ಗುತ್ತಿಗೆ ಅವಧಿ ಮುಗಿದರೂ ಪೂರೈಕೆಯಾಗುತ್ತಿಲ್ಲ ರಕ್ಷಣಾ ಸಾಮಗ್ರಿ; ರಕ್ಷಣಾ ಸಚಿವರ ಎದುರೇ ಏರ್‌ ಚೀಫ್‌ ಮಾರ್ಷಲ್‌ ಅಸಮಾಧಾನ

ರಕ್ಷಣಾ ಸಾಮಗ್ರಿಗಳ ಖರೀದಿಯ ಒಪ್ಪಂದಕ್ಕೆ ಸಹಿ ಹಾಕಿದ ನಂತರವೂ ಉಪಕರಣಗಳ ಪೂರೈಕೆ ಆಗದಿರುವುದು ಬೇಸರ ಮೂಡಿಸಿದೆ. ಇದರಿಂದ ಸಾಮಗ್ರಿ ಖರೀದಿ ಒಪ್ಪಂದ ಈಡೇರುತ್ತಿಲ್ಲ ಎಂದು ಏರ್‌ ಚೀಫ್‌ ಮಾರ್ಷಲ್‌ ಅಮರ್‌ ಪ್ರೀತ್‌ ಸಿಂಗ್‌ ಹೇಳಿರುವುದು ಸಂಚಲನ ಮೂಡಿಸಿದೆ.;

Update: 2025-05-29 13:34 GMT

ಐದನೇ ತಲೆಮಾರಿನ ಸ್ಟೆಲ್ತ್ ಫೈಟರ್ ಜೆಟ್ ವಿಮಾನ ತಯಾರಿಕೆಗೆ ಅನುಮೋದನೆ ನೀಡಿದರೂ ರಕ್ಷಣಾ ಸಾಮಗ್ರಿ ಖರೀದಿ ಯೋಜನೆಯಲ್ಲಿ ಆಗುತ್ತಿರುವ ವಿಳಂಬದ ಬಗ್ಗೆ ಭಾರತೀಯ ವಾಯುಪಡೆಯ ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅವರು ರಕ್ಷಣಾ ಸಚಿವರ ಎದುರಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನವದೆಹಲಿಯಲ್ಲಿ ನಡೆದ ಸಿಐಐ ವಾರ್ಷಿಕ ವ್ಯವಹಾರ ಶೃಂಗಸಭೆಯಲ್ಲಿ ಮಾತನಾಡಿದ ಅವರು, ರಕ್ಷಣಾ ಸಾಮಗ್ರಿಗಳ ಖರೀದಿ ಒಪ್ಪಂದಕ್ಕೆ ಸಹಿ ಹಾಕಿದರೂ, ಅವಧಿ ಮುಗಿದರೂ ಉಪಕರಣ ಪೂರೈಕೆ ಆಗದಿರುವುದು ಬೇಸರ ಮೂಡಿಸಿದೆ. ಇದರಿಂದ ರಕ್ಷಣಾ ಅಭಿವೃದ್ಧಿಯ ಆಶಯ ಈಡೇರುತ್ತಿಲ್ಲ. ವಿಪರ್ಯಾಸವೆಂದರೆ ಇದುವರೆಗೂ ಒಂದೇ ಒಂದು ಯೋಜನೆ ಕೂಡ ಸಮಯಕ್ಕೆ ಸರಿಯಾಗಿ ಪೂರ್ಣಗೊಂಡಿಲ್ಲ ಎಂದು ಹೇಳಿರುವುದು ಕೇಂದ್ರ ಸರ್ಕಾರಕ್ಕೆ ಇರಿಸುಮುರಿಸು ತಂದಿದೆ.

ಪ್ರಮುಖ ರಕ್ಷಣಾ ಯೋಜನೆಗಳ ಒಪ್ಪಂದಕ್ಕೆ ಸಹಿ ಹಾಕುವ ವೇಳೆ ನಿಗದಿಪಡಿಸುವ ಕಾಲಾವಕಾಶವನ್ನು ಯಾರೂ ಕೂಡ ಪೂರೈಸುತ್ತಿಲ್ಲ. ಹೀಗಿರುವಾಗ ಸಾಧಿಸಲಾಗದ ಕೆಲ ವಿಷಯಗಳ ಬಗ್ಗೆ ನಾವೇಕೆ ಭರವಸೆ ನೀಡಬೇಕು ಎಂದು ಪ್ರಶ್ನಿಸಿದ್ದಾರೆ.

ಎಲ್‌ಸಿಎ ಯೋಜನೆ ವಿಳಂಬ

ಪ್ರಮುಖ ರಕ್ಷಣಾ ಯೋಜನೆಗಳಲ್ಲಿ ಒಂದಾದ ಲಘು ಯುದ್ಧ ವಿಮಾನ (ಎಲ್‌ಸಿಎ) ಕಾರ್ಯಕ್ರಮ ತುಂಬಾ ವಿಳಂಬವಾಗಿದೆ. ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನೊಂದಿಗೆ 48,000 ಕೋಟಿ ರೂ. ಒಪ್ಪಂದದ ಮಾಡಿಕೊಂಡಿರುವ ತೇಜಸ್ ಎಂಕೆ 1ಎ ಯುದ್ಧ ಜೆಟ್‌ನ ಪೂರೈಕೆ ಇನ್ನೂ ಸಾಧ್ಯವಾಗಿಲ್ಲ.

