ಬೆಂಗಳೂರು ಸೇರಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಿಢೀರ್‌ ದಾಳಿ

ಭ್ರಷ್ಟಾಚಾರದ ಆರೋಪದ ಹಿನ್ನೆಲೆ ಹಲವು ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ಮಂಗಳವಾರ ಲೋಕಾಯುಕ್ತ ದಾಳಿ ನಡೆದಿದೆ.;

Update: 2025-06-24 05:07 GMT

ಕರ್ನಾಟಕ ಲೋಕಾಯುಕ್ತ

ಕರ್ನಾಟಕದಲ್ಲಿ ಲೋಕಾಯುಕ್ತದ ಅನಿರೀಕ್ಷಿತ ದಾಳಿ: ಹಲವು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳಲ್ಲಿ ಶೋಧ

ರಾಜ್ಯದಲ್ಲಿ ಭ್ರಷ್ಟಾಚಾರದ ವಿರುದ್ಧ ಸಮರ ಸಾರಿರುವ ಲೋಕಾಯುಕ್ತ ಅಧಿಕಾರಿಗಳು ಮಂಗಳವಾರ ಮುಂಜಾನೆ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದು, ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಸರ್ಕಾರಿ ಅಧಿಕಾರಿಗಳ ನಿವಾಸಗಳು ಹಾಗೂ ಕಚೇರಿಗಳನ್ನು ಜಾಲಾಡಿದ್ದಾರೆ.

ಯಾವ್ಯಾವ ಅಧಿಕಾರಿಗಳ ಮೇಲೆ ದಾಳಿ?

ಲೋಕಾಯುಕ್ತ ದಾಳಿಗಳ ವಿವರ ಹೀಗಿದೆ

* ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಗೋವಿಂದರಾಜನಗರ ವಲಯದ ಸಹಾಯಕ ಎಂಜಿನಿಯರ್ ಪ್ರಕಾಶ್ ಅವರ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಗಿದೆ.

* ಶಿವಮೊಗ್ಗ: ಅರ್ಗ್ಯಾನಿಕ್ ಫಾರ್ಮಿಂಗ್‌ನ ಅಸೋಸಿಯೇಟ್ ರಿಸರ್ಚ್ ಡೈರೆಕ್ಟರ್ ಡಾ. ಎಸ್. ಪ್ರದೀಪ್ ಅವರ ನಿವಾಸ ಮತ್ತು ಕಚೇರಿಗಳ ಮೇಲೆ ದಾಳಿ ನಡೆದಿದೆ.

* ಚಿಕ್ಕಮಗಳೂರು: ನಗರಸಭೆಯ ಖಾತೆ ಅಧಿಕಾರಿ ಲತಾಮಣಿ ಅವರ ಮನೆ ಮೇಲೆ ಪರಿಶೀಲನೆ ನಡೆಸಲಾಗಿದೆ.

* ಆನೆಕಲ್ (ಬೆಂಗಳೂರು ಗ್ರಾಮಾಂತರ): ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಕೆ.ಜಿ. ಅಮರನಾಥ್ ಅವರ ಮನೆ ಮೇಲೆ ದಾಳಿ ನಡೆಸಲಾಗಿದೆ.

* ಗದಗ: ಪಟ್ಟಣ ಪೊಲೀಸ್ ಇನ್ಸ್‌ಪೆಕ್ಟರ್ ಧ್ರುವರಾಜ್ ಅವರ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆದಿದೆ. ಇದಲ್ಲದೆ, ಗದಗ ಶಹರ ಠಾಣೆಯ ಸಿಪಿಐ ಡಿ.ಬಿ. ಪಾಟೀಲ್ ಅವರ ಶಿವಾನಂದ ನಗರದಲ್ಲಿರುವ ಮನೆ, ಕಚೇರಿ ಮತ್ತು ಬಾಗಲಕೋಟೆ, ಜಮಖಂಡಿ, ಕೆರೂರಿನಲ್ಲಿರುವ ಅವರ ಇತರ ಮನೆಗಳ ಮೇಲೂ ಲೋಕಾಯುಕ್ತ ಅಧಿಕಾರಿಗಳು ಶೋಧ ನಡೆಸಿದ್ದಾರೆ.

* ಧಾರವಾಡ: ಮಲಪ್ರಭಾ ಯೋಜನೆ ಎಂಜಿನಿಯರ್ ಅಶೋಕ್ ವಾಲ್ಸಂದ್ ಅವರ ಮನೆ ಮೇಲೆ ಪರಿಶೀಲನೆ ನಡೆದಿದೆ.

* ಕಲಬುರ್ಗಿ: ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಯ ಮಾಜಿ ಎಂಜಿನಿಯರ್ ಮಲ್ಲಿಕಾರ್ಜುನ ಅಲಿಪುರ ಮತ್ತು ಪಿಡಿಒ ರಾಮಚಂದ್ರ ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಸಿಪಿಐ ಪಾಟೀಲ್ ಮನೆ ದಾಳಿ ವೇಳೆ ಅಚ್ಚರಿ ಬೆಳವಣಿಗೆ

ಗದಗದಲ್ಲಿ ಸಿಪಿಐ ಡಿ.ಬಿ. ಪಾಟೀಲ್ ಅವರ ಮನೆ ಮೇಲೆ ನಡೆದ ದಾಳಿ ವೇಳೆ ಅಚ್ಚರಿಯ ಘಟನೆ ನಡೆದಿದೆ. ಲೋಕಾಯುಕ್ತ ಅಧಿಕಾರಿಗಳು ಪಾಟೀಲ್ ಅವರ ವಾಹನವನ್ನೂ ಬಿಡದೆ ತಪಾಸಣೆ ನಡೆಸಿದ್ದಾರೆ. ಈ ವೇಳೆ ಪಾಟೀಲ್ ಮನೆಯ ಶೌಚಾಲಯದಲ್ಲಿ ಕುಳಿತಿದ್ದರು ಎನ್ನಲಾಗಿದ್ದು, ಲೋಕಾಯುಕ್ತ ಅಧಿಕಾರಿಗಳು ಶೌಚಾಲಯದ ಬಳಿಯೇ ನಿಂತು, ಅವರು ಯಾರೊಂದಿಗಾದರೂ ಫೋನ್‌ನಲ್ಲಿ ಮಾತನಾಡುತ್ತಿದ್ದಾರೆಯೇ ಎಂಬುದನ್ನು ಗಮನಿಸಿದ್ದಾರೆ.

ಲೋಕಾಯುಕ್ತ ಡಿವೈಎಸ್ಪಿ ಪುಷ್ಪಲತಾ ನೇತೃತ್ವದಲ್ಲಿ ಈ ದಾಳಿಗಳು ನಡೆದಿವೆ. ಪ್ರಸ್ತುತ, ದಾಳಿಗೆ ಒಳಗಾದ ಅಧಿಕಾರಿಗಳ ಆಸ್ತಿ, ದಾಖಲೆಪತ್ರಗಳ ಪರಿಶೀಲನೆ ಪ್ರಗತಿಯಲ್ಲಿದೆ. ಭ್ರಷ್ಟಾಚಾರವನ್ನು ಬೇರುಮಟ್ಟದಿಂದ ಕಿತ್ತೊಗೆಯುವ ಲೋಕಾಯುಕ್ತದ ಪ್ರಯತ್ನಗಳ ಭಾಗವಾಗಿ ಈ ದಾಳಿಗಳು ಮುಂದುವರಿಯಲಿವೆ. 

Tags:    

Similar News