Crime News; ಪ್ರೀತಿಸಿ ಮದುವೆಯಾಗಿದ್ದವಳನ್ನು ಇರಿದು ಕೊಂದ
ಕೊಲೆಯಾದ ಮಹಿಳೆಯನ್ನು ಕೀರ್ತಿ ಎಂದು ಗುರುತಿಸಲಾಗಿದೆ. ಪತಿ ಅವಿನಾಶ್ ಚಾಕುವಿನಿಂದ ಬರೋಬ್ಬರಿ ಹತ್ತು ಬಾರಿ ಚುಚ್ಚಿ ಕೊಂದು ಪರಾರಿಯಾಗಿದ್ದಾನೆ.;
ಕೊಲೆಯಾದ ಯುವತಿ ಹಾಗೂ ಕೊಲೆಗೈದ ಆಕೆಯ ಪತಿ
ಚಿಕ್ಕಮಗಳೂರು ಜಿಲ್ಲೆಯ ಕೈಮರಾ ಚೆಕ್ಪೋಸ್ಟ್ ಬಳಿ ಪ್ರೀತಿಸಿ ಮದುವೆಯಾಗಿದ್ದವಳನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ. ಕೀರ್ತಿ (26) ಕೊಲೆಯಾದ ಮಹಿಳೆ. ಆಕೆಯ ಪತಿ ಅವಿನಾಶ್ (32) ಚಾಕುವಿನಿಂದ ಬರೋಬ್ಬರಿ ಹತ್ತು ಬಾರಿ ಇರಿದು ಕೀರ್ತಿಯನ್ನು ಕೊಂದು ಸ್ಥಳದಿಂದ ಪರಾರಿಯಾಗಿದ್ದಾನೆ.
ಕೀರ್ತಿ ಮತ್ತು ಅವಿನಾಶ್ ಪರಸ್ಪರ ಪ್ರೀತಿಸಿ, ಕೀರ್ತಿಯ ಪೋಷಕರ ವಿರೋಧದ ನಡುವೆಯೂ ನಾಲ್ಕು ವರ್ಷಗಳ ಹಿಂದೆ ಮದುವೆಯಾಗಿದ್ದರು. ಈ ದಂಪತಿಗೆ ಎರಡೂವರೆ ವರ್ಷದ ಹೆಣ್ಣು ಮಗುವಿದೆ. ಕಳೆದ ವಾರವಷ್ಟೇ ಇಬ್ಬರೂ ಸಂಬಂಧಿಕರ ಮದುವೆಯಲ್ಲಿ ಸಂತೋಷದಿಂದ ಪಾಲ್ಗೊಂಡಿದ್ದರು. ಆದರೆ, ಇತ್ತೀಚೆಗೆ ಶುರುವಾದ ಸಣ್ಣ ಜಗಳವೊಂದು ವಿಕೋಪಕ್ಕೆ ಹೋಗಿ, ಕೋಪಗೊಂಡ ಅವಿನಾಶ್, ಪತ್ನಿ ಕೀರ್ತಿಗೆ ಮನಸ್ಸೋ ಇಚ್ಛೆ ಚಾಕುವಿನಿಂದ ಇರಿದು ಹತ್ಯೆ ಮಾಡಿದ್ದಾನೆ.
ಕೀರ್ತಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಚಿಕ್ಕಮಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆ ಮಾಡಿ ಪರಾರಿಯಾಗಿರುವ ಅವಿನಾಶ್ಗಾಗಿ ಪೊಲೀಸರು ತೀವ್ರ ಹುಡುಕಾಟ ನಡೆಸುತ್ತಿದ್ದಾರೆ.