Bangalore stampede : ಸ್ಥಿತಿಗತಿಯ ಕುರಿತು ವರದಿ ನೀಡಲು ಹೈಕೋರ್ಟ್‌ ಸೂಚನೆ

ಸರ್ಕಾರವು ವರದಿ ಸಲ್ಲಿಕೆ ಬಳಿಕ ಇನ್ನುಳಿದ ಅರ್ಜಿಗಳ ಪರಿಶೀಲನೆ ನಡೆಸಲು ಹೈಕೋರ್ಟ್‌ ಅಭಿಪ್ರಾಯಪಟ್ಟು ವಿಚಾರಣೆ ಮುಂದೂಡಿಕೆ;

Update: 2025-06-10 13:34 GMT

ಹೈಕೋರ್ಟ್‌ ಮತ್ತು ಬೆಂಗಳೂರು ಕಾಲ್ತುಳಿತ ಘಟನೆ

ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ 11 ಮಂದಿ ಸಾವನಪ್ಪಿರುವ ಘಟನೆಗೆ ಸಂಬಂಧಿಸಿದಂತೆ ಸಂಪೂರ್ಣ ಸ್ಥಿತಿಗತಿ ಕುರಿತು ವರದಿಯನ್ನು ಮುಚ್ಚಿನ ಲಕೋಟೆಯಲ್ಲಿ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ ನೀಡಿದೆ. 

ಕಾಲ್ತುಳಿತ ದುರಂತದ ಕುರಿತು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡ ಅರ್ಜಿಯ ವಿಚಾರಣೆ ನಡೆಸಿದ  ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್‌ ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ವಿಭಾಗೀಯ ಪೀಠವು ಈ ನಿರ್ದೇಶನವನ್ನು ನೀಡಿದೆ. 

ಅಡ್ವೊಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ವಾದ ಮಂಡಿಸಿ, ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಮೈಕೆಲ್‌ ಕುನ್ಹಾ ನೇತೃತ್ವದಲ್ಲಿ ವಿಚಾರಣಾ ಆಯೋಗ ರಚಿಸಲಾಗಿದ್ದು, ಒಂದು ತಿಂಗಳ ಕಾಲಮಿತಿ ನಿಗದಿಪಡಿಸಲಾಗಿದೆ. ಬೆಂಗಳೂರು ಪೊಲೀಸ್‌ ಆಯುಕ್ತರು ಸೇರಿ ಐವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಆರ್‌ಸಿಬಿ, ಡಿಎನ್‌ಎ ಅಧಿಕಾರಿಗಳ ಜಾಮೀನು ಅರ್ಜಿಗಳು ಬಾಕಿ ಇದೆ. ಸರ್ಕಾರ ಪ್ರತಿಕ್ರಿಯೆ ನೀಡಬೇಕಿದೆ. ಹೀಗಾಗಿ ವಿಚಾರಣೆಯನ್ನು ಮುಂದೂಡಿಕೆ ಮಾಡಬೇಕು ಎಂದು ಮನವಿ ಮಾಡಿದರು. 

ವಾದ ಆಲಿಸಿದ ನ್ಯಾಯಾಲಯವು ಪ್ರಕರಣದ ಕುರಿತ ಸ್ಥಿತಿಗತಿಯ ಬಗ್ಗೆ ಮುಚ್ಚಿದ ಲಕೋಟೆಯಲ್ಲಿ ವರದಿಯನ್ನು ಸಲ್ಲಿಸುವಂತೆ ಸೂಚಿಸಿತು. ಸರ್ಕಾರವು ವರದಿ ಸಲ್ಲಿಕೆ ಬಳಿಕ ಇನ್ನುಳಿದ ಅರ್ಜಿಗಳನ್ನು ಪರಿಶೀಲನೆ ನಡೆಸಲಾಗುವುದು ಎಂದು ಹೇಳಿ ವಿಚಾರಣೆಯನ್ನು ೧೨ಕ್ಕೆ ಮುಂದೂಡಿಕೆ ಮಾಡಲಾಯಿತು. 

ನಾಳೆಗೆ ವಿಚಾರಣೆಗೆ ಮುಂದೂಡಿಕೆ: 

ಈ ನಡುವೆ, ಕಾಲ್ತುಳಿತ ದುರಂತ ಪ್ರಕರಣ ಸಂಬಂಧ ಬಂಧನಕ್ಕೊಳಗಾಗಿರುವ ಆರ್‌ಸಿಬಿಯ ನಾಲ್ವರ ಬಿಡುಗಡೆ ಕುರಿತ ವಿಚಾರಣೆಯನ್ನು ಹೈಕೋರ್ಟ್‌ ನಾಳೆಗೆ (ಜೂ.೧೧) ಮುಂಡೂಡಿಕೆ ಮಾಡಿದೆ. 

