ಬೆಂಗಳೂರಲ್ಲಿ 4 ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ : ಮೂವರು ಸಾವು
ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿ, ಮೂವರು ಸಾವನ್ನಪ್ಪಿರುವ ಘಟನೆ ನಗರದ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ನಗರ್ತಪೇಟೆಯಲ್ಲಿ ನಡೆದಿದೆ.;
ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಅಗ್ನಿ ಅವಘಡ ಸಂಭವಿಸಿ, ಮೂವರು ಸಾವನ್ನಪ್ಪಿರುವ ಘಟನೆ ನಗರದ ಹಲಸೂರು ಗೇಟ್ ಪೊಲೀಸ್ ಠಾಣೆ ವ್ಯಾಪ್ತಿಯ ನಗರ್ತಪೇಟೆಯಲ್ಲಿ ನಡೆದಿದೆ.
ಶನಿವಾರ ಮುಂಜಾನೆಯ ಜಾವ 3:30ರ ಸುಮಾರಿಗೆ ದುರ್ಘಟನೆ ನಡೆದಿದೆ. ಘಟನೆಯಲ್ಲಿ ರಾಜಸ್ಥಾನ ಮೂಲದ ಮದನ್ ಸಿಂಗ್ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ಕಟ್ಟಡದ ನೆಲಮಹಡಿಯಲ್ಲಿದ್ದ ಪ್ಲಾಸ್ಟಿಕ್ ಮ್ಯಾಟ್ ಗೋದಾಮಿನಲ್ಲಿ ಕಾಣಿಸಿಕೊಂಡ ಬೆಂಕಿಯಿಂದ ಅವಘಡ ಸಂಭವಿಸಿದೆ ಎಂದು ಹೇಳಲಾಗಿದೆ. ಸ್ಥಳದಲ್ಲಿ ಐದು ಅಗ್ನಿಶಾಮಕ ದಳದ ವಾಹನಗಳಲ್ಲಿ ಬಂದು ಸಿಬ್ಬಂದಿ ಬೆಂಕಿ ನಂದಿಸಲಾಗುತ್ತಿದೆ.
ಮೂರು ತಾಸು ಕಳೆದರೂ ಬೆಂಕಿ ಹತೋಟಿಯೆ ಸಿಗಲಿಲ್ಲ. ಪೂರ್ಣ ಪ್ರಮಾಣದ ಬೆಂಕಿ ನಂದಿಸಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸ ಮಾಡುತ್ತಿದ್ದಾರೆ. ಗೋದಾಮಿನಲ್ಲಿ ಒಳಗೆ ಇನ್ನೂ ಬೆಂಕಿ ನಂದಿಲ್ಲ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನಿರತವಾಗಿದ್ದಾರೆ.
ನಾಲ್ಕು ಅಂತಸ್ತಿನ ಕಟ್ಟಡದ ನೆಲಮಹಡಿ ಹಾಗೂ ಮೊದಲ ಮಹಡಿಯಲ್ಲಿ ಪ್ಲಾಸ್ಟಿಕ್ ಮ್ಯಾಟ್ಗಳನ್ನು ಸಂಗ್ರಹಿಸಿಟ್ಟಿದ್ದ ಗೋದಾಮಿತ್ತು. ಮೂರನೇ ಮಹಡಿಯಲ್ಲಿದ್ದ ಮನೆಯಲ್ಲಿ ಮದನ್ ಕುಮಾರ್, ಪತ್ನಿ ಸಂಗೀತಾ, ಮಕ್ಕಳಾದ ವಿಹಾನ್ ಹಾಗೂ ನಿತೇಶ್ ವಾಸವಿದ್ದರು. ನಾಲ್ಕನೇ ಮಹಡಿಯಲ್ಲಿ ಒಂದು ಕೊಠಡಿ ಇತ್ತು. ಅಗ್ನಿ ಅವಘಡದಿಂದಾಗಿ ಮದನ್ ಕುಮಾರ್ ಕುಟುಂಬ ಹಾಗೂ ಮೊದಲ ಮಹಡಿಯಲ್ಲಿನ ಗೋದಾಮಿನೊಳಗೆ ಮೂವರು ಕಾರ್ಮಿಕರು ಸಿಲುಕಿಕೊಂಡಿದ್ದರು. ಸದ್ಯ ಮದನ್ ಕುಮಾರ್ ಸೇರಿದಂತೆ ಮೂವರು ಮೃತಪಟ್ಟಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ಮೃತದೇಹಗಳನ್ನು ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದುವರೆಗೂ ಮೂವರ ಮೃತದೇಹಗಳನ್ನ ಆಸ್ಪತ್ರೆಗೆ ರವಾನಿಸಲಾಗಿದ್ದು, ಉಳಿದವರೂ ಸಹ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ. ಈ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆ ಸುಟ್ಟುಗಾಯಗಳ ಕೇಂದ್ರದ ಮುಖ್ಯಸ್ಥ ಡಾ. ಯೋಗಿಶ್ವರಪ್ಪ ಮಾತನಾಡಿ, ಬೆಳಗ್ಗೆ 7.30 ರ ಸುಮಾರಿನಲ್ಲಿ ದೇಹಗಳು ಬಂದಿದ್ದು, ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾರೆ.