ಕನ್ನಡಿಗರಿಗೆ ಮೀಸಲಾತಿ | ವಿರೋಧ ಮಾಡಿದವರೂ ರಾಜ್ಯದಿಂದಲೇ ಬೆಳೆದವರು: ಡಿ.ಕೆ. ಶಿವಕುಮಾರ್‌ ಟೀಕೆ

ಕನ್ನಡಿಗರಿಗೆ ಕರ್ನಾಟಕದಲ್ಲಿ 50 ಶೇ ಮೀಸಲಾತಿ ನೀಡಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರಕ್ಕೆ ಮೋಹನ್ ದಾಸ್ ಪೈ ಹಾಗೂ ಕಿರಣ್ ಮಜುಂದಾರ್ ಶಾ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಕೆಶಿ ಪ್ರತಿಕ್ರಿಯೆ ನೀಡಿ ತಾಂತ್ರಿಕತೆ ವಿಚಾರ ಬಂದಾಗ ಅಗತ್ಯವಿದ್ದ ಕಡೆ ರಿಯಾಯಿತಿ ನೀಡುತ್ತೇವೆ ಎಂದರು.

Update: 2024-07-17 11:35 GMT
ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್‌

ಸಿದ್ದರಾಮಯ್ಯ ಸರ್ಕಾರ ಮಂಗಳವಾರ ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಯನ್ನು ಮಂಡಿಸಿದ್ದು, ಈ ಮಸೂದೆಗೆ ಕೈಗಾರಿಕಾ ವಲಯದಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದೀಗ ಈ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು, ತಾಂತ್ರಿಕ ಸಮಸ್ಯೆಗಳನ್ನು ನಾವು ಕೂಡ ಅರ್ಥ ಮಾಡಿಕೊಳ್ಳುತ್ತೇವೆ. ಆದರೆ ವಿರೋಧ ಮಾಡಿದ ಉದ್ಯಮಿಗಳು ಕೂಡ ರಾಜ್ಯದಿಂದಲೇ ಬೆಳೆದಿರುವವರು ಎಂದು ಹೇಳಿದ್ದಾರೆ.

ಕನ್ನಡಿಗರಿಗೆ ಕರ್ನಾಟಕದಲ್ಲಿ 50 ಶೇ ಮೀಸಲಾತಿ ನೀಡಬೇಕು ಎಂಬ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಕೈಗೊಂಡ ನಿರ್ಧಾರಕ್ಕೆ ಮೋಹನ್ ದಾಸ್ ಪೈ ಹಾಗೂ ಕಿರಣ್ ಮಜುಂದಾರ್ ಶಾ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಡಿಕೆಶಿ ಪ್ರತಿಕ್ರಿಯೆ ನೀಡಿ ತಾಂತ್ರಿಕತೆ ವಿಚಾರ ಬಂದಾಗ ಅಗತ್ಯವಿದ್ದ ಕಡೆ ರಿಯಾಯಿತಿ ನೀಡುತ್ತೇವೆ ಎಂದರು.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಸ್ವಾಭಿಮಾನ ಎತ್ತಿಹಿಡಿಯಬೇಕು ಅಂತ ನಿರ್ಧಾರ ಮಾಡಿದೆ. ಕನ್ನಡ ಬೋರ್ಡ್, ಭಾಷೆ, ಧ್ವಜ ಬಳಕೆ, ನಮ್ಮ ಸಂಸ್ಕೃತಿ, ಕಡತಗಳಲ್ಲಿ ಕನ್ನಡ ಬಳಕೆ ಮಾಡಲಾಗುತ್ತಿದೆ. ಮುಂದೆ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಇರಬಹುದು. ಕಡ್ಡಾಯವಾಗಿ ಕನ್ನಡಿಗರಿಗೆ ಇಷ್ಟು ಪರ್ಸೆಂಟ್ ಇರಬೇಕು. ಇದರ ಬಗ್ಗೆ ತೀರ್ಮಾನ ನಾವು ಮಾಡಿದ್ದೇವೆ ಹಾಗೂ ವಿಧೇಯಕ ಮಂಡಿಸುತ್ತಿದ್ದೇವೆ ಎಂದು ತಿಳಿಸಿದರು.

