10 ವರ್ಷದ ಮಾತಿರಲಿ, 10 ತಿಂಗಳು ಅಧಿಕಾರ ಉಳಿಸಿಕೊಳ್ಳಿ ನೋಡೋಣ: ʻಕೈʼ ನಾಯಕರಿಗೆ ಎಚ್‌ಡಿಕೆ ಸವಾಲು

Update: 2024-08-03 11:06 GMT

ʻʻಇನ್ನೂ ಹತ್ತು ವರ್ಷ ನಮ್ಮದೇ ಅಧಿಕಾರ, ಸರ್ಕಾರ ಎಂದು ಕಾಂಗ್ರೆಸ್ ನಾಯಕರು ಬೀಗುತ್ತಿದ್ದಾರೆ. ಹತ್ತು ವರ್ಷದ ಮಾತಿರಲಿ, ಹತ್ತು ತಿಂಗಳು ಅಧಿಕಾರದಲ್ಲಿ ಇರಲಿ ನೋಡೋಣ‌ʼ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಕಾಂಗ್ರೆಸ್‌ ನಾಯಕರಿಗೆ ಸವಾಲು ಹಾಕಿದ್ದಾರೆ.

ವಾಲ್ಮೀಕಿ ನಿಗಮದ ಅಕ್ರಮ ಮತ್ತು ಮುಡಾ ಹಗರಣ ಖಂಡಿಸಿ, ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಗೆ ಶನಿವಾರ(ಆಗಷ್ಟ್ 3) ಬೆಂಗಳೂರಿನಲ್ಲಿ ಚಾಲನೆ ನೀಡಿ ಮಾತನಾಡಿದ ಕುಮಾರಸ್ವಾಮಿ, ʻʻನಿಮ್ಮ ಸರ್ಕಾರವನ್ನು ಯಾರೂ ಅಸ್ಥಿರ ಮಾಡುತ್ತಿಲ್ಲ. ನೀವೇ ಜನರು ಕೊಟ್ಟ ಅವಕಾಶವನ್ನು ಹಾಳು ಮಾಡಿಕೊಳ್ಳುತ್ತಿದ್ದೀರಿ. ಹಗರಣಗಳ ಮೇಲೆ ಹಗರಣಗಳನ್ನು ನಡೆಸಿ ಅಕ್ರಮ ಎಸಗಿದ್ದೀರಿ. ಈಗ ನೋಡಿದರೆ ಜೆಡಿಎಸ್- ಬಿಜೆಪಿ ಪಕ್ಷಗಳನ್ನು ಪ್ರಶ್ನೆ ಮಾಡುತ್ತೇವೆ ಎಂದು ಹೊರಟಿದ್ದೀರಿʼ ಎಂದು ಅವರು ವಾಗ್ದಾಳಿ ನಡೆಸಿದರು.

ʻʻರಾಜ್ಯದಲ್ಲಿ ವಿಧಾನಸಭಾ ಚುನಾವಣೆ ನಂತರ ಅಧಿಕಾರಕ್ಕೆ ಬಂದು ಜನಪರ ಕೆಲಸ ಮಾಡುವುದು ಬಿಟ್ಟು ಕಾನೂನು ಬಾಹಿರ ಚಟುವಟಿಕೆಗಳು, ಭ್ರಷ್ಟಾಚಾರದಲ್ಲಿ ನಿರತರಾಗಿದ್ದೀರಿ. ಹಿಂದೆಂದೂ ಕಂಡರಿಯದಂತಹ ಭ್ರಷ್ಟ ಸರ್ಕಾರವನ್ನು ಕಾಣುತ್ತಿದ್ದೇವೆʼʼ ಎಂದು ಕೇಂದ್ರ ಸಚಿವರು ದೂರಿದರು.

ʻʻಈ ಕೆಟ್ಟ ಕಾಂಗ್ರೆಸ್ ಜನ ವಿರೋಧಿ ಸರ್ಕಾರದ ವಿರುದ್ಧ ನಾವು ಜಂಟಿ ಹೋರಾಟ ಹಮ್ಮಿಕೊಂಡಿದ್ದೇವೆ. ಜನರಿಗೆ ಇವರ ಆಕ್ರಮಗಳನ್ನು ಮನವರಿಕೆ ಮಾಡಿಕೊಡುತ್ತೇವೆ. ಆದಿಶಕ್ತಿ ತಾಯಿ ಕೆಂಪಮ್ಮ ದೇವಿಗೆ ಪೂಜೆ ಸಲ್ಲಿಸಿ ಯಡಿಯೂರಪ್ಪನವರ ಇನ್ನಿತರೆ ಮಾರ್ಗದರ್ಶಕರ ನೇತೃತ್ವದಲ್ಲಿ ಮೈಸೂರು ಪಾದಯಾತ್ರೆ ಮಾಡುತ್ತಿದ್ದೇವೆ. ನಾಡಿನ ಜನತೆಯ ಅಭಿಪ್ರಾಯ ಏನಿದೆಯೋ ಅದರ ಪರವಾಗಿ ನಾವು ಪಾದಯಾತ್ರೆ ಮಾಡುತ್ತಿದ್ದೇವೆʼʼ ಎಂದು ಹೇಳಿದರು.

