ISRO| ನವೆಂಬರ್‌ನಲ್ಲಿ ದೆಹಲಿಯಲ್ಲಿಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ

ವಿಕಸಿತ ಭಾರತ ಸಂಕಲ್ಪ ಈಡೇರಿಸಲು ಇಸ್ರೋ ಸಂಸ್ಥೆಯು ಹಲವು ಯೋಜನೆಗಳನ್ನು ರೂಪಿಸುತ್ತಿದ್ದು, ದೆಹಲಿಯಲ್ಲಿ ಮೂರು ದಿನಗಳ ಕಾಲ ನಡೆಯುವ ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ.

Update: 2025-10-23 11:41 GMT

ಮಾಧ್ಯಮಗೋಷ್ಠಿಯಲ್ಲಿ ಇಸ್ರೋ ಅಧ್ಯಕ್ಷ ವಿ. ನಾರಾಯಣ್ ಭಾಗವಹಿಸಿದ್ದರು.

Click the Play button to listen to article

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ  "ವಿಕಸಿತ ಭಾರತ 2047" ಅನ್ನು  ಸಾಕಾರಗೊಳಿಸುವ ಉದ್ದೇಶದಿಂದ ಇಸ್ರೋ ಸಂಸ್ಥೆಯು ಹಲವು ಯೋಜನೆಗಳನ್ನು ರೂಪಿಸುತ್ತಿದ್ದು,  ಮುಂದಿನ ತಿಂಗಳು 3 ರಿಂದ 5 ರವರೆಗೆ “ಉದಯೋನ್ಮುಖ ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆ ಸಮಾವೇಶ ನಡೆಯಲಿದೆ. ದೆಹಲಿಯ ಭಾರತ ಮಂಟಪದಲ್ಲಿ ಮೂರು ದಿನಗಳ ಕಾಲ  ನಡೆಯುವ ಈ ಸಮಾವೇಶವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. 

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ನೇತೃತ್ವದಲ್ಲಿ 13 ಇಲಾಖೆಗಳ ಸಹಯೋಗದಲ್ಲಿ ಈ ಸಮಾವೇಶ ನಡೆಯಲಿದ್ದು, ವಿಜ್ಞಾನ ಮತ್ತು ತಂತ್ರಜ್ಞಾನದ ಬಗ್ಗೆ ಚರ್ಚೆ ನಡೆಸಿ ಉತ್ತೇಜನ ನೀಡುವುದು ಈ ಸಮಾವೇಶದ ಪ್ರಮುಖ ಉದ್ದೇಶವಾಗಿದೆ. ಇದು ವಿಕಸಿತ ಭಾರತಕ್ಕೆ ಬಲ ತುಂಬಲಿದೆ. ಮುಂದಿನ 15 ವರ್ಷದ ದೇಶದ ಏಳ್ಗೆಯ ಕುರಿತು ಮಾರ್ಗಸೂಚಿ ರೂಪಿಸಲು ಈ ಸಮಾವೇಶ ಸಹಕಾರಿಯಾಗಲಿದೆ. 

ಬೆಂಗಳೂರಿನ ಇಸ್ರೋ ಕೇಂದ್ರ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಇಸ್ರೋ ಅಧ್ಯಕ್ಷ ವಿ.ನಾರಾಯಣನ್‌, ನ.3 ರಿಂದ 5 ರವರೆಗೆ ದೆಹಲಿಯಲ್ಲಿ ನಡೆಯುವ ಸಮಾವೇಶವು ವಿಜ್ಞಾನ, ತಂತ್ರಜ್ಞಾನ ಕ್ಷೇತ್ರದ ಹೊಸ ಅಂಶಗಳ ಕುರಿತು ಚರ್ಚೆ ನಡೆಸಲಿದೆ. ಈ ವೇಳೆ ಸ್ಪಷ್ಟ ಕಾರ್ಯಯೋಜನೆ ರೂಪಿಸಲಾಗುತ್ತದೆ. ಯುವ ವಿಜ್ಞಾನಿಗಳು, ಉದ್ಯಮಿಗಳು ಭಾಗವಹಿಸಲಿದ್ದಾರೆ. ಸಂಶೋಧನೆ, ನಾವಿನ್ಯತೆ ಸಹಕಾರ ಹೆಚ್ಚಳ ಮತ್ತು ದೇಶದ ಪ್ರಗತಿಯಲ್ಲಿ ಇಸ್ರೋದ ಪಾಲುದಾರ ಕೊಡುಗೆಗಳನ್ನು ಗುರುತಿಸುವ ಕೆಲಸ ಮಾಡಲಾಗುತ್ತದೆ ಎಂದು ತಿಳಿಸಿದರು. 

