Bihar Election Result| ಬಿಹಾರ ಚುನಾವಣೆ: ಮತ ಎಣಿಕೆಗೆ ಕ್ಷಣಗಣನೆ, ಫಲಿತಾಂಶದತ್ತ ಎಲ್ಲರ ಚಿತ್ತ
ರಾಜ್ಯದ ಒಟ್ಟು 243 ಕ್ಷೇತ್ರಗಳ ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಎನ್ಡಿಎ ಮತ್ತು ಮಹಾಘಟಬಂಧನ್ (ಎಂಜಿಬಿ) ಎರಡೂ ಮೈತ್ರಿಕೂಟಗಳು ಸ್ಪಷ್ಟ ಬಹುಮತದ ಗೆಲ್ಲುವ ವಿಶ್ವಾಸದಲ್ಲಿವೆ.
ಇಡೀ ದೇಶದ ಗಮನ ಸೆಳೆದಿರುವ ಬಿಹಾರ ವಿಧಾನಸಭಾ ಚುನಾವಣೆಯ ಮತ ಎಣಿಕೆಗೆ ಕ್ಷಣಗಣನೆ ಆರಂಭವಾಗಿದ್ದು, ಇಂದು ಎನ್ ಡಿಎ ಹಾಗೂ ಇಂಡಿಯಾ ಕೂಟಗಳ ಹಣೆಬರಹ ಬಯಲಾಗಲಿದೆ.
ರಾಜ್ಯದ ಒಟ್ಟು 243 ಕ್ಷೇತ್ರಗಳ ಮತ ಎಣಿಕೆ ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದ್ದು, ಎನ್ಡಿಎ ಮತ್ತು ಮಹಾಘಟಬಂಧನ್ (ಎಂಜಿಬಿ) ಎರಡೂ ಮೈತ್ರಿಕೂಟಗಳು ಸ್ಪಷ್ಟ ಬಹುಮತದ ಗೆಲ್ಲುವ ವಿಶ್ವಾಸದಲ್ಲಿವೆ. ಅದರಲ್ಲೂ ಚುನಾವಣಾ ಪೂರ್ವ ಸಮೀಕ್ಷೆಗಳಿಂದ ಅತ್ಯುತ್ಸಾಹದಲ್ಲಿ ಎನ್ ಡಿಎ ಮಿತ್ರಕೂಟ ಗೆಲುವಿನ ಸಂಭ್ರಮಾಚರಣೆಗೆ ಬರದ ಸಿದ್ಧತೆ ನಡೆಸಿದೆ.
ಈ ಬಾರಿಯ ಚುನಾವಣೆಯಲ್ಲಿ ಬಿಹಾರವು 1951ರ ನಂತರದ ಅತಿ ಹೆಚ್ಚು ಮತದಾನಕ್ಕೆ ಸಾಕ್ಷಿಯಾಗಿದೆ. ಒಟ್ಟು 67.13% ಮತದಾನವಾಗಿದ್ದು, ಇದರಲ್ಲಿ ಪುರುಷರಿಗಿಂತ (62.98%) ಮಹಿಳಾ ಮತದಾರರೇ (71.78%) ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೊಸ ದಾಖಲೆ ಬರೆದಿದ್ದಾರೆ. ಯಾವುದೇ ಅಕ್ರಮಗಳು ಕಂಡುಬರದ ಕಾರಣ, ಚುನಾವಣಾ ಆಯೋಗವು ಯಾವುದೇ ಮತಗಟ್ಟೆಯಲ್ಲಿ ಮರುಮತದಾನಕ್ಕೆ ಆದೇಶಿಸಿಲ್ಲ.
ಮತಗಟ್ಟೆ ಸಮೀಕ್ಷೆಗಳು ಏನು ಹೇಳುತ್ತವೆ?
ಬಹುತೇಕ ಎಲ್ಲಾ ಮತಗಟ್ಟೆ ಸಮೀಕ್ಷೆಗಳು ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್ಡಿಎ) ಸುಲಭದ ಗೆಲುವನ್ನು ಭವಿಷ್ಯ ನುಡಿದಿವೆ.
