ರಹಸ್ಯ ಬೇಧಿಸಿದ ರೋಚಕ ತನಿಖೆ | ಬದುಕಿರುವಾಗಲೇ ದಿವಂಗತನಾದ ಮುನಿಸ್ವಾಮಿ ಗೌಡ!

Update: 2024-08-24 13:22 GMT

ಜೀವ ವಿಮಾ ಹಣ ಪಡೆಯಲು ತನ್ನನ್ನೇ ಹೋಲುವ ಅಮಾಯಕನೋರ್ವನನ್ನು ಕೊಲೆ ಮಾಡಿ ಅಪಘಾತದಲ್ಲಿ ಮೃತಪಟ್ಟಿರುವಂತೆ ಬಿಂಬಿಸಿ ವಂಚಿಸಲು ಯತ್ನಿಸಿದ ಖತರ್ನಾಕ್‌ ಆರೋಪಿ ದಂಪತಿಯ ಸಂಚನ್ನು ಹಾಸನ ಜಿಲ್ಲೆಯ ಗಂಡಸಿ ಪೊಲೀಸರು ಬಯಲುಮಾಡಿದ್ದಾರೆ.

ಆ.13ರಂದು ಗಂಡಸಿ ಬಳಿಯ ಗೊಲ್ಲರಹೊಸಳ್ಳಿ ಗೇಟ್ ಬಳಿ ಅಪಘಾತ ನಡೆದಿತ್ತು. ಪ್ರಕರಣದ ತನಿಖೆ ಬಳಿಕ ಇದೀಗ ಸತ್ಯ ಬಯಲಾಗಿದೆ.

ಹೊಸಕೋಟೆ ತಾಲೂಕಿನ ಚಿಕ್ಕಕೋಲಿಗ ಗ್ರಾಮದ ಮುನಿಸ್ವಾಮಿ ಗೌಡ ಹಾಗೂ ಶಿಲ್ಪರಾಣಿ ಬಂಧಿತ ದಂಪತಿ. ಮೇಲ್ನೋಟಕ್ಕೆ ಕೊಲೆಯಾಗಿರುವ ವ್ಯಕ್ತಿ ಓರ್ವ ಭಿಕ್ಷುಕ ಎಂಬ ಮಾಹಿತಿ ಲಭ್ಯವಾಗಿದ್ದು, ಆತನ ಗುರುತು ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಡೆದ್ದದ್ದು ಏನು?

ಆಗಸ್ಟ್​ 12 ರಂದು ಅರಸೀಕೆರೆ ತಾಲೂಕಿನ ಗೊಲ್ಲರಹೊಸಳ್ಳಿ ಗೇಟ್ ಬಳಿಯ ರಸ್ತೆಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿತ್ತು. ಅದೇ ಸ್ಥಳದಲ್ಲಿ ಪಂಚರ್ ಆಗಿದ್ದ ಕಾರು ಹಾಗೂ ಒಂದು ಲಾರಿ ಸಿಕ್ಕಿದ್ದವು. ಮೇಲ್ನೋಟಕ್ಕೆ ಪಂಚರ್ ಆಗಿದ್ದ ಕಾರಿನ ಟೈರ್ ಬದಲಿಸುತ್ತಿದ್ದ ವ್ಯಕ್ತಿಯ ಮೇಲೆ ಲಾರಿ ಹರಿದು ಮೃತಪಟ್ಟಂತೆ ಕಾಣಿಸುತ್ತಿತ್ತು. ಅಪರಿಚಿತ ಮೃತ ದೇಹವನ್ನು ಹಾಸನ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದ್ದು, ಪೊಲೀಸರು ಗುರುತು ಪತ್ತೆಗೆ ಮುಂದಾಗಿದ್ದರು.

ಮರುದಿನ (ಆ.13 ರಂದು) ಜಿಲ್ಲಾಸ್ಪತ್ರೆಗೆ ಬಂದಿದ್ದ ಶಿಲ್ಪರಾಣಿ, ಈ ಮೃತದೇಹ ತನ್ನ ಪತಿ ಮುನಿಸ್ವಾಮಿ ಗೌಡರದ್ದು ಎಂದು ಗುರುತಿಸಿದ್ದಳು. ಮರಣೋತ್ತರ ಪರೀಕ್ಷೆ ನಂತರ ಮೃತದೇಹವನ್ನು ಕೊಂಡೊಯ್ದಿದ್ದ ಆಕೆ, ಅಂದೇ ಹೊಸಕೂಟಿ ತಾಲೂಕಿನ ಚಿಕ್ಕಹೋಲಿಗ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ಕೂಡ ನಡೆಸಿದ್ದಳು.

