ಸ್ವಪಕ್ಷೀಯರಿಂದ ತರಾಟೆ| ಸಿಎಂ ವಿವರಣೆ ಕೇಳಿದ ಹೈಕಮಾಂಡ್; ಶಾಸಕ, ಸಚಿವರ ಪ್ರತ್ಯೇಕ ಸಭೆಗೆ ಸಿದ್ದರಾಮಯ್ಯ ನಿರ್ಧಾರ
ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸೃಷ್ಟಿಸಿದ ಶಾಸಕರನ್ನು ಪ್ರತ್ಯೇಕವಾಗಿ ಕರೆದು ಚರ್ಚೆ ಮಾಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಜತೆಗೆ ಪ್ರತ್ಯೇಕವಾಗಿ ಸಚಿವರ ಸಭೆ ನಡೆಸಿ ಸೂಚಿಸಲೂ ನಿರ್ಧರಿಸಲಾಗಿದೆ .;
ಅನುದಾನ ಹಾಗು ಅಭಿವೃದ್ಸಿ ವಿಚಾರದಲ್ಲಿ ಕಾಂಗ್ರೆಸ್ ನ ಬಿ.ಆರ್.ಪಾಟೀಲ್ ಸೇರಿದಂತೆ ಸ್ವಪಕ್ಷೀಯ ಶಾಸಕರ ಬಹಿರಂಗ ಅಸಮಾಧಾನ ಹೇಳಿಕೆಗಳ ಬಳಿಕ ರಾಜಕೀಯವಾಗಿ ಮುಜುಗರ ಅನುಭವಿಸಿದ್ದ ಸಿಎಂ ಸಿದ್ದರಾಮಯ್ಯ ಅವರ ಬಳಿ ಕಾಂಗ್ರೆಸ್ ಹೈಕಮಾಂಡ್ ವಿವರಣೆ ಪಡೆದುಕೊಂಡಿದೆ.
ವಸತಿ ಇಲಾಖೆಯಲ್ಲಿ ಮನೆ ಮಂಜೂರಾತಿಗೆ ಲಂಚ ನೀಡಬೇಕಾಗಿದೆ ಎಂದು ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್ ಆರೋಪದ ಬಳಿಕ ಇನ್ನೂ ಮೂವರು ಕಾಂಗ್ರೆಸ್ ಶಾಸಕರು ಬೆಂಬಲ ಸೂಚಿಸಿದ್ದರು. ಹಾಗೂ ವಸತಿ ಸಚಿವ ಹಾಗೂ ಸಿದ್ದರಾಮಯ್ಯ ಅವರ ಆಪ್ತ ಜಮೀರ್ ಅಹ್ಮದ್ ಖಾನ್ ಅವರ ರಾಜೀನಾಮೆಗೆ ಒತ್ತಾಯಿಸಿದ್ದರು. ವಿರೋಧ ಪಕ್ಷಕ್ಕಿಂತಲೂ ಹೆಚ್ಚಾಗಿ ಸ್ವಪಕ್ಷೀಯರೇ ಇಂತಹ ಆರೋಪಗಳನ್ನು ಮಾಡುತ್ತಿರುವುದು ರಾಜ್ಯ ಸರ್ಕಾರಕ್ಕೆ ತೀರಾ ಮುಜುಗರಕ್ಕೆ ಕಾರಣವಾಗಿತ್ತು.
