Hemavati Express Link Canal | ʼಹೇಮಾವತಿʼ ನೀರಿಗಾಗಿ ರಾಮನಗರ- ತುಮಕೂರು ರೈತರಿಗೇಕೆ ಪರಸ್ಪರ ಸಿಟ್ಟು? ಏನಿದು ಲಿಂಕ್ ಕೆನಾಲ್ ವಿವಾದ?
ಮಾಗಡಿ ತಾಲೂಕಿಗೆ ಹೇಮಾವತಿ ನೀರು ಪೂರೈಸಲು ರಾಜ್ಯ ಸರ್ಕಾರ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಆರಂಭಿಸಿದೆ. ಆದರೆ, ಕಾಮಗಾರಿಗೆ ತುಮಕೂರು ಭಾಗದ ರೈತರು ಹಾಗೂ ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಅಂತರ್ ಜಿಲ್ಲಾ ವಿವಾದವಾಗಿ ಬದಲಾಗುವ ಲಕ್ಷಣಗಳು ಕಾಣುತ್ತಿವೆ.;
ತುಮಕೂರಿನಲ್ಲಿ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ವಿರೋಧಿಸಿದ ರೈತರು
ಹೇಮಾವತಿ ನದಿ ನೀರಿನ ಹಂಚಿಕೆ, ಬಳಕೆಯ ವಿಚಾರವು ತುಮಕೂರು ಹಾಗೂ ರಾಮನಗರ ಜಿಲ್ಲೆಗಳ ರೈತರ ಮಧ್ಯೆ ತ್ವೇಷಮಯ ವಾತಾವರಣ ಸೃಷ್ಟಿಸಿದೆ. ಅಲ್ಲದೇ, ಎರಡೂ ಜಿಲ್ಲೆಗಳ ರಾಜಕಾರಣಿಗಳಿಗೆ ಮಧ್ಯೆ ಪ್ರತಿಷ್ಠೆಯ ವಿಷಯವಾಗಿ ರಾಜಕೀಯ ಮೇಲಾಟಕ್ಕೂ ಕಾರಣವಾಗಿದೆ.
ನೀರಾವರಿ ಹಾಗೂ ಕುಡಿಯುವ ಉದ್ದೇಶಕ್ಕೆ ಹೇಮಾವತಿ ನೀರಿನ ಬಳಕೆಯ ಕುರಿತು ಕಾವೇರಿ ನ್ಯಾಯಾಧೀಕರಣ ಆದೇಶದಂತೆ ಹೇಮಾವತಿ ನಾಲಾ ವಲಯ ಹಾಗೂ ತುಮಕೂರು ಜಿಲ್ಲೆಗೆ ಒಟ್ಟು 25.31 ಟಿಎಂಸಿ ಅಡಿ ನೀರು ನಿಗದಿಪಡಿಸಿತ್ತು. ನಾಲಾ ವಲಯ ವ್ಯಾಪ್ತಿಯ ಹಾಸನ, ಮಂಡ್ಯ, ರಾಮನಗರ ಹಾಗೂ ತುಮಕೂರು ಜಿಲ್ಲೆಗಳ 14 ತಾಲೂಕುಗಳಿಗೆ ರಾಜ್ಯ ಸರ್ಕಾರ 2019ರಲ್ಲಿ ನೀರು ಹಂಚಿಕೆ ಮಾಡಿತ್ತು.
ಅದರಂತೆ ಮಾಗಡಿ ತಾಲೂಕಿಗೆ ಹೇಮಾವತಿ ನೀರು ಪೂರೈಸಲು ರಾಜ್ಯ ಸರ್ಕಾರ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಆರಂಭಿಸಿದೆ. ಆದರೆ, ಕಾಮಗಾರಿಗೆ ತುಮಕೂರು ಭಾಗದ ರೈತರು ಹಾಗೂ ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವುದರಿಂದ ಅಂತರ್ ಜಿಲ್ಲಾ ವಿವಾದವಾಗಿ ಬದಲಾಗುವ ಲಕ್ಷಣಗಳು ಕಾಣುತ್ತಿವೆ. ಈ ಹಿನ್ನೆಲೆಯಲ್ಲಿ ಹೇಮಾವತಿ ನದಿ ನೀರಿನ ಹಂಚಿಕೆ ಹೇಗೆ, ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಏನು, ಎದ್ದಿರುವ ವಿವಾದಗಳೇನು ಎಂಬ ಮಾಹಿತಿ ಇಲ್ಲಿದೆ.