ಸಿಎಂ ವಿರುದ್ದ ತೀವ್ರ ವಾಗ್ದಾಳಿ

ʻʻಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಂವಿಧಾನದ ಹಕ್ಕಿದೆ. ಅದನ್ನು ಎತ್ತಿ ಹಿಡಿಯುವ ಕೆಲಸವನ್ನು ನಾವು ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನಾವು ಈ ಕೆಲಸವನ್ನು ಶ್ರದ್ಧೆಯಿಂದ ಮಾಡುತ್ತಿದ್ದೇವೆ. ಮೂಡಾ ಹಗರಣದಲ್ಲಿ ನಿಮ್ಮ ಹೆಸರು ಬಂದಿದೆ. ನೀವು ನಿವೇಶನ ಪಡೆದಿರುವುದಕ್ಕೆ ನಮಗೆ ಅಭ್ಯಂತರ ಇಲ್ಲ. ಆದರೆ, ಸರ್ಕಾರದ ಜಮೀನು ನಿಮ್ಮ ಬಾಮೈದನ ಹೆಸರಿಗೆ ಖರೀದಿಸಿ, ಆ ನಂತರ ಪತ್ನಿಗೆ ಕೊಡುತ್ತೀರಿ..! ಇದು ಹೇಗೆ ರವಾನೆಯಾಗಿದೆ ಎನ್ನುವುದು ನಿಮಗೆ ಗೊತ್ತಿಲ್ಲವೇ ಸಿದ್ದರಾಮಯ್ಯನವರೇ..?ʼʼ ಎಂದು ಸಿಎಂ ಸಿದ್ದರಾಮಯ್ಯ ಅವರನ್ನು ತೀಕ್ಷ್ಣವಾಗಿ ಪ್ರಶ್ನಿಸಿದರು.

ಕೊಳ್ಳೆ ಹೊಡೆಯೋದು ಸಾಮಾಜಿಕ ನ್ಯಾಯವೇ?

ʻʻವಾಲ್ಮೀಕಿ, ಅಂಬೇಡ್ಕರ್ ಎಂದು ಮಾತು ಮಾತಿಗೂ ಹೇಳುತ್ತೀರಿ. ದಲಿತರ ಉದ್ಧಾರ ಎಂದು ಭಾಷಣ ಬಿಗಿಯುತ್ತೀರಿ. ಆದರೆ, ಅಂಬೇಡ್ಕರ್ ಹೆಸರಿನಲ್ಲಿ ಹಣ ಲೂಟಿ ಮಾಡಿದ್ದೀರಿ. ಬಾಬಾ ಸಾಹೇಬ್ ಅವರಿಗೆ ಗೌರವ ಕೊಡೋದು ಎಂದರೆ, ಯಾರಿಗಾಗಿ ಅವರು ತಮ್ಮ ಬದುಕು ಮುಡಿಪಿಟ್ಟು ಹೋರಾಟ ನಡೆಸಿದರೋ ಆ ಜನಗಳ ಹಣ ಕೊಳ್ಳೆ ಹೊಡೆಯೋದಾ?ʼʼ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ʻʻನಾನು, ಯಡಿಯೂರಪ್ಪನವರು ಸೇರಿ ವಾಲ್ಮೀಕಿ ನಿಗಮ ಸ್ಥಾಪನೆ ಮಾಡಿದೆವು. ದುರ್ಬಲರಿಗೆ ಶಕ್ತಿ ಬರಲಿ ಎನ್ನುವ ಒಳ್ಳೆಯ ಉದ್ದೇಶದಿಂದ ಈ ಕೆಲಸ ಮಾಡಿದೆವು. ಈ ನಿಗಮದಲ್ಲಿ 89 ಕೋಟಿ ರೂ. ಅಕ್ರಮ ಆಗಿದೆ ಎಂದು ನೀವೇ ಹೇಳಿದ್ದೀರಿ. ಹಗರಣ ನಡೆದಿದೆ ಎಂದು ಒಪ್ಪಿಕೊಂಡಿದ್ದೀರಿ. ನಿಮ್ಮ ನಿಜವಾದ ಬಣ್ಣ ಬಯಲಾಗತ್ತದೆ ಎಂದು ಹೆದರಿ ಕದ್ದು ಓಡಿದವರು ನೀವು. ಈಗ ನೋಡಿದರೆ ಮುಡಾ ಹಗರಣ ಮುಚ್ಚಿಹಾಕಲು ಮುಂದಾಗಿದ್ದೀರಿʼʼ ಎಂದು ಕುಮಾರಸ್ವಾಮಿ ಆರೋಪಿಸಿದರು.

