ರಾಜ್ಯದಲ್ಲಿ 6395 ಆನೆ ಮತ್ತು 563 ಹುಲಿಗಳು: ಸಚಿವ ಈಶ್ವರ್ ಖಂಡ್ರೆ

ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ತಡೆಗಟ್ಟಲು ಅರಣ್ಯದಂಚಿನಲ್ಲಿ ಸೌರಶಕ್ತಿ ಬೇಲಿ ನಿರ್ಮಾಣ, ನಿರ್ವಹಣೆ ಮತ್ತು ಆನೆತಡೆ ಕಂದಕ ನಿರ್ಮಾಣ ನಿರ್ವಹಣೆ ಮಾಡಲಾಗಿದೆ.

Update: 2025-12-16 09:21 GMT

ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ

Click the Play button to listen to article

ರಾಜ್ಯದ ವನ್ಯಜೀವಿಧಾಮಗಳು ಮತ್ತು ರಾಷ್ಟ್ರೀಯ ಉದ್ಯಾನವನಗಳಲ್ಲಿ ಗಣತಿಯ ಪ್ರಕಾರ ಒಟ್ಟು 6395 ಆನೆಗಳು ಮತ್ತು 563 ಹುಲಿಗಳಿವೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ ಖಂಡ್ರೆ ಅವರು ವಿಧಾನ ಪರಿಷತ್‌ಗೆ ತಿಳಿಸಿದರು. ಅವರು ಸದಸ್ಯ ಡಾ. ತಿಮ್ಮಯ್ಯ ಅವ  ಪ್ರಶ್ನೆಗೆ ಉತ್ತರಿಸಿದ ಸಚಿವರು, ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ವಿವರಿಸಿದರು.

ಸಂಘರ್ಷ ತಡೆಗೆ ಕ್ಷಿಪ್ರ ಕ್ರಮ

ವನ್ಯಜೀವಿಗಳು ಅರಣ್ಯ ಪ್ರದೇಶದಿಂದ ಹೊರಬರುವುದನ್ನು ತಡೆಗಟ್ಟಲು, ಮಾನವ ಪ್ರಾಣಹಾನಿಗೆ ಕಾರಣವಾದ ಹುಲಿ ಹಾಗೂ ಆನೆಯನ್ನು ನಿರ್ದಿಷ್ಟವಾಗಿ ಗುರುತಿಸಿ ಸೆರೆಹಿಡಿಯಲಾಗುತ್ತಿದೆ. ಅಲ್ಲದೆ, ಸಂಘರ್ಷ ಪ್ರಕರಣಗಳು ಹೆಚ್ಚಾಗಿರುವ ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಳ್ಳಬೇಟೆ ಶಿಬಿರಗಳ ಸಿಬ್ಬಂದಿ\

ಗಳನ್ನು ತಾತ್ಕಾಲಿಕವಾಗಿ ಸಂಘರ್ಷ ಸಂಭವಿಸುತ್ತಿರುವ ಅರಣ್ಯದಂಚಿನ ಗಡಿರೇಖೆಗಳಿಗೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ನೌಕರರು ಮುಂದಿನ ಮೂರು ತಿಂಗಳವರೆಗೆ ಸಂಘರ್ಷವಿರುವ ವಲಯಗಳಲ್ಲಿ ನಿರಂತರವಾಗಿ ಗಸ್ತು ನಡೆಸಿ ಸಂಘರ್ಷ ತಡೆಗಟ್ಟುವ ಕಾರ್ಯ ನಿರ್ವಹಿಸಲಿದ್ದಾರೆ ಎಂದು ಅವರು ತಿಳಿಸಿದರು. 

ಪ್ರತಿ ವನ್ಯಜೀವಿ ವಲಯಗಳಲ್ಲಿ ತಕ್ಷಣದ ಪ್ರತಿಕ್ರಿಯೆಗಾಗಿ ಒಂದು ಕ್ಷಿಪ್ರ ಸ್ಪಂದನ ತಂಡವನ್ನು ಪಾಳಿ ಆಧಾರದ ಮೇಲೆ ರಚಿಸಲಾಗಿದ್ದು, ಈ ತಂಡಕ್ಕೆ ಕ್ಷಿಪ್ರ ಸ್ಪಂದನ ವಾಹನ ಮತ್ತು ಡ್ರೋನ್ ಸೇರಿದಂತೆ ಇತರೆ ಉಪಕರಣಗಳನ್ನು ನೀಡಲಾಗಿದೆ. ಈ ತಂಡಕ್ಕೆ ಪ್ರಸ್ತುತ ಸಿಬ್ಬಂದಿಗಳನ್ನು ಆನೆ ಕಾರ್ಯಪಡೆ, ಕ್ಷಿಪ್ರ ಸ್ಪಂದನ ತಂಡ, ವಿಶೇಷ ಹುಲಿ ಸಂರಕ್ಷಣಾ ದಳದಿಂದ ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದರು. 

