IPL 2024| RCB Vs RR: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಮುಂದೆ ಹೋಗೋದು ಯಾರು? ಮನೆಗೆ ಹೋಗೋದು ಯಾರು?

Update: 2024-05-22 06:46 GMT

ಐಪಿಎಲ್ ಆವೃತ್ತಿ 17ರ ಎಲಿಮಿನೇಟರ್ ಪಂದ್ಯ ಇಂದು (ಬುಧವಾರ) ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದು, ರಾಜಸ್ತಾನ್‌ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡಗಳು ಮುಖಾಮುಖಿಯಾಗಲಿದೆ. ಇಂದಿನ ʼಮಾಡು ಇಲ್ಲವೇ ಮಡಿʼ ಪಂದ್ಯದಲ್ಲಿ ಗೆದ್ದ ತಂಡವು 2ನೇ ಕ್ವಾಲಿಫೈಯರ್‌ಗೆ ಪ್ರವೇಶಿಸಲಿದೆ. ಹಾಗೆಯೇ ಸೋತ ತಂಡ ಐಪಿಎಲ್‌ನಿಂದ ಹೊರಬೀಳಲಿದೆ.

16 ಆವೃತ್ತಿಗಳಲ್ಲಿ ಒಂದೇ ಒಂದು ಬಾರಿ ಕಪ್‌ ಗೆಲ್ಲದ ಆರ್‌ಸಿಬಿ ತಂಡ ಈ ಬಾರಿ ಹೊಸ ಅಧ್ಯಾಯ ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಕಪ್‌ ಗೆಲ್ಲುವ ಕನಸು ಹುಟ್ಟಿಸಿದ್ದಾರೆ. ಈ ಪಂದ್ಯದಲ್ಲಿ ಆರ್‌ಸಿಬಿ ತಂಡವು ರಾಜಸ್ತಾನ್ ರಾಯಲ್ಸ್ ವಿರುದ್ಧ ಗೆಲ್ಲಲೇಬೇಕು. ಇತ್ತ ರಾಯಲ್ ಚಾಲೆಂಜರ್ಸ್ ತಂಡವು ರಾಯಲ್ಸ್ ವಿರುದ್ಧ ಗೆಲ್ಲುವ ವಿಶ್ವಾಸವನ್ನೂ ಸಹ ಹೊಂದಿದೆ.

ಈ ಹಿಂದಿನ ಅಂಕಿ- ಅಂಶಗಳು ಹೇಳೋದೇನು?

ಆರ್‌ಸಿಬಿ ಮತ್ತು ರಾಜ‌ಸ್ತಾನ್‌ ರಾಯಲ್ಸ್ ಒಟ್ಟು 31 ಬಾರಿ ಮುಖಾಮುಖಿಯಾಗಿವೆ. ಇವುಗಳಲ್ಲಿ ಕೇವಲ 13 ಬಾರಿ ಮಾತ್ರ ರಾಜ‌ಸ್ತಾನ್‌ ರಾಯಲ್ಸ್ ತಂಡ ಗೆಲುವು ಕಂಡಿದೆ. ಮತ್ತೊಂದೆಡೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 15 ಬಾರಿ ಗೆಲುವು ದಾಖಲಿಸಿದೆ. ಈ ಲೆಕ್ಕಾಚಾರ ಒಂದು ಕಡೆಯಾದರೆ, ಲೀಗ್‌ ಹಂತದ ಪಂದ್ಯಗಳಲ್ಲಿ ಆರ್‌ಆರ್‌ ಸತತ ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಆದರೆ ಆರ್‌ಸಿಬಿ ಸತತ ಆರು ಪಂದ್ಯಗಳಲ್ಲಿ ಅಧಿಕಾರಯುತ ಗೆಲುವು ಸಾಧಿಸಿದೆ.

ಮಳೆ ಬಂದರೆ ಏನಾಗುತ್ತದೆ?

ಒಂದು ವೇಳೆ ಈ ನಿರ್ಣಾಯಕ ಪಂದ್ಯಕ್ಕೆ ಮಳೆ ಅಡಚಣೆಯುಂಟು ಮಾಡಿದರೆ ಫಲಿತಾಂಶ ನಿರ್ಧರಿಸುವುದು ಹೇಗೆ ಎಂಬ ಪ್ರಶ್ನೆ ಮೂಡುವುದು ಸಹಜ. ಟಾಸ್ ಪ್ರಕ್ರಿಯೆಗೂ ಮುನ್ನ ಮಳೆ ಬಂದು ಪಂದ್ಯ ತಡವಾಗಿ ಆರಂಭವಾದರೂ ಓವರ್​ಗಳನ್ನು ಕಡಿತಗೊಳಿಸುವುದಿಲ್ಲ. ಅಂದರೆ ಪಂದ್ಯವು ರಾತ್ರಿ 9.40 ರೊಳಗೆ ಶುರುವಾದರೆ ಯಾವುದೇ ಓವರ್​ ಕಡಿತ ಇರುವುದಿಲ್ಲ. ಅದರಂತೆ 2 ತಂಡಗಳು 20 ಓವರ್​ಗಳನ್ನು ಆಡಲಿದೆ. (ಒಂದು ವೇಳೆ ಮತ್ತೆ ಅಡಚಣೆ ಉಂಟಾಗಲಿದೆ ಎಂಬ ಸೂಚನೆಯಿದ್ದರೆ ಮಾತ್ರ ಓವರ್​ಗಳ ಕಡಿತಕ್ಕೆ ಮುಂದಾಗಬಹುದು). 

