ದಲಿತರು ಬಿಜೆಪಿಗೆ ಬೆಂಬಲ ನೀಡಿಲ್ಲವೇ?: ಹೈಕಮಾಂಡ್‌ ವಿರುದ್ಧ ಸಂಸದ ಜಿಗಜಿಣಗಿ ಅಸಮಾಧಾನ

Update: 2024-07-09 07:43 GMT

ದಲಿತನಾಗಿ ಬಿಜೆಪಿಯಿಂದ ಏಳು ಚುನಾವಣೆಗಳಲ್ಲಿ ಗೆದ್ದು ಬಂದಿರುವುದು ಇಡೀ ದಕ್ಷಿಣ ಭಾರತದಲ್ಲಿ ನಾನೊಬ್ಬನೇ. ಎಲ್ಲ ಮೇಲ್ಜಾತಿಯವರು ಸಚಿವರಾಗಿದ್ದಾರೆ. ದಲಿತರೇನು ಬಿಜೆಪಿಗೆ ಬೆಂಬಲ ನೀಡಿಲ್ಲವೇ? ಈ ವಿಚಾರದಲ್ಲಿ ನನಗೆ ಮನಸ್ಸಿಗೆ ತುಂಬಾ ನೋವಿದೆʼʼ ಎಂದು ಹೈಕಮಾಂಡ್ ವಿರುದ್ಧ ವಿಜಯಪುರ ಸಂಸದ ರಮೇಶ ಜಿಗಜಿಣಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ವಿಜಯಪುರ ನಗರದಲ್ಲಿ ಸಂಸದರ‌ ಕಚೇರಿ‌ ಉದ್ಘಾಟನೆ ಹಾಗೂ ಪೂಜೆ ನೆರವೇರಿಸಿ ಮಾತನಾಡಿದ ಅವರು, ನನಗೆ ಮಂತ್ರಿಸ್ಥಾನ ನೀಡುವ ಅವಶ್ಯಕತೆ ಇಲ್ಲ ಎಂದು ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದರು. ನನಗೆ ಅವಶ್ಯಕತೆ ಇರುವುದು ಜನರದ್ದು‌. ನಾನು ದೆಹಲಿಯಿಂದ ವಿಜಯಪುರಕ್ಕೆ ಮರಳಿದಾಗ ಜನ ನನಗೆ ‘ಥೂ’ ಎಂದು ಬೈದಿದ್ದರು ಎಂದರು.

ʻʻಬಿಜೆಪಿ ಸೇರಬೇಡಿ ಎಂದು ಬಹಳ ಜನ ದಲಿತರು ವಾದ ಮಾಡಿದ್ದರು. ಆದರೂ ಬೆಂಬಲ ಕೊಟ್ಟಿದ್ದಾರೆ. ದಲಿತನಾಗಿ ದಕ್ಷಿಣ ಭಾರತದಲ್ಲಿ ಬಿಜೆಪಿಯಿಂದ ಏಳು ಚುನಾವಣೆಗಳಲ್ಲಿ ಗೆದ್ದು ಬಂದ ಏಕೈಕ ಸಂಸದನಾದರೂ ಸಚಿವ ಸ್ಥಾನಕ್ಕೆ ಪರಿಗಣಿಸಿಲ್ಲʼʼ ಅಸಮಾಧಾನ ಹೊರಹಾಕಿದರು.

"ನಾವು ನಿಮಗೆ ಮೊದಲೇ ಹೇಳಿದ್ದೆವು, ಈ ಪಕ್ಷ ದಲಿತರ ವಿರೋಧಿ. ಬಿಜೆಪಿ ಪಕ್ಷ ಸೇರಬೇಡಿʼ ಎಂದು ಬಹಳ ಜನ ದಲಿತರು ವಾದ ಮಾಡಿದ್ದರು. ನನಗೋಸ್ಕರ ಅಲ್ಲದಿದ್ದರೂ ಜನರ ಒತ್ತಡವಂತೂ ಇದೆ. ಇದು ಎಂತಹ ನ್ಯಾಯ? ನೀವೇ ಹೇಳಿ. ಎಲ್ಲ ಮೇಲ್ವರ್ಗದ ಜಾತಿಯವರು ಸಚಿವರಾಗಿದ್ದಾರೆ. ದಲಿತರೇನು ಬಿಜೆಪಿಗೆ ಬೆಂಬಲ ನೀಡಿಲ್ಲವೇ?" ಎಂದು ಜಿಗಜಿಣಗಿ‌ ಪ್ರಶ್ನಿಸಿದರು.

ʻʻಬಿಜೆಪಿ ನಾಯಕರ ಒಳ ರಾಜಕೀಯದಿಂದಾಗಿ ನನಗೆ ಸಚಿವ ಸ್ಥಾನ ತಪ್ಪಿತು. ನಾನು ಸಚಿವನಾಗಬೇಕು ಎಂಬುದು ಉತ್ತರ ಕರ್ನಾಟಕದ ಜನರ ಮತ್ತು ನಮ್ಮ ಸಮಾಜದ ಜನರ ಬಯಕೆಯಾಗಿತ್ತು. ರಾಜ್ಯದ ನಾಯಕರು ಸಚಿವ ಸ್ಥಾನಕ್ಕೆ ನನ್ನ ಹೆಸರನ್ನು ಶಿಫಾರಸು ಮಾಡುತ್ತಾರೆ ಎಂಬ ನಂಬಿಕೆ ಇತ್ತು. ಅವರಿಗೆ ಆ ಜವಾಬ್ದಾರಿಯೂ ಇತ್ತು. ಆದರೆ ಯಾರೊಬ್ಬರೂ ನನ್ನ ಪರ ಮಾತನಾಡಲಿಲ್ಲ. ಈ ವಿಷಯದಲ್ಲಿ ರಾಜ್ಯ ನಾಯಕರು ತಪ್ಪು ಮಾಡಿದ್ದಾರೆʼʼ ಎಂದು ಅವರು ವಾರದ ಹಿಂದಷ್ಟೇ ಬಿಜೆಪಿಯ ಕೆಲವು ನಾಯಕರ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.

Tags:    

Similar News