Bengaluru Stampede| ವಿಜಯೋತ್ಸವಕ್ಕೆ ಬಂದವರು ಮರಳದೇ ಹೋದರು; ಹೃದಯವಿದ್ರಾವಕ ಕಥೆಗಳು ಹತ್ತು.. ಮತ್ತೊಂದು!
ಆರ್ಸಿಬಿ ಅಭಿಮಾನಿಗಳ ನೆಚ್ಚಿನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಬುಧವಾರ ಅಕ್ಷರಶ: ಸೂತಕದ ಮನೆಯಾಗಿತ್ತು... ನೆಚ್ಚಿನ ಕ್ರಿಕೆಟಿಗನನ್ನು ನೋಡಬೇಕು ಎಂದು ಬಂದವರು ಒಂದಲ್ಲ, ಎರಡಲ್ಲ ಬರೋಬ್ಬರಿ ಹನ್ನೊಂದು ಮಂದಿ ಅಂದು ಸಾವಿನ ಮನೆ ಸೇರಿದ್ದರು..;
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತಕ್ಕೆ ಬಲಿಯಾದವರು.
ಆರ್ಸಿಬಿ ಅಭಿಮಾನಿಗಳ ನೆಚ್ಚಿನ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಆವರಣದಲ್ಲಿ ಬುಧವಾರ ಅಕ್ಷರಶ: ಸೂತಕದ ಮನೆಯಾಗಿತ್ತು... ನೆಚ್ಚಿನ ಕ್ರಿಕೆಟಿಗನನ್ನು ನೋಡಬೇಕು ಎಂದು ಬಂದವರು ಒಂದಲ್ಲ, ಎರಡಲ್ಲ ಬರೋಬ್ಬರಿ ಹನ್ನೊಂದು ಮಂದಿ ಅಂದು ಸಾವಿನ ಮನೆ ಸೇರಿದ್ದರು..
ಜೀವ ಕಳೆದುಕೊಂಡವರೆಲ್ಲರೂ ಯುವಕರೇ. ಬಾಳಿ ಬದುಕಬೇಕಾಗಿದ್ದ ವಯಸ್ಸಿನಲ್ಲಿ ಬಿಟ್ಟು ಬಾರದ ಲೋಕಕ್ಕೆ ತೆರಳಿದ್ದಾರೆ. ಹೆತ್ತವರನ್ನು ಅಗಲಿದ್ದಾರೆ. ಹೊಸದಾಗಿ ಮದುವೆಯಾಗಿದ್ದ ಜೋಡಿ, ಅಪ್ಪನಿಗೆ ಊಟ ಹಾಕಿ ಈಗ ಬರುತ್ತೇನೆ ಎಂದು ಹೇಳಿ ಹೋದ ಮಗ, ಆಫೀಸ್ನಲ್ಲಿ ಮ್ಯಾನೇಜರ್ ಅನುಮತಿಗಾಗಿ ಕಾದು ಕಾದು ಬಳಿಕ ತೆರಳಿದ ಯುವತಿ.... ಹೀಗೆ ಒಬ್ಬೊಬ್ಬರದ್ದು ಒಂದೊಂದು ಕಥೆ .. ಸಂಭ್ರಮವನ್ನು ಕಣ್ತುಂಬಿಕೊಳ್ಳ ಕಣ್ತುಂಬಿಕೊಳ್ಳುವ ಕಾತುರದಲ್ಲಿ ಸಾವಿನ ಮನೆ ಸೇರಿದ್ದು ಮಾತ್ರ ದುರಂತ..
