ಅಕ್ರಮ ಗಣಿಗಾರಿಕೆ ಪ್ರಕರಣ: ಜನಾರ್ದನ ರೆಡ್ಡಿಯ ಶಾಸಕ ಸ್ಥಾನಕ್ಕೆ ಮರುಜೀವ
ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪಿಗೆ ಹೈಕೋರ್ಟ್ ತಡೆ ನೀಡಿದ ಬೆನ್ನಲೇ ಜನಾರ್ದನ ರೆಡ್ಡಿಯ ಅನರ್ಹಗೊಂಡ ಶಾಸಕತ್ವ ಸ್ಥಾನ ಉಳಿದುಕೊಳ್ಳಲಿದೆ. ಈ ನಿಟ್ಟಿನಲ್ಲಿ ಕಡಿಮೆ ಕರ್ನಾಟಕ ವಿಧಾನಸಭೆ ಸಚಿವಾಲಯವು ಕಾರ್ಯಪ್ರವೃತ್ತವಾಗಿದೆ.;
ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರಿಗೆ ತೆಲಂಗಾಣ ಹೈಕೋರ್ಟ್ನಿಂದ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ಅಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಇತ್ತೀಚೆಗೆ ವಿಧಿಸಿದ್ದ ಏಳು ವರ್ಷಗಳ ಜೈಲು ಶಿಕ್ಷೆಯನ್ನು ಈ ಹಂತದಲ್ಲಿ ಜಾರಿಗೊಳಿಸುವ ಅಗತ್ಯವಿಲ್ಲ ಎಂದು ತೀರ್ಪು ನೀಡಿ ಜನಾರ್ದನ ರೆಡ್ಡಿಗೆ ಷರತ್ತುಬದ್ಧ ಜಾಮೀನು ನೀಡಿದೆ.
ಸಿಬಿಐ ವಿಶೇಷ ನ್ಯಾಯಾಲಯ ನೀಡಿದ ತೀರ್ಪಿಗೆ ಹೈಕೋರ್ಟ್ ತಡೆ ನೀಡಿದ ಬೆನ್ನಲೇ ಜನಾರ್ದನ ರೆಡ್ಡಿಯ ಅನರ್ಹಗೊಂಡ ಶಾಸಕತ್ವ ಸ್ಥಾನ ಉಳಿದುಕೊಳ್ಳಲಿದೆ. ಈ ನಿಟ್ಟಿನಲ್ಲಿ ಕಡಿಮೆ ಕರ್ನಾಟಕ ವಿಧಾನಸಭೆ ಸಚಿವಾಲಯವು ಕಾರ್ಯಪ್ರವೃತ್ತವಾಗಿದೆ. ತೆಲಂಗಾಣ ಹೈಕೋರ್ಟ್ ನೀಡಿರುವ ತೀರ್ಪಿನ ಪ್ರಮಾಣ ಪತ್ರದ ಪ್ರತಿಗಾಗಿ ಕಾಯುತ್ತಿದೆ. ಅದು ಕೈ ಸೇರಿದ ಕೂಡಲೇ ಮುಂದಿನ ಕಾನೂನು ಕ್ರಮ ಕೈಗೊಳ್ಳಲಿದೆ.