ವಿರೋಧವೇನು?

ಕರ್ನಾಟಕದಲ್ಲಿ ಸಿದ್ದರಾಮಯ್ಯ ಸರ್ಕಾರ ಮಂಗಳವಾರ ಖಾಸಗಿ ವಲಯದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ನೀಡುವ ಮಸೂದೆಯನ್ನು ಮಂಡಿಸಿದ್ದು, ಈ ಮಸೂದೆಯ ಪ್ರಕಾರ ನಿರ್ವಹಣಾ ವರ್ಗದ ಶೇ.50 ಉದ್ಯೋಗಗಳು - ಮೇಲ್ವಿಚಾರಕ, ವ್ಯವಸ್ಥಾಪಕ, ತಾಂತ್ರಿಕ, ಕಾರ್ಯಾಚರಣೆ, ಆಡಳಿತಾತ್ಮಕ ಮತ್ತು ಉನ್ನತ ಹುದ್ದೆಗಳು - ಸ್ಥಳೀಯ ಅಭ್ಯರ್ಥಿಗಳಿಗೆ ಮೀಸಲಿಡಬೇಕು ಎಂದು ಮಸೂದೆ ಹೇಳಿದೆ. ರಾಜ್ಯದ ಎಲ್ಲಾ ಖಾಸಗಿ ಕೈಗಾರಿಕೆಗಳಲ್ಲಿ ಸಿ ಮತ್ತು ಡಿ ದರ್ಜೆಯ ಹುದ್ದೆಗಳಿಗೆ ಶೇ.100 ರಷ್ಟು ಕನ್ನಡಿಗರ ನೇಮಕಾತಿ ಕಡ್ಡಾಯಗೊಳಿಸಿ ಸಿದ್ದರಾಮಯ್ಯ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ ಈ ಮಸೂದೆಗೆ ತೀವ್ರ ವಿರೋಧ ವ್ಯಕ್ತವಾಗಿದೆ. 

Paytm ನ ಮಾಜಿ ಉಪಾಧ್ಯಕ್ಷ ಸೌರಭ್ ಜೈನ್, X ನಲ್ಲಿ ಪೋಸ್ಟ್‌ನಲ್ಲಿ, "ಕರ್ನಾಟಕದಲ್ಲಿ ಸ್ಥಳೀಯರಿಗೆ 100% ಕೋಟಾವನ್ನು ಹೊಂದಿರಿ. ನಂತರ ಎಲ್ಲಾ IT ಕಂಪನಿಗಳು ಅಮರಾವತಿ, ಗುಜರಾತ್ ಅಥವಾ ಉತ್ತರ ಭಾರತಕ್ಕೆ ಸ್ಥಳಾಂತರಗೊಳ್ಳುತ್ತವೆ. ಆಗ ಬೆಂಗಳೂರಿನ ಅನೇಕ ಸ್ಥಳೀಯರು ಸಂತೋಷವಾಗಿರುತ್ತಾರೆ. ಏಕೆಂದರೆ ಸ್ಥಳೀಯವಲ್ಲದ ಜನರು ಶಾಶ್ವತವಾಗಿ ದೂರ ಹೋಗುತ್ತಾರೆ ಎಂದು ಪೋಸ್ಟ್‌ ಮಾಡಿದ್ದಾರೆ. 

ಬಯೋಕಾನ್ ಲಿಮಿಟೆಡ್ ಅಧ್ಯಕ್ಷೆ ಕಿರಣ್ ಮಜುಂದಾರ್-ಶಾ ಅವರು X ಪೋಸ್ಟ್‌ನಲ್ಲಿ ಈ ನಿರ್ಧಾರವನ್ನು ಖಂಡಿಸಿದ್ದು, "ಟೆಕ್ ಕೇಂದ್ರವಾಗಿ ನಮಗೆ ನುರಿತ ಪ್ರತಿಭೆಗಳ ಅಗತ್ಯವಿದೆ ಮತ್ತು ಸ್ಥಳೀಯರಿಗೆ ಉದ್ಯೋಗಗಳನ್ನು ಒದಗಿಸುವ ಗುರಿಯು ಈ ಕ್ರಮದಿಂದ ತಂತ್ರಜ್ಞಾನದಲ್ಲಿ ನಮ್ಮ ಪ್ರಮುಖ ಸ್ಥಾನದ ಮೇಲೆ ಪರಿಣಾಮ ಬೀರಬಾರದು. ಈ ನೀತಿಯಿಂದ ಹೆಚ್ಚು ನುರಿತ ನೇಮಕಾತಿಗೆ ವಿನಾಯಿತಿ ನೀಡುವ ಎಚ್ಚರಿಕೆಗಳು ಇರಬೇಕು ಎಂದು ತಿಳಿಸಿದ್ದಾರೆ.

