ಕೇಂದ್ರ ಸರ್ಕಾರ ಚೀನಾಗೆ ಗುತ್ತಿಗೆ ಕೊಟ್ಟಿದ್ದೇ ಹಳದಿ ಮೆಟ್ರೋ ಮಾರ್ಗ ವಿಳಂಬಕ್ಕೆ: ಆಪ್
ಚೀನಾದ ಸರ್ಕಾರಿ ಮಾಲೀಕತ್ವದ ಸಂಸ್ಥೆಗೆ ರೈಲು ಬೋಗಿಗಳ ನಿರ್ಮಾಣ ಗುತ್ತಿಗೆ ನೀರಿರುವುದು ಸಹ ವಿಳಂಬಕ್ಕೆ ಮತ್ತೊಂದು ಪ್ರಮುಖ ಕಾರಣವಾಗಿದೆ ಎಂದು ಆಮ್ ಆದ್ಮಿ ಪಾರ್ಟಿ ಆರೋಪಿಸಿದೆ.;
ಆಮ್ ಆದ್ಮಿ ಪಾರ್ಟಿ
ನಮ್ಮ ಮೆಟ್ರೋದ ಹಳದಿ ಮಾರ್ಗದ ವಿಳಂಬಕ್ಕೆ ಈ ಹಿಂದೆ ರಾಜ್ಯವನ್ನಾಳಿದ್ದ ಹಾಗೂ ಈಗಿನ ಕೇಂದ್ರದ ಬಿಜೆಪಿ ಸರ್ಕಾರಗಳೇ ನೇರ ಹೊಣೆ ಎಂದು ಆಮ್ ಆದ್ಮಿ ಪಕ್ಷದ (ಆಪ್) ರಾಜ್ಯ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥ ದರ್ಶನ್ ಜೈನ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
"ಹಳದಿ ಮಾರ್ಗದ ನಿರ್ಮಾಣದಲ್ಲಿನ ಅತಿ ವಿಳಂಬಕ್ಕೆ ಅಗತ್ಯ ಅನುಮತಿಗಳು, ಭೂ ಸ್ವಾಧೀನ ಪ್ರಕ್ರಿಯೆಗಳು ಮತ್ತು ಬಹುಮುಖ್ಯವಾಗಿ ಹೆಬ್ಬಗೋಡಿ ಡಿಪೋ ನಿರ್ಮಾಣದಲ್ಲಿ ಆದ ವಿಳಂಬ ನೀತಿಯೇ ಪ್ರಮುಖ ಕಾರಣ" ಎಂದು ದರ್ಶನ್ ಜೈನ್ ಆರೋಪಿಸಿದರು. ಇದಲ್ಲದೆ, ಭಾರತೀಯ ಸಂಸ್ಥೆಗಳ ಬದಲಿಗೆ ಚೀನಾದ ಸರ್ಕಾರಿ ಮಾಲೀಕತ್ವದ ಸಿಆರ್ಸಿಸಿ (CRCC) ಸಂಸ್ಥೆಗೆ ರೈಲು ಬೋಗಿಗಳ ನಿರ್ಮಾಣ ಗುತ್ತಿಗೆ ನೀಡಿರುವುದು ಸಹ ವಿಳಂಬಕ್ಕೆ ಮತ್ತೊಂದು ಪ್ರಮುಖ ಕಾರಣ ಎಂದು ಅವರು ದೂರಿದರು.
