ಆಪಲ್‌ ಎಂಬ ಬೈಕ್‌ ಕಳ್ಳನ ʼಋಣʼ ಭಾರ ಕೇಳಿ ಬಿಚ್ಚಿದ ಬೆಂಗಳೂರು ಪೊಲೀಸರು!

ಋಣ ತೀರಿಸುವುದಕ್ಕಾಗಿ ದುಬಾರಿ ಬೆಲೆಯ ಬೈಕ್‌ ಕಳ್ಳತನಕ್ಕೆ ಇಳಿಯುವ ಮಟ್ಟಿಗೆ ಆತನ ಮೇಲಿದ್ದ ಆ ಮಹಾ ಋಣ ಯಾವುದು ಎಂದಿರಾ? ಹೌದು, ಆತನ ಬದುಕಿಗೆ ಆಸರೆಯಾದ ಋಣ ಅದು!

Update: 2024-07-24 10:02 GMT
ಬೆಂಗಳೂರಿನ ಬೈಕ್ ಕಳ್ಳನೊಬ್ಬ ಮಹಿಳೆಯ ಕ್ಯಾನ್ಸರ್ ಚಿಕಿತ್ಸೆಗೆ ಹಣ ಬಳಸಿದ್ದಾನೆ.
Click the Play button to listen to article

ಬೈಕ್‌ ಕಳ್ಳನೊಬ್ಬನ್ನು ಹಿಡಿದ ಪೊಲೀಸರು, ಕಳ್ಳತನದ ಕಸುಬಿಗೆ ಆತ ನೀಡಿದ ಕಾರಣ ಕೇಳಿ ಬೆಚ್ಚಿಬಿದ್ದ ಸ್ಟೋರಿ ಇದು.

ಹಣ್ಣು ಮಾರಾಟಗಾರನಾಗಿದ್ದ ಆತ, ಹಣ್ಣು ಮಾರಿ ತನ್ನ ಮೇಲಿರುವ ಋಣ ತೀರಿಸಲಾಗದು ಎಂದು ಮತ್ತೊಬ್ಬ ಕಳ್ಳನ ಜೊತೆಗೂಡಿ ಬೈಕ್‌ ಕಳ್ಳತನಕ್ಕೆ ಇಳಿದಿದ್ದ. ದುಬಾರಿ ಬೆಲೆಯ ಕೆಟಿಎಂ, ಪಲ್ಸರ್‌ನಂತಹ ಬೈಕ್‌ಗಳನ್ನೇ ಟಾರ್ಗೆಟ್‌ ಮಾಡಿ ಕದಿಯುತ್ತಿದ್ದ ಆತ, ಕದ್ದು ಮಾರಾಟ ಮಾಡಿದ ಬಳಿಕ ಬರುತ್ತಿದ್ದ ಕೈತುಂಬಾ ಕಾಸನ್ನು ತನ್ನ ಮೇಲಿನ ʼಋಣʼ ತೀರಿಸಲು ಬಳಸುತ್ತಿದ್ದ!

ಋಣ ತೀರಿಸುವುದಕ್ಕಾಗಿ ದುಬಾರಿ ಬೆಲೆಯ ಬೈಕ್‌ ಕಳ್ಳತನಕ್ಕೆ ಇಳಿಯುವ ಮಟ್ಟಿಗೆ ಆತನ ಮೇಲಿದ್ದ ಆ ಮಹಾ ಋಣ ಯಾವುದು ಎಂದಿರಾ? ಹೌದು, ಆತನ ಬದುಕಿಗೆ ಆಸರೆಯಾದ ಋಣ ಅದು! 

ಹಣ್ಣು ಮಾರಾಟ ಬಿಟ್ಟು ಕಳ್ಳತನದ ವೃತ್ತಿಗಿಳಿದ ಬಳಿಕ ಆತನ ಪತ್ನಿ ಕಳ್ಳ ಗಂಡನ ಸಹವಾಸ ಬೇಡ ಎಂದು ಗುಡ್‌ ಬೈ ಹೇಳಿದ್ದಳು. ಹೆಂಡತಿ ಹಾಗೆ ನಡು ನೀರಿನಲ್ಲಿ ಬಿಟ್ಟುಹೋದ ಬಳಿಕ ದಿಕ್ಕುದೆಸೆಯಿಲ್ಲದಂತಾಗಿದ್ದ ಆತನ ಪಾಲಿಗೆ ಎಲ್ಲವೂ ಆಗಿ ಒದಗಿಬಂದವರು ಆತನ ಸ್ನೇಹಿತ ಮತ್ತು ಸ್ನೇಹಿತನ ಕುಟುಂಬ. ಆತ ಕಳ್ಳತನ ವೃತ್ತಿಗಿಳಿದಿದ್ದಾನೆ ಎಂಬುದು ಗೊತ್ತಿದ್ದರೂ ಆತನಿಗೆ ಆಶ್ರಯ ನೀಡಿದ ಆ ದಂಪತಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಹಾಗಾಗಿ ಯಾರೂ ದಿಕ್ಕಿಲ್ಲದಾಗ ತನಗೆ ಆಶ್ರಯ ನೀಡಿದ ಆ ಸ್ನೇಹಿತನ ಸಂಕಷ್ಟ ದೂರ ಮಾಡುವ ಋಣವೇ ಆ ಕಳ್ಳನನ್ನು ಕಾಡುತ್ತಿರುವುದು.