ಕಾಲೇಜಿಗೆ ತೆರಳಿದ್ದ ಭೂಮಿಕ್ ಸಾವಿನ ಮನೆ ಸೇರಿದ
ಕಾಲೇಜಿಗೆ ತೆರಳುತ್ತೇನೆ ಎಂದು ಹೇಳಿ ಹೋಗಿದ್ದು ನೇರ ಚಿನ್ನಸ್ವಾಮಿ ಸ್ಟೇಡಿಯಂಗೆ. ಈತನಿವೆ ಕೇವಲ 20 ವರ್ಷ ವಯಸ್ಸು. ಹಾಸನ ಜಿಲ್ಲೆಯ ಕುಪ್ಪುಗೋಡಿನ ಭೂಮಿಕ್ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿದ್ದ. ಸ್ಥಿತಿವಂತರ ಮನೆಯ ಒಬ್ಬನೇ ಒಬ್ಬ ಮಗ. ಆದರೆ ಆರ್ಸಿಬಿ ವಿಜಯೋತ್ಸವದಲ್ಲಿ ಭಾಗಿಯಾಗಲು ಹೋದ ಮಗ ಮನೆಗೆ ತಲುಪಿದ್ದು ಮಾತ್ರ ಹೆಣವಾಗಿ. ಮಗನ ಮೊಬೈಲ್ ಕೆಲಸ ಮಾಡುತ್ತಿಲ್ಲ ಎಂದು ತಿಳಿದ ತಂದೆ ಆಸ್ಪತ್ರೆಗೆ ದೌಡಾಯಿಸಿದರು. ಅವರಿಗೆ ಕಂಡಿದ್ದು ತಣ್ಣಗಾಗಿ ಹೋಗಿರುವ ಮಗನ ಮೃತದೇಹ. ಮೃತದೇಹ ನೋಡಿ ಅಲ್ಲೇ ಕುಸಿದು ಹೋಗಿದ್ದರು. ಆತನ ಮೃತದೇಹವನ್ನು ಹುಟ್ಟೂರಿಗೆ ಗುರುವಾರ ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರವನ್ನು ಮಾಡಲಾಯಿತು.
ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿತ್ತು. ಶ್ವಾನ ಪ್ರಿಯ ಭೂಮಿಕ್ನ ಅಂತ್ಯಕ್ರಿಯೆ ವೇಳೆ ಆತನ ಪ್ರೀತಿಯ ಶ್ವಾನಗಳು ಆತನನ್ನು ಮುದ್ದಾಡಿದವು.
ಕಾಲ್ತುಳಿತದಲ್ಲಿ ಮೃತಪಟ್ಟ ಭೂಮಿಕ್
ಅಪ್ಪನಿಗೆ ಊಟ ಹಾಕಿ ಹೋದ ಮಗ ಕಾಲ್ತುಳಿತಕ್ಕೆ ಸಿಲುಕಿ ಪ್ರಾಣ ಬಿಟ್ಟ
ಅಪ್ಪನಿಗೆ ಊಟ ಹಾಕಿ ವಿಧಾನಸೌಧಕ್ಕೆ ಹೋಗುತ್ತೇನೆ, ಅರ್ಧ ಗಂಟೆಯಲ್ಲಿ ಬರುತ್ತೇನೆ ಎಂದು ಹೇಳಿ ಹೋಗಿದ್ದ ಮಗ ಮನೆಗೇ ಬರಲೇ ಇಲ್ಲ. ಮನೋಜ್ ತುಮಕೂರು ಜಿಲ್ಲೆಯ ನಾಗಸಂದ್ರ ನಿವಾಸಿ. ಮನೋಜ್ ತಂದೆ ಪಾನಿಪೂರಿ ವ್ಯಾಪಾರ ಮಾಡಿಕೊಂಡು ಮಕ್ಕಳನ್ನು ಓದಿಸುತ್ತಿದ್ದರು. 19-ವರ್ಷದ ಮನೋಜ್ ಬಿಬಿಎ ವ್ಯಾಸಂಗ ಮಾಡುತ್ತಿದ್ದರು. ಆದರೆ ಆರ್ಸಿಬಿ ಸೆಲೆಬ್ರೇಷನ್ಗೆ ಹೋದ ಮಗ ಅಲ್ಲೇ ಕಾಲ್ತುಳಿತಕ್ಕೆ ಸಿಲುಕಿ ಪ್ರಾಣ ಬಿಟ್ಟಿದ್ದಾನೆ. ಯಲಹಂಕ ಓಲ್ಡ್ ಟೌನ್ನಲ್ಲಿ ವಾಸವಾಗಿರುವ ಇವರು ತಮ್ಮ ಹುಟ್ಟೂರು ಕುಣಿಗಲ್ ತಾಲ್ಲೂಕಿನ ನಾಗಸಂದ್ರದಲ್ಲಿ ಮಗನ ಅಂತ್ಯಕ್ರಿಯೆ ನೆರವೇರಿಸಿದ್ದಾರೆ.