ಸಿಬಿಐ ವಿಶೇಷ ನ್ಯಾಯಾಲಯ ಏಳು ವರ್ಷ ತೀರ್ಪು ಪ್ರಕಟಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆ ಸಚಿವಾಲಯವು ನಿಯಮಬದ್ದವಾಗಿ ಜನಾರ್ದನ ರೆಡ್ಡಿಯ ಶಾಸಕತ್ವ ಸ್ಥಾನವನ್ನು ರದ್ದುಗೊಳಿಸಿತ್ತು. ಅಲ್ಲದೇ ಮುಖ್ಯ ಚುನಾವಣಾಧಿಕಾರಿ ಕಚೇರಿಗೂ ಮಾಹಿತಿ ಒದಗಿಸಿತ್ತು. ಕಾನೂನು ಪ್ರಕಾರ ಯಾವುದೇ ಕ್ಷೇತ್ರದಲ್ಲಿ ಶಾಸಕತ್ವ ಸ್ಥಾನ ಖಾಲಿಯಾದ ಆರು ತಿಂಗಳೊಳಗೆ ಉಪಚುನಾವಣೆ ನಡೆಸಬೇಕು. ಹೀಗಾಗಿ ಮುಖ್ಯಚುನಾವಣಾಧಿಕಾರಿ ಕಚೇರಿಯು ಸಹ ಜನಾರ್ದನ ರೆಡ್ಡಿ ಪ್ರತಿನಿಧಿಸುತ್ತಿದ್ದ ಗಂಗಾವತಿ ಕ್ಷೇತ್ರದ ಶಾಸಕತ್ವ ಸ್ಥಾನ ಖಾಲಿ ಇರುವ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಮಾಹಿತಿಯನ್ನು ನೀಡಲಾಗಿತ್ತು. ಆದರೆ ಜನಾರ್ದನ ರೆಡ್ಡಿ ಹೈಕೋರ್ಟ್ ಮೆಟ್ಟಿಲೇರಿದ್ದ ಹಿನ್ನೆಲೆಯಲ್ಲಿ ಅಲ್ಲಿನ ತೀರ್ಪು ನೋಡಿಕೊಂಡು ಮುಂದಿನ ಕಾನೂನು ಪ್ರಕಿಯೆ ಆರಂಭಿಸಲು ಮುಂದಾಗಿತ್ತು. ಅಂತೆಯೇ ಹೈಕೋರ್ಟ್ ತೀರ್ಪಿಗೆ ತಡೆ ನೀಡಿದ ಕಾರಣ ಇದೀಗ ತನ್ನ ಪ್ರಕ್ರಿಯೆಗಳನ್ನು ನಿಲ್ಲಿಸಿದೆ. ಕರ್ನಾಟಕ ವಿಧಾನಸಭೆ ಸಚಿವಾಲಯವು ಅನಧಿಕೃತವಾಗಿ ಮುಖ್ಯಚುನಾವಣಾಧಿಕಾರಿ ಕಚೇರಿಗೆ ನ್ಯಾಯಾಲಯದ ಬೆಳವಣಿಗೆ ಕುರಿತು ಅನಧಿಕೃತವಾಗಿ ವಿಷಯ ತಿಳಿಸಿದೆ. ಜರ್ನಾದನ ರೆಡ್ಡಿ ಅವರಿಂದ ಹೈಕೋರ್ಟ್ ಆದೇಶ ಕುರಿತ ಪ್ರಮಾಣ ಪತ್ರ ಸಲ್ಲಿಕೆಯಾದ ಬಳಿಕ ಅಧಿಕೃತವಾಗಿ ಮಾಹಿತಿ ಒದಗಿಸಲಾಗುತ್ತದೆ ಎಂದು ಮೂಲಗಳು ಹೇಳಿವೆ.
ಪತ್ನಿ ಸ್ಪರ್ಧೆಗೆ ಸಿದ್ಧತೆ:
ಜನಾರ್ದನ ರೆಡ್ಡಿ ಶಾಸಕತ್ವ ರದ್ದುಗೊಂಡ ಬಳಿಕ ಉಪಚುನಾವಣೆ ನಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಉಪಚುನಾವಣೆಗೆ ಜನಾರ್ದನ ರೆಡ್ಡಿ ಪತ್ನಿ ಲಕ್ಷ್ಮಿ ಅರುಣಾ ರೆಡ್ಡಿ ಅವರನ್ನು ಕಣಕ್ಕಿಳಿಸುವ ಸಿದ್ಧತೆಯೂ ಕೈಗೊಳ್ಳಲಾಗಿತ್ತು. ಈ ನಿಟ್ಟಿನಲ್ಲಿ ಸಭೆಗಳನ್ನು ಸಹ ನಡೆಸಲಾಗುತ್ತಿತ್ತು. ಜನಾರ್ದನ ರೆಡ್ಡಿ ಪಕ್ಷವು ಬಿಜೆಪಿ ಯಲ್ಲಿ ವಿಲೀನಗೊಂಡ ಕಾರಣ ಪಕ್ಷೇತರವಾಗಿ ಸ್ಪರ್ಧಿಸುವ ಇರಾದೆ ಇತ್ತು. ಆದರೆ ಹೈಕೋರ್ಟ್ ತೀರ್ಪಿನಿಂದ ಇದೀಗ ಇದೆಲ್ಲದಕ್ಕೂ ತಾತ್ಕಾಲಿಕ ವಿರಾಮ ಸಿಕ್ಕಂತಾಗಿದೆ.
