Bangalore Stampede: ಸ್ಟೇಡಿಯಂ ಸುತ್ತ ಜನಸಾಗರಕ್ಕೆ ಕಾರಣವಾದ ʼಫ್ರೀ ಪಾಸ್‌ʼ ಸಂದೇಶ; ಕಾಲ್ತುಳಿತಕ್ಕೆ ಅದೇ ಕಾರಣ?

ಆರ್‌ಸಿಬಿ ಅಭಿಮಾನಿಗಳ ವಿಜಯೋತ್ಸವಕ್ಕೆ ಕೆಎಸ್‌ಸಿಎ ವತಿಯಿಂದ ಉಚಿತ ಪ್ರವೇಶ ಘೋಷಣೆ ಮಾಡಿತು. ಬಳಿಕ ತನ್ನ ತೀರ್ಮಾನ ವಾಪಸ್‌ ತೆಗೆದುಕೊಂಡಿದ್ದು ಗೊಂದಲಕ್ಕೆ ಕಾರಣವಾಯಿತು.;

Update: 2025-06-05 11:33 GMT

ಐಪಿಎಲ್‌ ಪಂದ್ಯದಲ್ಲಿ ಚೊಚ್ಚಲ ಕಪ್‌ ಮುಡಿಗೇರಿಸಿಕೊಂಡ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ವಿಜಯೋತ್ಸವಕ್ಕೆ ಉಚಿತ ಪ್ರವೇಶ ಎಂಬ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು ನಿರೀಕ್ಷೆಗಿಂತಲೂ ಅಧಿಕ ಸಂಖ್ಯೆಯಲ್ಲಿ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜಮಾಯಿಸಿದ ಕಾರಣ ದುರಂತ ನಡೆಯಿತು ಎಂಬ ಚರ್ಚೆಗಳು ಪ್ರಾರಂಭವಾಗಿದೆ.

೧೮ ವರ್ಷಗಳ ಬಳಿಕ ಆರ್‌ಸಿಬಿ ಕಪ್‌ ತನ್ನದಾಗಿಸಿಕೊಂಡಿತು. ಇದರ ಸಂಭ್ರಮ ಆಚರಣೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಕಾಡೆಮಿ (ಕೆಎಸ್‌ಸಿಎ) ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಜಯೋತ್ಸವ ಆಯೋಜನೆ ಮಾಡಿತು. ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಉಚಿತ ಪ್ರವೇಶ ನೀಡಲು ಕೆಎಸ್‌ಸಿಎ ತಿಳಿಸಿತ್ತು. ಇದು ಸಾಮಾಜಿಕ ಜಾಲತಾಣದಲ್ಲಿ ಸಾಕಾಷ್ಟು ವೈರಲ್‌ ಆಯಿತು. ಇದನ್ನು ಕಂಡ ಅಭಿಮಾನಿಗಳು ಕ್ರೀಡಾಂಗಣದತ್ತ ಧಾವಿಸಿದರು. 

ಸಾಗರೋಪಾದಿಯಲ್ಲಿ ಕ್ರೀಡಾಂಗಣದತ್ತ ಆಗಮಿಸಿದ ಆರ್‌ಸಿಬಿ ಅಭಿಮಾನಿಗಳ ಸಂಖ್ಯೆ ಹೆಚ್ಚಳವಾಗುತ್ತಿದ್ದಂತೆ ಟಿಕೆಟ್‌ ಮತ್ತು ಪಾಸ್‌ ನೀಡುವ ವ್ಯವಸ್ಥೆಯನ್ನು ಕೈಗೊಂಡಿತು. ಉಚಿತ ಪ್ರವೇಶ ಎಂದು ಆಗಮಿಸಿದ ಅಭಿಮಾನಿಗಳಿಗೆ ಟಿಕೆಟ್‌ ಎನ್ನುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿದರು. ಕ್ರೀಡಾಂಗಣಕ್ಕೆ ಅಧಿಕೃತ ಟಿಕೆಟ್​ ಹೊಂದಿದವರಿಗೆ ಮಾತ್ರ ಪ್ರವೇಶ ಎಂದು ತಿಳಿದಾಕ್ಷಣ, ಅನೇಕ ಮಂದಿ ಟಿಕೆಟ್​ ಇಲ್ಲದೆ, ಟಿಕೆಟ್​ ಇರುವವರೊಂದಿಗೆ ನುಗ್ಗಲು ಪ್ರಯತ್ನಿಸಿದ್ದಾರೆ. ಈ ವೇಳೆ ಜನ ದಟ್ಟಣೆ ಉಂಟಾಗಿ ಕೆಲವರು ಕೆಳಗೆ ಬಿದ್ದಿದ್ದಾರೆ. ಸ್ಟೇಡಿಯಂ ಗೇಟ್​ ಅನ್ನು ಹತ್ತಿ ಒಳನುಗ್ಗಲು ಪ್ರಯತ್ನಿಸಿದಾಗ ಕಾಲ್ತುಳಿತ ಸಂಭವಿಸಿ ದುರಂತ ನಡೆದಿದೆ ಎಂದು ಹೇಳಲಾಗಿದೆ. 

ಆರ್‌ಸಿಬಿ ವಿಜಯೋತ್ಸವವನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಯೋಜನೆ ಮಾಡುತ್ತಿರುವ ಮುನ್ಸೂಚನೆಯನ್ನು ಸ್ವತಃ ಆಟಗಾರ ವಿರಾಟ್ ಕೊಹ್ಲಿ ಮಾಹಿತಿ ನೀಡಿದ್ದರು. ಆರ್‌ಸಿಬಿಗಾಗಿ ಹೋರಾಡಿದ ಡಿವಿಲಿಯರ್ಸ್, ಕ್ರಿಸ್ ಗೇಲ್ ಮತ್ತು ನಾನು ಬಂಗಳೂರಿಗೆ ಬರುತ್ತೇವೆ. ಅಲ್ಲಿ ಅಭಿಮಾನಿಗಳಿಗೆ ಈ ಕಪ್ ಸಮರ್ಪಿಸಿ ವಿಜಯೋತ್ಸವ ಸಂಭ್ರಮಾಚರಣೆ ಮಾಡುತ್ತೇವೆ ಎಂದು ಹೇಳಿದ್ದರು. ಇದರ ಬೆನ್ನಲ್ಲಿಯೇ ಕೆಎಸ್‌ಸಿಎ ವತಿಯಿಂದ ಆರ್‌ಸಿಬಿ ಅಭಿಮಾನಿಗಳ ವಿಜಯೋತ್ಸವಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುವ ಅಭಿಮಾನಿಗಳಿಗೆ ಉಚಿತ ಪ್ರವೇಶ ನೀಡಲಾಗುವುದು ಎಂದು ಘೋಷಣೆ ಮಾಡಿತ್ತು.

ಬೆಂಗಳೂರಿಗೆ ಆಗಮಿಸಿದ ಬಳಿಕ ಕೆಲ ಹೊತ್ತು ವಿಶ್ರಾಂತಿ ಪಡೆದು ರಾಜ್ಯ ಸರ್ಕಾರ ವಿಧಾನಸೌಧದ ಮುಂಭಾಗದಲ್ಲಿ ಆಯೋಜನೆ ಮಾಡಿರುವ ಅಭಿನಂದನಾ ಸಮಾರಂಭದಲ್ಲಿ ಆರ್‌ಸಿಬಿ ತಂಡ ಭಾಗವಹಿಸಲಿದೆ. ಬಳಿಕ ವಿಕ್ಟರಿ ಪೆರೇಡ್​ ನಡೆಸುವುದಾಗಿಕೆಎಸ್‌ಸಿಎ ತಿಳಿಸಿತು. ಪೆರೇಡ್‌ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ನಡೆಯಲಿದೆ ಎಂಬ ಮಾಹಿತಿಯನ್ನು ನೀಡಿತು. 

ಈ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದ್ದಂತೆ ಆರ್‌ಸಿಬಿ ಅಭಿಮಾನಿಗಳು ಚಿನ್ನಸ್ವಾಮಿ ಕ್ರೀಡಾಂಗಣದತ್ತ ಮುನ್ನುಗ್ಗಿದರು. ನಿರೀಕ್ಷೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಂಗಣದತ್ತ ಆಗಮಿಸುತ್ತಿದ್ದ ಅಭಿಮಾನಿಗಳ ಕಂಡ ಕೆಎಸ್‌ಸಿಎ,  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕೇವಲ 35 ಸಾವಿರ ಆಸನದ ವ್ಯವಸ್ಥೆಯಿದೆ. ಆದರೆ, ಆರ್‌ಸಿಬಿ ವಿಜಯೋತ್ಸವಕ್ಕೆ ಬರುವ ಅಭಿಮಾನಿಗಳ ಸಂಖ್ಯೆ ಲಕ್ಷಕ್ಕೂ ಅಧಿಕವಾಗುವ ನಿರೀಕ್ಷೆಯಿದೆ. ಈ ಹಿನ್ನೆಲೆಯಲ್ಲಿ ಕೊನೇ ಕ್ಷಣದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಬರುವ ಆರ್‌ಸಿಬಿ ಅಭಿಮಾನಿಗಳಿಗೆ ಟಿಕೆಟ್ ಅಥವಾ ಪಾಸ್ ವಿತರಣೆ ಮಾಡಲು ನಿರ್ಧರಿಸಿದೆ. ಈ ಮೂಲಕ ನಿಗದಿತ ಅಭಿಮಾನಿಗಳಿಗೆ ಮಾತ್ರ ವಿಜಯೋತ್ಸವ ಆಚರಣೆ ವೀಕ್ಷಣೆಗೆ ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿತು. 

ಈ ನಡುವೆ, ಪೊಲೀಸರು ತಂಡದ ಪೆರೇಡ್‌ಗೆ ಅವಕಾಶ ನೀಡಲು ನಿರಾಕರಿಸಿದರು. ಪೆರೇಡ್‌ ನಡೆಯಲಿದೆ ಎಂದು ಭಾವಿಸಿ ವಿಧಾನಸೌಧ ಸೇರಿದಂತೆ ಸುತ್ತಮುತ್ತಲು ಜಮಾಯಿಸಿದ ಅಭಿಮಾನಿಗಳು ನಿರಾಶೆಗೊಂಡು ವಿಜಯೋತ್ಸವ ವೀಕ್ಷಿಸಲು ಚಿನ್ನಸ್ವಾಮಿ ಸ್ಟೇಡಿಯಂನತ್ತ ಧಾವಿಸಿದರು.  ಟಿಕೆಟ್​ ಇದ್ದವರಿಗೆ ಮಾತ್ರ ಸ್ಟೇಡಿಯಂಗೆ ಪ್ರವೇಶ ಇದ್ದರೂ,  ಸ್ಟೇಡಿಯಂ ಹೊರಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಸೇರಿದ ಜನರು ಒಳಗೆ ಹೋಗುವ ಉದ್ದೇಶದಿಂದ ಗೇಟ್​ ಎಗರಿ ಒಳ ಹೋಗಲು ಮುಂದಾಗಿದ್ದಾರೆ. ಟಿಕೆಟ್​ ಹೊಂದಿಲ್ಲದ ಅನೇಕರು ಕ್ರೀಡಾಂಗಣ ಪ್ರವೇಶಿಸುವ ಯತ್ನ ಮಾಡಿದಾಗ ಪರಸ್ಪರ ತಳ್ಳಾಟ ಶುರುವಾಗಿದೆ. ನೂಕುನುಗ್ಗಲು ಪ್ರಾರಂಭವಾಗಿ ಕಾಲ್ತುಳಿತಕ್ಕೆ ಕಾರಣವಾಗಿದೆ ಎಂದು ಮೂಲಗಳು ಹೇಳಿವೆ. 

ಸ್ಟೇಡಿಯಂ ಸಾಮರ್ಥ್ಯ 35 ಸಾವಿರ: 

ಸ್ಟೇಡಿಯಂ ಆಸನಗಳ ಸಾಮರ್ಥ್ಯ 35 ಸಾವಿರವಿದ್ದು, ೨-೩ ಲಕ್ಷ ಜನರು ಬಂದಿದ್ದಾರೆ. ಪಂದ್ಯ ಮುಗಿದು ಆರ್‌ಸಿಬಿ ಗೆಲುವು ಸಾಧಿಸಿದಾಗ ಕೆಎಸ್‌ಸಿಎ ವಿಜಯೋತ್ಸವ ಹಮ್ಮಿಕೊಂಡಿತು. ಆದರೆ, ಲಕ್ಷಗಟ್ಟಲೇ ಜನರು ಬರುತ್ತಾರೆ ಎಂಬುದಾಗಿ ನಿರೀಕ್ಷಿಸಿರಲಿಲ್ಲ.  ಹೀಗಾಗಿ ಕೊನೆ ಕ್ಷಣದಲ್ಲಿ ಉಚಿತ ಪ್ರವೇಶ ಬದಲು ಟಿಕೆಟ್‌ ನೀಡಲು ನಿರ್ಧರಿಸಿತು. 

ಉಚಿತ ಪ್ರವೇಶ ವಿಷಯದಲ್ಲಿ ಕೆಎಸ್‌ಸಿಎ ಗೊಂದಲಕ್ಕೊಳಗಾಗುವುದಲ್ಲದೇ, ಅಭಿಮಾನಗಳನ್ನು ಸಹ ಗೊಂದಲಕ್ಕೊಳಗಾಗುವಂತೆ ಮಾಡಿತು. ಉಚಿತ ಪ್ರವೇಶ ಎಂದು ಭಾವಿಸಿ ಬಂದಿದ್ದ ಅಭಿಮಾನಿಗಳಲ್ಲಿ ಟಿಕೆಟ್‌ ನೀಡಿ ಸ್ಟೇಡಿಯಂ ಒಳಗೆ ಪ್ರವೇಶಿಸಬೇಕು ಎಂಬ ಮಾಹಿತಿ ತಿಳಿಯುತ್ತಿದ್ದಂತೆ ಜನಾಕ್ರೋಶ ವ್ಯಕ್ತವಾಯಿತು. ನೂಕುನುಗ್ಗಲು ಸಂಭವಿಸಿ ಕಾಲ್ತುಳಿತ ಉಂಟಾಯಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆ ವೇಳೆ ನಡೆದ ದುರಂತ ಎಲ್ಲ ಸಂಭ್ರಮವನ್ನೂ ನುಂಗಿಹಾಕಿತು.

ಲಕ್ಷಾಂತರ ಜನ ಸೇರಿ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಗಿ 11 ಮಂದಿ ಯುವಕ-ಯುವತಿಯರು ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಒಟ್ಟಾರೆ ಕಾಲ್ತುಳಿತಕ್ಕೆ ಏನು ಕಾರಣ ಎಂಬುದನ್ನು ದುರಂತ ನಡೆದ ಬಳಿಕ ವಿಮರ್ಶೆ ಮಾಡಿದಾಗ ವಿಜಯೋತ್ಸವ ಮೆರವಣಿಗೆ, ಕ್ರೀಡಾಂಗಣದೊಳಗೆ ಹೋಗಲು ಉಚಿತ ಪಾಸ್‌ಗಳು, ಜನದಟ್ಟಣೆ ಮತ್ತು ಕ್ರೀಡಾಂಗಣದಲ್ಲಿ ಸೀಮಿತ ಆಸನಗಳ ಬಗ್ಗೆ ಗೊಂದಲವು ದುರಂತಕ್ಕೆ ಕಾರಣವಾಯಿತು ಎಂದು ಹೇಳಲಾಗಿದೆ.

Tags:    

Similar News