ಈಗಾಗಲೇ ಬೆಂಗಳೂರು ಕಾಲ್ತುಳಿತ, ಮುಡಾ ಹಗರಣ ಮತ್ತಿತರ ಕಾರಣಗಳಿಗೆ ವಿರೋಧ ಪಕ್ಷಗಳಿಗೆ ಆಹಾರವಾಗಿದ್ದ ಆಡಳಿತಾರೂಢ ಕಾಂಗ್ರೆಸ್, ಸ್ವಪಕ್ಷೀಯ ಶಾಸಕರು ಹಾಗೂ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಹಾಗೂ ರಾಜ್ಯ ಹಣಕಾಸು ಆಯೋಗದ ಉಪಾಧ್ಯಕ್ಷರ ಹೇಳಿಕೆಗಳಿಂದ ಮತ್ತಷ್ಟು ಚರ್ಚೆಗೆ ಗ್ರಾಸವಾಗುತ್ತಿದೆ. ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಅವರಿಂದ ಮಾಹಿತಿ ಪಡೆದಿದ್ದು, ಕೂಡಲೇ ಅತೃಪ್ತರನ್ನು ಸಮಾಧಾನ ಪಡಿಸುವಂತೆ ಹಾಗೂ ಶಾಸಕರ ಬೇಡಿಕೆಗಳನ್ನು ಪರಿಗಣಿಸುವಂತೆ ನಿರ್ದೇಶನ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ರಾಜ್ಯಪಾಲರು ಏಳು ಮಸೂದೆಗಳಿಗೆ ಇನ್ನೂ ಸಹಿ ಹಾಕದಿರುವ ಸಂಬಂಧ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಬಳಿ ಹಾಗೂ ರಾಜ್ಯಕ್ಕೆ ಸಿಗಬೇಕಾದ ಅನುದಾನಗಳ ಬಗ್ಗೆ ಚರ್ಚೆಗೆ ಕೇಂದ್ರ ಅರ್ಥ ಸಚಿವರಾದ ನಿರ್ಮಲಾ ಸೀತಾರಾಮನ್ ಅವರ ಜತೆ ಚರ್ಚೆಗೆ ಮಂಗಳವಾರ ದೆಹಲಿಗೆ ತೆರಳಿದ ಸಂದರ್ಭದಲ್ಲಿ ಕಾಂಗ್ರೆಸ್ನ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಿದ್ದರಾಮಯ್ಯ ಅವರ ಜತೆ ರಾಜ್ಯ ರಾಜಕಾರಣದ ಬಗ್ಗೆ, ಪ್ರಮುಖವಾಗಿ ಕಾಂಗ್ರೆಸ್ ಅತೃಪ್ತ ಶಾಸಕರು ಸರ್ಕಾರದ ವಿರುದ್ಧ ಹೇಳಿಕೆ ನೀಡದಂತೆ ಹಾಗೂ ಅವರ ಬೇಡಿಕೆಗಳ ಬಗ್ಗೆ ಚರ್ಚಿಸುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗಿದೆ. ಸುರ್ಜೆವಾಲಾ ಅವರನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಸುಮಾರು 40 ನಿಮಿಷಗಳಿಗೂ ಹೆಚ್ಚುಕಾಲ ಚರ್ಚಿಸಿ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಸಮಾಲೋಚನೆ ನಡೆಸಿದ ವೇಳೆ ಈ ಅಂಶಗಳಿಗೆ ಒತ್ತು ನೀಡಲಾಗಿದೆ.
ಅಳಂದ ಶಾಸಕ ಹಾಗೂ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್. ಪಾಟೀಲ್, ವಸತಿ ಇಲಾಖೆಯಲ್ಲಿ ಮನೆಗಳನ್ನು ಮಂಜೂರು ಮಾಡಲು ಲಂಚ ಪಡೆಯಲಾಗುತ್ತಿದೆ ಎಂಬ ಹೇಳಿಕೆ ನೀಡಿದ್ದು ಕಾಂಗ್ರೆಸ್ ಪಕ್ಷ ಹಾಗು ಸರ್ಕಾರಕ್ಕೆ ದೊಡ್ಡ ಮಟ್ಟದ ಮುಜುಗರಕ್ಕೆ ಕಾರಣವಾಗಿದೆ. ಇದರ ಜತೆಗೆ ಶಾಸಕರಾದ ರಾಜು ಕಾಗೆ ಹಾಗು ಎನ್ .ವೈ. ಗೋಪಾಲಕೃಷ್ಣ ಅವರ ಅಸಮಾಧಾನದ ಹೇಳಿಕೆಗಳ ಬಗ್ಗೆ ಪ್ರಸ್ತಾಪ ಆಗಿದೆ. ಶಾಸಕರ ಹೇಳಿಕೆಗಳು ಪಕ್ಷ ಹಾಗು ಸರ್ಕಾರಕ್ಕೆ ಮುಜುಗರ ಸೃಷ್ಟಿಸಿದ್ದು, ಇದನ್ನು ನಿಭಾಯಿಸುವಂತೆ ಸುರ್ಜೇವಾಲ ಸಲಹೆ ನೀಡಿದ್ದಾರೆ.