ಏನಿದು ಯೋಜನೆ?
ಹೇಮಾವತಿ ನಾಲಾ ವಲಯ ವ್ಯಾಪ್ತಿಯ ರಾಮನಗರ ಜಿಲ್ಲೆ ಮಾಗಡಿ ತಾಲೂಕಿನ 60 ಕೆರೆಗಳಿಗೆ ನೀರು ತುಂಬಿಸಲು ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ನಿರ್ಮಿಸಲಾಗುತ್ತಿದೆ. ಗುಬ್ಬಿ ತಾಲೂಕಿನ ಕಡಬಾ ಬಳಿಯ ನಾಲೆಯ ಕೊನೆ ಭಾಗದಲ್ಲಿ ಭೂ ಮೇಲ್ಪಟ್ಟದಿಂದ 15 ಅಡಿ ಅಳದಲ್ಲಿ ಪೈಪ್ಲೈನ್ ಅಳವಡಿಸಿ ಕುಣಿಗಲ್ ಹಾಗೂ ಮಾಗಡಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.
2019ರಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದಲ್ಲಿ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ಆದೇಶ ಹೊರಡಿಸಲಾಗಿತ್ತು. ನಂತರ ಬಂದ ಬಿಜೆಪಿ ಸರ್ಕಾರವು ಹಿಂದಿನ ಸರ್ಕಾರದ ಆದೇಶ ರದ್ದುಪಡಿಸಿತ್ತು. ನೈಸರ್ಗಿಕ ಕಾಲುವೆ ಮೂಲಕವೇ ಮಾಗಡಿಗೆ ನೀರು ಹರಿಸಲು ನಿರ್ಧರಿಸಿದ್ದರೂ ಒಂದೇ ಒಂದು ಹನಿ ನೀರು ಮಾಗಡಿಗೆ ಹರಿದಿರಲಿಲ್ಲ. ಈ ಹಿನ್ನೆಲೆಯಲ್ಲಿ 2023ರಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಹೇಮಾವತಿ ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಯೋಜನೆಯನ್ನು ಪುನರಾರಂಭಿಸಿದೆ.
ತುಮಕೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಜಿ ಶಾಸಕ ಸೊಗಡು ಶಿವಣ್ಣ ಉಪವಾಸ ಸತ್ಯಾಗ್ರಹ ನಡೆಸಿದರು
ರೈತರು, ರಾಜಕಾರಣಿಗಳಲ್ಲೇ ಗೊಂದಲ
ಮಾಗಡಿಗೆ ಹೇಮಾವತಿ ನೀರು ಹರಿಸುವ ವಿಚಾರದಲ್ಲಿ ರೈತರು ಹಾಗೂ ತುಮಕೂರು ಭಾಗದ ರಾಜಕಾರಣಿಗಳಲ್ಲೇ ಗೊಂದಲ ಏರ್ಪಟ್ಟಿದೆ. ನ್ಯಾಯಾಧೀಕರಣದ ಆದೇಶದಂತೆ ಮಾಗಡಿಗೆ ನೀರು ಹರಿಸಲು ತಮ್ಮ ಅಭ್ಯಂತರವಿಲ್ಲ. ಆದರೆ, ನೈಸರ್ಗಿಕ ಕಾಲುವೆ ಮೂಲಕವೇ ನೀರು ಹರಿಸಬೇಕು. ಪೈಪ್ ಲೈನ್ ಅಳವಡಿಕೆ ಬೇಡ ಎಂದು ತುಮಕೂರಿನ ರೈತ ಮುಖಂಡರು ಹೇಳಿದರೆ, ಮಾಗಡಿಗೆ ನೀರು ಬಿಡುವುದೇ ಇಲ್ಲ ಎಂದು ರಾಜಕಾರಣಿಗಳು ಪಟ್ಟು ಹಿಡಿದಿದ್ದಾರೆ.