ಆದರೆ, 'ಆಕ್ಸಿಸ್ ಮೈ ಇಂಡಿಯಾ' ಸಮೀಕ್ಷೆಯು ಎನ್ಡಿಎಗೆ 121-141 ಸ್ಥಾನಗಳೊಂದಿಗೆ ಅಲ್ಪ ಬಹುಮತ ಸಿಗಲಿದೆ ಎಂದು ಹೇಳಿದರೆ, ಮಹಾಘಟಬಂಧನ್ಗೆ 98-118 ಸ್ಥಾನಗಳು ಸಿಗಬಹುದು ಎಂದು ಅಂದಾಜಿಸಿದೆ.
'ಟುಡೇಸ್ ಚಾಣಕ್ಯ' ಸಮೀಕ್ಷೆಯು ಬಿಜೆಪಿ ನೇತೃತ್ವದ ಎನ್ಡಿಎಗೆ 160 ಸ್ಥಾನಗಳ ಬೃಹತ್ ಗೆಲುವನ್ನು ಊಹಿಸಿದೆ.
ಎರಡೂ ಬಣಗಳಲ್ಲಿ ವಿಶ್ವಾಸದ ಮಾತು
ಮತಗಟ್ಟೆ ಸಮೀಕ್ಷೆಗಳ ಹೊರತಾಗಿಯೂ, ಎರಡೂ ಮೈತ್ರಿಕೂಟಗಳು ತಮ್ಮ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿವೆ. ಎನ್ಡಿಎ ನಾಯಕರು ಸಮೀಕ್ಷೆಗಳನ್ನು ಆಧರಿಸಿ ಈಗಾಗಲೇ ಸಂಭ್ರಮದಲ್ಲಿದ್ದರೆ, ಮಹಾಘಟಬಂಧನ್ ನಾಯಕರು ಈ ಸಮೀಕ್ಷೆಗಳನ್ನು ತಿರಸ್ಕರಿಸಿದ್ದಾರೆ. ಜನ ಸ್ವರಾಜ್ ಪಕ್ಷದ ಮುಖ್ಯಸ್ಥ ಪ್ರಶಾಂತ್ ಕಿಶೋರ್, "ಈ ಎಲ್ಲಾ ಸಮೀಕ್ಷೆಗಳು ನಕಲಿ. ಬಿಹಾರವು ಐತಿಹಾಸಿಕ ಬದಲಾವಣೆಯತ್ತ ಸಾಗುತ್ತಿದೆ" ಎಂದು ಹೇಳಿದ್ದಾರೆ.
ಬಿಗಿ ಭದ್ರತೆಯಲ್ಲಿ ಮತ ಎಣಿಕೆ
ಚುನಾವಣಾ ಆಯೋಗದ ನಿರ್ದೇಶನದಂತೆ, ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ. ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದ್ದು, 8.30ಕ್ಕೆ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಎಣಿಕೆ ಆರಂಭವಾಗಲಿದೆ.
ಶಾಂತಿಯುತ ಮತ ಎಣಿಕೆಗಾಗಿ ಬಿಹಾರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಡಿಜಿಪಿ ವಿನಯ್ ಕುಮಾರ್ ತಿಳಿಸಿದ್ದಾರೆ.
ಯಾವುದೇ ರೀತಿಯ ವಿಜಯೋತ್ಸವಗಳಿಗೆ ಅವಕಾಶ ನೀಡುವುದಿಲ್ಲ ಎಂದು ಆಯೋಗ ಸ್ಪಷ್ಟಪಡಿಸಿದೆ.
