ಸಿಎಂ ಸಿದ್ದರಾಮಯ್ಯರಿಗೆ ಹೈಕಮಾಂಡ್ನಿಂದ ಬುಲಾವ್; ಕರ್ನಾಟಕ ಸಂಪುಟ ಪುನರ್ರಚನೆ?
ಬೆಂಗಳೂರಿನ ಕಾಲ್ತುಳಿತ ಪ್ರಕರಣ ಮತ್ತು ಕೆಲವು ಸಚಿವರ ವಿರುದ್ಧದ ವಿವಾದಗಳು ಸೇರಿದಂತೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಈ ಭೇಟಿಯಲ್ಲಿ ಚರ್ಚೆಗೆ ಬರಲಿವೆ.;
ಸಾಂದರ್ಭಿಕ ಚಿತ್ರ
ಕರ್ನಾಟಕ ರಾಜಕೀಯದಲ್ಲಿ ಸಂಪುಟ ಪುನರ್ರಚನೆಯ ಚರ್ಚೆ ಮತ್ತೆ ಶುರುವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು (ಜೂನ್ 10) ಕಾಂಗ್ರೆಸ್ ಹೈಕಮಾಂಡ್ನ ಆಹ್ವಾನದ ಮೇರೆಗೆ ದೆಹಲಿಗೆ ತೆರಳಿದ್ದು, ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಣದೀಪ್ ಸಿಂಗ್ ಸುರ್ಜೆವಾಲಾ ಅವರೊಂದಿಗೆ ದಿನವಿಡೀ ಚರ್ಚೆ ನಡೆಸಲಿದ್ದಾರೆ. ಈ ಭೇಟಿಯು ಸಂಪುಟ ಪುನರ್ರಚನೆಯ ಸಾಧ್ಯತೆಯನ್ನು ಕೇಂದ್ರೀಕರಿಸಿದ್ದು, ರಾಜ್ಯ ಸರ್ಕಾರ ಮತ್ತು ಪಕ್ಷದ ವರ್ಚಸ್ಸನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಹೈಕಮಾಂಡ್ ರಾಜ್ಯ ಸರ್ಕಾರದ ಕಾರ್ಯಕ್ಷಮತೆಯನ್ನು ವಿಶ್ಲೇಷಿಸಿದ್ದು, ಸಂಪುಟದಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಒಲವು ತೋರಿದೆ. 10 ರಿಂದ 12 ಸಚಿವರನ್ನು ಕೈಬಿಟ್ಟು ಹೊಸಬರಿಗೆ ಮತ್ತು ಕೆಲವು ಹಿರಿಯ ಶಾಸಕರಿಗೆ ಸಚಿವ ಸ್ಥಾನ ನೀಡುವ ಯೋಜನೆಯನ್ನು ಹೈಕಮಾಂಡ್ ರೂಪಿಸಿದೆ ಎಂದು ಮಾಹಿತಿ ಲಭ್ಯವಾಗಿದೆ. ಪಕ್ಷದ ಆಂತರಿಕ ಒಗ್ಗಟ್ಟನ್ನು ಬಲಪಡಿಸುವುದು ಮತ್ತು ಸರ್ಕಾರದ ಜನಯ ಆಲೋಚನೆಯನ್ನು ಎತ್ತರಕ್ಕೆ ಕೊಂಡೊಯ್ಯುವುದು ಈ ಬದಲಾವಣೆಯ ಹಿಂದಿನ ಗುರಿಯಾಗಿದೆ.
ಬೆಂಗಳೂರಿನ ಕಾಲ್ತುಳಿತ ಪ್ರಕರಣ ಮತ್ತು ಕೆಲವು ಸಚಿವರ ವಿರುದ್ಧದ ವಿವಾದಗಳು ಸೇರಿದಂತೆ ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಈ ಭೇಟಿಯಲ್ಲಿ ಚರ್ಚೆಗೆ ಬರಲಿವೆ. ಪಕ್ಷದ ವರ್ಚಸ್ಸು ವೃದ್ಧಿಗೆ ಈ ಬದಲಾವಣೆ ಅಗತ್ಯವೆಂದು ಹೈಕಮಾಂಡ್ ಭಾವಿಸಿದೆ ಎಂದು ರಾಜಕೀಯ ಕಾರಿಡಾರ್ನಲ್ಲಿ ಮಾತುಕತೆಗಳು ನಡೆಯುತ್ತಿವೆ.