ಮೃತ ದೇಹದ ಮೇಲೆ ಹಾಕಿದ್ದ ಬಟ್ಟೆ ತೆಗೆಯುತ್ತಿದ್ದಂತೆಯೇ ಕುಸಿದು ಬಿದ್ದ ತಾಯಿ
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿಯ ಪ್ರಜ್ವಲ್ ಕೂಡಾ ಆರ್ಸಿಬಿ ವಿಯಯೋತ್ಸವಕ್ಕೆ ತೆರಳಿದ್ದರು. ಪ್ರಜ್ವಲ್ ಇತ್ತೀಚೆಗೆ ಎಂಜಿನಿಯರಿಂಗ್ ಮುಗಿಸಿ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದರು. ಪ್ರಜ್ವಲ್ ಕೂಡಾ ಆರ್ಸಿಬಿ ಸೆಲಬ್ರೇಷನ್ ನೋಡಲು ತೆರಳಿದ್ದರು. ಆದರೆ ಸಂಜೆ ಹೊತ್ತಲ್ಲಿ ʼನಿಮ್ಮ ಮಗನಿಗೆ ಸೀರಿಯಸ್ʼ ಅನ್ನುವ ಕರೆ ಬಂದಿದೆ. ಮನೋಜ್ ತಾಯಿ ಆಸ್ಪತ್ರೆಗೆ ಹೋಗಿ ಕಾಲು ನೋಡುತ್ತಿದಂತೆ ಆಕೆ ತನ್ನ ಮಗ ಎಂದು ಗೊತ್ತಾಗಿದೆ. ಆತನ ದೇಹದ ಮೇಲೆ ಹಾಕಿದ್ದ ಬಟ್ಟೆ ತೆಗೆಯುತ್ತಿದ್ದಂತೆ ಅಲ್ಲೇ ಕುಸಿದೋಗಿದ್ದಾರೆ. ಮೈಕೈ ಎಲ್ಲಾ ತಣ್ಣಗಾಗಿತ್ತು. ಆರ್ಸಿಬಿ ಡ್ರೆಸ್ ಹಾಕೊಂಡು ಹೋಗಿದ್ದ ನನ್ನ ಮಗ ಸತ್ತು ಮಲಗಿದ್ದ ಎಂದು ತಾಯಿ ರೋಧಿಸುತ್ತಿದ್ದರು.
ಚಿಂತಾಮಣಿಯ ಪ್ರಜ್ವಲ್
ನೂಕುನುಗ್ಗಲಿನಲ್ಲಿ ಹೆಣವಾದ ಸಹನಾ
ಬೆಂಗಳೂರಿನಲ್ಲಿ ಬಾಷ್ ಕಂಪನಿಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಕೋಲಾರದ ಬಡಮಾಕನಹಳ್ಳಿಯ ಸಹನಾ ತನ್ನ ನಾಲ್ವರು ಗೆಳತಿಯರೊಂದಿಗೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ವಿಜಯೋತ್ಸವ ವೀಕ್ಷಿಸಲು ಹೋಗಿದ್ದರು. ಆದರೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಜನ ಮುನ್ನುಗ್ಗುತ್ತಿದಂತೆಯೇ ಅಲ್ಲೇ ಕುಸಿದು ಬಿದ್ದ ಸಹನಾ ಮತ್ತೆ ಮೇಲೆದಿದ್ದು ಹೆಣವಾಗಿ. ಸಹನಾ ತಂದೆಗೆ ಫೋನ್ ಮಾಡಿದ್ದ ಆಸ್ಪತ್ರೆ ಸಿಬ್ಬಂದಿ, ನಿಮ್ಮ ಮಗಳು ಸೀರಿಯಸ್. ಆಸ್ಪತ್ರೆಗೆ ಬೇಗ ಬನ್ನಿ ಎಂದು ಹೇಳಿದಾಗ ಓಡೋಡಿ ಆಸ್ಪತ್ರೆಗೆ ಬಂದ ತಂದೆಗೆ ಮಗಳ ಸಾವಿನ ಸುದ್ದಿ ಆಘಾತ ತಂದೊಡ್ಡಿದೆ.
