ಬಾಹ್ಯಾಕಾಶಕ್ಕೆ ಧಾರವಾಡದ ಮೆಂತ್ಯೆ, ಹೆಸರು ಕಾಳು; ವಿಶ್ವದ ಮೊದಲ ಪೌಷ್ಟಿಕಾಂಶ ಪ್ರಯೋಗದ ಹೆಮ್ಮೆ

ವಿಜ್ಞಾನಿ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪ್ರೊ. ಪಿ.ಎಲ್. ಪಾಟೀಲ್ ಅವರು ‘ದ ಫೆಡರಲ್ ಕರ್ನಾಟಕ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಹತ್ವದ ‘ಆಕ್ಸಿಜನ್ 4 ಮಿಷನ್’ ಯೋಜನೆಯಲ್ಲಿ ಇಸ್ರೋ ಮತ್ತು ಐಐಟಿ ಧಾರವಾಡದ ಪಾತ್ರದ ಕುರಿತು ವಿವರಿಸಿದರು.;

Update: 2025-06-26 15:49 GMT

ಅಮೆರಿಕದ ಫ್ಲೋರಿಡಾದಲ್ಲಿರುವ ನಾಸಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಆಕ್ಸಿಯಮ್ -4 ಮಿಷನ್‌ ನೌಕೆ ಯಶಸ್ವಿಯಾಗಿ ಬಾಹ್ಯಾಕಾಶ ನಿಲ್ದಾಣ ತಲುಪಿದೆ. 

ಬಾಹ್ಯಾಕಾಶ ನಿಲ್ದಾಣದಲ್ಲಿ ನಡೆಸಲು ಉದ್ದೇಶಿಸಿರುವ ಹಲವು ಪ್ರಯೋಗಗಳಲ್ಲಿ ಕರ್ನಾಟಕದ ಧಾರವಾಡ ಕೃಷಿ ವಿಶ್ವವಿದ್ಯಾಲಯದ ಪೌಷ್ಟಿಕಾಂಶ ಆಹಾರ ಪದಾರ್ಥಗಳ ಪ್ರಯೋಗವೂ ಒಂದಾಗಿರುವುದು ಹೆಮ್ಮೆ ವಿಚಾರವಾಗಿದೆ. ಬಾಹ್ಯಾಕಾಶ ಆಧಾರಿತ ಪೌಷ್ಟಿಕಾಂಶ ಸಂಶೋಧನೆಗಾಗಿ ಗಗನಯಾನಿಗಳ ಜೊತೆ ಧಾರವಾಡದ ಹೆಸರು ಕಾಳು ಮತ್ತು ಮೆಂತ್ಯೆ ಕಳುಹಿಸಲಾಗಿದೆ.

ಆಕ್ಸಿಯಂ-4 ಮಿಷನ್‌ ಕುರಿತು ‘ದ ಫೆಡರಲ್ ಕರ್ನಾಟಕ’ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ವಿಜ್ಞಾನಿ ಹಾಗೂ ಧಾರವಾಡ ಕೃಷಿ ವಿಶ್ವವಿದ್ಯಾಲಯ ಕುಲಪತಿ ಪ್ರೊ. ಪಿ.ಎಲ್.ಪಾಟೀಲ್  ಅವರು, ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯಾನದಲ್ಲಿ ಭಾರತದ ಇಸ್ರೋ ಮತ್ತು ಧಾರವಾಡದ ಐಐಟಿ ಸಂಸ್ಥೆಯ ಪಾತ್ರದ ಕುರಿತು ವಿವರಿಸಿದ್ದಾರೆ.

" ಬಾಹ್ಯಾಕಾಶ ಯಾನ ಕೈಗೊಳ್ಳುವ ಗಗನಯಾತ್ರಿಗಳು ಹೆಚ್ಚು ಪೌಷ್ಠಿಕಾಂಶದ ಕೊರತೆ ಸೇರಿದಂತೆ ಗಂಭೀರವಾದ ಆರೋಗ್ಯ ಸವಾಲುಗಳನ್ನು ಎದುರಿಸುತ್ತಾರೆ. ಗಗನಯಾತ್ರಿಗಳ ಬಳಕೆ ಹಾಗೂ ಪ್ರಯೋಗಕ್ಕಾಗಿ ಬಾಹ್ಯಾಕಾಶಕ್ಕೆ  ಮೊಳಕೆಯೊಡೆಯುವ ಆಹಾರ ಪದಾರ್ಥಗಳನ್ನು ಧಾರವಾಡ ಕೃಷಿ ವಿವಿಯಿಂದ ಕಳುಹಿಸಿಕೊಡಲಾಗಿದೆ ಎಂದು ಹೇಳಿದ್ದಾರೆ.  

