ಪೊಲೀಸರಿಗೆ ಮಾರ್ಗಸೂಚಿ ಹೊರಡಿಸಿದ ಡಿಜಿಪಿ ; ಅನಗತ್ಯವಾಗಿ ವಾಹನ ತಡೆಯದಂತೆ ಖಡಕ್ ಸೂಚನೆ
ಸಂಚಾರಿ ಪೊಲೀಸರು ಸರಿಯಾದ ಸುರಕ್ಷತಾ ಕ್ರಮ ಕೈಗೊಳ್ಳದ ಕಾರಣ ಮಂಡ್ಯದಂತಹ ಅವಗಢಗಳು ಸಂಭವಿಸುತ್ತಿವೆ. ಹಾಗಾಗಿ ಎಲ್ಲ ಪೊಲೀಸರು ನಿಯಮಗಳನ್ನು ಚಾಚೂತಪ್ಪದೇ ಪಾಲಿಸಬೇಕು ಎಂದು ಡಿಜಿಪಿ ಸುತ್ತೋಲೆಯಲ್ಲಿ ಸೂಚಿಸಿದ್ದಾರೆ.;
ಮಂಡ್ಯದಲ್ಲಿ ಪೊಲೀಸರು ಅಡ್ಡಗಟ್ಟುವ ವೇಳೆ ದ್ವಿಚಕ್ರ ವಾಹನದಿಂದ ಬಿದ್ದು ಬಾಲಕಿ ಮೃತಪಟ್ಟ ಘಟನೆಯ ಬಳಿಕ ಪೊಲೀಸ್ ಇಲಾಖೆ ಎಚ್ಚೆತ್ತುಕೊಂಡಿದೆ. ಹೆಲ್ಮೆಟ್ ಹಾಗೂ ದಾಖಲಾತಿ ಪರಿಶೀಲನೆ ವೇಳೆ ಪೊಲೀಸರು ಅನುಸರಿಸಬೇಕಾದ ನಿಯಮಗಳನ್ನು ಇಲಾಖೆ ಬಿಡುಗಡೆ ಮಾಡಿದೆ.
ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರು ಈ ಸಂಬಂಧ ಸುತ್ತೋಲೆ ಹೊರಡಿಸಿದ್ದು, ಕಡ್ಡಾಯವಾಗಿ ನಿಯಮ ಪಾಲನೆ ಮಾಡುವಂತೆ ಸೂಚನೆ ನೀಡಿದ್ದಾರೆ. ಸಂಚಾರಿ ಪೊಲೀಸರು ಸರಿಯಾದ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಕಾರಣ ಮಂಡ್ಯದಂತಹ ಅವಗಢಗಳು ಸಂಭವಿಸುತ್ತಿವೆ. ಹಾಗಾಗಿ ಎಲ್ಲ ಪೊಲೀಸರು ನಿಯಮಗಳನ್ನು ಚಾಚೂತಪ್ಪದೇ ಪಾಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಸುತ್ತೋಲೆಯಲ್ಲಿರುವ ಸೂಚನೆ ಏನು?
ಪೊಲೀಸರು ದ್ವಿಚಕ್ರ ವಾಹನ ಸವಾರರ ದಾಖಲಾತಿ ಪರಿಶೀಲನೆ ನಡೆಸಲು ಕಾರಣವಿಲ್ಲದೇ ವಾಹನ ತಡೆಯುವಂತಿಲ್ಲ. ನಿಯಮ ಉಲ್ಲಂಘಿಸುವ ವಾಹನ ಸವಾರರನ್ನು ಮಾತ್ರ ನಿಲ್ಲಿಸಬೇಕು. ಮರೆಯಲ್ಲಿ ನಿಂತು ದಿಢೀರನೇ ಅಡ್ಡಬಂದು ವಾಹನ ತಡೆದು ನಿಲ್ಲಿಸುವಂತಿಲ್ಲ. ಬೈಕ್ ಹಿಂಬದಿ ಸವಾರನನ್ನು ಹಿಡಿದು ಎಳೆಯುವಂತಿಲ್ಲ. ವಾಹನಗಳ ಕೀ ತೆಗೆದುಕೊಳ್ಳುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ವೇಗವಾಗಿ ಬರುವ ವಾಹನ ಬೆನ್ನತ್ತುವಂತಿಲ್ಲ. ಬದಲಿಗೆ ವಾಹನದ ನೋಂದಣಿ ಸಂಖ್ಯೆ ಗುರುತಿಸಿಕೊಂಡು ನಿಯಂತ್ರಣ ಕೊಠಡಿಗೆ ಮಾಹಿತಿ ರವಾನಿಸಬೇಕು. ಹೆದ್ದಾರಿಗಳಲ್ಲಿ ಜಿಗ್ಜಾಗ್ ಬ್ಯಾರಿಕೇಡ್ ಹಾಕುವಂತಿಲ್ಲ. ಬ್ಯಾರಿಕೇಡ್ ಹಾಕಿ ವಾಹನಗಳನ್ನು ತಡೆಯಬಾರದು. ತಪಾಸಣೆ ವೇಳೆ ರಿಫ್ಲೆಕ್ಟಿವ್ ಜಾಕೆಟ್ ಧರಿಸಿರಬೇಕು ಎಂದು ಆದೇಶಿಸಲಾಗಿದೆ.
ಸಂಚಾರಿ ಪೊಲೀಸರು ಕಡ್ಡಾಯವಾಗಿ LED ಬಟನ್ ಉಪಯೋಗಿಸಬೇಕು. ತಪಾಸಣೆ ವೇಳೆ ಕಡ್ಡಾಯವಾಗಿ ಬಾಡಿ ವೋರ್ನ್ ಕ್ಯಾಮೆರಾ ಧರಿಸಿರಬೇಕು. ಐಟಿಎಂಎಸ್ ಮೂಲಕ ಪ್ರಕರಣ ದಾಖಲಿಸಬೇಕು. ಅನಾಹುತಗಳನ್ನು ತಪ್ಪಿಸಲು ಸಂಚಾರ ನಿಯಮ ಪಾಲನೆಗೆ ಜಾಗೃತಿ ಕಾರ್ಯಕ್ರಮ ಕೈಗೊಳ್ಳಬೇಕು ಎಂದು ಡಿಜಿಪಿ ಡಾ.ಎಂ.ಎ.ಸಲೀಂ ಸೂಚಿಸಿದ್ದಾರೆ.
ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳಲ್ಲಿ ವೇಗವಾಗಿ ಚಲಿಸುವ ವಾಹನಗಳನ್ನು ತಡೆಯುವಂತಿಲ್ಲ. ಅಂತವರ ವಿರುದ್ಧ ಎಫ್ಟಿವಿಆರ್ ದಾಖಲಿಸಲು ತಂತ್ರಜ್ಞಾನ ಆಧರಿತ ನಿಯಮ ಅನುಸರಿಸಬೇಕು. ವಾಹನಗಳ ವೇಗ ಇಳಿಸಲು 150 ಮೀಟರ್ ಮೊದಲೇ ರಿಫ್ಲೆಕ್ಟಿವ್ ಅಳವಡಿಸುವುದು ಎಂದು ಪೊಲೀಸ್ ಮಹಾನಿರ್ದೇಶಕರು ತಿಳಿಸಿದ್ದಾರೆ.