ಸಹನಾ
ಬಡತನದಲ್ಲಿ ಬೆಳೆದ ಮಗ ದುರಂತ ಅಂತ್ಯ
ಯಾದಗಿರಿಯ ಆಶನಾಳದ ಶಿವಲಿಂಗ ಕುಡು ಬಡತದಲ್ಲಿ ಬೆಳೆದ ಮಗ ಬೆಂಗಳೂರಿನ ಯಲಹಂಕ ಕಾಲೇಜಿನಲ್ಲಿ ಪಿಯುಸಿ ಓದುತ್ತಿದ್ದ. ಆರ್ಬಿಸಿ ವಿಜಯೋತ್ಸವಕ್ಕೆ ಹೋದ ಮಗ ಇದೀಗ ಹೆತ್ತವರನ್ನು ಅನಾಥ ಮಾಡಿ ಸಾವಿನ ಮನೆ ಸೇರಿದ್ದಾನೆ. ಶಿವಲಿಂಗನ ಹೆತ್ತವರ ಪರಿಸ್ಥಿತಿ ಹೇಗಿದೆ ಎಂದರೆ ಮಗನನ್ನು ಅಂತ್ಯಕ್ರಿಯೆ ಮಾಡಲು ಅಂಗೈ ಅಗಲ ಜಾಗ ಇಲ್ಲ. ಊರಲ್ಲಿ ಸ್ಮಶಾನವೂ ಇಲ್ಲ. ಮನೆ ಮುಂದೆ ಅಂತ್ಯಕ್ರಿಯೆ ಮಾಡಲು ಊರಿನವರು ಬಿಟ್ಟಿಲ್ಲ. ಹೀಗಾಗಿ ಸೋದರ ಮಾವನ ಊರಲ್ಲಿ ಮಗನ ಅಂತ್ಯಕ್ರಿಯೆ ಮಾಡಿದ್ದಾರೆ.
ಶಿವಲಿಂಗ
ಗಂಡನಿಗೆ ಕಂಡಿದ್ದು ಹೆಂಡತಿಯ ಮೃತದೇಹ
ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದ ಅಕ್ಷತಾ ಪೈ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿಯಲ್ಲಿ ಸಿ.ಎ ಆಗಿ ಕೆಲಸಮಾಡುತ್ತಿದ್ದರು. ಒಂದು ವರ್ಷದ ಹಿಂದೆ ಮದುವೆಯಾಗಿದ್ದರು. ಆರ್ಸಿಬಿ ತಂಡದ ಅಪ್ಪಟ ಅಭಿಯಾನಿಯಾಗಿದ್ದ ಆಕೆಯ ಗಂಡ ಪತ್ನಿಯ ಜೊತೆಗೂಡಿ ತಂಡದ ಸಂಭ್ರಮಾಚರಣೆಗೆ ಅರ್ಧ ದಿನ ಕೆಲಸಕ್ಕೆ ರಜೆ ಹಾಕಿ ಕ್ರೀಡಾಂಗಣದ ಬಳಿ ತೆರಳಿದ್ದರು. ಗೇಟ್ ನಂ.17 ಬಳಿ ಏಕಾಏಕಿ ನೂಕುನುಗ್ಗಲು ಉಂಟಾದಾಗ, ಪತ್ನಿಯ ಕೈ ಬಿಗಿಯಾಗಿ ಹಿಡಿದುಕೊಂಡಿದ್ದ ಆಶಯ್ ಹಲವರು ಆಯತಪ್ಪಿ ಅವರ ಮೇಲೆ ಬಿದ್ದಿದ್ದರಿಂದ ಪಕ್ಕದಲ್ಲಿದ್ದ ಪತ್ನಿ ಅಕ್ಷತಾ ಕಾಣಿಸಲಿಲ್ಲ. ಪತ್ನಿಗಾಗಿ ಹುಡುಕಾಟ ನಡೆಸುತ್ತಿದ್ದ ವೇಳೆ ಯುವಕನೊಬ್ಬ ಮೊಬೈಲ್ನಲ್ಲಿ ಸೆರೆಹಿಡಿದ್ದ ಜರ್ಸಿ ತೊಟ್ಟಿದ್ದ ಯುವತಿಯನ್ನು ಹೊತ್ತೊಯ್ಯುತ್ತಿರುವ ದೃಶ್ಯ ತೋರಿಸಿದ. ಆಕೆ ಅಕ್ಷತಾ ಎಂಬುದು ಖಚಿತವಾಯಿತು. ಹಲವು ಆಸ್ಪತ್ರೆಗೆ ಅಲೆದಾಡಿ, ಕೊನೆಗೆ ಬೌರಿಂಗ್ ಆಸ್ಪತ್ರೆಗೆ ತೆರಳಿದಾಗ ಕಂಡದ್ದ ಮಾತ್ರ ಆಕೆಯ ಮೃತದೇಹ.
