Save Karnataka Tigers: ವಿಷಪ್ರಾಶನದಿಂದ ಹುಲಿಗಳ ಹತ್ಯೆ; ʼಗಂಧಧ ಗುಡಿʼಯ ಪ್ರಾಣಿ ರಕ್ಷಣೆಗೆ ಡಾ. ರಾಜ್‌ಕುಮಾರ್‌ ಸಂದೇಶ
x

Save Karnataka Tigers: ವಿಷಪ್ರಾಶನದಿಂದ ಹುಲಿಗಳ ಹತ್ಯೆ; ʼಗಂಧಧ ಗುಡಿʼಯ ಪ್ರಾಣಿ ರಕ್ಷಣೆಗೆ ಡಾ. ರಾಜ್‌ಕುಮಾರ್‌ ಸಂದೇಶ

1973ರಲ್ಲಿ ಮೊದಲ ಬಾರಿಗೆ ಅರಣ್ಯ, ವನ್ಯ ಜೀವಿಗಳ ಉಳಿವಿನ ಸದಾಶಯ ಇಟ್ಟುಕೊಂಡು ತೆರೆಕಂಡ ಚಿತ್ರ ಗಂಧದಗುಡಿ. ಈಗ ಮಲೆ ಮಹದೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ಐದು ಹುಲಿಗಳ ಹತ್ಯೆ ಆಗಿರುವಾಗ, ಈ ಚಿತ್ರ ಹೆಚ್ಚು ಪ್ರಸ್ತುತ.


1973ರಲ್ಲಿ ಭಾರತೀಯ ಚಿತ್ರರಂಗದಲ್ಲಿಯೇ ಮೊದಲ ಬಾರಿಗೆ ಅರಣ್ಯ, ವನ್ಯ ಜೀವಿಗಳ ಉಳಿವಿನ ಸದಾಶಯ ಇಟ್ಟುಕೊಂಡು ತೆರೆಕಂಡ ಚಿತ್ರ ಗಂಧದಗುಡಿ. ಈಗ ಮಲೆ ಮಹದೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ಐದು ಹುಲಿಗಳ ಹತ್ಯೆ ಆಗಿರುವಾಗ, ಒಂದಾದರ ಮೇಲೊಂದರಂತೆ ಹುಲಿ, ಚಿರತೆ, ಕಾಡು ಪ್ರಾಣಿಗಳು ಸಾಯುತ್ತಿರುವ ಘಟನೆ ನಡೆಯುತ್ತಿರುವಾಗ, ಅರಣ್ಯ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳ ಸಂಖ್ಯೆ ಕುಸಿಯುತ್ತಿರುವ ಈ ಸಂದರ್ಭದಲ್ಲಿ ʼಗಂಧದ ಗುಡಿʼ ಸಿನಿಮಾ ಸಾಕಷ್ಟು ಪ್ರಸ್ತುತವಾಗುತ್ತದೆ.

70ರ ದಶಕದಲ್ಲಿ ಅರಣ್ಯ ಸಂಪತ್ತಿನ ಲೂಟಿ, ಆನೆ, ಹುಲಿ, ಚಿರತೆ ಸೇರಿ ಇತರ ವನ್ಯಜೀವಿಗಳ ಬೇಟೆ ಮಿತಿ ಮೀರಿ ನಡೆಯುತ್ತಿತ್ತು. ಬೇಟೆ ಎನ್ನುವುದು ಮೋಜು ಎನ್ನುವ ಮನಸ್ಥಿತಿಯಿಂದ ಇನ್ನೂ ಆಚೆ ಬರಲಾಗಿರಲಿಲ್ಲ. ಆನೆಗಳನ್ನು ಹಿಡಿದು ಹಿಂಸಿಸಿ ಪಳಗಿಸುವ, ಆನೆ ದಂತ, ಹುಲಿ, ಚಿರತೆಗಳ ಉಗುರು, ಹಲ್ಲು, ಚರ್ಮಗಳಿಗಾಗಿ ಅವುಗಳನ್ನು ಕೊಲ್ಲುವ ಪ್ರವೃತ್ತಿ ಹೆಚ್ಚಾಗಿಯೇ ಇತ್ತು. ಇದರ ಜೊತೆಗೆ ಗಂಧದ ಮರ ಸೇರಿ ಬೆಲೆ ಬಾಳುವ ಸಸ್ಯ ಸಂಪತ್ತಿಗೂ ಕೊಡಲಿ ಪೆಟ್ಟು ಬೀಳುತ್ತಲೇ ಇತ್ತು.