ರೆಡ್ಡಿ ವಿರುದ್ಧದ ಪ್ರಕರಣ ಮುಂದುವರಿಯಲಿದೆ:
ದೇಶದಲ್ಲಿಯೇ ಭಾರೀ ಸಂಚಲನ ಉಂಟು ಮಾಡಿದ್ದ ಓಬಳಾಪುರಂ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಮೇ 6 ರಂದು ಸಿಬಿಐ ವಿಶೇಷ ನ್ಯಾಯಾಲಯವು ಗಾಲಿ ಜನಾರ್ದನರೆಡ್ಡಿ ಸೇರಿದಂತೆ ನಾಲ್ವರಿಗೆ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ರೆಡ್ಡಿ ಮತ್ತು ಇತರರು ತೆಲಂಗಾಣ ಹೈಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿದಾರರ ಮನವಿಯನ್ನು ಅಂಗೀಕರಿಸಿರುವ ತೆಲಂಗಾಣ ಹೈಕೋರ್ಟ್, ಸಿಬಿಐ ವಿಶೇಷ ಕೋರ್ಟ್ ನೀಡಿದ ಶಿಕ್ಷೆಯನ್ನು ಅಮಾನ್ಯ ಮಾಡಿತು. ಇದರಿಂದ ಜೈಲು ಪಾಲಾಗಿದ್ದ ರೆಡ್ಡಿ ಸೇರಿದಂತೆ ನಾಲ್ವರು ಬಿಡುಗಡೆ ಭಾಗ್ಯ ಕಂಡಿದ್ದಾರೆ. ಸಿಬಿಐ ಕೋರ್ಟ್ನ ಶಿಕ್ಷೆಯನ್ನು ಮಾತ್ರ ತಡೆ ಹಿಡಿಯಲಾಗಿದ್ದು, ಪ್ರಕರಣವು ಹೈಕೋರ್ಟ್ನಲ್ಲಿ ಮುಂದುವರಿಯಲಿದೆ.
ಪ್ರಕರಣದಲ್ಲಿ ಅಪರಾಧಿಗಳು ಎಂದು ಘೋಷಿತರಾಗಿ ಜೈಲು ಶಿಕ್ಷೆಗೆ ಗುರಿಯಾಗಿದ್ದ ಜನಾರ್ದನ ರೆಡ್ಡಿ ಅವರಿಗೆ ಜಾಮೀನು ನೀಡುವಾಗ ಹೈಕೋರ್ಟ್ ಮೂರು ಷರತ್ತುಗಳನ್ನು ವಿಧಿಸಿದೆ. 10 ಲಕ್ಷ ರೂಪಾಯಿಗಳ ಎರಡು ಶ್ಯೂರಿ ಬಾಂಡ್, ವಿದೇಶಕ್ಕೆ ತೆರಳುವಂತಿಲ್ಲ, ಪಾಸ್ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸುವಂತೆ ಸೂಚಿಸಿದೆ.
ಪ್ರಕರಣದ ಹಿನ್ನೆಲೆ:
ಆಂಧ್ರ-ಕರ್ನಾಟಕದ ಗಡಿ ಭಾಗಕ್ಕೆ ಹೊಂದಿಕೊಂಡ ಹೀರೆಹಾಳ್-ಸಿದ್ದಾಪುರ ಬಳಿಯ ಓಬಳಾಪುರಂ ಬೆಟ್ಟದಲ್ಲಿ ನಡೆದಿದ್ದ ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಪ್ರಕರಣ ಇದಾಗಿದೆ. ಓಎಂಸಿ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸರೆಡ್ಡಿ ಮತ್ತು ಜನಾರ್ದನರೆಡ್ಡಿ ಈ ಕಂಪನಿಯ ಮುಖ್ಯಸ್ಥರಾಗಿದ್ದರು. ಈ ಕಂಪನಿಗೆ ಗಣಿಗಾರಿಕೆ ಮಂಜೂರಾತಿ ನೀಡುವಲ್ಲಿ ಅರಣ್ಯ ಇಲಾಖೆ ಹಾಗೂ ಗಣಿ ಇಲಾಖೆಯಿಂದಲೂ ಅಕ್ರಮ ನಡೆದಿತ್ತು. ಇದರಲ್ಲಿ ರಾಜ್ಯದ 29 ಲಕ್ಷ ಟನ್ ಅದಿರನ್ನು ಲೂಟಿ ಮಾಡಿ 884 ಕೋಟಿ ರೂ. ಆದಾಯ ಪಡೆದಿದ್ದಾರೆ ಎನ್ನುವ ಆರೋಪವಿದೆ.