ತಮ್ಮ ಬಂಧನ ಅಕ್ರಮವಾಗಿದ್ದು, ತಕ್ಷಣ ಬಿಡುಗಡೆ ಮಾಡಬೇಕು ಎಂದು ಕೋರಿ ಆರ್‌ಸಿಬಿ ಮಾರುಕಟ್ಟೆ ವಿಭಾಗದ ನಿಖಿಲ್‌ ಸೋಸಲೆ, ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ನ ನಿರ್ದೇಶಕ ಸುನೀಲ್‌ ಮ್ಯಾಥ್ಯೂ, ಡಿಎನ್‌ಎ ಮ್ಯಾನೇಜರ್‌ ಕಿರಣ್‌ ಕುಮಾರ್‌ ಮತ್ತು ಸಮಂತ್‌ ಮಾವಿನಕೆರೆ ಅವರ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್‌ ಆರ್‌ ಕೃಷ್ಣ ಕುಮಾರ್‌ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಸಂದೇಶ್‌ ಚೌಟ, ತಕ್ಷಣ ಬಿಡುಗಡೆ ಕೋರಿ ಸಲ್ಲಿಸಿರುವ ಅರ್ಜಿಯಲ್ಲಿ ವಿಫಲವಾದರೆ ಮತ್ತೆ ಪೊಲೀಸ್‌ ವಶಕ್ಕೆ ಹೋಗಬೇಕಾಗುತ್ತದೆ. ಹೀಗಾಗಿ ತಮ್ಮ ಕಕ್ಷಿದಾರರನ್ನು ಬಿಡುಗಡೆಗೆ ಆದೇಶಿಸಬೇಕು ಎಂದು ಮನವಿ ಮಾಡಿದರು. 

ಇದಕ್ಕೆ ಒಪ್ಪದ ಪೀಠವು ಅಡ್ವೊಕೇಟ್‌ ಜನರಲ್‌ ವಾದ ಮಂಡಿಸಿದ ಬಳಿಕ ಆದೇಶ ನೀಡುವುದಾಗಿ ಎಂದು ಹೇಳಿ ವಿಚಾರಣೆಯನ್ನು ಮುಂದೂಡಿಕೆ ಮಾಡಿತು. 

ನ್ಯಾಯಾಲಯಕ್ಕೆ ಆದೇಶ ನೀಡುವ ಮುನ್ನ ಸಂದೇಶ್‌ ಚೌಟ ವಾದ ಮಂಡಿಸಿ, ಜೂನ್‌ 5ರ ಬೆಳಗಿನ ಜಾವ 3.30ಕ್ಕೆ ಬೆಂಗಳೂರಿನ ಆರ್‌ ಟಿ ನಗರದ ಮನೆಯಲ್ಲಿ ೪ನೇ ಆರೋಪಿ ಸಮಂತ್‌ ಮಾವಿನಕೆರೆಯನ್ನು ಅಶೋಕನಗರ ಪೊಲೀಸರು ಬಂಧಿಸಿದ್ದಾರೆ. 4 ಗಂಟೆಗೆ ವಿಮಾನ ನಿಲ್ದಾಣದಲ್ಲಿ ಸಿಸಿಬಿ ಪೊಲೀಸರು ನಿಖಿಲ್‌ ಸೋಸಲೆಯನ್ನು ಬಂಧಿಸಿದ್ದಾರೆ. 4.30ಕ್ಕೆ ಸುನೀಲ್‌ ಮ್ಯಾಥ್ಯೂ ಮತ್ತು ಕಿರಣ್‌ ಕುಮಾರ್‌ ಬಂಧಿಸಲಾಗಿದೆ. ಇವರನ್ನು ಬಂಧಿಸಲು ಸಿಸಿಬಿಗೆ ಯಾವ ಅಧಿಕಾರ ಇದೆ? ತನಿಖೆಗೆ ಹಾಜರಾಗುವಂತೆ ನೋಟಿಸ್‌ ನೀಡದೆಯೇ ಬಂಧಿಸಿದ್ದು ಹೇಗೆ? ಮುಖ್ಯಮಂತ್ರಿ ಸೂಚನೆಯನ್ನು ಆಧರಿಸಿ ನಾಲ್ವರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ. 

ಐವರು ಪೊಲೀಸ್‌ ಅಧಿಕಾರಿಗಳು, ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿ ಗೋವಿಂದರಾಜು, ಗುಪ್ತದಳದ ಮುಖ್ಯಸ್ಥ ಹೇಮಂತ್‌ ನಿಂಬಾಳ್ಕರ್‌ ಅವರಲ್ಲಿ ಯಾರೊಬ್ಬರನ್ನೂ ಯಾಕೆ ಬಂಧಿಸಿಲ್ಲ. ಮುಖ್ಯಮಂತ್ರಿಗೆ ಬಂಧನ ನೀಡುವ ಅಧಿಕಾರ ಎಲ್ಲಿದೆ? ಬಂಧನ ಅಧಿಕಾರ ತನಿಖಾಧಿಕಾರಿ ವಿವೇಚನೆಗೆ ಬಿಟ್ಟಿದೆ. ರಾಜಕೀಯ ಪ್ರಭಾವ ಇಲ್ಲಿ ಕೆಲಸ ಮಾಡಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

Tags:    

Similar News