ಮಳೆಯಿಂದ ವಿಳಂಬವಾಗಿ ರಾತ್ರಿ 9.40 ರ ಬಳಿಕ ಪಂದ್ಯ ಆರಂಭವಾಗುವುದಾರೆ, ಓವರ್​ಗಳ ಕಡಿತ ಮಾಡಲಾಗುತ್ತದೆ. ಅಂದರೆ ಪ್ರತಿ 8 ನಿಮಿಷಗಳ ನಷ್ಟಕ್ಕೆ ಒಂದು ಓವರ್ ಅನ್ನು ಕಡಿತಗೊಳಿಸಲಾಗುತ್ತದೆ.

ಇನ್ನು ಪ್ಲೇಆಫ್ ಪಂದ್ಯಗಳಿಗೆ ಹೆಚ್ಚುವರಿ 120 ನಿಮಿಷಗಳನ್ನು ನಿಗದಿ ಮಾಡಲಾಗಿದೆ. ಅಂದರೆ ಐಪಿಎಲ್​ ಪಂದ್ಯದ ನಿಗದಿತ ಸಮಯ 3 ಗಂಟೆ 15 ನಿಮಿಷಗಳು. ಒಂದು ವೇಳೆ ಮಳೆ ಬಂದು ಅಥವಾ ಇನ್ನಿತರ ಕಾರಣಗಳಿಂದ ಪಂದ್ಯಕ್ಕೆ ಅಡಚಣೆಯಾದರೆ ಹೆಚ್ಚುವರಿ 2 ಗಂಟೆಯನ್ನು ಬಳಸಲಾಗುತ್ತದೆ. ಅಂದರೆ ಎಲಿಮಿನೇಟರ್ ಪಂದ್ಯಕ್ಕೆ 7.30 ರಿಂದ 1 ಗಂಟೆಯವರೆಗೆ ಸಮಯ ನಿಗದಿ ಮಾಡಲಾಗಿದೆ. ಆದಾಗ್ಯೂ ಪಂದ್ಯ ನಡೆಯದಿದ್ದರೆ ಅಥವಾ ಪೂರ್ಣಗೊಳ್ಳದಿದ್ದರೆ ಮ್ಯಾಚ್ ಅನ್ನು ಮೀಸಲು ದಿನದಾಟವನ್ನು ಬಳಸಲಾಗುತ್ತದೆ. ಮೀಸಲು ದಿನದಾಟದಲ್ಲೂ ಪಂದ್ಯ ನಡೆಸಲು ಸಾಧ್ಯವಿಲ್ಲ ಎಂದು ಕಂಡು ಬಂದರೆ ಸೂಪರ್ ಓವರ್​ ಆಡಿಸಲು ಮುಂದಾಗಲಿದ್ದಾರೆ.

ಇನ್ನು ಮಳೆಯಿಂದಾಗಿ ಕನಿಷ್ಠ ಸೂಪರ್ ಓವರ್ ಪಂದ್ಯ ಕೂಡ ನಡೆಯದಿದ್ದರೆ, ಪಂದ್ಯವನ್ನು ರದ್ದುಗೊಳಿಸಲಾಗುತ್ತದೆ. ಅಲ್ಲದೆ ಲೀಗ್​ ಹಂತದ 70 ಪಂದ್ಯಗಳ ನಂತರ ಪಾಯಿಂಟ್ಸ್​ ಟೇಬಲ್​ನಲ್ಲಿ ಟಾಪ್-4 ಸ್ಥಾನಗಳಲ್ಲಿ ಮೇಲಿರುವ ತಂಡವು ಮುಂದಿನ ಹಂತಕ್ಕೇರಲಿದೆ. ಅಂದರೆ ಎಲಿಮಿನೇಟರ್ ಪಂದ್ಯವು ರದ್ದಾದರೆ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ರಾಜ‌ಸ್ತಾನ್‌ ರಾಯಲ್ಸ್ ತಂಡವು 2ನೇ ಕ್ವಾಲಿಫೈಯರ್ ಪಂದ್ಯಕ್ಕೆ ಅರ್ಹತೆ ಪಡೆಯಲಿದೆ. ಏಕೆಂದರೆ ಆರ್​ಸಿಬಿ ತಂಡ ಅಂಕ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದೆ. ಹೀಗಾಗಿ ಎಲಿಮಿನೇಟರ್ ಪಂದ್ಯದ ವೇಳೆ ಮಳೆ ಬಂದು ಮ್ಯಾಚ್ ಕ್ಯಾನ್ಸಲ್ ಆದರೆ ಅದು ರಾಜ‌ಸ್ತಾನ್‌ ರಾಯಲ್ಸ್ ತಂಡಕ್ಕೆ ವರದಾನವಾಗಲಿದೆ.

2015 ರಲ್ಲಿ ನಡೆದ ಎಲಿಮಿನೇಟರ್‌ ಪಂದ್ಯದಲ್ಲಿ ರಾಜ‌ಸ್ತಾನ್‌ ರಾಯಲ್ಸ್ ತಂಡವನ್ನು 71 ರನ್‌ಳಿಂದ ಸೋಲಿಸಿದ್ದ ಆರ್‌ಸಿಬಿ, ದ್ವಿತೀಯ ಕ್ವಾಲಿಫೈಯರ್‌ಗೆ ಪ್ರವೇಶಿಸಿತ್ತು. ಈ ಎಲ್ಲಾ ಕಾರಣಗಳಿಂದಾಗಿ ಈ ಬಾರಿ ಕೂಡ ಆರ್‌ಆರ್‌ ವಿರುದ್ಧ ಆರ್‌ಸಿಬಿ ಗೆಲ್ಲುವ ಫೇವರೇಟ್ ತಂಡವಾಗಿ ಗುರುತಿಸಿಕೊಂಡಿದೆ.

Tags:    

Similar News