ಕರ್ನಾಟಕ ಸರ್ಕಾರದ ಸುಂಕದ ಬರೆಗೆ ಬೆದರಿ ಬಿಟ್ಟು ಗೋವಾಗೆ ಹೊರಟ 'ಹುಲಿ' ರಮ್​

ರಾಜ್ಯ ಸರ್ಕಾರವು ಅಬಕಾರಿ ವಾರ್ಷಿಕ ಪರವಾನಿಗೆ ಶುಲ್ಕವನ್ನು ಆರಂಭದಲ್ಲಿ ಶೇ. 100ರಷ್ಟು ಹೆಚ್ಚಿಸಿತ್ತು. ನಂತರ, ಸಣ್ಣ ಉದ್ಯಮಿಗಳ ಒತ್ತಡಕ್ಕೆ ಮಣಿದು ಅದನ್ನು ಶೇ. 50ಕ್ಕೆ ಇಳಿಸಿದ್ದರೂ, ಇದು ಇನ್ನೂ ದೊಡ್ಡ ಮೊತ್ತದ ಶುಲ್ಕವಾಗಿದೆ ಎಂದು ಅರುಣ್ ಅರಸ್ ಹೇಳಿದ್ದಾರೆ.;

Update: 2025-06-25 13:41 GMT

ದೇಶದ ಮೊಟ್ಟಮೊದಲ ಬೆಲ್ಲದ ರಮ್ ಎಂಬ ಖ್ಯಾತಿ ಪಡೆದಿರುವ 'ಹುಲಿ' ಬ್ರ್ಯಾಂಡ್‌ನ ತಯಾರಕರು ಈಗ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಬಕಾರಿ ಸನ್ನದುದಾರರ ವಾರ್ಷಿಕ ಪರವಾನಿಗೆ ಶುಲ್ಕದಲ್ಲಿನ ಮಿತಿಮೀರಿದ ಹೆಚ್ಚಳದಿಂದಾಗಿ 'ಹುಲಿ' ರಮ್‌ ಮಾಲೀಕರು ತತ್ತರಿಸಿದ್ದು, ಸರ್ಕಾರದ ಈ ನಡೆ ರಾಜ್ಯದಿಂದಲೇ 'ಹುಲಿ'ಯನ್ನು ಬಲಿ ಕೊಡಲು ಹೊರಟಂತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

ಹುಲಿ ಸ್ಪಿರಿಟ್ ಪ್ರೈವೇಟ್ ಲಿಮಿಟೆಡ್‌ನ ಮಾಲೀಕ ಅರುಣ್ ಅರಸ್ ಅವರು ಈ ಕುರಿತು ರಾಜ್ಯ ಸರ್ಕಾರದ ವಿರುದ್ಧ ಸಾಮಾಜಿಕ ಜಾಲತಾಣ 'ಎಕ್ಸ್‌'ನಲ್ಲಿ ಟ್ವೀಟ್ ಮಾಡಿದ್ದಾರೆ. ರಾಜ್ಯ ಸರ್ಕಾರವು ಅಬಕಾರಿ ವಾರ್ಷಿಕ ಪರವಾನಿಗೆ ಶುಲ್ಕವನ್ನು ಆರಂಭದಲ್ಲಿ ಶೇ. 100ರಷ್ಟು ಹೆಚ್ಚಿಸಿತ್ತು. ನಂತರ, ಸಣ್ಣ ಉದ್ಯಮಿಗಳ ಒತ್ತಡಕ್ಕೆ ಮಣಿದು ಅದನ್ನು ಶೇ. 50ಕ್ಕೆ ಇಳಿಸಿದ್ದರೂ, ಇದು ಇನ್ನೂ ದೊಡ್ಡ ಮೊತ್ತದ ಶುಲ್ಕವಾಗಿದೆ ಎಂದು ಅರುಣ್ ಅರಸ್ ಹೇಳಿದ್ದಾರೆ.

"ಈ ಬೆಳವಣಿಗೆ ನಿಜಕ್ಕೂ ರಾಜ್ಯದ ಉದ್ಯಮಿಗಳನ್ನು ಸರ್ಕಾರವೇ ಗೋವಾ, ಮಹಾರಾಷ್ಟ್ರದಂತಹ ನೆರೆಯ ರಾಜ್ಯಗಳಿಗೆ ದೂಡುತ್ತಿದ್ದೀಯಾ ಎಂದು ಅನಿಸುತ್ತಿದೆ," ಎಂದು ಅವರು ತಮ್ಮ ಟ್ವೀಟ್‌ನಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಟ್ವೀಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಟ್ಯಾಗ್ ಮಾಡಲಾಗಿದೆ.

ಮೈಸೂರು ಜಿಲ್ಲೆಯ ನಂಜನಗೂಡು ತಾಲ್ಲೂಕಿನ ಅಡಕನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಹುಲಿ ಸ್ಪಿರಿಟ್ ಪ್ರೈವೇಟ್ ಲಿಮಿಟೆಡ್ ಡಿಸ್ಟಲರಿಯನ್ನು ಆರಂಭಿಸಲಾಗಿದೆ. ಮೈಸೂರು ಮೂಲದ ಈ ಕಂಪನಿಯು ಬೆಲ್ಲವನ್ನು ಬಳಸಿ ವಿಶಿಷ್ಟವಾದ 'ಹುಲಿ' ಬ್ರ್ಯಾಂಡ್‌ನ ರಮ್‌ ತಯಾರಿಸುತ್ತಿದೆ. ಈ ಮೂಲಕ ರಾಜ್ಯಕ್ಕೆ ವಿಶಿಷ್ಟ ಗುರುತನ್ನು ತಂದುಕೊಟ್ಟಿದೆ.

ಶುಲ್ಕ ಹೆಚ್ಚಳದಿಂದಾಗಿ, ವಾರ್ಷಿಕ 60 ಲಕ್ಷ ರೂಪಾಯಿಗಳಾಗಿದ್ದ ಪರವಾನಿಗೆ ಶುಲ್ಕವು 90 ಲಕ್ಷ ರೂಪಾಯಿಗಳಿಗೆ ಏರಿಕೆಯಾಗಿದ್ದು, ಸಣ್ಣ ಸನ್ನದುದಾರರಿಗೆ ಇದು ತೀವ್ರ ಹೊರೆಯಾಗಿದೆ. ಮಹಾರಾಷ್ಟ್ರ, ಗೋವಾ ಸೇರಿದಂತೆ ಇತರೆ ರಾಜ್ಯಗಳಲ್ಲಿ ಇಂತಹ ಸಣ್ಣ ಸನ್ನದುದಾರರಿಗೆ ಶುಲ್ಕ ಕಡಿಮೆ ಇದೆ, ಆದರೆ ಕರ್ನಾಟಕದಲ್ಲಿ ಸ್ಥಳೀಯ ಉದ್ದಿಮೆಗಳಿಗೆ ಸವಲತ್ತು ನೀಡುತ್ತಿಲ್ಲ ಎಂದು ಮಾಲೀಕ ಅರುಣ್ ಅರಸ್ ಬೇಸರ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಶುಲ್ಕವನ್ನು ಇನ್ನಷ್ಟು ಕಡಿತಗೊಳಿಸುವಂತೆ ಸ್ವತಃ ಮಾಲೀಕರೇ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. 

Tags:    

Similar News