ಈ ಮಧ್ಯೆ, ತುಮಕೂರಿನ ಮಾಜಿ ಶಾಸಕ ಸೊಗಡು ಶಿವಣ್ಣ ಅವರು ಮಾಗಡಿಗೆ ನೀರು ಬಿಡದಂತೆ ಹಾಗೂ ಪೈಪ್ ಲೈನ್ ಕಾಮಗಾರಿ ನಿಲ್ಲಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಉಪವಾಸ ಸತ್ಯಾಗ್ರಹ ಆರಂಭಿಸಿರುವುದು ರೈತರು ಹಾಗೂ ರಾಜಕಾರಣಿಗಳ ಒಗ್ಗಟ್ಟಿನ ಹೋರಾಟದಲ್ಲಿ ಗೊಂದಲ ಮೂಡಿಸಿದೆ.
ಮಾಗಡಿಗೆ ಹರಿಯದ ನೀರು
ಕುಣಿಗಲ್ ತಾಲ್ಲೂಕಿನ ಹುತ್ರಿದುರ್ಗ ಹೋಬಳಿ ಹಾಗೂ ಮಾಗಡಿ ತಾಲ್ಲೂಕಿನ 83 ಕೆರೆಗಳಿಗೆ ಹೇಮಾವತಿ ನೀರು ತುಂಬಿಸುವ ಶ್ರೀರಂಗ ಏತ ನೀರಾವರಿ ಯೋಜನೆಯನ್ನು 2016ರಲ್ಲಿ ಆರಂಭಿಸಲಾಗಿದೆ. ಆದರೆ, ಈವರೆಗೂ ಕಾಮಗಾರಿ ಪೂರ್ಣಗೊಂಡಿಲ್ಲ. ಯೋಜನೆಯಡಿ ಕುಣಿಗಲ್ ಹಾಗೂ ಮಾಗಡಿ ತಾಲೂಕಿಗೆ ನೈಸರ್ಗಿಕ ಕಾಲುವೆ ಮೂಲಕವೇ ನೀರು ಹರಿಸಲು ಉದ್ದೇಶಿಸಲಾಗಿದೆ.
ಆದರೆ, ಕಾಲುವೆ ದುರಸ್ತಿ ಕಾಮಗಾರಿ ಮುಗಿದು ಎಂಟು ವರ್ಷ ಕಳೆದರೂ ನೀರು ಮಾತ್ರ ಹರಿದಿರಲಿಲ್ಲ. ಕುಣಿಗಲ್ ಹಾಗೂ ಮಾಗಡಿಗೆ ಸಮರ್ಪಕವಾಗಿ ನೀರು ಹರಿಯದ ಕಾರಣ ಸರ್ಕಾರ ಈಗ ಹೇಮಾವತಿ ಎಕ್ಸ್ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಕೈಗೆತ್ತಿಕೊಂಡಿದೆ. ಪೈಪ್ಲೈನ್ ಅಳವಡಿಸಿದರೆ ತುಮಕೂರು ಜಿಲ್ಲೆಯ ನೀರಿನ ಪಾಲು ಪೂರ್ಣ ಪ್ರಮಾಣದಲ್ಲಿ ಸಿಗುವುದಿಲ್ಲ. ಜಿಲ್ಲೆಯಲ್ಲಿರುವ 26 ನೀರಾವರಿ ಯೋಜನೆಗಳಿಗೆ ನೀರಿನ ಲಭ್ಯತೆ ಕಡಿಮೆಯಾಗಲಿದೆ. ನೀರಿಗೆ ಹಾಹಾಕಾರ ಎದುರಾಗಲಿದೆ ಎಂಬುದು ರೈತರ ವಾದವಾಗಿದೆ.