ಸಿದ್ದಾಪುರದ ಅಕ್ಷತಾ ಪೈ
ಹುಡುಗಿ ನೋಡಿ ಬಂದವ ಸೇರಿದ್ದು ಮಸಣ
ಮಂಡ್ಯ ಜಿಲ್ಲೆಯ ಕೆಆರ್ ಪೇಟೆ ತಾಲೂಕಿನ ರಾಯಸಮುದ್ರದ ಪೂರ್ಣಚಂದ್ರ ಸಿವಿಲ್ ಇಂಜಿನಿಯರ್. ಮನೆಯವರ ಜೊತೆ ಹುಡುಗಿ ನೋಡಲು ಹೋಗಿ ಶ್ರಾವಣದಲ್ಲಿ ಮದುವೆ ಮಾಡುವ ಯೋಚನೆಯಲ್ಲಿ ಮನೆಯವರು ಇದ್ದರು. ಆತ ಹೆಣ್ಣು ನೋಡಿ ಬಂದ ಮೇಲೆ ಅರ್ಸಿಬಿ ಸೆಲಬ್ರೇಷನ್ ನೋಡೋದಕ್ಕೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ತೆರಳಿದ್ದಾನೆ. ಮನೆಯವರಿಗೆ ಯಾರಿಗೂ ಈ ವಿಷಯ ಗೊತ್ತಿಲ್ಲ.ಆದರೆ ಮಗನ ಸಾವಿನ ಸುದ್ದಿ ಟಿವಿಯಲ್ಲಿ ಬಂದಾಗಲೇ ಹೆತ್ತವರಿಗೆ ಬರ ಸಿಡಿಲು ಬಡಿದಂತಾಯಿತು. ಮಗನ ಮದುವೆ ಮಾಡಬೇಕು ಎಂದುಕೊಂಡಿದ್ದ ಕುಟುಂಬದಲ್ಲಿ ಸಾವಿನ ಸೂತಕ ಆವರಿಸಿದೆ. ಹೆಣ್ಣು ನೋಡಿ ಹೋದವ ಹೆಣವಾಗಿ ಬಂದಿದ್ದಾನೆ. ರಾಯಸಮುದ್ರ ಗ್ರಾಮದಲ್ಲಿ ಲಿಂಗಾಯತ ಸಂಪ್ರದಾಯದಂತೆ ಪೂರ್ಣಚಂದ್ರ ಅವರ ಅಂತ್ಯಕ್ರಿಯೆ ನೆರವೇರಿದೆ.