ಆತಂಕ ಮತ್ತು ಆರೋಪಗಳು
ಮತ ಎಣಿಕೆಯ ಮುನ್ನಾದಿನ, ಸಿಪಿಐ(ಎಂ-ಎಲ್) ನಾಯಕ ದೀಪಂಕರ್ ಭಟ್ಟಾಚಾರ್ಯ, "ನಮಗೆ ಸಿಗುತ್ತಿರುವ ಸೂಚನೆಗಳು ಸಕಾರಾತ್ಮಕವಾಗಿಲ್ಲ. ಮತ ಎಣಿಕೆ ಸರಿಯಾಗಿ ನಡೆಯುತ್ತದೆ ಎಂದು ಭಾವಿಸುತ್ತೇವೆ," ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಇನ್ನೊಂದೆಡೆ, ಆರ್ಜೆಡಿ ನಾಯಕ ಮತ್ತು ಮಹಾಘಟಬಂಧನ್ನ ಮುಖ್ಯಮಂತ್ರಿ ಅಭ್ಯರ್ಥಿ ತೇಜಸ್ವಿ ಯಾದವ್, "ಮತ ಎಣಿಕೆ ವೇಳೆ ಯಾವುದೇ ಅಸಾಂವಿಧಾನಿಕ ಚಟುವಟಿಕೆ ನಡೆದರೆ, ಅದನ್ನು ಎದುರಿಸಲು ನಮ್ಮ ಕಾರ್ಯಕರ್ತರು ಮತ್ತು ಸಾರ್ವಜನಿಕರು ಸಿದ್ಧರಾಗಿದ್ದಾರೆ," ಎಂದು ಎಚ್ಚರಿಸಿದ್ದಾರೆ.
ಆರ್ಜೆಡಿ ಎಂಎಲ್ಸಿ ಸುನಿಲ್ ಸಿಂಗ್ ವಿವಾದಾತ್ಮಕ ಹೇಳಿಕೆ
ಆರ್ಜೆಡಿಯ ವಿಧಾನ ಪರಿಷತ್ ಸದಸ್ಯ ಸುನಿಲ್ ಸಿಂಗ್ ಮಾತನಾಡಿ, “ಬಿಹಾರದ ಚುನಾವಣೆಯಲ್ಲಿ ವಂಚನೆ ನಡೆದರೆ, ಬಿಹಾರ ಮತ್ತೊಂದು ನೇಪಾಳ ಅಥವಾ ಬಾಂಗ್ಲಾದೇಶವಾಗಿ ಬದಲಾಗುತ್ತದೆ ಎಂದು ಎಚ್ಚರಿಕೆ ನೀಡಿರುವುದು ವಿವಾದ ಸೃಷ್ಟಿಸಿದೆ.
ಸಾಮಾನ್ಯ ಜನರು ಜಾಗರೂಕರಾಗಿದ್ದಾರೆ. ನಾವು ಶೇ. 1ರಷ್ಟು ದುಷ್ಕೃತ್ಯವನ್ನೂ ಸಹಿಸುವುದಿಲ್ಲ. ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ನಾನು ಮನವಿ ಮಾಡುತ್ತೇನೆ. ಮತ ಎಣಿಕೆಯನ್ನು ನ್ಯಾಯಯುತವಾಗಿ ನಡೆಸಿ, ನಿಮ್ಮ ಕರ್ತವ್ಯಗಳನ್ನು ಸಮಗ್ರತೆಯಿಂದ ನಿರ್ವಹಿಸಿ” ಎಂದು ಹೇಳಿದ್ದಾರೆ.
ಈ ಎಲ್ಲಾ ಹೇಳಿಕೆಗಳ ಹಿನ್ನೆಲೆಯಲ್ಲಿ ಇಂದಿನ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.
ಬಿಹಾರದ ಉಪಮುಖ್ಯಮಂತ್ರಿ ಮತ್ತು ಲಖಿಸರಾಯ್ ಸ್ಥಾನದ ಬಿಜೆಪಿ ಅಭ್ಯರ್ಥಿ ವಿಜಯ್ ಕುಮಾರ್ ಸಿನ್ಹಾ ಅವರು ಅಶೋಕಧಾಮ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾವೆಲ್ಲರೂ ಜನತಾ ಮಾಲೀಕರ ಜನಾದೇಶವನ್ನು ತಲೆಬಾಗಿ ಸ್ವೀಕರಿಸುತ್ತೇವೆ. ಪ್ರಜಾಪ್ರಭುತ್ವದಲ್ಲಿ ಜನರ ನಿರ್ಧಾರವೇ ಅಂತಿಮ ಎಂದು ಅವರು ತಿಳಿಸಿದರು.
