ಪತಿಯ ಬಿಡುಗಡೆಗಾಗಿ ಟೆಂಪಲ್ ರನ್ ನಡೆಸುತ್ತಿರುವ ಲಕ್ಷ್ಮೀ ಅರುಣಾರೆಡ್ಡಿ
ಅರುಣಾ ರೆಡ್ಡಿ ಕರ್ನಾಟಕದ ವಿವಿಧ ದೇವಸ್ಥಾನಗಳಿಗೆ ಭೇಟಿ ವಿಶೇಷ ಪೂಜೆ, ಸಲ್ಲಿಸುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲದೇ, ಅಸ್ಸಾಂನ ಕಾಮಾಖೀನಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.;
ಓಬಳಾಪುರಂ ಮೈನಿಂಗ್ನ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮಾಜಿ ಶಾಸಕ ಗಾಲಿ ಜನಾರ್ದನರೆಡ್ಡಿ ಜೈಲು ಸೇರಿದ್ದಾರೆ. ಆಂಧ್ರಪ್ರದೇಶದ ನಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಲಯ ಶಿಕ್ಷೆ ವಿಧಿಸಿದ ಬೆನ್ನಲ್ಲೇ ರಾಜ್ಯ ವಿಧಾನಸಭೆಯು ಜನಾರ್ದನರೆಡ್ಡಿ ಅವರ ಶಾಸಕತ್ವವನ್ನು ಅನರ್ಹಗೊಳಿಸಿದೆ. ಇಷ್ಟೆಲ್ಲಾ ಬೆಳವಣಿಗೆ ನಡುವೆ ಜನಾರ್ದನ ರೆಡ್ಡಿ ಕುಟುಂಬದ ಜತೆ ಸಂಬಂಧಿಕರು, ಸ್ನೇಹಿತರು ಅಂತರ ಕಾಯ್ದುಕೊಳ್ಳಲಾರಂಭಿಸಿದ್ದಾರೆ. ಎಲ್ಲರೂ ದೂರು ಸರಿಯುತ್ತಿರುವ ಕಾರಣ ಜನಾರ್ದನ ರೆಡ್ಡಿ ಬಿಡುಗಡೆಗಾಗಿ ಅವರ ಪತ್ನಿ ಲಕ್ಷ್ಮೀ ಅರುಣಾ ರೆಡ್ಡಿ ಅವರು ದೇವರು ಮೊರೆ ಹೋಗಿದ್ದಾರೆ.
ಅರುಣಾ ರೆಡ್ಡಿ ಅವರು ಕರ್ನಾಟಕದ ವಿವಿಧ ದೇವಸ್ಥಾನಗಳಿಗೆ ಭೇಟಿ ವಿಶೇಷ ಪೂಜೆ, ಹೋಮ-ಹವನಗಳನ್ನು ಸಲ್ಲಿಸುತ್ತಿದ್ದಾರೆ. ಕರ್ನಾಟಕ ಮಾತ್ರವಲ್ಲದೇ, ಅಸ್ಸಾಂನ ಕಾಮಾಖೀನಿ ದೇವಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ್ದಾರೆ.
ಅಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆ ನಡೆಸಿದ ನಾಂಪಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ಜನಾರ್ದನ ರೆಡ್ಡಿ ಅವರನ್ನು ದೋಷಿ ಎಂದು ಪರಿಗಣಿಸಿ ಏಳು ವರ್ಷ ಜೈಲು ಶಿಕ್ಷೆ ವಿಧಿಸಿದೆ. ನ್ಯಾಯಾಲಯದ ತೀರ್ಪಿನಿಂದಾಗಿ ಹೈದರಾಬಾದ್ನ ಚಂಚಲಗೂಡ ಜೈಲಿನಲ್ಲಿ ಕಾಲ ಕಳೆಯುವಂತಾಗಿದೆ. ಈ ನಡುವೆ, ರಾಜ್ಯದಲ್ಲಿಯೂ ಅಕ್ರಮ ಗಣಿಗಾರಿಕೆ ಪ್ರಕರಣದ ವಿಚಾರಣೆ ನಡೆಯುತ್ತಿದೆ. ಈ ಸಂಬಂಧ ರಾಜ್ಯದ ಪೊಲೀಸರು ಬಾಡಿವಾರೆಂಟ್ ಮೇಲೆ ಹೈದರಾಬಾದ್ನಿಂದ ಕರೆತಂದು ಪರಪ್ಪನ ಅಗ್ರಹಾರ ಜೈಲಿನಲ್ಲಿಟ್ಟಿದ್ದಾರೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ವಿಚಾರಣೆ ಬಳಿಕ ಮತ್ತೆ ಚಂಚಲಗೂಡು ಜೈಲಿಗೆ ಕಳುಹಿಸಲಾಗುತ್ತದೆ.