ʻʻಹಿಂದುಳಿದ ವರ್ಗಗಳ ನಾಯಕರು ಎರಡನೇ ಬಾರಿ ಮುಖ್ಯಮಂತ್ರಿ ಆಗಿರುವುದಕ್ಕೆ ಕೆಲವರಿಗೆ ಹೊಟ್ಟೆ ಉರಿಯಿಂದ ಎನ್ನುತ್ತಾರೆ ಇವರು. ಒಳ್ಳೆಯ ಕೆಲಸ ಮಾಡಿದರೆ ಯಾರಿಗೆ ಹೊಟ್ಟೆ ಉರಿ ಬರುತ್ತದೆ? ಸುಖಾಸುಮ್ಮನೆ ಜನರ ಗಮನ ಬೇರೆಡೆಗೆ ಸೆಳೆಯಲು ನಾನು ಹಿಂದುಳಿದವನು, ಅದಕ್ಕೆ ಹೊಟ್ಟೆ ಉರಿ ಎಂದು ನಾಟಕ ಮಾಡುತ್ತಿದ್ದಾರೆʼʼ ಎಂದು ಸಿದ್ದರಾಮಯ್ಯ ವಿರುದ್ಧ ಟೀಕಿಸಿದರು.

ʻʻನಮ್ಮ ಪಾದಯಾತ್ರೆ ತಡೆಯಲು ಕಾಂಗ್ರೆಸ್ ನಾಯಕರು ಬಿಡದಿಯಲ್ಲಿ ಪ್ರಶ್ನೆ ಮಾಡಿದ್ದಾರೆ. ಅದಾದ ಮೇಲೆ ಮುಂದೆಯೂ ಪ್ರಶ್ನೆ ಮಾಡುತ್ತಾರಂತೆ. ಮಾಡಲಿ.. ಅವರಿಗೆ ತಕ್ಕ ಉತ್ತರ ಕೊಡುತ್ತೇವೆ. ಅವರು ಕೇಳಿರುವ ಪ್ರಶ್ನೆಗಳಿಗೆ ಬಿಡದಿ, ರಾಮನಗರದಲ್ಲಿ ಉತ್ತರ ಕೊಡುತ್ತೇನೆʼʼ ಎಂದು ಡಿಕೆ ಶಿವಕುಮಾರ್‌ ಹೆಸರು ಹೇಳದೇ ಕುಮಾರಸ್ವಾಮಿ ಕುಟಕಿದರು.

ʻʻದೇವೆಗೌಡರು ರಾಮನಗರಕ್ಕೆ ಬಂದ ನಂತರ ಎಷ್ಟು ಆಸ್ತಿ ಮಾಡಿದ್ದಾರೆ ಎಂದು ಉಪ ಮುಖ್ಯಮಂತ್ರಿಗಳು ಕೇಳಿದ್ದಾರೆ. ಅದಕ್ಕೂ ನಾವು ಉತ್ತರ ಕೊಡುತ್ತೇವೆ. ನಾವೂ ಕೂಡ ಅವರದ್ದು ಎಷ್ಟಿದೆ ಆಸ್ತಿ ಎನ್ನುವುದನ್ನು ಬಿಡುಗಡೆ ಮಾಡುತ್ತೇವೆʼʼ ಎಂದು ಹೇಳಿದರು.

ʻʻಅವರೇ ಹೇಳಿಕೊಂಡಿದ್ದಾರೆ.. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿ ಅವರ ಆಸ್ತಿ, ಅಕ್ರಮಗಳ ದಾಖಲೆ ಪತ್ರಗಳನ್ನು ನಾನೇ ಕೇಂದ್ರ ಸರ್ಕಾರಕ್ಕೆ ಕೊಟ್ಟಿದೇನೆ ಎಂದು ಹೇಳಿಕೊಂಡು ತಿರುಗುತ್ತಿದ್ದಾರೆ. ನಮ್ಮನ್ನು ಬಂಧಿಸಲು ದೆಹಲಿಯಿಂದ ಬರುತ್ತಾರೆ. ಬಂಧನಕ್ಕೂ ನಾವು ಸಿದ್ದವಿದ್ದೇವೆ ಎಂದು ಹೇಳಿಕೊಂಡಿದ್ದಾರೆʼʼ ಎಂದು ಕೇಂದ್ರ ಸಚಿವರು ಲೇವಡಿ ಮಾಡಿದರು.

ʻʻಸಚಿವ ಡಾ.ಪರಮೇಶ್ವರ ಅವರು ಹಲವಾರು ಪ್ರಶ್ನೆಗಳನ್ನು ಹಾಕಿದ್ದಾರೆ. ಆದರೆ, ಅವರು ನನ್ನ ಒಂದು ಪ್ರಶ್ನೆಗೆ ಉತ್ತರ ಕೊಡಲಿ. ಯಾದಗಿರಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿಮ್ಮ ಸಮಾಜದ ಅಧಿಕಾರಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಕೆ ಅವರು ಜೀವ ಕಳೆದುಕೊಂಡರು? ಪೋಸ್ಟಿಂಗ್ ಗೆ 25 ಲಕ್ಷ ರೂಪಾಯಿ ಲಂಚ ಹಣ ಕೊಡಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಬದುಕು ಕೊನೆ ಮಾಡಿಕೊಂಡ ಆ ಪೊಲೀಸ್ ಅಧಿಕಾರಿಯ ಪತ್ನಿ ಹೇಳಿದ್ದಾರೆ. ಆ ತಾಯಿ ಯಾರ ವಿರುದ್ಧ ಆರೋಪ ಮಾಡಿದ್ದಾರೆ? ಅದರ ಬಗ್ಗೆ ಪರಮೇಶ್ವರ ಅವರು ಉತ್ತರ ಕೊಡಲಿʼʼ ಎಂದು ಕುಮಾರಸ್ವಾಮಿ ಅವರು ಸವಾಲು ಹಾಕಿದರು.

ʻʻಸಾಮಾಜಿಕ ನ್ಯಾಯ ಎಂದು ಹೇಳಿಕೊಂಡು ರಾಜಕೀಯ ಲಾಭ ಪಡೆಯುವ ನೀವು, ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಕೊಡುವ ಗೌರವ ಇದೇನಾ? 2012ರಲ್ಲಿ ನಿಮ್ಮ ಆಡಳಿತದ ಅವಧಿಯಲ್ಲಿ ಓರ್ವ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಮ್ಮದೇ ಸಮಾಜದ ಪೊಲೀಸ್ ಅಧಿಕಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಈಗಲೂ ಅದು ಮುಂದುವರಿದೆ. ಇಂಥ ಸಾವುಗಳನ್ನು ತಡೆಯುವ ಶಕ್ತಿ ನಿಮಗೆ ಇಲ್ಲವೇ?ʼʼ ಎಂದು ತರಾಟೆಗೆ ತೆಗೆದುಕೊಂಡರು.

ಬಿಜೆಪಿ ಅಧ್ಯಕ್ಷ ವಿಜಯೇಂದ್ರ ಅವರ ಬಗ್ಗೆ ಏಕವಚನದಲ್ಲಿ ಮಾತನಾಡುತ್ತೀರಿ ನೀವು. ನಾನು, ಸಿದ್ದರಾಮಯ್ಯ ನವರ ಪರವಾಗಿದ್ದೇನೆ ಎನ್ನುತ್ತೀರಿ. ನಿಮ್ಮ ನಾಟಕ ಬಯಲಾಗುತ್ತದೆ, ಕಾದು ನೋಡಿ ಪರಮೇಶ್ವರ್ ಅವರೇ.." ಎಂದು ಕುಮಾರಸ್ವಾಮಿ ತರಾಟೆಗೆ ತೆಗೆದುಕೊಂಡರು.

ʻʻಸಿಡಿ ಶಿವು ಅವರು, ಕಾಂಗ್ರೆಸ್ ಎದುರಿಸಲು ಬಿಜೆಪಿ ಜತೆಗೆ ಜೆಡಿಎಸ್ ಸೇರಿಕೊಂಡಿದೆ ಎಂದು ಹೇಳಿದ್ದಾರೆ. ನಿಮ್ಮನ್ನು ಬುಡ ಸಮೇತ ಕಿತ್ತೊಗೆಯಲು ನಾವು ಜೊತೆಯಾಗೆ ಇರುತ್ತೇವೆ ಎಂದು ಅವರಿಗೆ ಹೇಳಲು ಬಯಸುತ್ತೇನೆʼʼ ಎಂದು ಕುಮಾರಸ್ವಾಮಿ ಅವರು ಡಿಕೆಶಿಗೆ ತಿರುಗೇಟು ಕೊಟ್ಟರು.

Tags:    

Similar News