Axiom Mission 4 |ಬಾಹ್ಯಾಕಾಶ ನಿಲ್ದಾಣದಲ್ಲಿ ಮೊಳಕೆಯೊಡೆಯಲಿವೆ ಧಾರವಾಡದ ಮೆಂತ್ಯೆ, ಹೆಸರು ಕಾಳು

"ಬಾಹ್ಯಾಕಾಶದಲ್ಲಿ ಸಲಾಡ್‌ ಬೀಜಗಳ ಮೊಳಕೆ, ಗಗನಯಾತ್ರಿಗಳ ಆಹಾರ ಪೋಷಣೆ, ಸಂಶೋಧನೆ ನಿಟ್ಟಿನಲ್ಲಿ ಬೀಜಗಳನ್ನು ಪರೀಕ್ಷಾರ್ಥವಾಗಿ ರವಾನಿಸಲಾಗಿದೆ" ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಪಾಟೀಲ ತಿಳಿಸಿದ್ದಾರೆ.;

Update: 2025-06-26 07:08 GMT

ಸಾಂದರ್ಭಿಕ ಚಿತ್ರ

ʼಆಕ್ಸಿಯಂ -4ʼ ಮಿಷನ್‌ ಬಾಹ್ಯಾಕಾಶ ಯಾನ ಕೈಗೊಂಡಿರುವ ಶುಭಾಂಶು ಶುಕ್ಲಾ ಅವರೊಂದಿಗೆ ಬಾಹ್ಯಾಕಾಶ ನಿಲ್ದಾಣಕ್ಕೆ ಧಾರವಾಡದ 'ಹೆಸರು' ಮತ್ತು 'ಮೆಂತ್ಯೆ' ಬೀಜಗಳನ್ನು ರವಾನಿಸಲಾಗಿದೆ. 

ಆಕ್ಸಿಯಂ- 4 ಮಿಷನ್‌ ನೌಕೆಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. ಬಾಹ್ಯಾಕಾಶ ನಿಲ್ದಾಣದಲ್ಲಿ ಪ್ರಯೋಗ ನಡೆಸಲು ಮೆಂತ್ಯೆ ಹಾಗೂ ಹೆಸರು ಕಾಳನ್ನೂ ಕಳುಹಿಸಲಾಗಿದೆ. ಇದು ರಾಜ್ಯದ ಪಾಲಿಗೆ ಹೆಮ್ಮೆಯ ವಿಚಾರವಾಗಿದೆ ಎಂದು ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್.ಪಾಟೀಲ ತಿಳಿಸಿದ್ದಾರೆ.

"ಬಾಹ್ಯಾಕಾಶದಲ್ಲಿ ಸಲಾಡ್‌ ಬೀಜಗಳ ಮೊಳಕೆ, ಗಗನಯಾತ್ರಿಗಳ ಆಹಾರ ಪೋಷಣೆ, ಸಂಶೋಧನೆ ನಿಟ್ಟಿನಲ್ಲಿ ಬೀಜಗಳನ್ನು ಪರೀಕ್ಷಾರ್ಥವಾಗಿ ರವಾನಿಸಲಾಗಿದೆ" ಎಂದು ಹೇಳಿದ್ದಾರೆ.

ನಾಲ್ಕು ದಿನಗಳೊಳಗೆ ಮೊಳಕೆ

ಕೃಷಿ ವಿಶ್ವವಿದ್ಯಾಲಯದಿಂದ ಕಳುಹಿಸಿರುವ ʼಹೆಸರುʼ ಹಾಗೂ 'ಮೆಂತ್ಯೆ' ಬೀಜಗಳಿಗೆ ಬಾಹ್ಯಾಕಾಶದಲ್ಲಿ ಗಗನಯಾತ್ರಿಗಳು ನೀರು ಹಾಕುತ್ತಾರೆ. ಎರಡರಿಂದ ನಾಲ್ಕು ದಿನಗಳೊಳಗೆ ಅವು ಮೊಳಕೆಯೊಡೆಯುತ್ತವೆ. ಮೊಳಕೆ ಕಾಳುಗಳನ್ನು ಬಾಹ್ಯಾಕಾಶದಲ್ಲಿ ಶೈತ್ಯ ಘಟಕದಲ್ಲಿ ಇಟ್ಟು ನಂತರ ಭೂಮಿಗೆ ಹಿಂದಿರುಗಿಸಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.