ಕಾಲ್ತುಳಿತದಲ್ಲಿ ಮೃತಪಟ್ಟ ಪೂರ್ಣಚಂದ್ರ
ಡೆಂಟಲ್ ವೈದ್ಯಕೀಯ ವಿದ್ಯಾರ್ಥಿ ಕೆ.ಟಿ ಶ್ರವಣ್ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕುರುಟಹಳ್ಳಿ ಗ್ರಾಮದ ಶ್ರವಣ್ ಬೆಂಗಳೂರಿನಲ್ಲಿ ಓದುತ್ತಿದ್ದ. ಆರ್ಸಿಬಿ ಸೆಲೆಬ್ರೇಷನ್, ಶ್ರವಣ್ ಪಾಲಿಗೆ ಸಾವಿನ ಮನೆಯಾಗಿ ಹೋಗಿದೆ. ಮಗನನ್ನು ಕಳೆದುಕೊಂಡು ಹೆತ್ತವರು ಗೋಳಾಡುತ್ತಿದ್ದಾರೆ.
ಕೆ.ಟಿ ಶ್ರವಣ್
9ನೇ ತರಗತಿ ಬಾಲಕಿಯ ದುರಂತ ಅಂತ್ಯ
ಬೆಂಗಳೂರಿನ ಯಲಹಂಕದ ಚೌಡೇಶ್ವರಿ ನಗರ ನಿವಾಸಿ 15 ವರ್ಷದ ದಿವ್ಯಾಂಶಿ 9ನೇ ತರಗತಿಯ ವಿದ್ಯಾರ್ಥಿನಿ. ನೃತ್ಯಗಾರ್ತಿಯಾಗಿದ್ದ ದಿವ್ಯಾಂಶಿ ಬೆಳಿಗ್ಗೆ 8 ಗಂಟೆಗೆ ಶಾಲೆಗೆ ಹೊರಡಲು ಸಿದ್ದವಾಗಿದ್ದಳು. ಆರ್ಸಿಬಿ ತಂಡ ಬೆಂಗಳೂರಿಗೆ ಬರುತ್ತಿರುವ ವಿಷಯ ತಿಳಿದು, ವಿರಾಟ್ ಕೊಹ್ಲಿ ನೋಡಲು ಬಯಸಿದಳು. ಹೀಗಾಗಿ ಆಕೆ ತನ್ನ ತಾಯಿ, ಚಿಕ್ಕಮ್ಮನ ಜೊತೆಗೂಡಿ ಕ್ರೀಡಾಂಗಣದ ಬಳಿ ತೆರಳಿದ್ದರು. ಈ ವೇಳೆ ನೂಕುನುಗ್ಗಲಿನಲ್ಲಿ ಸಿಲುಕಿದ್ದ ವೇಳೆ ದಿನ್ಯಾಂಶಿ ನೂರಾರು ಜನರ ಕಾಲ್ತುಳಿತಕ್ಕೆ ಬಲಿಯಾಗಿದ್ದಾಳೆ.
ದಿವ್ಯಾಂಶಿ
ಉಡುಪಿ ಜಿಲ್ಲೆಯ ಹೆಬ್ರಿಯ ಕರುಣಾಕರ ಶೆಟ್ಟಿ ಪುತ್ರಿ ಚಿನ್ಮಯಿ ಬಿಇ ವಿದ್ಯಾರ್ಥಿನಿಯಾಗಿದ್ದಳು. ಯಕ್ಷಗಾನ ಹಾಗೂ ಬಾಸ್ಕೆಟ್ ಬಾಲ್ ಕ್ರೀಡೆಯಲ್ಲಿ ಈಕೆಯದ್ದು ಎತ್ತಿದ ಕೈ. ಆರ್ಸಿಬಿಯ ಸಂಭ್ರಮಾಚರಣೆ ನೋಡಲು ಹೋದವಳು ಅಲ್ಲೇ ಪ್ರಾಣ ಕಳೆದುಕೊಂಡಿದ್ದಾಳೆ. ಮಧ್ಯಾಹ್ನ ಕರೆ ಮಾಡಿ ಸ್ನೇಹಿತರೊಂದಿಗೆ ವಿಧಾನಸೌಧದತ್ತ ಹೋಗುತ್ತಿರುವುದಾಗಿ ಹೇಳಿದ್ದ ಮಗಳು ಮರಳಿಬರಲಿಲ್ಲ. ಸಂಜೆ 5.30ಕ್ಕೆ ವೈದ್ಯರು ಕರೆ ಮಾಡಿ ಸಾವಿನ ಸುದ್ದಿ ತಿಳಿಸಿದರು. ಮಗಳಿಗೆ ಕ್ರಿಕೆಟ್ ಬಗ್ಗೆ ಆಸಕ್ತಿ ಇರಲಿಲ್ಲ. ಸ್ನೇಹಿತರು ಕರೆದರು ಎಂದು ಹೋಗಿ ಕಾಲ್ತುಳಿತದಲ್ಲಿ ಮೃತಪಟ್ಟಿದ್ದಾಳೆ. ಈ ರೀತಿ ಯಾವ ತಂದೆ-ತಾಯಿಗೂ ಆಗಬಾರದು' ಎಂದು ಚಿನ್ಮಯಿ ಶೆಟ್ಟಿ ಅವರ ತಂದೆ ಕರುಣಾಕರ್ ಶೆಟ್ಟಿ ಕಣ್ಣೀರಿಡುತ್ತಿದ್ದರು.