ಸಮಾವೇಶದಲ್ಲಿ ಏಳು ನೊಬೆಲ್‌ ಪುರಸ್ಕೃತರು, ಅಂತಾರಾಷ್ಟ್ರೀಯ ವಿಜ್ಞಾನಿಗಳು ಪಾಲ್ಗೊಳ್ಳಲಿದ್ದಾರೆ. “ವಿಕಸಿತ ಭಾರತ 2047” ದೃಷ್ಟಿಯ ಕುರಿತು ಮಾತನಾಡಲಿದ್ದಾರೆ. ಇದೇ ವೇಳೆ 11 ವಿಷಯಾಧಾರಿತ ಕಾರ್ಯಕ್ರಮಗಳು  ನಡೆಯಲಿವೆ. ಅಲ್ಲದೇ, ಕೃತಕ ಬುದ್ಧಿಮತ್ತೆ, ಕ್ವಾಂಟಮ್‌ ತಂತ್ರಜ್ಞಾನ, ಬಾಹ್ಯಾಕಾಶ ಸೇರಿದಂತೆ ಇತರೆ ವಿಷಯಗಳ ಮೇಲೆ ಚರ್ಚೆಗಳು ಜರುಗಲಿವೆ. ಬಾಹ್ಯಾಕಾಶ ಕ್ಷೇತ್ರದಲ್ಲಿ ನಡೆಯುವ ಸಂಶೋಧನೆ ಮತ್ತುಅಭಿವೃದ್ಧಿಗೆ ಸೇರಿದ ಹೊಸ ಅವಿಷ್ಕಾರಗಳ ವಿಚಾರಗಳ ಮೇಲೆ ವಿಷಯ ತಜ್ಞರಿಂದ ಚರ್ಚೆಗಳನ್ನು ಆಯೋಜಿಸಲಾಗಿದೆ. ಇದಲ್ಲದೇ, 33 ಮಹಿಳಾ ಉದ್ಯಮಿಗಳು ಮತ್ತು 40ಕ್ಕೂ ಹೆಚ್ಚುಸ್ಟಾರ್ಟ್‌ಆಪ್‌ಗಳ ಉದ್ಯಮಿಗಳು ತಮ್ಮ ಅನುಭವಗಳನ್ನು ಹಂಚಿಕೊಳ್ಳಲಿದ್ದು, 100 ಯುವ ವಿಜ್ಞಾನಿಗಳು ತಮ್ಮ ಸಂಶೋಧನಾ ಕಾರ್ಯಗಳನ್ನು ಪೋಸ್ಟರ್‌ಗಳ ಪ್ರದರ್ಶನದ ಮೂಲಕ ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದರು. 

ಸಮಾವೇಶವು ನಾವೀನ್ಯತೆ, ಉದ್ಯೋಗ ಸೃಷ್ಟಿ ಮತ್ತು ಜಾಗತಿಕ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಸುಸ್ಥಿರ ತಾಂತ್ರಿಕ ಪರಿಸರ ವ್ಯವಸ್ಥೆಗಳನ್ನು ರಚಿಸುವತ್ತ ಗಮನ ಹರಿಸಲಾಗುವುದು. ಈ ವಿಧಾನವು ಮುಂಬರುವ ದಶಕಗಳಲ್ಲಿ ಭಾರತದ ವೈಜ್ಞಾನಿಕ, ಬಾಹ್ಯಾಕಾಶ ಸೇರಿದಂತೆ ಇತರೆ ಕ್ಷೇತ್ರಗಳ ನಾಯಕತ್ವವನ್ನು ಬಲಪಡಿಸಲಿದೆ. ಅಲ್ಲದೇ ಸಮಾವೇಶವು ಕೇವಲ ಶೈಕ್ಷಣಿಕ ಸಮಾವೇಶ ಮಾತ್ರವಲ್ಲ, ಇದು ಮುಂದಿನ ಎರಡು ದಶಕಗಳ ಭಾರತದ ತಾಂತ್ರಿಕ ಆದ್ಯತೆಗಳನ್ನು ನಿರ್ಧರಿಸುವ ರಾಷ್ಟ್ರೀಯ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು. 

Tags:    

Similar News