ಈ ವೇಳೆಯಲ್ಲಿ ಮೈಸೂರಿನವರೇ ಆದ ಕಾಡಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ನಟ, ನಿರ್ಮಾಪಕ ಎಂ.ಪಿ.ಶಂಕರ್ ಅವರು ಡಾ. ರಾಜ್ ಕುಮಾರ್ ನಾಯತ್ವದಲ್ಲಿ ಕಾಡಿನಲ್ಲಿ ಆಗುತ್ತಿರುವ ಲೂಟಿಯ ಬಗ್ಗೆ ಸಿನಿಮಾ ಮಾಡಲು ಮುಂದಾಗುತ್ತಾರೆ. ಅದೇ ಗಂಧದಗುಡಿ.

ದೇಶಾದ್ಯಂತ ಸದ್ದು ಮಾಡಿದ ಚಿತ್ರ

ಕಾಡಿನ ಪರಿಸರದಲ್ಲಿಯೇ ಬೆಳೆದ, ಇಂದಿನ ಚಾಮರಾಜನಗರದ ಗಾಜನೂರಿನವರೇ ಆದ ಡಾ. ರಾಜ್ ಕುಮಾರ್, ಗಂಧದಗುಡಿ (1973) ಚಿತ್ರದಲ್ಲಿ ಅರಣ್ಯಾಧಿಕಾರಿ ಪಾತ್ರ ಮಾಡಿ, ನಡೆಯುತ್ತಿದ್ದ ಅಕ್ರಮಗಳನ್ನು ತಡೆದಿದ್ದು ಜನ ಮಾನಸದಲ್ಲಿ ಹಸಿರಾಗಿಯೇ ಇದೆ. ಅಲ್ಲದೇ ಈ ಚಿತ್ರ ಮಲಯಾಳಂ ನಲ್ಲಿ ಚಂದನ ಕಾಡು, ಹಿಂದಿಯಲ್ಲಿ ಕರ್ತವ್ಯ, ತೆಲುಗಿನಲ್ಲಿ ಅಡವಿ ರಾಮುಡು ಎನ್ನುವ ಹೆಸರಿನಲ್ಲಿ ರಿಮೇಕ್‌ ಅಥವಾ ಪ್ರಭಾವಕ್ಕೊಳಗಾಗಿ ನಿರ್ಮಿಸಿದ ಚಿತ್ರಗಳಿಂದ ಆಗ ದೇಶಾದ್ಯಂತ ಅರಣ್ಯ ಸಂಪತ್ತಿನ ಜಾಗೃತಿ ಉಂಟಾಗಿದ್ದು ವಿಶೇಷ. ಇದೇ ಸಂದರ್ಭದಲ್ಲಿಯೇ ಅಂದರೆ 1973ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಅರಣ್ಯ ಸಂರಕ್ಷಣಾ ಕಾಯಿದೆಯನ್ನು ಜಾರಿಗೆ ತಂದು ದೇಶದಲ್ಲಿ ಅರಣ್ಯ ಸಂಪತ್ತಿನ ರಕ್ಷಣೆಗೆ ದೊಡ್ಡ ರಕ್ಷಾ ಕವಚವನ್ನೇ ನಿರ್ಮಾಣ ಮಾಡಿದರು.

ಅರಣ್ಯ ಸಂರಕ್ಷಣೆ ಮತ್ತು ದೊಡ್ಮನೆ

ಡಾ. ರಾಜ್ ಕುಮಾರ್ ಹುಟ್ಟಿ ಬೆಳೆದಿದ್ದೆಲ್ಲವೂ ಕಾಡಿನ ಸೆರಗಿನಲ್ಲಿಯೇ. ಹೀಗಾಗಿಯೇನೋ ಗಂಧದಗುಡಿ ಚಿತ್ರದಲ್ಲಿನ ಅವರ ಪಾತ್ರ ಅತ್ಯಂತ ಪ್ರಭಾವಶಾಲಿಯಾಗಿದೆ. ಬಿಡುಗಡೆಯ ನಂತರ ರಾಜ್ಯಾದ್ಯಂತ ಅತ್ಯುತ್ತಮ ಪ್ರದರ್ಶನ ಕಂಡ ಚಿತ್ರ ಎರಡು ಬಾರಿ ಮರು ಪ್ರದರ್ಶನ ಕಂಡು ಆಗಲೂ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿತು. ಚಿತ್ರದ ʼನಾವಾಡುವ ನುಡಿಯೇ ಕನ್ನಡ ನುಡಿ, ನಾವಿರುವ ತಾಣವೇ ಗಂಧದಗುಡಿʼ ಎನ್ನುವ ಹಾಡು ಈಗಲೂ ಜನಮಾನಸದಲ್ಲಿ ಉಳಿದಿದೆ. ಇದಾದ ಮೇಲೆ 1995ರಲ್ಲಿ ಶಿವರಾಜ್ ಕುಮಾರ್ ನಟನೆಯ ಗಂಧದಗುಡಿ ಭಾಗ 2 ಚಿತ್ರ ತೆರೆ ಕಂಡಿತು. ಇಲ್ಲಿಯೂ ಶಿವರಾಜ್ ಕುಮಾರ್ ಅರಣ್ಯಾಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡು ಕಾಡಿನಲ್ಲಿ ನಡೆಯುವ ಅಕ್ರಮಗಳಿಗೆ ಕಡಿವಾಣ ಹಾಕುವ ಕೆಲಸ ಮಾಡುತ್ತಾರೆ. ಇದಕ್ಕೂ ಜನರಿಂದ ದೊಡ್ಡ ಮಟ್ಟದ ಮೆಚ್ಚುಗೆಯೇ ಸಿಕ್ಕಿತು.

ಇನ್ನು ಕಾಡು, ಕಾಡು ಪ್ರಾಣಿಗಳ ಬಗ್ಗೆ ಅಪಾರ ಪ್ರೀತಿ ಇಟ್ಟುಕೊಂಡಿದ್ದ ದಿ. ಪುನೀತ್ ರಾಜ್ ಕುಮಾರ್ ನಟನೆಯಲ್ಲಿ 2022ರಲ್ಲಿ ಗಂಧದಗುಡಿ ಎನ್ನುವ ಸಾಕ್ಷ್ಯ ಚಿತ್ರವೂ ಬಿಡುಗಡೆಯಾಯಿತು. ಇದು ನಮ್ಮ ಅರಣ್ಯ ಸಂಪತ್ತು, ಅದರ ಮಹತ್ವವನ್ನು ಅತ್ಯಂತ ಪರಿಣಾಮಕಾರಿಯಾಗಿ ಯುವ ಜನರ ಮನಸ್ಸಿನಲ್ಲಿ ಉಳಿಸಿದ ಸಾಕ್ಷ್ಯ ಚಿತ್ರ. ಹೀಗೆ ಅರಣ್ಯ ಮತ್ತು ಅದರ ಮಹತ್ವವನ್ನು ದೊಡ್ಮನೆವರು ಅಚ್ಚುಕಟ್ಟಾಗಿ ಕನ್ನಡಿಗರ ಮುಂದಿಟ್ಟಿದ್ದಾರೆ.

ಕುಮಾರ್ ರೀತಿಯ ಅಧಿಕಾರಿಗಳು ಬರಲಿ

ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪಾತ್ರ ಮಾಡಿದ್ದ ಡಾ. ರಾಜ್ ಕುಮಾರ್ ಅವರು ಚಿತ್ರದ ಅಂತಿಮ ಘಟ್ಟದಲ್ಲಿ ಖಳನಾಯಕ ಆನಂದ್ (ವಿಷ್ಣುವರ್ಧನ್) ಕುರಿತಾಗಿ ಆನಂದ್ ಈ ಕಾಡನ್ನ ಉಳಿಸು, ವನ್ಯ ಪ್ರಾಣಿಗಳನ್ನ ಉಳಿಸು, ಈ ಅರಣ್ಯ ಸಂಪತ್ತನ್ನು ಉಳಿಸು ಎಂದು ಕೇಳಿಕೊಳ್ಳುತ್ತಾನೆ. ಇದೇ ರೀತಿ ನಾಡಿನ ಪ್ರಜೆಗಳಾದ ನಾವು ಅರಣ್ಯ, ವನ್ಯಜೀವಿ, ಅರಣ್ಯ ಸಂಪತ್ತನ್ನು ಉಳಿಸಿ ಎಂದು ಅಧಿಕಾರಿಗಳು, ಸರ್ಕಾರಕ್ಕೆ ಕೇಳಿಕೊಳ್ಳಬೇಕಾದ ಸಂದರ್ಭ ಎದುರಾಗಿದೆ.