ಎರಡು ತಾಲೂಕು ರೈತರ ಮಧ್ಯೆ ಸಂಘರ್ಷ
ಮಾಗಡಿ ತಾಲೂಕಿಗೆ ನೀರು ಬಿಡಲು ಒಪ್ಪದ ತುಮಕೂರು ಭಾಗದ ರಾಜಕಾರಣಿಗಳ ವಿರುದ್ಧ ಮಾಗಡಿಯಲ್ಲಿ ವಿರೋಧ ಹೆಚ್ಚುತ್ತಿದೆ. ನಮ್ಮ ಪಾಲಿನ ನೀರು ಪಡೆದೇ ತೀರುತ್ತೇವೆ ಎಂದು ಮಾಗಡಿ ತಾಲೂಕಿನ ರೈತರು ಹಾಗೂ ಜನಪ್ರತಿನಿಧಿಗಳು ಶಪಥ ಮಾಡಿದ್ದಾರೆ. ಇದಕ್ಕೆ ಪ್ರತಿಯಾಗಿ ತುಮಕೂರು ಭಾಗದ ಜನಪ್ರತಿನಿಧಿಗಳು ಹಾಗೂ ರೈತರು ತಿರುಗೇಟು ನೀಡಿದ್ದು, ಎಕ್ಸ್ ಪ್ರೆಸ್ ಲಿಂಕ್ ಕೆನಾಲ್ ಕಾಮಗಾರಿ ಕೈಬಿಡದಿದ್ದರೆ ಮಾಗಡಿ, ಬೆಂಗಳೂರಿನ ರಾಜಾಜಿನಗರಕ್ಕೆ ಪೂರೈಸುವ ಹಾಲು ಬಂದ್ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. ಇದು ಎರಡೂ ತಾಲೂಕುಗಳ ಮಧ್ಯೆ ಸಂಘರ್ಷಕ್ಕೆ ಕಾರಣವಾಗಿದೆ.
ಸಿ.ಪಿ. ಯೋಗೇಶ್ವರ್ ಅವರು ಅರಣ್ಯ ಸಚಿವರಾಗಿದ್ದಾಗ ಮಾಗಡಿ ಹಾಗೂ ಕುಣಿಗಲ್ ತಾಲೂಕಿಗೆ ನೀರು ಹರಿಸುವ ಕುರಿತು ಪರಿಶೀಲನೆ ನಡೆಸಿದ್ದರು. ಆಗ ತುಮಕೂರು ಗ್ರಾಮಾಂತರ ಶಾಸಕ ಬಿ.ಸುರೇಶ್ ಗೌಡ ಜತೆಗಿದ್ದರು. ಅಲ್ಲದೇ ಸುಗ್ಗನಹಳ್ಳಿ ಲಕ್ಷ್ಮೀನರಸಿಂಹಸ್ವಾಮಿ ದೇವರು, ಜನರ ಸಮ್ಮುಖದಲ್ಲಿ ಆಣೆ ಮಾಡಿ ಹೊನ್ನುಡಿಕೆ ಮತ್ತು ದೇವರೆ ಕೆರೆಗಳಿಂದ ಮಾಗಡಿ ತಾಲೂಕಿನ ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಶ್ರಮಿಸುತ್ತೇನೆ ಎಂದು ಹೇಳಿದ್ದರು. ಆಗ ಜನರು ಚಪ್ಪಾಳೆ ತಟ್ಟಿ ದೇವರ ಮೇಲಿದ್ದ ಹಾರವನ್ನು ಸುರೇಶ್ಗೌಡ ಅವರಿಗೆ ಹಾಕಿ ಅಭಿನಂದಿಸಿದ್ದರು. ಈಗ ಕಾಮಗಾರಿಗೆ ವಿರೋಧ ವ್ಯಕ್ತಪಡಿಸುತ್ತಿರುವುದು ಎಷ್ಟು ಸರಿ ಎಂಬುದು ಮಾಗಡಿ ಭಾಗದ ರೈತರ ಪ್ರಶ್ನೆಯಾಗಿದೆ.