ಉದ್ಯಮಿ ಟಿವಿ ಮೋಹನ್‌ದಾಸ್ ಪೈ ಕೂಡ ಈ ನಿರ್ಧಾರಕ್ಕೆ ಋಣಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ. ಎಎನ್‌ಐಗೆ ನೀಡಿದ ಸಂದರ್ಶನದಲ್ಲಿ ಅವರು, "...ನೀವು ಉದ್ಯೋಗಕ್ಕಾಗಿ ಕನ್ನಡಿಗರನ್ನು ಉತ್ತೇಜಿಸಲು ಬಯಸಿದರೆ, ಉನ್ನತ ಶಿಕ್ಷಣಕ್ಕಾಗಿ ಹೆಚ್ಚಿನ ಹಣವನ್ನು ಖರ್ಚು ಮಾಡಿ. ಅವರಿಗೆ ತರಬೇತಿ ನೀಡಿ. ಕೌಶಲ್ಯ ಅಭಿವೃದ್ಧಿಗೆ ಹೆಚ್ಚಿನ ಹಣವನ್ನು ಖರ್ಚು ಮಾಡಿ. ಇಂಟರ್ನ್‌ಶಿಪ್‌ಗಳಿಗೆ ಹೆಚ್ಚು ಹಣವನ್ನು ಖರ್ಚು ಮಾಡಿ, ಹೆಚ್ಚಿನ ಹಣವನ್ನು ಖರ್ಚು ಮಾಡಿ. ಶಿಷ್ಯವೃತ್ತಿಯ ಕಾರ್ಯಕ್ರಮಗಳು ಈ ರೀತಿ ಅಲ್ಲವೇ?’’ ಎಂದು ಪ್ರಶ್ನಿಸಿದ್ದಾರೆ.

ಟ್ವೀಟ್‌ ಡಿಲೀಟ್‌ ಮಾಡಿ ಸಿ.ಎಂ

ರಾಜ್ಯದಲ್ಲಿನ ಎಲ್ಲಾ ಕೈಗಾರಿಕೆಗಳಲ್ಲೂ ಸಿ ಮತ್ತು ಡಿ ವರ್ಗದ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ಕಲ್ಪಿಸುವುದು ಸೇರಿದಂತೆ ಏಳು ವಿಧೇಯಕಗಳನ್ನು ಮಂಡಿಸಲು ಸಚಿವ ಸಂಪುಟ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. ಇದರಲ್ಲಿ ಒಂದು ವಿಧೇಯಕ ಖಾಸಗಿ ಕಂಪೆನಿಗಳಲ್ಲಿ ಕನ್ನಡಿಗರಿಗೆ ಕಡ್ಡಾಯ ನೇಮಕಾತಿ ಬಗ್ಗೆ ಇತ್ತು. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಕೂಡ ನೀಡಿದ್ದರು. ಆದರೆ ಇದೀಗ ಸಿಎಂ ಸಿದ್ದರಾಮಯ್ಯ ತಮ್ಮ ಪೋಸ್ಟ್ ಅನ್ನು ಡಿಲೀಟ್‌ ಮಾಡಿದ್ದಾರೆ. ಕನ್ನಡಿಗರಿಗೆ ಶೇ.100ರಷ್ಟು ಮೀಸಲಾತಿ ಕಲ್ಪಿಸಬೇಕು ಎಂಬ ಯೋಚನೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಟ್ವೀಟ್‌ ಡಿಲೀಟ್‌ ಮಾಡಿದ್ದಾರೆ. 

Tags:    

Similar News