ಹಸುವಿನ ಮೂಲಕ ವಿಶ ಪ್ರಾಶನ

ಚಿತ್ರದಲ್ಲಿಯೂ ಸತ್ತ ಹಸುವಿನ ಮೇಲೆ ವಿಷವನ್ನು ಚೆಲ್ಲಿ ಚಿರತೆಯನ್ನು ಕೊಲ್ಲುವ ಪ್ರಯತ್ನ ನಡೆಯುತ್ತದೆ. ಇದನ್ನು ರಾಜ್ ಕುಮಾರ್ ತಪ್ಪಿಸಿ ಚಿರತೆಯನ್ನು ಸಾವಿನ ದವಡೆಯಿಂದ ಕಾಪಾಡುತ್ತಾರೆ. ಇದೇ ರೀತಿ ನಮ್ಮ ಅರಣ್ಯ ಇಲಾಖೆಯಲ್ಲಿಯೂ ಸಾಕಷ್ಟು ಒಳ್ಳೆಯ ಕೆಲಸಗಳು ಆಗಿರಬಹುದು. ಆದರೆ ಕೆಲವೊಮ್ಮೆ ದುಷ್ಟ ಕೂಟಗಳ ಕೈ ಮೇಲಾಗಿ ಅಮೂಲ್ಯ ಅರಣ್ಯ ಜೀವಿಗಳಿಗೆ ಕಂಟಕವಾಗುತಿರುವುದು ಸತ್ಯ. ಅದಕ್ಕೆ ಮಲೆ ಮಹದೇಶ್ವರ ಅರಣ್ಯ ವ್ಯಾಪ್ತಿಯಲ್ಲಿ ನಡೆದಿರುವ ಐದು ಹುಲಿಗಳ ಹತ್ಯೆಯೇ ಸಾಕ್ಷಿ.

ರಾಜ್ ಕುಮಾರ್ ದಕ್ಷತೆ ಪ್ರೇರಣೆಯಾಗಲಿ

ಗಂಧದಗುಡಿ ಚಿತ್ರದಲ್ಲಿ ಡಾ. ರಾಜ್ ಕುಮಾರ್ ಅರಣ್ಯಾಧಿಕಾರಿಯಾಗಿ ತೋರುವ ಸಾಹಸ, ಪ್ರಾಮಾಣಿಕತೆ, ತನ್ನ ಜವಾಬ್ದಾರಿಯನ್ನು ನಿರ್ವಹಿಸುವಲ್ಲಿ ವಹಿಸುವ ಬದ್ಧತೆ ಇಂದಿನ ಅರಣ್ಯಾಧಿಕಾರಿಗಳು ಮತ್ತು ಎಲ್ಲಾ ಹಂತ ಸಿಬ್ಬಂದಿಗೂ ಪ್ರೇರಣೆಯಾಗಬೇಕು. ಹಗಲು ರಾತ್ರಿ ಎನ್ನದೇ, ತನ್ನ ಅಧೀನದಲ್ಲಿ ಬರುವ ಕೆಳ ಹಂತದ ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರು ಮಾಡುವ ಕೆಲಸ ಮಾದರಿಯಾದದ್ದು. ಅರಣ್ಯಗಳ್ಳರಿಂದ ಬರುವ ಆಮಿಷ, ಒಂದರ ಮೇಲೆ ಒಂದರಂತೆ ಎದುರಾಗಿ ತೊಂದರೆಗಳನ್ನೆಲ್ಲಾ ಮೆಟ್ಟಿನಿಲ್ಲುತ್ತಾ ಜೀವದ ಹಂಗು ತೊರೆದು ಹೋರಾಡುತ್ತಾರೆ. ಯಾವುದೇ ತಂತ್ರಜ್ಞಾನ ಬೆಳವಣಿಗೆ ಕಾಣದ ಘಟ್ಟದಲ್ಲಿ, ಮೂಲ ಸೌಕರ್ಯಗಳ ಕೊರತೆ ಇದ್ದ ವೇಳೆಯಲ್ಲಿಯೂ ಅವರು ಚಿತ್ರದಲ್ಲಿ ಸಾಕಷ್ಟು ಕೆಲಸ ಮಾಡುತ್ತಾರೆ. ಆನೆ ಖೆಡ್ಡಾಗಳ ರಚನೆ, ಅಭಯಾರಣ್ಯದ ಪರಿಕಲ್ಪನೆಯನ್ನು ಜಾರಿ ಮಾಡುತ್ತಾರೆ. ಆದರೆ ಈಗ ಅರಣ್ಯ ಇಲಾಖೆಯಲ್ಲಿ ಸಾಕಷ್ಟು ಸುಧಾರಣೆ ಆಗಿದೆ. ಹೊಸ ಹೊಸ ತಂತ್ರಜ್ಞಾನವನ್ನು ಅಳವಡಿಕೆ ಮಾಡಿಕೊಳ್ಳಲಾಗಿದೆ. ಹಿಂದಿಗಿಂತಲೂ ಈಗ ಸುಲಭವಾಗಿ ಮತ್ತು ಶೀಘ್ರವಾಗಿ ಮಾಹಿತಿಗಳ ರವಾನೆ ಸಾಧ್ಯವಾಗುತ್ತದೆ. ಇಂತಹ ಹೊತ್ತಿನಲ್ಲಿ ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರೂ ಗಂಧದಗುಡಿ ಚಿತ್ರವನ್ನು ಪ್ರೇರಣೆಯಾಗಿ ಇಟ್ಟುಕೊಳ್ಳುವುದು ಅಗತ್ಯ.

Read More
Next Story