ಖರ್ಗೆ ಭೇಟಿ
ಬಳಿಕ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಎಂ. ಮಲ್ಲಿಕಾರ್ಜುನ ಖರ್ಗೆಯವರನ್ನೂ ಸಿದ್ದರಾಮಯ್ಯ ಭೇಟಿಯಾಗಿದ್ದಾರೆ. ಅಲ್ಲೂ ರಾಜ್ಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆದಿದೆ. ಪಕ್ಷದ ಶಾಸಕರ ಮನವೊಲಿಸಿ ಅವರ ಬೇಡಿಕೆಗಳನ್ನೂ ಈಡೇರಿಸುವಂತೆ ಈ ಸಂದರ್ಭದಲ್ಲಿ ಖರ್ಗೆಯವರು ಸಿದ್ದರಾಮಯ್ಯ ಅವರಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.
ಶಾಸಕರ ಜೊತೆ ಮಾತನಾಡುವುದಾಗಿ ಹೇಳಿದ ಸಿಎಂ
ಅಸಮಧಾನಗೊಂಡ ಪಕ್ಷದ ಶಾಸಕರನ್ನು ಕರೆದು ಚರ್ಚಿಸುವುದಾಗಿ ಸಿದ್ದರಾಮಯ್ಯ ಅವರು ಈ ಸಂದರ್ಭದಲ್ಲಿ ಸುರ್ಜೇವಾಲ ಅವರಿಗೆ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಬಿ.ಆರ್. ಪಾಟೀಲ್ ಅವರು ಹೊರಿಸಿರುವ ಲಂಚದ ಆರೋಪ ಸಂಬಂಧಿಸಿದಂತೆ ತನಿಖೆ ಮಾಡಿಸಿ ಕ್ರಮಕೈಗೊಳ್ಳುವುದಾಗಿ ಕೂಡಾ ಸಿಎಂ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಇದೇ ಸಂದರ್ಭದಲ್ಲಿ ವಿಧಾನಪರಿಷತ್ಗೆ ಬಾಕಿ ಇರುವ ನಾಲ್ಕು ಮಂದಿಯ ನಾಮನಿರ್ದೇಶನ ಬಗ್ಗೆಯೂ ಚರ್ಚೆ ಆಗಿದೆ. ಈಗಾಗಲೇ ಸಾಕಷ್ಟು ವಿಳಂಬ ಆಗಿದೆ ಆದಷ್ಟು ಬೇಗ ವಿಧಾನಪರಿಷತ್ ನಾಮನಿರ್ದೇಶನ ಮಾಡಬೇಕೆಂದು ಸಿಎಂ ಸುರ್ಜೆವಾಲಾಗೆ ಮನವಿ ಮಾಡಿದರು. ಶೀಘ್ರವಾಗಿ ಪರಿಷತ್ ಸದಸ್ಯರ ಪಟ್ಟಿ ಅಂತಿಮಗೊಳಿಸುವುದಾಗಿ ಸಿದ್ದರಾಮಯ್ಯಗೆ ಸುರ್ಜೆವಾಲಾ ಸಭೆಯಲ್ಲಿ ಹೇಳಿದ್ದಾರೆ.