ತುಮಕೂರಿನಲ್ಲಿ ರಾಜಕಾರಣಿಗಳು ಹಾಗೂ ರೈತ ಮುಖಂಡರು ಮುಂದಿನ ಹೋರಾಟದ ಕುರಿತು ಚರ್ಚಿಸಲು ಸಭೆ ನಡೆಸಿದರು
ಜಲಾಶಯದ ನೀರಿನ ಹಂಚಿಕೆ ಹೇಗೆ?
1979 ರಲ್ಲಿ ಹೇಮಾವತಿ ನದಿಗೆ ಗೊರೂರಿನಲ್ಲಿ ಮೇಲ್ಮಟ್ಟದ ಅಣೆಕಟ್ಟು ನಿರ್ಮಿಸಿದರೆ, ಯಗಚಿಯಲ್ಲಿ ಕೆಳಮಟ್ಟದ ಜಲಾಶಯ ನಿರ್ಮಿಸಲಾಗಿದೆ. ಈ ಜಲಾಶಯಗಳಿಂದ ಹಾಸನ, ಮಂಡ್ಯ ಜಿಲ್ಲೆಗಳ ಹೆಚ್ಚಿನ ಭಾಗಕ್ಕೆ ನೀರಾವರಿ ಸೌಲಭ್ಯ ಸಿಗುತ್ತಿದೆ. ಇದಲ್ಲದೇ ಕೃಷ್ಣಾ ನದಿ ಜಲಾನಯನ ಪ್ರದೇಶದ ವ್ಯಾಪ್ತಿಗೆ ಬರುವ ತುಮಕೂರು ಜಿಲ್ಲೆಗೂ ನೀರಾವರಿ ಮತ್ತು ಕುಡಿಯುವ ನೀರು ಪೂರೈಸುತ್ತಿದೆ.
2007ರಲ್ಲಿ ಸುಮಾರು 43.67 ಟಿಎಂಸಿ ಅಡಿ ಕರ್ನಾಟಕಕ್ಕೆ ಹಂಚಿಕೆಯಾಗಿದೆ. ಅದರಲ್ಲಿ ತುಮಕೂರಿಗೆ 25.31 ಟಿಎಂಸಿ ನೀರು ಹಂಚಿಕೆಯಾಗಿದೆ. ಎಡದಂಡೆ ಕಾಲುವೆಗೆ 18.36 ಟಿಎಂಸಿ ಹಂಚಿಕೆಯಾಗಿದ್ದು, ಹಾಸನ, ಮಂಡ್ಯ, ಕೆ.ಆರ್.ನಗರ, ಮೈಸೂರಿಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ.
ತುಮಕೂರು ಭಾಗಕ್ಕೆ ಹಂಚಿಕೆಯಾಗಿರುವ 25.31 ಟಿಎಂಸಿ ಅಡಿ ನೀರಿನಲ್ಲಿ ನೀರಾವರಿಗೆ 10.936 ಹಂಚಿಕೆ ಮಾಡಲಾಗಿದೆ. ನಾಗಮಂಗಲ ಬ್ರ್ಯಾಂಚ್ ಕೆನಾಲ್ನಲ್ಲಿ 7.757 ಟಿಎಂಸಿ ಕೃಷಿ ನೀರಾವರಿಗೆ ಹಂಚಿಕೆಯಾಗಿದೆ. ಎರಡು ಸೇರಿ ಕುಡಿಯಲು 6.617 ಟಿಎಂಸಿ ನೀರು ಹಂಚಿಕೆ ಮಾಡಲಾಗಿದೆ.
