ವಕೀಲ ಜಗದೀಶ್‌ ವಿರುದ್ಧ ದೂರು | ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಲೈಂಗಿಕ ಹಗರಣದ ಸಂಚಲನ!

ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಲೈಂಗಿಕ ಹಗರಣ ದೊಡ್ಡ ಸದ್ದು ಮಾಡುವ ಸೂಚನೆಗಳು ಕಂಡುಬರುತ್ತಿರುವ ನಡುವೆಯೇ, ಮಾಜಿ ಮುಖ್ಯಮಂತ್ರಿಯೊಬ್ಬರ ಆಪ್ತ ಸಹಾಯಕರು, ವಕೀಲರೊಬ್ಬರ ವಿರುದ್ಧ ದೂರು ದಾಖಲಿಸಿರುವ ಬೆಳವಣಿಗೆ ನಡೆದಿದೆ.

Update: 2024-08-27 14:23 GMT

ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಲೈಂಗಿಕ ಹಗರಣ ದೊಡ್ಡ ಸದ್ದು ಮಾಡುವ ಸೂಚನೆಗಳು ಕಂಡುಬರುತ್ತಿರುವ ನಡುವೆಯೇ, ಮಾಜಿ ಮುಖ್ಯಮಂತ್ರಿಯೊಬ್ಬರ ಆಪ್ತ ಸಹಾಯಕರು, ವಕೀಲರೊಬ್ಬರ ವಿರುದ್ಧ ದೂರು ದಾಖಲಿಸಿರುವ ಬೆಳವಣಿಗೆ ನಡೆದಿದೆ.

ಈ ಹಿಂದೆ ಬಿಜೆಪಿ ನಾಯಕ ರಮೇಶ್ ಜಾರಕಿಹೊಳಿ ವಿರುದ್ಧದ ಲೈಂಗಿಕ ಹಗರಣ ಸಿಡಿ ವಿಷಯದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಜನಪ್ರಿಯತೆ ಗಳಿಸಿದ್ದ ವಕೀಲ ಜಗದೀಶ್ ಕುಮಾರ್‌ ಅವರ ವಿರುದ್ಧ ಯಶವಂತಪುರ ಸೆನ್(ಸಿಇಎನ್) ಪೊಲೀಸ್ ಠಾಣೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ಆಪ್ತ ಸಹಾಯಕರು ದೂರು ದಾಖಲಿಸಿದ್ದಾರೆ

ತಮ್ಮ ವಿರುದ್ಧ ಬೊಮ್ಮಾಯಿ ಅವರ ಆಪ್ತ ಸಹಾಯಕರು ದೂರು ದಾಖಲಿಸಿರುವ ವಿಷಯವನ್ನು ಸ್ವತಃ ವಕೀಲ ಜಗದೀಶ್ ಅವರೇ ತಮ್ಮ ಸಾಮಾಜಿಕ ಜಾಲತಾಣ ಪೋಸ್ಟ್ ಮೂಲಕ ಬಹಿರಂಗಪಡಿಸಿದ್ದು, “ಯಶವಂತಪುರ ಸೆನ್ (CEN) ಠಾಣೆಯ ಇನ್ಸ್ಪೆಕ್ಟರ್ ಸ್ವತಃ ಕರೆ ಮಾಡಿ ನಿಮ್ಮ ವಿರುದ್ಧ ಮಾಜಿ ಸಿಎಂ ಬೊಮ್ಮಾಯಿ ಅವರ ಆಪ್ತ ಸಹಾಯಕರು ದೂರು ನೀಡಿದ್ದಾರೆ. ಆ ಸಂಬಂಧ ನಿಮಗೆ ನೋಟಿಸ್ ಕೊಡಬೇಕಿದೆ ಎಂದು ತಿಳಿಸಿದ್ದಾರೆ. ಹಾಗಾಗಿ ನಾವು ಸುಪ್ರೀಂಕೋರ್ಟಿನಲ್ಲಿ ದೂರು ದಾಖಲಿಸುವ ಮುನ್ನವೇ ಆ ಪ್ರಕರಣದ ಹಿಂದೆ ಇರುವವರು ಯಾರು ಎಂಬುದು ಕರ್ನಾಟಕದ ಜನತೆಗೆ ಗೊತ್ತಾಗಿದೆ” ಎಂದು ಅವರು ಹೇಳಿಕೊಂಡಿದ್ದಾರೆ.