ಆ ಗೆಳೆಯನ ಕುಟುಂಬದ ಸಂಕಷ್ಟವೇನು? ಎಂದರೆ; ಗೆಳೆಯನ ಪತ್ನಿಗೆ ಸ್ತನ ಕ್ಯಾನ್ಸರ್.‌ ಬಡವರಾದ ಅವರಿಗೆ ಕ್ಯಾನ್ಸರ್‌ ಚಿಕಿತ್ಸೆಗೆ ಬೇಕಾದ ಹಣಕಾಸು ಹೊಂದಿಸುವುದು ಸಾಧ್ಯವಿಲ್ಲ. ಹಾಗಾಗಿ ಬದುಕಿನ ಭರವಸೆ ಕಳೆದುಕೊಂಡ ಆ ಕುಟುಂಬಕ್ಕೆ ಈಗ ಬೈಕ್‌ ಕಳ್ಳನೇ ಆಸರೆಯಾಗಿ ನಿಂತಿದ್ದಾನೆ. ತಾನು ಕದ್ದ ಬೈಕ್‌ಗಳನ್ನು ಮಾರಿ ಬರುವ ಕಾಸನ್ನು ಗೆಳೆಯನಿಗೆ ನೀಡಿ ತನ್ನ ಅನ್ನ ಹಾಕಿದ ಜೀವವನ್ನು ಕ್ಯಾನ್ಸರ್‌ನಿಂದ ಪಾರು ಮಾಡುವ ಪ್ರಯತ್ನ ಮಾಡುತ್ತಿದ್ದಾನೆ!

ಆದರೆ, ದುಬಾರಿ ಚಿಕಿತ್ಸೆಗೆ ಹಣ ಹೊಂದಿಸಲೆಂದೂ ದುಬಾರಿ ಬೈಕುಗಳನ್ನು ಕದಿಯುವುದು ಆತನಿಗೆ ಅನಿವಾರ್ಯವಾಗಿದೆ! ಹಾಗಾಗಿ ಮಾಡಿದ ಕೃತ್ಯ ಕಳ್ಳತನವಾದರೂ, ಅಪರಾಧವಾದರೂ ಅದರ ಹಿಂದೆ ಋಣ ತೀರಿಸುವ, ಜೀವ ಉಳಿಸುವ ಮಾನವೀಯ ಉದ್ದೇಶವಿದೆ ಎಂದು ಕಳ್ಳ ತನ್ನ ಕೃತ್ಯದ ಹಿಂದಿನ ಅಸಲಿ ಕಥೆ ಬಿಚ್ಚಿಟ್ಟಿದ್ದಾನೆ. ಆತನ ಸ್ಟೋರಿ ಕೇಳಿದ ಪೊಲೀಸರೇ ಬೆಚ್ಚಿಬಿದ್ದಿದ್ದಾರೆ.

ಅಂದ ಹಾಗೇ, ಈ ಮಾನವೀಯ ಕಳ್ಳತನದ ಪ್ರಕರಣ ನಡೆದಿರುವುದು ಬೆಂಗಳೂರಿನ ಗಿರಿನಗರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ. ಆ ಮಾನವೀಯ ಕಳ್ಳನ ಹೆಸರು ಅಶೋಕ ಅಲಿಯಾಸ್‌ ಆಪಲ್‌.

ಗಿರಿನಗರದಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಒಬ್ಬರ ಬೈಕ್‌ ಅನ್ನು ಈ ಅಶೋಕ್ ಅಲಿಯಾಸ್‌ ಆಪಲ್ ಮತ್ತು ಆತನ‌ ಕ್ರೈಂ ಪಾಟ್ನರ್‌ ಸತೀಶ್ ಕದ್ದಿದ್ದರು. ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಅಶೋಕನನ್ನು ಬಂಧಿಸಿದಾಗ ಕೃತ್ಯ ಮತ್ತು ಕೃತ್ಯದ ಹಿಂದಿನ ಕರುಣಾಜನಕ ಕಥೆ ಬಯಲಿಗೆ ಬಂದಿದೆ. ಆತನ ವಿರುದ್ಧ 15 ಕಳ್ಳತನ ಪ್ರಕರಣಗಳಿವೆ. ಕಳ್ಳತನ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಆತ ಕಳೆದ ಒಂದು ತಿಂಗಳ ಹಿಂದೆಯಷ್ಟೇ ಬಿಡುಗಡೆಯಾಗಿದ್ದ. ಇದೀಗ ಮತ್ತೊಂದು ಕಳವು ಪ್ರಕರಣದಲ್ಲಿ ಅಂದರ್‌ ಆಗಿದ್ದಾನೆ.

Tags:    

Similar News