ದಸರಾ ಉದ್ಘಾಟನೆ ವಿವಾದ | ಟೀಕಾಕಾರರಿಗೆ ಬಾನು ಮುಷ್ತಾಕ್ ಪತ್ರ ; ಡಿಯರ್ ಉರಿಯಪ್ಪ/ ಉರಿಯಮ್ಮನವರೇ...
“ದ್ವೇಷಕ್ಕೆ ಪ್ರೀತಿಯೇ ಉತ್ತರ, ನಿಂದನೆಗೆ ಮೌನದಲ್ಲಿ ಹೊಳೆಯುವ ಸತ್ಯವೇ ಉತ್ತರ,” ಎಂದು ಬಾನು ಮುಷ್ತಾಕ್ ಅವರು ಟೀಕಾಕಾರರಿಗೆ ಟಾಂಗ್ ನೀಡಿದ್ದಾರೆ.
ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳ ತೀವ್ರ ವಿರೋಧದ ನಡುವೆಯೂ ಮೈಸೂರು ದಸರಾ ಉದ್ಘಾಟಿಸಿದ್ದ ಬೂಕರ್ ಪ್ರಶಸ್ತಿ ವಿಜೇತ ಲೇಖಕಿ ಬಾನು ಮುಷ್ತಾಕ್ ಅವರು ಟೀಕಾಕಾರರಿಗೆ ವಿಶಿಷ್ಟ ಶೈಲಿಯಲ್ಲಿ ಧನ್ಯವಾದ ಅರ್ಪಿಸುವ ಮೂಲಕವೇ ತಿರುಗೇಟು ನೀಡಿದ್ದಾರೆ.
ಸೆ.22 ರಂದು ಹಿಂದೂ ಸಂಪ್ರದಾಯದಂತೆ ಹೂವು ಮುಡಿದು, ಆರತಿ ಪಡೆದು ದಸರಾ ಉದ್ಘಾಟಿಸಿದ್ದ ಬಾನು ಮುಷ್ತಾಕ್ ಅವರು ಅಂದೇ ತಮ್ಮ ಭಾಷಣದಲ್ಲಿ ವಿರೋಧಿಗಳ ಬಾಯಿ ಮುಚ್ಚಿಸಿದ್ದರು. ಈಗ ಮುಂದುವರಿದು ಟೀಕಾಕಾರರಿಗೆ ಪತ್ರದ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.
ಡಿಯರ್ ಉರಿಯಮ್ಮ/ಉರಿಯಪ್ಪನವರೇ..
ಡಿಯರ್ ಉರಿಯಮ್ಮ/ಉರಿಯಪ್ಪನವರೇ, ನಿಮ್ಮ ಮಾತುಗಳ ಬಿರುಗಾಳಿಯನ್ನು ನಾನು ಓದುತ್ತಿದ್ದೇನೆ. ನೀವು ಬರೆದ ಪದಗಳಲ್ಲಿ ನೋವು ಇದೆ, ಅಸಹನೆ ಇದೆ, ಕೆಲವೊಮ್ಮೆ ಕೋಪವೂ ಇದೆ. ಆದರೆ, ನನಗೆ ಅವುಗಳನ್ನು ಎದುರಿಸಲು ಯಾವುದೇ ರಕ್ಷಣೆಯ ಅವಶ್ಯಕತೆಯಿಲ್ಲ. ಏಕೆಂದರೆ ನಾನು ಬರವಣಿಗೆಗೆ ಕೈ ಹಾಕಿದ ದಿನದಿಂದಲೂ ತಿಳಿದಿದ್ದೇನೆ. ಪದಗಳು ಪ್ರೀತಿಯನ್ನು ಕೂಡ ಹುಟ್ಟಿಸುತ್ತವೆ, ದ್ವೇಷವನ್ನೂ ಹುಟ್ಟಿಸುತ್ತವೆ. ಎರಡೂ ಸಹ ನನಗೆ ಬರಹಗಾರ್ತಿಯಾಗಿ ಒದಗಿ ಬಂದಿರುವ ಬದುಕಿನ ಭಾಗವೇ ಆಗಿದೆ. ಬೂಕರ್ ಪ್ರಶಸ್ತಿ ನನಗೆ ವ್ಯಕ್ತಿಗತ ಜಯವಲ್ಲ, ಅದು ಕನ್ನಡ ಭಾಷೆಯ ಮಣ್ಣಿನ ಧ್ವನಿಗೆ ಬಂದ ಗೌರವ. ನನ್ನ ಜೀವನದ ಅನುಭವಗಳ ಸಾರ.
ನಿಮ್ಮ ಅಸಹನೆ ನನಗೆ ಅಸಹ್ಯವಲ್ಲ. ಅದನ್ನು ನಾನು ಮತ್ತೊಂದು ಧ್ವನಿಯಾಗಿ, ಮತ್ತೊಂದು ಪ್ರಶ್ನೆಯಾಗಿ ಸ್ವೀಕರಿಸುತ್ತೇನೆ. ಏಕೆಂದರೆ ಸಾಹಿತ್ಯದ ನಿಜವಾದ ಶಕ್ತಿ ಏನೆಂದರೆ ಅದು ಒಪ್ಪಿಗೆಯನ್ನೂ ಹುಟ್ಟಿಸುತ್ತದೆ, ವಿರೋಧವನ್ನೂ ಹುಟ್ಟಿಸುತ್ತದೆ. ಆದರೆ, ಕೊನೆಯಲ್ಲಿ ಅದು ಚಿಂತನೆಗೆ ದಾರಿ ಮಾಡಿಕೊಡುತ್ತದೆ. ನೀವು ನನ್ನ ಕುರಿತು ಕಟುವಾಗಿ ಬರೆದಾಗ, ನಾನು ಕೇವಲ ಹೀಗೆ ಯೋಚಿಸುತ್ತೇನೆ: “ನನ್ನ ಪದಗಳು ನಿಮಗೆ ತಲುಪಿವೆ. ನೀವು ಅವುಗಳನ್ನು ನಿರ್ಲಕ್ಷಿಸಿಲ್ಲ. ಅವುಗಳಲ್ಲಿ ನಿಮಗೆ ಏನೋ ತಟ್ಟಿದೆಯೇ ಅದೇ ನನಗೆ ಸಾಕು.” ಎಂದು ಬರೆದಿದ್ದಾರೆ.
ಮೌನದಲ್ಲಿ ಹೊಳೆಯುವ ಸತ್ಯವೇ ಉತ್ತರ
ದ್ವೇಷಕ್ಕೆ ಪ್ರೀತಿಯೇ ಉತ್ತರ. ಅಸಹನೆಗೆ ಸಂವಾದವೇ ಉತ್ತರ. ನಿಂದನೆಗೆ ಮೌನದಲ್ಲಿ ಹೊಳೆಯುವ ಸತ್ಯವೇ ಉತ್ತರ. ನಿಮ್ಮ ಪ್ರತಿಯೊಂದು ಕಮೆಂಟ್ಗೂ ನಾನು ಧನ್ಯವಾದ ಹೇಳುತ್ತೇನೆ, ಏಕೆಂದರೆ ಅವು ನನ್ನ ಹೆಜ್ಜೆಗಳನ್ನು ಮತ್ತಷ್ಟು ಬಲಪಡಿಸಿವೆ. ನಿಮ್ಮಿಂದ ನನ್ನನ್ನು ತಡೆಯಲು ಸಾಧ್ಯವಿಲ್ಲ, ಏಕೆಂದರೆ ನಾನು ಕೇವಲ ಬಾನು ಎಂಬ ಹೆಸರಿನ ವ್ಯಕ್ತಿಯಲ್ಲ. ನಾನು ಕೋಟ್ಯಾಂತರ ಕನ್ನಡಿಗರ ಹೃದಯಗಳ ಪ್ರತಿಧ್ವನಿ. ಅದರಲ್ಲಿ ನೀವು ನಿಮ್ಮ ವೈಯಕ್ತಿಕ ಹಿತಾಸಕ್ತಿಗಳ ಕಾರಣಗಳಿಂದ ಸೇರ್ಪಡೆ ಆಗುವುದಿಲ್ಲವೆಂದರೆ ನನಗೆ ಬೇಸರವಿಲ್ಲ.
ನನ್ನತ್ತ ಬೀಳುವ ನಿಮ್ಮ ಪದಗಳ ಬಾಣಗಳು,ಕೆಲವು ಕೆಂಪಾಗಿ ಹೊತ್ತಿ ಉರಿಯುತ್ತವೆ. ಕೆಲವು ಕಲ್ಲಿನಂತೆ ಹೃದಯಕ್ಕೆ ತಾಗುತ್ತವೆ. ಆದರೆ ನಾನು ಹೆದರಲ್ಲ, ಕುಗ್ಗಲ್ಲ. ಏಕೆಂದರೆ ನನಗೆ ತಿಳಿದಿದೆ. ಬರವಣಿಗೆಯ ದಾರಿಯಲ್ಲಿ ಪ್ರೀತಿ ಮಾತ್ರವಲ್ಲ, ದ್ವೇಷವೂ ಹೂವಾಗಿಯೇ ಅರಳುತ್ತದೆ. ಬೂಕರ್ ಪ್ರಶಸ್ತಿ ನನಗೆ ಬಂದದ್ದು, ನನ್ನ ವೈಯುಕ್ತಿಕ ಸ್ವಾರ್ಥವಲ್ಲ, ಅದು ಕನ್ನಡದ ಮಣ್ಣಿನ ಮೆಲುಕು. ನನ್ನ ಜನರ ನೋವು, ಕನಸು, ಹೋರಾಟ. ಈ ಎಲ್ಲವೂ ಒಟ್ಟಾಗಿ ಹೊತ್ತಿರುವ ದೀಪ ಎಂದು ಬಣ್ಣಿಸಿದ್ದಾರೆ.
ಹೀನಾಯ ಮಾತು ಒಂದು ಬಗೆಯ ಮಾನಸಿಕ ಹಲ್ಲೆ
ಈ ಶಬ್ದಗಳು ನೋವು ಮಾಡುವುದು ಸಹಜ. ಯಾವುದೇ ಸೃಜನಶೀಲ ಮನಸ್ಸಿಗೆ, ಅದರ ಸಾಧನೆಯನ್ನು ಕುರಿತು ಹೀನಾಯವಾಗಿ ಮಾತನಾಡುವುದು ಒಂದು ಬಗೆಯ ಮಾನಸಿಕ ಹಲ್ಲೆ. ಆದರೆ ನಾನು ನಂಬುವೆನು. ಪ್ರತಿ ವಾಗ್ಬಾಣವು ತನ್ನ ಗಮ್ಯಸ್ಥಾನವನ್ನು ಹುಡುಕಿಕೊಂಡೇ ಬೀಳುತ್ತದೆ. ಕೆಲವು ಹೃದಯವನ್ನು ಭೇದಿಸಬಹುದು, ಕೆಲವು ಕಲ್ಲಿನ ಮೇಲೆ ಬಿದ್ದು ನಾಶವಾಗಬಹುದು. ಕೆಲವು ಸರಾಗವಾಗಿ ನೆಲಸೇರಿ ಮರೆಯಾಗಿಬಿಡಬಹುದು.
ಗೆಲುವು ಮತ್ತು ಅದರ ಛಾಪು, ಒಂದು ಸಾಹಿತ್ಯಿಕ ಪ್ರಶಸ್ತಿ/ ಬಹುಮಾನ ಎಂಬುದು ಓದುಗರ ಹೃದಯದೊಳಗೆ ಪ್ರವೇಶಿಸಿದ ಒಂದು ಗುರುತು ಮಾತ್ರ. ಇದು ಅಂತಿಮ ಗಮ್ಯಸ್ಥಾನವಲ್ಲ, ಬದಲಾಗಿ ಒಂದು ದೀರ್ಘ ಯಾತ್ರೆಯಲ್ಲಿ ಸಿಗುವ ಒಂದು ಸುಂದರವಾದ ವಿರಾಮ ಚಿಹ್ನೆ. ಇದರ ಬಗ್ಗೆ ಹರಿಸುವ ಹೇಟ್ ಸ್ಪೀಚ್ ಅಥವಾ ದುಷ್ಕಾಮೆಂಟ್ಗಳು ಆ ಯಾತ್ರೆಯನ್ನು ನಿಲ್ಲಿಸಲಾರವು. ಅವು ಕೇವಲ ತಡೆ ಗೋಡೆಗಳು, ಸಾಹಿತ್ಯಿಕ ಜಗತ್ತಿನ ಹೊರಗಿನ ಒಂದು ಸಮಾಜಶಾಸ್ತ್ರೀಯ ವಾಸ್ತವಿಕತೆ ಮಾತ್ರ ಎಂದು ಬರೆದಿದ್ದಾರೆ.
ಟೀಕೆಗಳಿಗೆ ಧನ್ಯವಾದ ಹೇಳಿದ ಬಾನು
ಅಭಿನಂದನೆಗಳಿಗೆ ಧನ್ಯವಾದ, ಟೀಕೆಗಳಿಗೆ ಧನ್ಯವಾದ. ಬುಕರ್ ಪಡೆದ ಅಪರಾಧಕ್ಕಾಗಿ ಕನ್ನಡದೊಡನೆ ಪ್ರಪಂಚ ಪರ್ಯಟನೆ ಕೈಗೊಂಡು ಜೊತೆ ಜೊತೆಯಲ್ಲಿ ನಡೆಯುತ್ತಿರುವ ಅಪರಾಧಕ್ಕಾಗಿ ಧನ್ಯವಾದ. ಅಪ್ರಾಮಾಣಿಕ ಆರೋಪ ಪಟ್ಟಿಯನ್ನು ಹೊರಿಸುವ ವಿಫಲ ಪ್ರಯತ್ನದ ಮೂಲಕ ಇತಿಹಾಸದಲ್ಲಿ ದಾಖಲಾದ ಮತ್ತು ದಾಖಲಾಗುತ್ತಿರುವ ಎಲ್ಲರಿಗೂ ಧನ್ಯವಾದ. ಎಲ್ಲವೂ ನನ್ನ ಪಯಣದ ಭಾಗ ಎಂದು ಬರೆದುಕೊಂಡಿದ್ದಾರೆ.