ಸಿಎಂ ಸಿದ್ದರಾಮಯ್ಯರ ನಿಲುವು ಏನು?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೊಡ್ಡ ಪ್ರಮಾಣದ ಸಂಪುಟ ಪುನರ್ರಚನೆಗೆ ಸಂಪೂರ್ಣ ಒಪ್ಪಿಗೆ ತೋರಿಲ್ಲ. ಒಂದು ಖಾಲಿ ಸ್ಥಾನವನ್ನು ಭರ್ತಿ ಮಾಡುವುದರ ಜೊತೆಗೆ, ವಿವಾದಕ್ಕೆ ಸಿಲುಕಿರುವ ಸುಮಾರು ಮೂವರು ಸಚಿವರನ್ನು ಕೈಬಿಟ್ಟು ಸಣ್ಣ ಮಟ್ಟದ ಬದಲಾವಣೆಗೆ ಸಿದ್ದರಾಮಯ್ಯ ಒಲವು ತೋರಿದ್ದಾರೆ ಎಂದು ತಿಳಿದುಬಂದಿದೆ. ರಾಜಕೀಯ ಸ್ಥಿರತೆಯನ್ನು ಕಾಪಾಡಿಕೊಳ್ಳುವ ಉದ್ದೇಶ ಸಿದ್ದರಾಮಯ್ಯ ಅವರ ಈ ನಿಲುವಿನ ಹಿಂದಿದೆ ಎನ್ನಲಾಗಿದೆ. ಇದರ ಜೊತೆಗೆ, ಡಿಕೆ ಶಿವಕುಮಾರ್ ಅವರ ಬಣದೊಂದಿಗಿನ ಆಂತರಿಕ ಸ್ಪರ್ಧೆಯೂ ಸಂಪುಟ ಪುನರ್ರಚನೆಯ ಚರ್ಚೆಯಲ್ಲಿ ಪ್ರಮುಖ ಅಂಶವಾಗಿದೆ.
ಡಿಕೆ ಶಿವಕುಮಾರ್ರ ಪಾತ್ರ
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಕೂಡ ಈ ಭೇಟಿಯಲ್ಲಿ ಪಾಲ್ಗೊಳ್ಳುವ ಸಾಧ್ಯತೆ ಇದ್ದು, ಅವರ ಮುಖ್ಯಮಂತ್ರಿ ಆಕಾಂಕ್ಷೆಯೂ ಚರ್ಚೆಗೆ ಬರಬಹುದು. ಕಳೆದ ಕೆಲವು ತಿಂಗಳುಗಳಿಂದ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣಗಳ ನಡುವಿನ ಭಿನ್ನಾಭಿಪ್ರಾಯಗಳು ಕಾಂಗ್ರೆಸ್ನಲ್ಲಿ ಗೊಂದಲ ಸೃಷ್ಟಿಸಿವೆ. ಡಿಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಜೊತೆಗೆ ಸಂಪುಟದಲ್ಲಿ ತಮ್ಮ ಬೆಂಬಲಿಗರಿಗೆ ಹೆಚ್ಚಿನ ಅವಕಾಶಕ್ಕಾಗಿ ಒತ್ತಾಯಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
ಹೈಕಮಾಂಡ್ನ ಅಂತಿಮ ತೀರ್ಮಾನ
ಇಂದಿನ ಭೇಟಿಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಸುರ್ಜೆವಾಲಾ ಅವರೊಂದಿಗಿನ ಚರ್ಚೆಯ ನಂತರ ಸಂಪುಟ ಪುನರ್ರಚನೆಯ ರೂಪರೇಷೆ ಸ್ಪಷ್ಟವಾಗುವ ಸಾಧ್ಯತೆ ಇದೆ. ಹೈಕಮಾಂಡ್ನ ಅಭಿಪ್ರಾಯ ಮತ್ತು ಸಿದ್ದರಾಮಯ್ಯರ ಒಲವನ್ನು ಆಧರಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಸಂಜೆಯ ವೇಳೆಗೆ ಈ ವಿಷಯದ ಬಗ್ಗೆ ಸ್ಪಷ್ಟ ಚಿತ್ರಣ ಹೊರಬೀಳುವ ನಿರೀಕ್ಷೆ ಇದೆ.