ಕಾವೇರಿ ಆರತಿಯಿಂದ ರಾಜ್ಯದ ಜನರಿಗೆ ಅನುಕೂಲ: ಡಿಸಿಎಂ ಡಿ.ಕೆ. ಶಿವಕುಮಾರ್‌

ಕಾವೇರಿಗೆ ನಮನ ಸಲ್ಲಿಸಲು ಸಾಕಷ್ಟು ಸಲಹೆಗಳು ಬಂದಿವೆ. ಇದಕ್ಕೆ ಯಾವುದೇ ಜಾತಿ, ಧರ್ಮ, ಬಣ್ಣವಿಲ್ಲ. ಕಾವೇರಿ ಎಲ್ಲರ ಆಸ್ತಿಯಾಗಿದ್ದು ರೈತರ ಅಭಿಪ್ರಾಯಗಳನ್ನು ಕೇಳಿದ್ದೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್‌ ತಿಳಿಸಿದರು.;

Update: 2025-06-25 11:42 GMT

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌.

ಕಾವೇರಿ ಆರತಿ ಮಾಡುವುದರಿಂದ ರಾಜ್ಯದ ಜನರಿಗೆ ಹಾಗೂ ರೈತರಿಗೆ ಅನುಕೂಲವಾಗುತ್ತದೆ. ಪ್ರಯತ್ನ ವಿಫಲ‌ವಾಗಬಹುದು ಆದರೆ ಪ್ರಾರ್ಥನೆ ವಿಫಲ‌ವಾಗುವುದಿಲ್ಲ. ಪ್ರವಾಸಿಗರನ್ನು ಆಕರ್ಷಿಸಲು ಕೆಆರ್‌ಎಸ್‌ಗೆ ಹೊಸ ರೂಪ‌ ಕೊಡಲು ಪ್ರಾರಂಭಿಸಿದ್ದೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ತಿಳಿಸಿದರು.

ಬುಧವಾರ(ಜೂ.25) ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾವೇರಿಗೆ ನಮನ ಸಲ್ಲಿಸಲು ಸಾಕಷ್ಟು ಸಲಹೆಗಳು ಬಂದಿವೆ. ತಾಯಿ ಕಾವೇರಿಗೆ ಯಾವುದೇ ಜಾತಿ, ಧರ್ಮ, ಬಣ್ಣವಿಲ್ಲ. ಕಾವೇರಿ ಎಲ್ಲರ ಆಸ್ತಿಯಾಗಿದ್ದು ರೈತರ ಅಭಿಪ್ರಾಯಗಳನ್ನು ಕೇಳಿದ್ದೇವೆ ಎಂದರು.

ಶೇ. 70 ಆಸನಗಳು ಉಚಿತ

ಜಲಾಶಯಕ್ಕೆ ತೊಂದರೆ ಆಗಬಹುದು ಎಂಬ ಆತಂಕ ರೈತರಿಗಿದೆ. ವಾರಕ್ಕೆ ಮೂರು ದಿನ ಕಾವೇರಿ ಆರತಿ ನಡೆಯಲಿದ್ದು 10 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದ್ದು ಶೇ. 70 ಆಸನಗಳು ಉಚಿತವಾಗಿ ನೀಡಲಿದ್ದು , ಶೇ. 30 ಆಸನಗಳಿಗೆ ಟಿಕೆಟ್ ನಿಗದಿಪಡಿಸಲಾಗುವುದು. ಕಾವೇರಿ ಆರತಿ ಕಾರ್ಯಕ್ರಮದ ಮಾರ್ಗಸೂಚಿಯನ್ನು ಕೆಲವೇ ದಿನದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.

ಸ್ಥಳಿಯರಿಗೆ ಉದ್ಯೋಗ

ಕಾವೇರಿ ಆರತಿಯಲ್ಲಿ ಮೈಸೂರು, ಮಂಡ್ಯ, ಕೊಡಗು, ಮಂಗಳೂರು ಸಂಸ್ಕೃತಿಯನ್ನೂ ಸೇರಿಸುತ್ತೇವೆ. ಸ್ಥಳೀಯರಿಗೆ ಮಾತ್ರ ಉದ್ಯೋಗ ಕೊಡಬೇಕೆಂದು ಸೂಚಿಸಿದ್ದೇವೆ. ಕೇಂದ್ರ ಸಚಿವ ಹೆಚ್‌.ಡಿ. ಕುಮಾರಸ್ವಾಮಿ ಅವರೇ ಡಿಸ್ನಿಲ್ಯಾಂಡ್ ಮಾಡಬೇಕು ಎಂದು ನಮಗೆ ಹೇಳಿದ್ದರು. ಒಬ್ಬ ವ್ಯಕ್ತಿ ಚೆನ್ನಾಗಿ ಬೆಳೆಯುತ್ತಿದ್ದಾನೆ ಎಂದರೆ ಅಪಸ್ವರ ಇರುತ್ತದೆ ಎಂದರು.

ಯೋಜನೆ ಅನುಮತಿ ಇಲ್ಲದೆ ಮನೆ ನಿರ್ಮಾಣ ಬೇಡ

ರಾಜ್ಯದ ಜನರು ಯೋಜನೆ ಅನುಮತಿ ಇಲ್ಲದೆ ಮನೆ ಕಟ್ಟಲು ಹೋಗಬಾರದು. ಅಂತಹ ಮನೆಗಳಿಗೆ ವಿದ್ಯುತ್‌, ನೀರು ಕೊಡಬಾರದು ಎಂಬ ಸುಪ್ರೀಂ ಕೋರ್ಟ್‌ ಆದೇಶಿಸಿದೆ. ಸುಮಾರು 2.5 ಲಕ್ಷ ಮನೆಗಳಿಗೆ ವಿದ್ಯುತ್‌ ನಿರಾಕರಿಸಲಾಗಿದೆ. ಈ ಸಂಬಂಧ ಈಗಾಗಲೇ ನಾಲ್ಕು ಬಾರಿ ಸಭೆ ನಡೆಸಲಾಗಿದ್ದು ಕಾನೂನು ತಜ್ಞರ ಜತೆ ಸಭೆ ನಡೆಸಿ ನಿರ್ಧಾರ ಪ್ರಕಟಿಸಲಾಗುವುದು ಎಂದು ತಿಳಿಸಿದರು.

ಕೆಲ ಶಾಸಕರಿಗೆ ಪ್ರೀತಿ ಹೆಚ್ಚಾಗಿದೆ

ಕೆಪಿಸಿಸಿ ಅಧ್ಯಕ್ಷರು ನಮಗೆ ಸಿಗುವುದೇ ಇಲ್ಲ ಎಂಬ ಶಾಸಕ ರಾಜು ಕಾಗೆ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನೀವು ಪ್ರತಿದಿನ ಬಂದರೆ ನಾನು ಮುಖ ತೋರಿಸುತ್ತೇನೆ. ಪಾಪ ನಮ್ಮ ಕೆಲ ಶಾಸಕರಿಗೆ ನಮ್ಮ ಮೇಲೆ ಪ್ರೀತಿ ಜಾಸ್ತಿಯಾಗಿದೆ. ಅಸಮಾಧಾನಿತ ಶಾಸಕರನ್ನು ಕರೆದು ಮಾತನಾಡುತ್ತೇನೆ ಎಂದರು.

Tags:    

Similar News