ಮುಖಾಮುಖಿ ಚರ್ಚೆ
ಭ್ರಷ್ಟಾಚಾರ ಆರೋಪ ಮಾಡಿ ಸಚಿವ ಜಮೀರ್ ಅವರ ರಾಜೀನಾಮೆ ಕೇಳಿದ ಹಾಗೂ ಸರ್ಕಾರದಿಂದ ಸರಿಯಾದ ಪ್ರಮಾಣದಲ್ಲಿ ಅನುದಾನ ಸಿಗುತ್ತಿಲ್ಲ ಎಂದು ಅರೋಪಿಸಿ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸೃಷ್ಟಿಸಿದ ಶಾಸಕರನ್ನು ಪ್ರತ್ಯೇಕವಾಗಿ ಕರೆದು ಚರ್ಚೆ ಮಾಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆ. ಜತೆಗೆ ಪ್ರತ್ಯೇಕವಾಗಿ ಸಚಿವರ ಸಭೆ ನಡೆಸಿ ಶಾಸಕರ ಬೇಡಿಕೆಗಳನ್ನು ಪೂರೈಸಲು ಕ್ರಮ ಕೈಗೊಳ್ಳಲು ಸಚಿವರಿಗೆ ಸೂಚಿಸಲೂ ನಿರ್ಧರಿಸಲಾಗಿದೆ ಎಂದು ಮೂಲಗಳು ಹೇಳಿವೆ.
ಸ್ವಪಕ್ಷೀಯರ ಆಕ್ರೋಶಕ್ಕೆ ಕಾರಣಗಳೇನು?
ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷರೂ ಆಗಿರುವ ಬಿ.ಆರ್. ಪಾಟೀಲ್ ಅವರು ವಸತಿ ಯೋಜನೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾಡಿರುವ ಆರೋಪಕ್ಕೆ ಕಾಗವಾಡ ಶಾಸಕ ರಾಜು ಕಾಗೆ ಮತ್ತು ಸಾಗರದ ಶಾಸಕ ಬೇಳೂರು ಗೋಪಾಲಕೃಷ್ಣ ಸೇರಿದಂತೆ ಹಲವು ಕಾಂಗ್ರೆಸ್ ಶಾಸಕರು ಬೆಂಬಲ ಸೂಚಿಸಿದ್ದರು. ಮೊಳಕಾಲ್ಮುರು ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು "ನನ್ನಿಂದ ಒಂದೂ ಚರಂಡಿ ಕಟ್ಟಿಸಲೂ ಆಗಿಲ್ಲ" ಎಂದು ಆಳಲು ತೋಡಿಕೊಂಡಿರುವುದು ಸರ್ಕಾರದ ಮೇಲಿನ ಅವರ ಅಸಮಾಧಾನಕ್ಕೆ ಮತ್ತಷ್ಟು ಪುಷ್ಟಿ ನೀಡಿತ್ತು.
ಸತ್ಯವಿದೆ ಎಂದ ರಾಜು ಕಾಗೆ
"ಬಿ.ಆರ್. ಪಾಟೀಲ್ ಅವರು ಮಾಡಿದ ಭ್ರಷ್ಟಾಚಾರ ಆರೋಪದಲ್ಲಿ ಸತ್ಯಾಂಶವಿದೆ. ಅವರಿಗೆ ನನ್ನ ಸಂಪೂರ್ಣ ಬೆಂಬಲವಿದೆ. ನನ್ನದು ಅಂಥದ್ದೇ ಪರಿಸ್ಥಿತಿಯಿದೆ. ಒಂದು ಕೆಲಸವೂ ಆಗುತ್ತಿಲ್ಲ" ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರೂ ಆಗಿರುವ ರಾಜು ಕಾಗೆ ತಿಳಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ರಾಜೀನಾಮೆ ನೀಡುವ ಕುರಿತು ನಿರ್ಧರಿಸುವುದಾಗಿಯೂ ಅವರು ಹೇಳಿಕೆ ನೀಡಿದ್ದಾರೆ. ತಮ್ಮ ಕ್ಷೇತ್ರಕ್ಕೆ ಮಂಜೂರಾದ 12 ಕೋಟಿ ರೂಪಾಯಿ ರಸ್ತೆ ಕಾಮಗಾರಿ ಮತ್ತು 13 ಕೋಟಿ ರೂಪಾಯಿಯ ಸಮುದಾಯ ಭವನಗಳ ಯೋಜನೆಗಳಿಗೆ ಇನ್ನೂ ಕಾರ್ಯಾದೇಶ ಸಿಕ್ಕಿಲ್ಲ ಎಂದು ರಾಜು ಕಾಗೆ ಅಸಮಾಧಾನ ವ್ಯಕ್ತಪಡಿಸಿದ್ದರು.