ಲಘು ಯುದ್ಧ ವಿಮಾನ ಪೂರೈಕೆಗೆ 2021 ಫೆಬ್ರುವರಿ ತಿಂಗಳಲ್ಲಿ ಸಹಿ ಹಾಕಲಾಗಿತ್ತು. 2024 ಮಾರ್ಚ್ ತಿಂಗಳಲ್ಲಿ ವಿಮಾನ ಪೂರೈಕೆಗೆ ಒಪ್ಪಂದವಾಗಿತ್ತು. ಆದರೆ, ವಾಯುಪಡೆಯಿಂದ ಕೇಳಲಾದ 83 ಯುದ್ಧ ವಿಮಾನಗಳಲ್ಲಿ ಈವರೆಗೂ ಒಂದೂ ತಲುಪಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ತೇಜಸ್ ಎಂಕೆ 2 ರ ಮೂಲಮಾದರಿ ಇನ್ನೂ ಬಿಡುಗಡೆಯಾಗಿಲ್ಲ. ಪ್ರಸ್ತಾವಿತ ಸ್ಟೆಲ್ತ್ ಅಡ್ವಾನ್ಸ್ಡ್ ಮಲ್ಟಿರೋಲ್ ಕಾಂಬ್ಯಾಟ್ ಏರ್‌ಕ್ರಾಫ್ಟ್‌ನ (ಎಎಂಸಿಎ) ಯಾವುದೇ ಮೂಲಮಾದರಿ ಕೂಡ ಬೆಳಕಿಗೆ ಬಂದಿಲ್ಲ ಎಂದು ಹೇಳಿದ್ದಾರೆ.

ಪೂರೈಕೆಗೆ ಬದ್ಧತೆ ಬೇಕು

ದೇಶದಲ್ಲಿ ಉತ್ಪಾದನೆಯ ಚರ್ಚೆಗಳಿಗೆ ಮಾತ್ರ ಸೀಮಿತವಾಗಬಾರದು. ವಿನ್ಯಾಸದ ಬಗ್ಗೆಯೂ ಯೋಚಿಸಬೇಕಾಗಿದೆ ಎಂದು ಏರ್ ಚೀಫ್ ಮಾರ್ಷಲ್ ಅಮರ್ ಪ್ರೀತ್ ಸಿಂಗ್ ಅಭಿಪ್ರಾಯಪಟ್ಟಿದ್ದಾರೆ.

ದೆಹಲಿಯಲ್ಲಿ ನಡೆದ ಸಿಐಐ ವಾರ್ಷಿಕ ವ್ಯವಹಾರ ಶೃಂಗಸಭೆಯಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಮ್ಮುಖದಲ್ಲೇ ಅಸಮಾಧಾನ ವ್ಯಕ್ತಪಡಿಸಿದ್ದು ಅಚ್ಚರಿ ಮೂಡಿಸಿದೆ.

ರಕ್ಷಣಾ ಸಾಮಗ್ರಿ ಖರೀದಿಯಲ್ಲಿ ನಾವು ಮುಕ್ತವಾಗಿರಬೇಕು. ನಾವು ಏನನ್ನಾದರೂ ಮಾಡಲು ಬದ್ಧತೆ ತೋರಿದರೆ ಅದನ್ನು ತಲುಪಿಸಲು ಕಾರ್ಯ ಪ್ರವೃತ್ತರಾಗಬೇಕು. ವಾಯುಪಡೆಯು ಭಾರತದಲ್ಲೇ ಉತ್ಪಾದಿಸಲು ತನ್ನ ಕೈಲಾದಷ್ಟು ಪ್ರಯತ್ನಿಸುತ್ತಿದೆ ಎಂದು ಹೇಳಿದ್ದಾರೆ .

ಆಪರೇಷನ್ ಸಿಂಧೂರ್ ಶ್ಲಾಘನೆ

ಭಾರತೀಯ ಸೇನೆಯು ʼಭವಿಷ್ಯದ ಸವಾಲುಗಳಿಗೆ ಸಿದ್ಧವಿರಬೇಕು. ಮುಂದಿನ 10 ವರ್ಷಗಳಲ್ಲಿ ರಕ್ಷಣಾ ಉದ್ಯಮದಿಂದಲೇ ಉತ್ಪಾದನೆ ಹೆಚ್ಚಲಿದೆ. ಆದರೆ, ತಕ್ಷಣದ ಅನಿವಾರ್ಯತೆಗಳನ್ನು ನಾವು ಪೂರೈಸಿಕೊಳ್ಳಬೇಕಾಗಿದೆ ಎಂದು ಅಮರ್ ಪ್ರೀತ್ ಸಿಂಗ್ ಹೇಳಿದ್ದಾರೆ.

ಸಶಸ್ತ್ರ ಪಡೆಗಳ ಸಬಲೀಕರಣದ ಮೂಲಕ ಯುದ್ಧ ಗೆಲ್ಲಬೇಕಾಗುತ್ತದೆ. ಆಪರೇಷನ್ ಸಿಂಧೂರ್ ಕಾರ್ಯಾಚರಣೆಯು "ರಾಷ್ಟ್ರೀಯ ವಿಜಯ"ದ ಸಂಕೇತ ಎಂದು ಶ್ಲಾಘಿಸಿದ ಅವರು, ಸಶಸ್ತ್ರ ಪಡೆಗಳು ವೃತ್ತಿಪರತೆಯಿಂದ ಕಾರ್ಯಾಚರಣೆ ಪೂರ್ಣಗೊಳಿಸಿದ್ದು ಖುಷಿ ತಂದಿದೆ ಎಂದು ತಿಳಿಸಿದ್ದಾರೆ.

Tags:    

Similar News