗಳ ವಿಲೇವಾರಿಗಾಗಿ ತೆಗೆದುಕೊಂಡಸಮಯ ಮತ್ತು ಕ್ರಮವನ್ನು ವಿವರವಾಗಿ ಸಲ್ಲಿಸುವಂತೆ ಸೂಚನೆ ನೀಡಲಾಯಿತು. ಸಕಲ ಕಾಯ್ದೆಯಡಿ ಸ್ವೀಕರಿಸಿರುವ ಅರ್ಜಿಗಳನ್ನು ಮೂರು ತಿಂಗಳಲ್ಲಿ ಇತ್ಯರ್ಥಗೊಳಿಸಬೇಕು. ಆದರೆ ಕೆಲವು ಅರ್ಜಿಯಗಳನ್ನು ಇತ್ಯರ್ಥಗೊಳಿಸದಿರುವುದು ಕಂಡು ಬಂತು. ಈ ಬಗ್ಗೆ ವಿವರಣೆ ನೀಡುವಂತೆ ಸೂಚನೆ ನೀಡಲಾಯಿತು. 

ಇನ್ನು, ವಲಯ ಕಚೇರಿಯಲ್ಲಿ ಹಾಜರಾತಿ ಪುಸ್ತಕದಲ್ಲಿ ಕೆಲವು ಸಿಬ್ಬಂದಿ ಸಹಿಯನ್ನು ಮಾಡದಿರುವುದು ಕಂಡು ಬಂತು. ಸಿಬ್ಬಂದಿ ಬಳಿ ಇದ್ದ ನಗದನ್ನು ಘೋಷಣೆ ಮಾಡಿಕೊಳ್ಳಬೇಕಿದ್ದು, ಅದನ್ನು ಮಾಡದಿರುವುದನ್ನು  ಗುರುತಿಸಲಾಯಿತು. ರಾಜರಾಜೇಶ್ವರಿನಗರ ವಲಯದಲ್ಲಿನ ಕೆರೆಗಳು ಕಲುಷಿತಗೊಂಡಿದ್ದು, ಅವುಗಳ ಸುಧಾರಣೆಗೆ ತೆಗೆದುಕೊಂಡ ಕ್ರಮದ ಬಗ್ಗೆ ವಿವರಣೆ ನೀಡುವಂತೆ ನಿರ್ದೇಶಣ ನೀಡಲಾಯಿತು. ವಲಯದಲ್ಲಿ ಎಷ್ಟು ಕಾರ್ಖಾನೆಗಳು, ಆಸ್ಪತ್ರೆಗಳು, ಮತ್ತು ಅಪಾರ್ಟ್‌ಮೆಂಟ್‌ಗಳನ್ನು ಗುರುತಿಸಲಾಗಿದೆಯೇ ಎಂಬ ಪ್ರಶ್ನೆಗೆ ಸಿಬ್ಬಂದಿ ಉತ್ತರ ನೀಡಲಿಲ್ಲ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಸೂಚನೆ ನೀಡಲಾಯಿತು. 



Tags:    

Similar News