ಈ ಮುನ್ನ ತಮ್ಮ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕರಣದ ಕುರಿತು ಮಾಹಿತಿಯನ್ನು ಹೊರಗೆಡವಿದ್ದ ವಕೀಲ ಜಗದೀಶ್, “ಕರ್ನಾಟಕದ ಮಾಜಿ ಮುಖ್ಯಮಂತ್ರಿಯೊಬ್ಬರು ತಮ್ಮ ಅಧಿಕಾರವಧಿಯಲ್ಲಿ ಅಧಿಕಾರ ದುರುಪಯೋಗಪಡಿಸಿಕೊಂಡು ರಾಜ್ಯದ ಮತ್ತು ಪರ ರಾಜ್ಯದ ಹಲವು ನಟಿಯರಿಗೆ ಐಷಾರಾಮಿ ಕಾರು, ಬಂಗಲೆ ನೀಡಿ ಲೈಂಗಿಕ ಸಹಕಾರ ಪಡೆದಿದ್ದಾರೆ. ಅಲ್ಲದೆ, ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಇಬ್ಬರು ವೈದ್ಯರು ಮುಖ್ಯಮಂತ್ರಿ ನಟಿಯರೊಂದಿಗೆ ಇರುವ ಖಾಸಗಿ ವಿಡಿಯೋಗಳನ್ನು ಬಳಸಿಕೊಂಡು ಅವರನ್ನು ಬ್ಲಾಕ್‌ಮೇಲ್‌ ಮಾಡಿ ತಮಗೆ ಬೇಕಾದ ಕಡತಗಳಿಗೆ ಸಹಿ ಹಾಕಿಸಿಕೊಂಡಿದ್ದಾರೆ. ಆ ನಟಿಯರಿಗೆ ದುಬಾರಿ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ವಿಷಯದಲ್ಲಿ ಸರ್ಕಾರದ ಆಡಳಿತ ಮತ್ತು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೆ, ಈ ಬಗ್ಗೆ ನಟಿಯರಿಂದ ದೂರು ಕೊಡಿಸುವುದಾಗಲೀ, ಅಥವಾ ಸಿಡಿ ಬಿಡುಗಡೆ ಮಾಡುವುದಾಗಲೀ ಮಾಡುವುದಿಲ್ಲ. ಬದಲಾಗಿ ಪ್ರಕರಣದ ಕುರಿತು ಸುಪ್ರೀಂಕೋರ್ಟ್‌ಗೆ ಸಾಕ್ಷ್ಯಾಧಾರ ಸಹಿತ ಅರ್ಜಿ ಸಲ್ಲಿಸಲಾಗುವುದು” ಎಂದು ಹೇಳಿದ್ದರು.

“ಸುಪ್ರೀಂಕೋರ್ಟ್ ನಿಗಾದಲ್ಲೇ ಪ್ರಕರಣದ ತನಿಖೆ ನಡೆದು ಸತ್ಯಾಂಶ ಹೊರಬರಬೇಕು. ರಾಜ್ಯದ ಅಧಿಕಾರದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಯೊಬ್ಬರಿಗೆ ಹುಡುಗಿಯರನ್ನು ಸರಬರಾಜು ಮಾಡಿ ಅಧಿಕಾರ ದುರುಪಯೋಗ ಮಾಡಿಕೊಂಡಿರುವುದು ಗಂಭೀರವಾದ ವಿಷಯ. ಹಾಗಾಗಿ ನೇರವಾಗಿ ಕೋರ್ಟಿನಲ್ಲೇ ಮೊಕದ್ದಮೆ ಹೂಡಲಾಗುವುದು. ಆ ಹಿನ್ನೆಲೆಯಲ್ಲಿ ಈಗಾಗಲೇ ಸುಪ್ರೀಂಕೋರ್ಟ್ ರಿಜಿಸ್ಟ್ರಾರ್ ಅವರನ್ನು ವಕೀಲರು ಭೇಟಿ ಮಾಡಿದ್ದಾರೆ. ಅವರ ಸಲಹೆ ಮೇರೆಗೆ ಹಾಲಿ ಸಂಸದರಾಗಿರುವ ಮಾಜಿ ಮುಖ್ಯಮಂತ್ರಿ ವಿರುದ್ಧ ದೂರು ದಾಖಲಿಸಲು ಸ್ಪೀಕರ್ ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗುವುದು” ಎಂದೂ ಜಗದೀಶ್ ಹೇಳಿಕೊಂಡಿದ್ದಾರೆ.

ಆ ಹಿನ್ನೆಲೆಯಲ್ಲಿ ರಾಜ್ಯ ರಾಜಕಾರಣದಲ್ಲಿ ಮತ್ತೊಂದು ಸಿಡಿ ಬಾಂಬ್ ಸಿಡಿಯುವ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಬಿರುಸಿನ ಚರ್ಚೆ ನಡೆಯುತ್ತಿದೆ. ರಾಜ್ಯದ ಆಡಳಿತದ ಚುಕ್ಕಾಣಿ ಹಿಡಿದ ಮುಖ್ಯಮಂತ್ರಿಯೊಬ್ಬರಿಗೆ ನಟಿಯರನ್ನು ಸರಬರಾಜು ಮಾಡಿ ಅವರನ್ನು ಬ್ಲಾಕ್ ಮೇಲ್ ಮಾಡಿ ತಮ್ಮ ಕೆಲಸ ಸಾಧಿಸಿಕೊಳ್ಳುವ ಅಪಾಯಕಾರಿ ಪ್ರವೃತ್ತಿ ಬಿಜೆಪಿ ಆಡಳಿತದ ಅವಧಿಯಲ್ಲಿ ರಾಜ್ಯದಲ್ಲಿ ಇತ್ತು ಎಂಬ ವಕೀಲರ ಹೇಳಿಕೆ ಆಘಾತಕಾರಿ ಪ್ರತಿಕ್ರಿಯೆಗಳಿಗೆ ಕಾರಣವಾಗಿತ್ತು.

ಈ ನಡುವೆ, ಎರಡು ದಿನಗಳ ಹಿಂದೆ ಬಾಗಲಕೋಟೆಯಲ್ಲಿ ಕಾಂಗ್ರೆಸ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ್ದ ಕಾಂಗ್ರೆಸ್ ಮಾಜಿ ಶಾಸಕ ಆನಂದ್ ನ್ಯಾಮನಗೌಡ ಅವರು, ಇನ್ನು ಕೆಲವೇ ದಿನಗಳಲ್ಲಿ ಬಿಜೆಪಿಯ ಮಾಜಿ ಮುಖ್ಯಮಂತ್ರಿಯೊಬ್ಬರ ಲೈಂಗಿಕ ಹಗರಣದ ಸಿಡಿ ಬಿಡುಗಡೆಯಾಗಲಿದೆ. ಅತಿ ಶೀಘ್ರದಲ್ಲಿ ಸೆಕ್ಸ್ ಸಿಡಿ ಬಿಡುಗಡೆಯಾಗಲಿದೆ ಎಂಬ ಹೊಸ ಸುದ್ದಿ ಸಿಕ್ಕಿದೆ” ಎಂದು ಹೇಳಿದ್ದರು.

ಈ ಎಲ್ಲಾ ಬೆಳವಣಿಗೆಗಳ ನಡುವೆ, ಇದೀಗ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಕೀಲ ಜಗದೀಶ್ ವಿರುದ್ಧ ದೂರು ದಾಖಲಿಸಿರುವ ಸಂಗತಿ ಬಹಿರಂಗವಾಗಿದೆ.

Tags:    

Similar News