ಕೃಷಿ ವಿವಿಯಲ್ಲಿ ಅಧ್ಯಯನ

ಮೊಳಕೆ ಕಾಳುಗಳನ್ನು ವಾಪಸ್ ಭೂಮಿಗೆ ತಂದ ನಂತರ ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ನಡೆಸಲಾಗುವುದು. ಮೊಳಕೆ ಪ್ರಮಾಣ, ಅವುಗಳ ಪೋಷಕಾಂಶ ಗುಣಮಟ್ಟ, ಫೈಟೋಹಾರ್ಮೋನ್‌ಗಳ ಚಟುವಟಿಕೆ ಹಾಗೂ ಜೀವಸೂತ್ರ (ಟ್ರಾನ್ಸ್ ಕ್ರಿಪ್ಲೋಮ್) ಪರೀಕ್ಷಿಸಿ ವಿಶ್ಲೇಷಿಸಲಾಗುವುದು. ಅಲ್ಲದೇ ಮೊಳಕೆ ಮೇಲೆ ಮೈಕ್ರೋಬಿಯಲ್ ಬೆಳವಣಿಗೆಯ ಕುರಿತಂತೆಯೂ ಅಧ್ಯಯನ ಮಾಡಲಾಗುವುದು ಎಂದು ತಿಳಿಸಿದ್ದಾರೆ.

ಭವಿಷ್ಯದ ಆಹಾರಕ್ಕಾಗಿ ಸಂಶೋಧನೆ

ಈ ಸಂಶೋಧನೆಯಿಂದ ಅಂತರಿಕ್ಷದಲ್ಲಿಯೂ ಭಾರತೀಯರ ಆಹಾರದ ಭಾಗವಾದ ಆರೋಗ್ಯಕರ ಸಲಾಡ್‌ ತರಕಾರಿ ಅಭಿವೃದ್ಧಿಗೆ ಸಹಕಾರಿಯಾಗಲಿದೆ. ಮೊಳಕೆಯೊಡೆಯುವ ಬೀಜಗಳನ್ನು ಬೆಳೆಸಲು ಕೇವಲ ಕಂಟೇನರ್, ನೀರು ಇದ್ದರೆ ಸಾಕು. ಮೊಳಕೆ ಕಾಳುಗಳು ಪೋಷಕಾಂಶಭರಿತವಾಗಿರುತ್ತವೆ. ಗಗನಯಾನ ಮಿಷನ್ ಭವಿಷ್ಯದ ಯಾತ್ರಿಕರ ಆಹಾರ ಗಮನದಲ್ಲಿಟ್ಟುಕೊಂಡು ಈ ಸಂಶೋಧನೆಗೆ ಹೆಸರು, ಮೆಂತ್ಯೆ ಬೀಜಗಳ ಮೊಳಕೆ ಅಧ್ಯಯನ ಆಯ್ಕೆ ಮಾಡಿಕೊಂಡಿದೆ ಎಂದು ವಿವರಿಸಿದ್ದಾರೆ. 

ಆರೋಗ್ಯ ದೃಷ್ಟಿಯಿಂದ ಮೆಂತ್ಯೆ ಆಯ್ಕೆ

ಮೆಂತ್ಯೆ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಎಲುಬಿನ ಆರೋಗ್ಯ ಉತ್ತಮಗೊಳಿಸುತ್ತದೆ. ಮೂತ್ರಕೋಶದಲ್ಲಿ ಕಲ್ಲು ರಚನೆಯ ಅಪಾಯ ಕಡಿಮೆ ಮಾಡುತ್ತದೆ. ಹೃದಯ ಸಂಬಂಧಿ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಗಗನಯಾತ್ರಿಗಳ ಅರೋಗ್ಯದ ದೃಷ್ಟಿಯಿಂದ ಸಂಶೋಧನೆಗೆ ಈ ಬೀಜಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

Tags:    

Similar News