ಸಿಬಿಐ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಜನಾರ್ದನ ರೆಡ್ಡಿ ಪರ ವಕೀಲರು ಆಂಧ್ರಪ್ರದೇಶ ಹೈಕೋರ್ಟ್ನ ಮೊರೆ ಹೋಗಿದ್ದಾರೆ. ಆದರೆ, ಒಂದು ತಿಂಗಳ ಕಾಲ ಬೇಸಿಗೆ ರಜೆ ಇರುವ ಪೂರ್ಣ ಪ್ರಮಾಣದ ಹೈಕೋರ್ಟ್ ಪೀಠ ಕಾರ್ಯನಿರ್ವಹಿಸುತ್ತಿಲ್ಲ. ಹೀಗಾಗಿ ಪ್ರಕರಣ ಮುಂದೂಡಲಾಗಿದೆ. ಇದೇ ತಿಂಗಳು ೧೦ ರಂದು ವಿಚಾರಣೆಗೆ ಬರಲಿದೆ. ಈ ಹಿಂದೆ ರಾಜ್ಯದಲ್ಲಿ ಜೈಲಿನಲ್ಲಿದ್ದ ಜನಾರ್ದನರೆಡ್ಡಿ ಇದೀಗ ಹೈದರಾಬಾದ್ನ ಜೈಲಿನಲ್ಲಿರುವಂತಾಗಿದೆ.
ಯಾವ್ಯಾವ ದೇವಸ್ಥಾನಗಳಿಗೆ ಭೇಟಿ?
ಒಂದೆಡೆ ಪತಿ ಜೈಲಿನಲ್ಲಿದ್ದರೆ, ಅವರ ಬಿಡುಗಡೆಗಾಗಿ ಲಕ್ಷ್ಮೀ ಅರುಣಾ ಅವರು ಟೆಂಪಲ್ ರನ್ ನಡೆಸುತ್ತಿದ್ದಾರೆ. ಕಳೆದ ಒಂದು ವಾರದಿಂದ ನಿರಂತರವಾಗಿ ರಾಜ್ಯದ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸುವಲ್ಲಿ ನಿರತವಾಗಿದ್ದಾರೆ.
ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿಯಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಬಳಿಕ ಪಟ್ಟಾಭಿರಾಮ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸುಂದರಕಾಂಡ ರಾಮಾಯಣದ ಕೋಟಿ ಬರಹಕ್ಕೆ ಸಂಕಲ್ಪ ಮಾಡಿದ್ದಾರೆ. ಇನ್ನು ಉಡುಪಿಯ ಶ್ರೀ ಕೃಷ್ಣನ ದರ್ಶನವನ್ನು ಪಡೆದು, ಪುತ್ತಿಗೆ ಶ್ರೀಗಳ ಆಶೀರ್ವಾದವನ್ನು ಸಹ ಪಡೆದರು. ಇದಲ್ಲದೇ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಹೋಮ ಹವನಗಳನ್ನು ಸಲ್ಲಿಸಿ, ಶತ್ರು ನಿವಾರಣೆ ಹಾಗೂ ಸಂಕಷ್ಟಗಳ ನಿವಾರಣೆಗಾಗಿ ಮತ್ತು ಸುಖ ಶಾಂತಿ ನೆಮ್ಮದಿಗಾಗಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು
ಅಸ್ಸಾಂನಲ್ಲಿನ ದೇವಾಲಯಕ್ಕೂ ಭೇಟಿ:
ರಾಜ್ಯದ ದೇವಾಲಯ ಮಾತ್ರವಲ್ಲದೇ, ಅಸ್ಸಾಂ ರಾಜ್ಯದ ಪ್ರಮುಖ ದೇವಾಲಯ ಕಾಮಾಖೀನಿ ದೇವಿಯ ದರ್ಶನವನ್ನು ಸಹ ಲಕ್ಷ್ಮೀ ಅರುಣಾ ರೆಡ್ಡಿ ಅವರು ಮಾಡಿದ್ದಾರೆ. ಕಾಮಾಕ್ಯ ದೇವಾಲಯವು ದೇಶದ ಅಸ್ಸಾಂ ರಾಜ್ಯದಲ್ಲಿರುವ ಗುವಾಹಟಿ ನಗರದ ಪಶ್ಚಿಮ ಭಾಗದಲ್ಲಿರುವ ನೀಲಾಚಲ ಬೆಟ್ಟದ ಮೇಲೆ ನೆಲಸಿರುವ ಶಕ್ತಿ ದೇವಾಲಯವಾಗಿದೆ. ಇದು ಭುವನೇಶ್ವರಿ, ಬಾಗಲಮುಖಿ, ಚಿನ್ನಮಸ್ತ, ತ್ರಿಪುರ ಸುಂದರಿ ಅವರನ್ನೊಳಗೊಂಡ ದೇವಿಯ ವಿವಿಧ ರೂಪಗಳಿವೆ. ದೇವಿಯ ದರ್ಶನ ಪಡೆದು ಪತಿಯ ಬಿಡುಗಡೆಗಾಗಿ ಪ್ರಾರ್ಥಿಸಿದ್ದಾರೆ. ನಟ ದರ್ಶನ್ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದಾಗ ಅವರ ಪತ್ನಿ ವಿಜಯಲಕ್ಷ್ಮೀ ಇದೇ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಪತಿಗೆ ಬೆಂಬಲವಾಗಿ ನಿಂತ ಪತ್ನಿ:
ಜನಾರ್ದನ ರೆಡಿ ಕೈಗೊಳ್ಳುವ ಯಾವುದೇ ರಾಜಕೀಯದ ಬಗ್ಗೆ ಚಿಂತಿಸದ ಲಕ್ಷ್ಮೀ ಅರುಣಾ ರೆಡ್ಡಿ, ಪತಿಗೆ ಸಂಪೂರ್ಣವಾಗಿ ಬೆಂಬಲ ನೀಡುತ್ತಾ ಬಂದಿದ್ದಾರೆ. 1999 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ನ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿಯ ಸುಷ್ಮಾ ಸ್ವರಾಜ್ ಸೋಲನುಭಿಸಿದ್ದರು. ನಂತರ, 2001ರಿಂದ ಬಳ್ಳಾರಿಯ ನಗರಸಭೆಯಲ್ಲಿ ಬಿಜೆಪಿ ವಿಜಯದ ಪತಾಕೆ ಹಾರಿಸಿತು. ಅಲ್ಲಿಂದ ಆರಂಭಗೊಂಡಿರುವ, ಅಲ್ಲಿನ ಬಿಜೆಪಿಯಲ್ಲಿನ ಸಂಘಟನೆ ಹಾಗೂ ಬಿಜೆಪಿಯನ್ನು ಬಲಿಷ್ಠವಾಗಿ ಬೆಳೆಸಿದರಲ್ಲಿ ಜನಾರ್ದನ ರೆಡ್ಡಿ ಪಾತ್ರ ಬಹುಮುಖ್ಯವಾಗಿದೆ. ಜನಾರ್ದನ ರೆಡ್ಡಿ ಮತ್ತು ಮಾಜಿ ಸಚಿವ ಶ್ರೀರಾಮುಲು ಬಿಜೆಪಿ ಪಕ್ಷವನ್ನು ಒಂದಾಗಿ ಕಟ್ಟಿಕೊಂಡು ಬಂದವರು. ಪಕ್ಷದ ಸಂಘಟನೆಗಾಗಿ ಮತ್ತು ಅನೇಕ ಶಾಸಕರು, ಸಂಸದರನ್ನು ಚುನಾವಣೆಯಲ್ಲಿ ಗೆಲ್ಲಿಸಿದ ಜನಾರ್ದನ ರೆಡ್ಡಿ ಅವರ ಯಾವುದೇ ವಿಷಯದಲ್ಲಿ ಚಕಾರ ಎತ್ತದೆ ಲಕ್ಷ್ಮಿ ಅರುಣಾ ರೆಡ್ಡಿ ಅವರು ಬೆಂಬಲಿಸುತ್ತಲೇ ಬಂದರು.
ಸಿಬಿಐ ಬಂಧನಕ್ಕೊಳಗಾದ ಬಳಿಕ ನಡೆದ ಹಲವು ವಿದ್ಯಮಾನಗಳನ್ನು ಗಮನಿಸಿದಾಗ ಕುಟುಂಬದ ಸದಸ್ಯರು ಮತ್ತು ಆತ್ಮೀಯ ಸ್ನೇಹಿತರು ಅಂತರವನ್ನು ಕಾಯ್ದುಕೊಳ್ಳಲಾರಂಭಿಸಿದರು. ಸಕ್ರಿಯವಾಗಿ ಎಲ್ಲರೂ ದೂರವಾಗುತ್ತಿರುವ ಹಿನ್ನೆಲೆಯಲ್ಲಿ ತಾವೇ ಖುದ್ದಾಗಿ ದೇವರ ಮೊರೆ ಹೋಗಲಾರಂಭಿಸಿದ್ದಾರೆ. ಅಲ್ಲದೇ, ಕಾನೂನು ಹೋರಾಟಕ್ಕೂ ಮುಂದಾಗಿದ್ದಾರೆ.