2009ರಲ್ಲಿ ಆಂಧ್ರದ ಅಂದಿನ ಮುಖ್ಯಮಂತ್ರಿ ಕಾಂಗ್ರೆಸ್ನ ರೋಷಯ್ಯ ಅವರು 2009 ರಲ್ಲಿ ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ 2011ರ ಸೆಪ್ಟೆಂಬರ್ 5 ರಂದು ಜನಾರ್ದನ ರೆಡ್ಡಿ, ಶ್ರೀನಿವಾಸರೆಡ್ಡಿ ಸಿಬಿಐನಿಂದ ಬಂಧಿತರಾಗಿ, ಮೂರುವರೆ ವರ್ಷಗಳ ಕಾಲ ಚಂಚಲಗುಡ ಮತ್ತು ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ವಾಸ ಅನುಭವಿಸಿದ್ದರು.
ಪತ್ನಿಯ ದೇವರ ಮೊರೆ ಫಲಿಸಿತಾ?
ಶಾಸಕರಾದ ಜನಾರ್ದನ್ ರೆಡ್ಡಿ ಬಿಡುಗಾಗಿ ಪತ್ನಿ ಲಕ್ಷ್ಮಿ ಅರುಣಾ ರೆಡ್ಡಿ ದೇವರ ಮೊರೆಹೋಗಿ ಕರ್ನಾಟಕ ರಾಜ್ಯದ ಪ್ರಮುಖ ವಿವಿಧ ದೇವಸ್ಥಾನಗಳಿಗೆ ಭೇಟಿ ನೀಡಿ, ವಿಶೇಷ ಪೂಜೆ ಹೋಮ ಹವನಗಳನ್ನು ಸಲ್ಲಿಸಿದ್ದರು. ಅಸ್ಸಾಂ ರಾಜ್ಯಕ್ಕೂ ಹೋಗಿ ವಿಶೇಷ ಪೂಜೆ ಸಲ್ಲಿಸಿದ್ದರು. ಬಹುಶಃ ಇದು ಫಲಿಸಿದಂತಾಗಿದೆ. ಪತ್ನಿಯ ದೇವರ ಪೂಜೆಯಿಂದಾಗಿ ಜನಾರ್ದನ ರೆಡ್ಡಿಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.
ಆಂಜನೇಯನ ಜನ್ಮಸ್ಥಳವಾದ ಅಂಜನಾದ್ರಿಯಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ತದನಂತರ ಪಟ್ಟಾಭಿರಾಮ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿ ಸುಂದರಕಾಂಡ ರಾಮಾಯಣದ ಕೋಟಿ ಬರಹಕ್ಕೆ ಸಂಕಲ್ಪವನ್ನು ಮಾಡಿದ್ದರು. ಇದಾದ ಬಳಿಕ ಉಡುಪಿಯ ಶ್ರೀ ಕೃಷ್ಣನ ದರ್ಶನವನ್ನು ಪಡೆದು, ಪುತ್ತಿಗೆ ಶ್ರೀಗಳ ಆಶೀರ್ವಾದವನ್ನು ಪಡೆದರು. ನಂತರ ಶ್ರೀ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆ ಹೋಮ ಹವನಗಳನ್ನು ಸಲ್ಲಿಸಿ, ಶತ್ರು ನಿವಾರಣೆ ಹಾಗೂ ಸಂಕಷ್ಟಗಳ ನಿವಾರಣೆಗಾಗಿ, ಸುಖ ಶಾಂತಿ ನೆಮ್ಮದಿಗಾಗಿ ವಿಶೇಷ ಪೂಜೆ ಸಲ್ಲಿಸಿದರು. ಅಲ್ಲದೇ ಬ್ರಹ್ಮಲಿಂಗೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು.
ಕರ್ನಾಟಕ ಬಳಿಕ ಅಸ್ಸಾಂ ರಾಜ್ಯದ ಪ್ರಮುಖ ದೇವಸ್ಥಾನವಾದ ಕಾಮಾಖೀನಿ ದೇವಿಯ ದರ್ಶನ ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿದ್ದರು.
ಲಕ್ಷ್ಮಿ ಅರುಣಾ ಜನಾರ್ದನ್ ರೆಡ್ಡಿ ಅವರು ವಿವಿಧ ದೇವಸ್ಥಾನಗಳಲ್ಲಿ ಪೂಜೆ ಹೋಮ ಹವನ ಮಾಡುವುದರ ಮೂಲಕ ತಮ್ಮ ಪತಿಗೆ ಒಳ್ಳೆಯದಾಗಲಿ ಎಂದು ಕೋರಿದ್ದರು. ಅಂತೆಯೇ ಪತಿಗೆ ಜಾಮೀನು ಮಂಜೂರಾಗಿ ಬಿಡುಗಡೆಯಾಗಿದ್ದಾರೆ.