ಬಿ.ಆರ್. ಪಾಟೀಲ್ ಅವರು ರಾಜು ಕಾಗೆ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡು, "ರಾಜು ಕಾಗೆ ಅವರಂತೆ ಬಹಳಷ್ಟು ಮಂದಿ ಮಾತನಾಡುವವರು ಇದ್ದಾರೆ" ಎಂದು ಹೇಳಿದ್ದಾರೆ. ಅಫಜಲಪುರ, ಯಾದಗಿರಿ, ಹೊಸಪೇಟೆಯಿಂದ ಮನೆ ಹಂಚಿಕೆ ಸಂಬಂಧ ನೂರಾರು ಫೋನ್ ಕರೆಗಳು ಬರುತ್ತಿರುವುದಾಗಿ ಅವರು ತಿಳಿಸಿದ್ದಾರೆ. ಇನ್ನು, ಕಲಬುರಗಿ ದಕ್ಷಿಣ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ತಮ್ಮ ಕ್ಷೇತ್ರದ ಕೆಲವೆಡೆ ಕೆಆರ್ಐಡಿಬಿಎಲ್ (ಲ್ಯಾಂಡ್ ಆರ್ಮಿ) ಅಧಿಕಾರಿಗಳು ತಮ್ಮ ಅನುಮತಿಯಿಲ್ಲದೆ ಕಾಮಗಾರಿಗಳನ್ನು ಆರಂಭಿಸುತ್ತಿದ್ದಾರೆ ಎಂದು ದೂರಿದ್ದರು.
ಸಾಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಗೋಪಾಲಕೃಷ್ಣ ಬೇಳೂರು ಅವರು, ವಸತಿ ಯೋಜನೆಗಳಲ್ಲಿನ ಲಂಚದ ಆರೋಪ ನಿಜವಾಗಿದ್ದರೆ, "ಸಂಬಂಧಿಸಿದ ಸಚಿವರು ರಾಜೀನಾಮೆ ಕೊಡುವುದು ಒಳ್ಳೆಯದು. ಅದರಲ್ಲಿ ಎರಡು ಮಾತಿಲ್ಲ" ಎಂದು ಆಗ್ರಹಿಸಿದ್ದರು. "ಯಾರೇ ಇರಲಿ. ಸಂಬಂಧಪಟ್ಟವರು ಯಾರಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಅವರು ರಾಜೀನಾಮೆ ಕೊಟ್ಟು ತನಿಖೆ ಎದುರಿಸಿ ನಿರ್ದೋಶಿಯಾಗಿ ಹೊರಬರುವುದು ಒಳ್ಳೆಯದು. ನಂತರ ಬೇಕಿದ್ದರೆ ಅವರನ್ನು ಸಂಪುಟಕ್ಕೆ ವಾಪಸ್ ತೆಗೆದುಕೊಳ್ಳಲು ಅವಕಾಶವಿರುತ್ತದೆ" ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಚಿವ ಜಮೀರ್ ಅಹ್ಮದ್ ಖಾನ್ ಅವರ ರಾಜೀನಾಮೆಗೆ ಆಗ್ರಹಿಸಿದ್ದಾರೆ ಎನ್ನಲಾಗಿದೆ.