ಬಿಜೆಪಿ 'ಡಬಲ್ ಇಂಜಿನ್' ಮತ್ತು 'ಟ್ರಿಪಲ್ ಇಂಜಿನ್' ಸರ್ಕಾರಗಳ ಮೇಲೆ ಆಪ್ ವಾಗ್ದಾಳಿ
"ಹಳದಿ ಮಾರ್ಗಕ್ಕೆ 2014 ರಲ್ಲಿ ಅನುಮತಿ ಸಿಕ್ಕಿದ್ದರೂ, ಗುತ್ತಿಗೆ ಪ್ರಕ್ರಿಯೆ 2019ರಲ್ಲಿ, ಅಂದರೆ ಐದು ವರ್ಷಗಳ ದೀರ್ಘ ವಿಳಂಬದ ನಂತರ ಶುರುವಾಯಿತು" ಎಂದು ದರ್ಶನ್ ಜೈನ್ ವಿವರಿಸಿದರು. "2019ರ ಡಿಸೆಂಬರ್ನಲ್ಲಿ ರೈಲು ಬೋಗಿಗಳ ಗುತ್ತಿಗೆಯನ್ನು ಚೀನಾದ ಸಿಆರ್ಸಿಸಿಗೆ ನೀಡಲಾಗಿತ್ತು. ಆ ವೇಳೆ ಕೋವಿಡ್ ಆವರಿಸಲಾರಂಭಿಸಿತ್ತು ಮತ್ತು ಭಾರತ-ಚೀನಾ ಗಡಿ ವಿವಾದ ಶುರುವಾಗಿತ್ತು. ಈ ಗುತ್ತಿಗೆಯನ್ನು ರದ್ದುಪಡಿಸಿ, 2020ರ ಒಳಗಾಗಿಯೇ ಭಾರತದ ಬೆಮೆಲ್ ಅಥವಾ ಟೀಟಾಗರ್ ಸಂಸ್ಥೆಗೆ ನೇರ ಗುತ್ತಿಗೆ ನೀಡಬಹುದಿತ್ತು. ಈ ಸಂದರ್ಭದಲ್ಲಿ ಬಿಜೆಪಿಯ 'ಡಬಲ್ ಇಂಜಿನ್' ಸರ್ಕಾರವಿದ್ದರೂ ಯಾಕೆ ಈ ಕ್ರಮ ಕೈಗೊಳ್ಳಲಿಲ್ಲ?" ಎಂದು ಅವರು ಪ್ರಶ್ನಿಸಿದರು.
ಹೆಬ್ಬಗೋಡಿ ಡಿಪೋ ಭೂ ಸ್ವಾಧೀನ ದೀರ್ಘ ವಿಳಂಬವಾಗುತ್ತಿದ್ದಾಗಲೂ ಮಹಾನಗರ ಪಾಲಿಕೆ, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಬಿಜೆಪಿಯದ್ದೇ ಆಗಿದ್ದರೂ ಅಗತ್ಯ ಕ್ರಮ ಯಾಕೆ ಕೈಗೊಳ್ಳಲಿಲ್ಲ ಎಂದು ಜೈನ್ ವಾಗ್ದಾಳಿ ನಡೆಸಿದ್ದಾರೆ. "ಬಹಳ ಹಿಂದಿನಿಂದಲೂ ನಮ್ಮ ಮೆಟ್ರೋ ಮತ್ತು ಕೇಂದ್ರ ಸರ್ಕಾರದ ಸಹಯೋಗ ಶಾಪಗ್ರಸ್ತ ರೀತಿಯಲ್ಲಿ ಕೆಟ್ಟಿದ್ದರೂ, ಬೆಂಗಳೂರಿನವರೇ ಆದ ಅನಂತ್ ಕುಮಾರ್, ಶೋಭಾ ಕರಂದ್ಲಾಜೆ, ಡಿ.ವಿ. ಸದಾನಂದ ಗೌಡ, ನಿರ್ಮಲಾ ಸೀತಾರಾಮನ್, ರಾಜೀವ್ ಚಂದ್ರಶೇಖರ್ ರಂತಹ ಬಿಜೆಪಿ ಸಚಿವರುಗಳು ಹಾಗೂ ಈಗಿನ ಸಂಸದರಾದ ತೇಜಸ್ವಿ ಸೂರ್ಯ, ಪಿ.ಸಿ. ಮೋಹನ್ ರಂತಹ ಕೇಂದ್ರದ ನಾಯಕರುಗಳು ಸುಗಮ ಸಂವಹನ ಮತ್ತು ಅನುಮತಿಗಳ ವಿಳಂಬವನ್ನು ಯಾಕೆ ತಡೆಯಲಿಲ್ಲ?" ಎಂದು ಅವರು ಪ್ರಶ್ನಿಸಿದರು.