ಈ ಬಗ್ಗೆ ಗಂಡಸಿ ಪೊಲೀಸ್‌‍ ಠಾಣೆಯಲ್ಲಿ 304 ಅಡಿ ಪ್ರಕರಣ ದಾಖಲಾಗಿತ್ತು. ಮೃತ ವ್ಯಕ್ತಿಯ ಕುತ್ತಿಗೆಯಲ್ಲಿ ಗಾಯದ ಗುರುತು ಇದ್ದಿದ್ದರಿಂದ ಪ್ರಕರಣದ ಬಗ್ಗೆ ಅನುಮಾನಗೊಂಡ ಪೊಲೀಸರು ತನಿಖೆ ಆರಂಭಿಸಿದ್ದರು. ಪ್ರಕರಣದ ಬಗ್ಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಮಹಮದ್‌ ಸುಜೀತಾ ಅವರಿಗೆ ಮಾಹಿತಿ ನೀಡಿದ್ದ ಗಂಡಸಿ ಠಾಣಾ ಪೊಲೀಸರು ಹಾಗೂ ಅರಸೀಕೆರೆ ವೃತ್ತ ನಿರೀಕ್ಷರಿಗೆ ತನಿಖೆ ವೇಳೆ ಆಘಾತಕಾರಿ ಅಂಶ ಬೆಳಕಿಗೆ ಬಂದಿತ್ತು.

ದಂಪತಿಯ ಲೆಕ್ಕಾಚಾರ?

ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ ಟೈರ್ ಮಾರಾಟ ಮಳಿಗೆ ಹೊಂದಿದ್ದ ಮುನಿಸ್ವಾಮಿ ಗೌಡ ಆರ್ಥಿಕ ಸಮಸ್ಯೆ ಎದುರಿಸುತ್ತಿದ್ದರು. ಇದರಿಂದಾಗಿ ತನ್ನ ಮರಣಾನಂತರ ದೊರೆಯುವ ಜೀವ ವಿಮಾ ಹಣವನ್ನು ಬದುಕಿದ್ದಾಗಲೇ ಲಪಟಾಯಿಸಲು ಪತ್ನಿ ಜಡೆಗೂಡಿ ತಂತ್ರ ರೂಪಸಿದ್ದ ಎಂಬುದು ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಭಿಕ್ಷುಕನೊಬ್ಬನನ್ನು ಮಾತನಾಡಿಸಿ ವಿಶ್ವಾಸಕ್ಕೆ ಪಡೆದಿದ್ದ ಮುನಿಸ್ವಾಮಿ ಗೌಡ, ತನ್ನೊಂದಿಗೆ ಕಾರಿನಲ್ಲಿ ಆತನನ್ನು ಕೂರಿಸಿಕೊಂಡು ಪ್ರಯಾಣ ಆರಂಭಿಸಿದ್ದನು. ಮಾರ್ಗಮಧ್ಯೆ ಗೊಲ್ಲರ ಹೊಸಳ್ಳಿ ಗೇಟ್ ಬಳಿ ಕಾರಿನ ಚಕ್ರ ಪಂಚರ್ ಆಗಿದ್ದು, ಚಕ್ರ ಬದಲಿಸುವಂತೆ ಭಿಕ್ಷುಕನಿಗೆ ಹೇಳಿದ್ದ. ಅದರಂತೆ ಆತ ಪಂಚರ್ ಆದ ಚಕ್ರ ಬಿಚ್ಚಲು ಕುಕ್ಕರುಗಾಲಿನಲ್ಲಿ ಕುಳಿತಿದ್ದಾಗ ಅತನ ಕುತ್ತಿಗೆಗೆ ಚೈನ್ ಹಾಕಿ ಎಳೆದು ರಸ್ತೆಗೆ ಬೀಳಿಸಿದ್ದನು. ಆಗ ಆತನ ಸಂಚಿನಂತೆ ಹಿಂಬಾಲಿಸಿಕೊಂಡು ಬಂದಿದ್ದ ಲಾರಿ ಚಾಲಕ, ಲಾರಿಯನ್ನು ಭಿಕ್ಷುಕನ ಮೇಲೆ ಹರಿಸಿ ಕೊಲೆಗೈದಿದ್ದ. ನಂತರ ಲಾರಿ, ಕಾರುಗಳನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದ ಮುನಿಸ್ವಾಮಿ ಗೌಡ ಅಜ್ಞಾತ ಸ್ಥಳದಲ್ಲಿ ತಲೆಮರೆಸಿಕೊಂಡಿದ್ದ.