ಹತ್ತು ವರ್ಷದಲ್ಲಿ ತುಮಕೂರಿಗೆ ಎಷ್ಟು ನೀರು?
ಕಳೆದ ಹತ್ತು ವರ್ಷಗಳಲ್ಲಿ ತುಮಕೂರಿಗೆ 2016-17 ಹಾಗೂ 2017-18 ರಲ್ಲಿ ಹಂಚಿಕೆಗಿಂತ ಕಡಿಮೆ ಪ್ರಮಾಣದ ನೀರು ಹರಿದಿದೆ. ಈ ಅವಧಿಗಳಲ್ಲಿ ಕ್ರಮವಾಗಿ 4.04 ಟಿಎಂಸಿ, 8.856 ಟಿಎಂಸಿ ನೀರು ಹರಿದಿದೆ. 2015-16 ರಲ್ಲಿ 10.896 ಟಿಎಂಸಿ, 2023-24ರಲ್ಲಿ 10.261 ಟಿಎಂಸಿ ನೀರು ತುಮಕೂರಿಗೆ ಹರಿದಿದೆ.
2014-15ರಲ್ಲಿ 20.260 ಟಿಎಂಸಿ
2015-16ರಲ್ಲಿ 10.896 ಟಿಎಂಸಿ
2016-17ರಲ್ಲಿ ಕೇವಲ 4.04 ಟಿಎಂಸಿ
2017-18ರಲ್ಲಿ 8.856 ಟಿಎಂಸಿ
2018-19ರಲ್ಲಿ 23.476 ಟಿಎಂಸಿ
2019-20ರಲ್ಲಿ 24.27 ಟಿಎಂಸಿ
2020-21ರಲ್ಲಿ 25.270 ಟಿಎಂಸಿ
2021-22ರಲ್ಲಿ 23.11 ಟಿಎಂಸಿ
2022-23ರಲ್ಲಿ 16.927 ಟಿಎಂಸಿ
2023-24ರಲ್ಲಿ 10.261 ಟಿಎಂಸಿ
2024-25ರಲ್ಲಿ 23.28 ಟಿಎಂಸಿ
ವಿವಿಧ ತಾಲೂಕುಗಳಿಗೆ ಹಂಚಿಕೆಯಾದ ನೀರಿನ ಪ್ರಮಾಣ
ತಿಪಟೂರು 1690 ಎಂಸಿಎಫ್ಟಿ ನೀರು (1.6 TMC ನೀರು)
ತುರುವೆಕೆರೆ 5470 ಎಂಸಿಎಫ್ಟಿ
ಚಿಕ್ಕನಾಯಕನಹಳ್ಳಿ 860.8. ಎಂಸಿಎಫ್ಟಿ
ಗುಬ್ಬಿ 4921 ಎಂಸಿಎಫ್ಟಿ
ತುಮಕೂರು 2815 ಎಂಸಿಎಫ್ಟಿ
ಕುಣಿಗಲ್ 3037 ಎಂಸಿಎಫ್ಟಿ (3.037 ಟಿಎಂಸಿ)
ಚನ್ನರಾಯಪಟ್ಟಣ 374 ಎಂಸಿಎಫ್ಟಿ
ನಾಗಮಂಗಲ 4185 ಎಂಸಿಎಫ್ಟಿ
ಶಿರಾ ಮತ್ತು ಕಳ್ಳಂಬೆಳ್ಳ 900 ಎಂಸಿಎಫ್ಟಿ
ಮಧುಗಿರಿ-ಕೊರಟಗೆರೆ 151 ಎಂಸಿಎಫ್ಟಿ
ಮಾಗಡಿ 676 ಎಂಸಿಎಫ್ಟಿ
ಅರಸಿಕೆರೆ 70.86 ಎಂಸಿಎಫ್ಟಿ
ಕಡೂರು 19.22 ಎಂಸಿಎಫ್ಟಿ
ಹೊಸದುರ್ಗ 32 ಎಂಸಿಎಫ್ಟಿ