ಚಿನ್ಮಯಿ
ತಮಿಳುನಾಡಿನ ಕೊಯಮತ್ತೂರು ನಿವಾಸಿ ದೇವಿ ಕೂಡಾ ದುರಂತ ಅಂತ್ಯ ಕಂಡಿದ್ದಾಳೆ. ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದ ದೇವಿ ಆರ್ಸಿಬಿ ಅಭಿಮಾನಿ ಮತ್ತು ತನ್ನ ಪೋಷಕರಿಗೆ ಏಕೈಕ ಪುತ್ರಿಯಾಗಿದ್ದ ದೇವಿ, ವಿಜಯೋತ್ಸವ ಮೆರವಣಿಗೆಯಲ್ಲಿ ಭಾಗವಹಿಸಲು ಕೆಲವು ಗಂಟೆಗಳ ಕಾಲ ಕೆಲಸದಿಂದ ರಜೆ ತೆಗೆದುಕೊಂಡಿದ್ದರು. ಅವಳು ಆರ್ಸಿಬಿಯ ವಿಜಯೋತ್ಸವ ಮೆರವಣಿಗೆಯಲ್ಲಿ ಭಾಗಿಯಾಗಲು ಹೋಗೋದಕ್ಕೆ ಅನುಮತಿಗಾಗಿ ತನ್ನ ಬಾಸ್ಗೆ ಪದೇ ಪದೇ ಪರ್ಮಿಷನ್ ಕೇಳುತ್ತಿದ್ದಳು. ಕೊನೆಗೆ ಮಧ್ಯಾಹ್ನ 2.30 ರ ಸುಮಾರಿಗೆ ಅವಳಿಗೆ ಹೋಗುವುದಕ್ಕೆ ಅನುಮತಿ ಸಿಕ್ಕಿತ್ತು. ಅವಳು ತುಂಬಾ ಉತ್ಸುಕಳಾಗಿದ್ದಳು, ಆದರೆ ನಂತರ ಇದು ಸಂಭವಿಸಿತು ಎಂದು ಅವಳ ಸ್ನೇಹಿತೆ ನೆನಪಿಸಿಕೊಂಡು ಕಣ್ಣೀರಿಟ್ಟಿದ್ದಾರೆ. ಅವಳ ಲ್ಯಾಪ್ಟಾಪ್ ಇನ್ನೂ ಮೇಜಿನ ಮೇಲಿದೆ ಮತ್ತು ಅವಳ ಬ್ಯಾಗ್ಗಳು ಅಲ್ಲೇ ಇವೆ, ಆದರೆ ಅವಳು ಇಲ್ಲ ಎಂದು ಕಣ್ಣೀರಿಟ್ಟಿದ್ದಾರೆ ದೇವಿಯ ಗೆಳತಿ.
ಕೊಯಮತ್ತೂರು ನಿವಾಸಿ ದೇವಿ
ತಮಿಳುನಾಡಿನಿಂದ ಬಂದ ದೇವಿ ಬೆಂಗಳೂರಿನಲ್ಲಿ ಅಧ್ಯಯನ ಮಾಡಿ ