ಅಸಮಾಧಾನ ಶಮನಕ್ಕೆ ಮುಂದಾದ ಸಿಎಂ, ಡಿಸಿಎಂ ; ಶಾಸಕರೊಂದಿಗೆ ಪ್ರತ್ಯೇಕ ಮಾತುಕತೆ
ಮನೆ ಹಂಚಿಕೆಯಲ್ಲಿ ಲಂಚದ ಆರೋಪ ಮಾಡಿದ್ದ ಬಿ.ಆರ್ ಪಾಟೀಲ್ ಜೊತೆ ಸಿಎಂ ಹಾಗೂ ಡಿಸಿಎಂ ಪ್ರತ್ಯೇಕ ಸಮಾಲೋಚನೆ ನಡೆಸಿದ್ದಾರೆ.;
ಅನುದಾನ, ಭ್ರಷ್ಟಾಚಾರ ವಿಚಾರವಾಗಿ ಸರ್ಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡಿದ್ದ ಸ್ವಪಕ್ಷೀಯ ಶಾಸಕರ ಮನವೊಲಿಕೆಗೆ ಮುಂದಾದ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮುಂದಾಗಿದ್ದಾರೆ.
ಮನೆ ಹಂಚಿಕೆಯಲ್ಲಿ ಲಂಚದ ಆರೋಪ ಮಾಡಿದ್ದ ಬಿ.ಆರ್ ಪಾಟೀಲ್ ಜೊತೆ ಇಬ್ಬರೂ ನಾಯಕರು ಪ್ರತ್ಯೇಕ ಸಮಾಲೋಚನೆ ನಡೆಸಿದ್ದಾರೆ.
30 ನಿಮಿಷಕ್ಕೂ ಹೆಚ್ಚು ಕಾಲ ಚರ್ಚೆ
ಇಬ್ಬರ ಬಳಿಯೂ ಮನೆ ಹಂಚಿಕೆಯಲ್ಲಿ ಯಾವ ರೀತಿ ಲಂಚ ಪಡೆದಿದ್ದಾರೆ ಎಂದು ಬಿ.ಆರ್ ಪಾಟೀಲ್ ವಿವರಿಸಿದ್ದಾರೆ.
ಶಾಸಕನಾಗಿ ನಾನು ಹೇಳಿದರೂ ಮನೆ ಮಂಜೂರಾಗುವುದಿಲ್ಲ. ಬೇರೆಯವರು ಹೇಳಿದರೆ ಮನೆ ಮಂಜೂರು ಮಾಡಲಾಗುತ್ತಿತ್ತು. ಈ ಬಗ್ಗೆ ಸಾಕಷ್ಟು ಬಾರಿ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ. ಅದಕ್ಕೆ ಬಹಿರಂಗ ಹೇಳಿಕೆ ಕೊಡಬೇಕಾಯಿತು ಎಂದು ಪಾಟೀಲ್ ಸ್ಪಷ್ಟೀಕರಣ ನೀಡಿದ್ದಾರೆ.
ಬಹಿರಂಗ ಹೇಳಿಕೆ ಕೊಡದಂತೆ ಮನವಿ
ಯಾವುದೇ ಸಮಸ್ಯೆ ಇದ್ದರೂ ನನ್ನ ಗಮನಕ್ಕೆ ತನ್ನಿ. ಈ ರೀತಿ ಅಸಮಾಧಾನ ಹೇಳಿಕೆ ಅದರಲ್ಲೂ ಲಂಚದ ಆರೋಪ ಹೇಳಿಕೆ ನೀಡಿ ಸರ್ಕಾರಕ್ಕೆ ಮುಜುಗರ ತರಬೇಡಿ ಎಂದು ಸಿಎಂ ಹಾಗೂ ಡಿಸಿಎಂ ಅವರು ಬಿ.ಆರ್.ಪಾಟೀಲ್ ಅವರಿಗೆ ಮನವಿ ಮಾಡಿಕೊಂಡಿದ್ದಾರೆ.
ಯಾವುದೇ ಕೆಲಸಗಳಿದ್ದರೂ ಮಾಡಿಕೊಡುತ್ತೇವೆ. ಆದರೆ, ಪ್ರತಿಪಕ್ಷಗಳಿಗೆ ನಿಮ್ಮ ಹೇಳಿಕೆಗಳು ಆಹಾರ ಆಗುತ್ತದೆ ಎಂದು ಸಿಎಂ ಅಸಮಾಧಾನ ವ್ಯಕ್ತಪಡಿಸಿದರು ಎಂದು ತಿಳಿದು ಬಂದಿದೆ.
ಕಾಂಗ್ರೆಸ್ ಶಾಸಕರ ಬಹಿರಂಗ ಹೇಳಿಕೆಗಳಿಂದ ಸರ್ಕಾರಕ್ಕೆ ಮುಜುಗರವಾಗಿತ್ತು. ಸಿಎಂ ಅವರು ದೆಹಲಿಗೆ ಹೋಗಿದ್ದಾಗ ಈ ಬಗ್ಗೆ ಹೈಕಮಾಂಡ್ ನಾಯಕರು ಅಸಮಾಧಾನ ಹೊರಹಾಕಿದ್ದರು. ಅಲ್ಲದೇ ಶಾಸಕರನ್ನು ಖುದ್ದು ಮನವೊಲಿಕೆ ಮಾಡುವಂತೆಯೂ ಸಿಎಂ ಹಾಗೂ ಡಿಸಿಎಂ ಅವರಿಗೆ ಸೂಚಿಸಿದ್ದರು. ಹಾಗಾಗಿ ಅಸಮಾಧಾನಿತ ಶಾಸಕರೊಂದಿಗೆ ಸಿಎಂ ಹಾಗೂ ಡಿಸಿಎಂ ಮಾತುಕತೆ ಅರಂಭಿಸಿದ್ದಾರೆ.