ಬಿಜೆಪಿಯ ಬೇಜವಾಬ್ದಾರಿ ನೀತಿ
"ಶನಿವಾರ ನಮ್ಮ ಮೆಟ್ರೋದ ವಿಳಂಬ ನೀತಿಯ ವಿರುದ್ಧ ಜನಾಕ್ರೋಶ ಮೂಡಿಸುವ ಕೆಲಸ ಮಾಡುತ್ತಿರುವ ತೇಜಸ್ವಿ ಸೂರ್ಯ ಮತ್ತು ಬಿಜೆಪಿ ಇನ್ನಿತರ ನಾಯಕರುಗಳು ತಮ್ಮ ಕೈಲಿ ಅಧಿಕಾರವಿದ್ದೂ, 'ತ್ರಿಬಲ್ ಇಂಜಿನ್' ಸರ್ಕಾರವಿದ್ದೂ ಮಾಡಬೇಕಾದ ಕೆಲಸಗಳನ್ನು ಯಾಕೆ ಮಾಡಲಿಲ್ಲ ಎಂಬ ಪ್ರಶ್ನೆ ಜನರಲ್ಲಿ ಮೂಡುತ್ತಿದೆ" ಎಂದು ದರ್ಶನ್ ಜೈನ್ ಅಭಿಪ್ರಾಯಪಟ್ಟರು. ನಮ್ಮ ಮೆಟ್ರೋದ "ಬಸವನಹುಳು ಮಾದರಿಯ ಕಾರ್ಯನಿರ್ವಹಣೆ"ಯನ್ನೂ ಮತ್ತು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ "ಜನವಿರೋಧಿ, ಬೇಜವಾಬ್ದಾರಿ ನೀತಿಗಳನ್ನೂ" ಆಮ್ ಆದ್ಮಿ ಪಾರ್ಟಿ ತೀವ್ರವಾಗಿ ಖಂಡಿಸುತ್ತದೆ ಎಂದು ಅವರು ತಿಳಿಸಿದರು.
"ಬೆಂಗಳೂರಿನ ಸುಗಮ ಸಂಚಾರ ನಿರ್ವಹಣೆಗೆ ಅತ್ಯಂತ ಅಗತ್ಯವಿರುವ ನಮ್ಮ ಮೆಟ್ರೋ ಮತ್ತು ಸಬ್ ಅರ್ಬನ್ ರೈಲು ಕಾಮಗಾರಿಗಳ ತೀವ್ರ ವಿಳಂಬವನ್ನೂ ನಾವು ಖಂಡಿಸುತ್ತೇವೆ" ಎಂದು ದರ್ಶನ್ ಜೈನ್ ಹೇಳಿದರು. ಆಮ್ ಆದ್ಮಿ ಪಕ್ಷವು ಅತಿ ಶೀಘ್ರವಾಗಿ ಬೆಂಗಳೂರಿನ ಎಲ್ಲಾ ಮೆಟ್ರೋ ಕಾಮಗಾರಿಗಳು ಮತ್ತು ಸಬ್ ಅರ್ಬನ್ ರೈಲು ಕಾಮಗಾರಿಗಳ ಪರಿಶೀಲನೆಯನ್ನು ನಡೆಸಿ, ಜನರ ಮುಂದೆ ಸತ್ಯವನ್ನು ತೆರೆದಿಡುವ ಕೆಲಸ ಮಾಡಲಿದೆ ಎಂದು ಅವರು ಘೋಷಿಸಿದರು.