ಆಕ್ಸಿಯಂ-4  ಯೋಜನೆಯಡಿ ಪ್ರಯೋಗಕ್ಕೆ ಧಾರವಾಡದ ಮೆಂತ್ಯೆ, ಹೆಸರು ಕಾಳುಗಳನ್ನು ಹಸಿರುಕಾಳುಗಳನ್ನು ಆಯ್ಕೆ ಮಾಡಲಾಗಿದ್ದು, ಅವುಗಳನ್ನು ಮೊಳಕೆಯೊಡೆಯುವ ಪ್ರಕ್ರಿಯೆಗೆ ಒಳಪಡಿಸಲಾಗಿದೆ. ಮೊಳಕೆಯೊಡೆಯುವ ಪ್ರಕ್ರಿಯೆ ಬಳಿಕ ಅವುಗಳನ್ನು ಮೈನಸ್‌ 40 ಡಿಗ್ರಿ ಸೆಂಟಿಗ್ರೇಡ್ ತಾಪಮಾನದಲ್ಲಿ ಸಂಗ್ರಹಿಸಿಡಲಾಗುತ್ತದೆ. 16 ದಿನಗಳ ನಂತರ ಈ ಬೀಜಗಳನ್ನು ಪುನಃ ಮೊಳಕೆಯೊಡೆಯುವಂತೆಯೇ ಸಿದ್ಧಪಡಿಸಲಾಗಿದೆ.  ಜೊತೆಗೆ ಭೂಮಿಯ ಮೇಲೆಯೂ ಇದೇ ರೀತಿಯ ಪ್ರಾಯೋಗಿಕ ಪ್ರಯೋಗ ನಡೆಯುತ್ತಿದೆ. ಇದರಿಂದ, ಆಕಾಶದ ವಾತಾವರಣದಲ್ಲಿ ಬೀಜಗಳ ಮೇಲಿನ ಪರಿಣಾಮ ಹಾಗೂ ಅವುಗಳ ಪೌಷ್ಟಿಕ ಮೌಲ್ಯದಲ್ಲಿ ಆಗುವ ಬದಲಾವಣೆ ಬಗ್ಗೆ ತಿಳಿಯಬಹುದು ಎಂದು ಹೇಳಿದ್ದಾರೆ. 

ಈ ಸಂಶೋಧನೆಯು ವಿಜ್ಞಾನಿಗಳಿಗೆ ಪ್ರೊತ್ಸಾಹ ನೀಡಲಿದೆ. ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಅವರು ಮಾಡುತ್ತಿರುವ ಸಂಶೋಧನೆಗೆ ಇದು ಮಹತ್ವದ ಹಂತವಾಗಿದೆ ಎಂದು ಪ್ರೊ. ಪಾಟೀಲ್ ತಿಳಿಸಿದ್ದಾರೆ.

ಆಕ್ಸಿಜನ್- 4 ಮಿಷನ್ ಯೋಜನೆಯು, ಮಾನವನ ಮುಂದಿನ ಕಾಲಘಟ್ಟದ ಆಹಾರ ಭದ್ರತೆ ಹಾಗೂ ಭೌಗೋಳಿಕ ವಾತಾವರಣದಲ್ಲಿ ಬೆಳೆಗಳ ಬೆಳವಣಿಗೆ ಕುರಿತು ಮಹತ್ವದ ಮಾಹಿತಿ ಒದಗಿಸಲಿದೆ. ಧಾರವಾಡ ಕೃಷಿ ವಿಶ್ವವಿದ್ಯಾಲಯದ ಈ ಸಾಧನೆ ರಾಜ್ಯವೇ ಹೆಮ್ಮೆ ಪಡುವಂತಿದೆ. 

Full View
Tags:    

Similar News