ಸರ್ಕಾರದಿಂದಲೇ ನಗರಾಭಿವೃದ್ಧಿ ಇಲಾಖೆಗೆ ಅನರ್ಹರ ನೇಮಕ: ಶಾಸಕ ಟಿ.ಎ. ಶರವಣರ ಆಕ್ರೋಶ

ಸರ್ಕಾರವೇ ಅಧಿಕಾರಿಗಳಿಗೆ ಸ್ನಾತಕೋತ್ತರ ಓದಿಗಾಗಿ ಸಂಬಳ ಮತ್ತು ವೆಚ್ಚ ನೀಡುತ್ತಿದ್ದರೂ, ವಿದ್ಯಾರ್ಹತೆ ಹೊಂದಿದ ಸಿಬ್ಬಂದಿ ಲಭ್ಯವಿದ್ದಾಗಲೂ ಕಾನೂನುಬಾಹಿರವಾಗಿ ಅನರ್ಹರನ್ನು ನೇಮಿಸುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.;

Update: 2025-08-19 07:44 GMT
ವಿಧಾನಪರಿಷತ್‌ ಶಾಸಕ ಟಿ.ಎ. ಶರವಣ

ಸರ್ಕಾರವೇ ಕಾನೂನು ಉಲ್ಲಂಘನೆ ಮಾಡಿ ನಗರ ಯೋಜನಾ ಇಲಾಖೆಯಲ್ಲಿ ಅರ್ಹತೆ ಇಲ್ಲದ ಅಧಿಕಾರಿಗಳನ್ನು ನೇಮಿಸುತ್ತಿದೆ ಎಂದು ವಿಧಾನಪರಿಷತ್‌ ಶಾಸಕ ಟಿ.ಎ. ಶರವಣರ ಆಕ್ರೋಶ ವ್ಯಕ್ತಪಡಿಸಿದರು.

ಮಂಗಳವಾರ ವಿಧಾನಪರಿಷತ್‌ನಲ್ಲಿ ಮಾತನಾಡಿದ ಅವರು,  "ಕಾಲಂ 4(ಕೆ) ಪ್ರಕಾರ ನಗರ ಯೋಜನೆ ಹುದ್ದೆಗಳಿಗೆ ಸ್ನಾತಕೋತ್ತರ ವಿದ್ಯಾರ್ಹತೆ ಹೊಂದಿದವರನ್ನು ಮಾತ್ರ ನೇಮಿಸಬೇಕು ಎಂಬ ನಿಯಮವಿದ್ದರೂ, ಸರ್ಕಾರ ಈ ನಿಯಮವನ್ನು ಕಡೆಗಣಿಸಿ ಅರ್ಹತೆಯಿಲ್ಲದವರನ್ನು ತಾತ್ಕಾಲಿಕ ವ್ಯವಸ್ಥೆ ಎಂಬ ಹೆಸರಿನಲ್ಲಿ ನಿಯೋಜಿಸುತ್ತಿದೆ" ಎಂದು ಆರೋಪಿಸಿದರು.

ಸರ್ಕಾರವೇ ಅಧಿಕಾರಿಗಳಿಗೆ ಸ್ನಾತಕೋತ್ತರ ಓದಿಗಾಗಿ ಸಂಬಳ ಮತ್ತು ವೆಚ್ಚ ನೀಡುತ್ತಿದ್ದರೂ, ವಿದ್ಯಾರ್ಹತೆ ಹೊಂದಿದ ಸಿಬ್ಬಂದಿ ಲಭ್ಯವಿದ್ದಾಗಲೂ ಕಾನೂನುಬಾಹಿರವಾಗಿ ಅನರ್ಹರನ್ನು ನೇಮಿಸುವುದು ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು. 11 ಏಪ್ರಿಲ್ 2022 ರಂದು ಹೊರಡಿಸಲಾದ ಅಧಿಸೂಚನೆಯಲ್ಲಿ ನಿರ್ದಿಷ್ಟ ಹುದ್ದೆಗಳಿಗೆ ಅನರ್ಹರನ್ನು ನಿಯೋಜಿಸಲು ಅವಕಾಶವಿಲ್ಲವೆಂದು ಸ್ಪಷ್ಟವಾಗಿ ಹೇಳಿದ್ದರೂ, ಸರ್ಕಾರವೇ ಅದನ್ನು ಉಲ್ಲಂಘಿಸಿ ಅವರಿಗೆ ಪ್ರೋತ್ಸಾಹ ಹಾಗೂ ಹುದ್ದೆ ನೀಡಿರುವುದು ಏಕೆ ಎಂದು ಪ್ರಶ್ನಿಸಿದರು.

ಇಷ್ಟೊಂದು ಗಂಭೀರ ವಿಷಯದ ಬಗ್ಗೆ ಸಚಿವರು ಸಭೆ ಕೂಡ ನಡೆಸಿಲ್ಲ. ನೇಮಕಾತಿ ನಿಯಮಗಳು ಹಾಗೂ ಶ್ರೇಣಿ ಪ್ರತಿ ಮೂರು ವರ್ಷಕ್ಕೊಮ್ಮೆ ಪರಿಷ್ಕರಣೆ ಆಗಬೇಕಾದರೂ, 1996 ರಿಂದ ಇಂದಿನವರೆಗೂ, ಸುಮಾರು ಮೂವತ್ತು ವರ್ಷಗಳಿಂದ ಯಾವುದೇ ಪರಿಷ್ಕರಣೆ ಆಗಿಲ್ಲ. ಗ್ರಾಮೀಣಾಭಿವೃದ್ಧಿ ವಿಷಯದಲ್ಲಿಯೂ ಕೂಡ, ಕಾಲಂ 4(ಐ) ಮತ್ತು (ಕೆ) ಅಡಿಯಲ್ಲಿ ರೂಪಿಸಬೇಕಿದ್ದ ಕ್ಲಸ್ಟರ್‌ ಪ್ಲಾನ್‌ ಇನ್ನೂ ಜಾರಿಗೆ ಬಂದಿಲ್ಲವೆಂದು ತಿಳಿಸಿದರು.

ಬೆಳಗಾವಿ ಅಧಿವೇಶನದಲ್ಲಿಯೂ ಇದೇ ವಿಷಯವನ್ನು ಸಚಿವರ ಗಮನಕ್ಕೆ ತಂದಿದ್ದಾಗ, “ಶೀಘ್ರ ಕ್ರಮ ಕೈಗೊಳ್ಳುತ್ತೇವೆ” ಎಂದು ಭರವಸೆ ನೀಡಿದ್ದರು. ಆದರೆ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರವೇ ಕಾನೂನು ಉಲ್ಲಂಘನೆ ಮಾಡಿ ಅರ್ಹತೆ ಇಲ್ಲದವರನ್ನು ನಿಯೋಜಿಸುತ್ತಿರುವಾಗ, ಯೋಜಿತ ನಗರಾಭಿವೃದ್ಧಿ ರಾಜ್ಯದಲ್ಲಿ ಹೇಗೆ ಸಾಧ್ಯ? ಎಂದು ಅಸಮಾಧಾನ ವ್ಯಕ್ತಪಡಿಸಿದರು.

Tags:    

Similar News