ಬಿಹಾರ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆಗಳಿಂದ ಆತಂಕಗೊಂಡಿರುವ ಇಂಡಿಯಾ ಕೂಟದ ಪಕ್ಷಗಳು ಕಟ್ಟುನಿಟ್ಟಿನ ಹಾಗೂ ಪಾರದರ್ಶಕ ಮತ ಎಣಿಕೆಗೆ ಆಗ್ರಹಿಸಿವೆ.
ಆರ್ಜೆಡಿಯ ವಿಧಾನ ಪರಿಷತ್ ಸದಸ್ಯ ಸುನಿಲ್ ಸಿಂಗ್ ಪ್ರತಿಕ್ರಿಯಿಸಿ, “ ಚುನಾವಣೆಯಲ್ಲಿ ವಂಚನೆ ನಡೆದರೆ ಬಿಹಾರವು ಮತ್ತೊಂದು ನೇಪಾಳ ಅಥವಾ ಬಾಂಗ್ಲಾದೇಶವಾಗಿ ಬದಲಾಗುತ್ತದೆ. ಸಾಮಾನ್ಯ ಜನರು ಜಾಗರೂಕರಾಗಿರಬೇಕು. ಶೇ. 1ರಷ್ಟು ದುಷ್ಕೃತ್ಯವನ್ನೂ ನಾವು ಸಹಿಸುವುದಿಲ್ಲ. ಅಧಿಕಾರಿಗಳು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲು ಮನವಿ ಮಾಡುತ್ತೇನೆ. ಮತ ಎಣಿಕೆಯನ್ನು ನ್ಯಾಯಯುತವಾಗಿ ನಡೆಸಿ, ನಿಮ್ಮ ಕರ್ತವ್ಯಗಳನ್ನು ಸಮಗ್ರತೆಯಿಂದ ನಿರ್ವಹಿಸಿ” ಎಂದು ಎಚ್ಚರಿಸಿದ್ದಾರೆ.
ಬಿಹಾರ ಚುನಾವಣಾ ಫಲಿತಾಂಶಕ್ಕೆ ಕ್ಷಣಗಣನೆ ಆರಂಭವಾಗಿರುವ ಹಿನ್ನೆಲೆಯಲ್ಲಿ ಪಾಟ್ನಾದ ಜೆಡಿಯು ಕಚೇರಿ ಹೊರಗೆ ‘ಟೈಗರ್ ಅಭಿ ಜಿಂದಾ ಹೇ’ ಎನ್ನುವ ಪೋಸ್ಟರ್ಗಳು ರಾರಾಜಿಸುತ್ತಿವೆ.
ಭರ್ಜರಿ ಗೆಲುವಿನ ವಿಶ್ವಾಸದಲ್ಲಿರುವ ಜೆಡಿಯು ಕಾರ್ಯಕರ್ತರು, ಸಂಭ್ರಮಾಚರಣೆ ತಯಾರಿಯಲ್ಲಿದ್ದಾರೆ. ಇದಕ್ಕೆ RJDಯ ಬೆಂಬಲಿತ ಸಮಾಜವಾದಿ ಪಕ್ಷ ಕೂಡ ಕೌಂಟರ್ ಕೊಟ್ಟಿದೆ. ‘ಅಲ್ವಿದಾ ಚಾಚಾ’ ಅಂದರೆ ಬಾಯ್ ಬಾಯ್ ಚಿಕ್ಕಪ್ಪ ಎನ್ನುವ ಮೂಲಕ ನಿತೀಶ್ ಕುಮಾರ್ ಕಾಲೆಳೆದಿದೆ.