ಮುನಿಸ್ವಾಮಿ ಗೌಡ ಸಂಬಂಧಿಕರಾದ ಶಿಡ್ಲಘಟ್ಟ ಪೊಲೀಸ್‌ ಇನ್ಸ್‌ಪೆಕ್ಟರ್‌ (ಸಿಪಿಐ) ಶ್ರೀನಿವಾಸ್‌‍ ಎಂಬುವರು ಕೂಡ ಮುನಿಸ್ವಾಮಿ ಗೌಡನೇ ಸತ್ತಿದ್ದಾನೆಂದು ಎಲ್ಲರಂತೆ ನಂಬಿದ್ದರು. ಆದರೆ, ಅಜ್ಞಾತ ಸ್ಥಳದಲ್ಲಿದ್ದ ಮುನಿಸ್ವಾಮಿ ಗೌಡಗೆ ಹೊರಗೆ ಏನು ನಡೆಯುತ್ತಿದೆ ಎಂದು ಗೊತ್ತಾಗದೆ ಕಂಗಾಲಾಗಿದ್ದ. ಪಾಪಪ್ರಜ್ಞೆಯಿಂದ ಅಸ್ವಸ್ಥಗೊಂಡು ಒತ್ತಡ ತಡೆಯಲಾರದೇ ಸಂಬಂಧಿಕ ಸಿಪಿಐ ಶ್ರೀನಿವಾಸ್‌‍ ಎದುರು ಹಾಜರಾಗಿದ್ದ. ಮೃತಪಟ್ಟಿದ್ದ ಮುನಿಸ್ವಾಮಿ ಗೌಡ ಜೀವಂತವಾಗಿರುವುದನ್ನು ಕಂಡ ಸಿಪಿಐ ಆ ವೇಳೆ ಅಚ್ಚರಿ ವ್ಯಕ್ತಪಡಿಸಿದ್ದರು. ಅವರಿಗೂ ಸುಳ್ಳು ಹೇಳಿದ ಆರೋಪಿ, ತಾನು ಅಪಘಾತದಲ್ಲಿ ಕಾರು ಗುದ್ದಿಸಿದ್ದರಿಂದ ಭಿಕ್ಷುಕ ಮೃತಪಟ್ಟಿದ್ದಾನೆ ಎಂದಿದ್ದ. ಆತನ ಮಾತಿನಿಂದ ಅನುಮಾನಗೊಂಡ ಅವರು, ಹೆಚ್ಚಿನ ವಿಚಾರಣೆಗಾಗಿ ಮುನಿಸ್ವಾಮಿ ಗೌಡನನ್ನು ಗಂಡಸಿ ಪೊಲೀಸರ ವಶಕ್ಕೆ ಒಪ್ಪಿಸಿದ್ದರು.

ಅತ್ತ ಪತಿಯ ಸಾವಿನ ದುಃಖದಲ್ಲಿರುವಂತೆ ನಟಿಸುತ್ತಿದ್ದ ಶಿಲ್ಪಾರಾಣಿ, ಅದುವರೆಗೂ ತನಿಖೆಗೆ ಸಹಕಾರ ನೀಡಿರಲಿಲ್ಲ. ಮುನಿಸ್ವಾಮಿ ಗೌಡ ತಮ್ಮ ವಶಕ್ಕೆ ಸಿಕ್ಕಿರುವ ವಿಷಯ ತಿಳಿಸದೇ ಪೊಲೀಸರು ವಿಚಾರಣೆ ನಡೆಸಿದಾಗ ಆಕೆ ನಾಟಕ ಮುಂದುವರಿಸಿದ್ದಳು. ತಕ್ಷಣ ಪೊಲೀಸರು ಪತಿಯನ್ನು ಆಕೆಯ ಮುಂದೆ ನಿಲ್ಲಿಸಿದಾಗ ಕಕ್ಕಾಬಿಕ್ಕಿಯಾಗಿ ಸತ್ಯ ಬಾಯ್ದಿಟ್ಟಿದ್ದಳು.

ಸದ್ಯ ಆರೋಪಿಗಳಿಬ್ಬರನ್ನು ಬಂಧಿಸಿದ್ದು ಈ ಖತರ್ನಾಕ್ ದಂಪತಿಯ ಸಂಚಿಗೆ ಬಲಿಯಾದ ಅಮಾಯಕನ ಗುರುತು ಇನ್ನೂ ಪತ್ತೆಯಾಗಬೇಕಾಗಿದೆ. ಲಾರಿ, ಕಾರು ವಶಕ್ಕೆ ಪಡೆಯಲಾಗಿದ್ದು, ಕೃತ್ಯಕ್ಕೆ ಸಹಾಯ ಮಾಡಿದ್ದ ಲಾರಿ ಚಾಲಕನಿಗಾಗಿ ಶೋಧ ನಡೆಸುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Tags:    

Similar News