ತಂತ್ರಜ್ಞಾನದ ಬಳಕೆ

ಮಾನವ ವನ್ಯಜೀವಿ ಸಂಘರ್ಷವಿರುವ ವನ್ಯಜೀವಿ ವಲಯಗಳ ಗಡಿರೇಖೆಗಳಲ್ಲಿ ನೆಟ್‌ವರ್ಕ್ ಸಂಪರ್ಕವಿರುವ ಕಡೆಗಳಲ್ಲಿ 'Real time Surveillance GSM Camera with Garuda Software' ಅಳವಡಿಸಿ, ಈ ಮಾಹಿತಿಯನ್ನು ಆಧರಿಸಿ ಸಂಘರ್ಷ ನಿಯಂತ್ರಣದ ನಿರ್ವಹಣೆ ಮಾಡಲಾಗುತ್ತಿದೆ. ಇದರ ಜೊತೆಗೆ, ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಲಭ್ಯವಿರುವ Camera traps ಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಅರಣ್ಯದಂಚಿನಲ್ಲಿರುವ ಸಂಘರ್ಷ ವಲಯಗಳಲ್ಲಿ ಅಳವಡಿಸಿ ಪ್ರಾಣಿಗಳ ಚಲನವಲನಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ತಿಳಿಸಿದರು. 

ಭೌತಿಕ ತಡೆಗೋಡೆಗಳ ನಿರ್ಮಾಣ

ಕಾಡಾನೆಗಳು ಅರಣ್ಯ ಪ್ರದೇಶದಿಂದ ಹೊರಗೆ ಬಾರದಂತೆ ತಡೆಗಟ್ಟಲು ಅರಣ್ಯದಂಚಿನಲ್ಲಿ ಸೌರಶಕ್ತಿ ಬೇಲಿ ನಿರ್ಮಾಣ, ನಿರ್ವಹಣೆ ಮತ್ತು ಆನೆತಡೆ ಕಂದಕ ನಿರ್ಮಾಣ ನಿರ್ವಹಣೆ ಮಾಡಲಾಗಿದೆ. ಹೆಚ್ಚಾಗಿ ಸಂಘರ್ಷವಿರುವ ಪ್ರದೇಶಗಳಲ್ಲಿ ರೈಲ್ವೆ ಹಳಿಗಳನ್ನು ಉಪಯೋಗಿಸಿ ಬ್ಯಾರಿಕೇಡ್ ನಿರ್ಮಿಸುವ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದ್ದು, ಇದುವರೆಗೆ ಒಟ್ಟು 428 ಕಿ.ಮೀ ರೈಲ್ವೆ ಬ್ಯಾರಿಕೇಡ್ ನಿರ್ಮಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. 

ಆನೆ ಕಾರ್ಯಪಡೆ ಮತ್ತು ಚಿರತೆ ಕಾರ್ಯಪಡೆಗಳನ್ನು ರಚಿಸಲಾಗಿದ್ದು, ವನ್ಯ ಪ್ರಾಣಿಗಳಿಗಾಗಿ ಅರಣ್ಯ ಪ್ರದೇಶದ ಒಳಗೆ ಜಲ ಸಂಪನ್ಮೂಲಗಳು ಮತ್ತು ಆವಾಸಸ್ಥಾನಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಸಂಘರ್ಷ ತಡೆಗಟ್ಟಲು ತಂತ್ರಜ್ಞಾನಗಳ ಬಳಕೆಯ ಮೂಲಕ ತ್ವರಿತ ಕಾರ್ಯಚರಣೆ ಕೈಗೊಳ್ಳಲಾಗುತ್ತಿದೆ. ಮುಂದಿನ 5 ವರ್ಷಗಳ ಸ್ಟ್ರಾಟೆಜಿಕ್ ಪ್ಲಾನ್ ತಯಾರಿಸುವ ಪ್ರಸ್ತಾವನೆ ಪರಿಶೀಲನೆಯಲ್ಲಿದೆ ಎಂದು ಅವರು ತಿಳಿಸಿದರು. 

Tags:    

Similar News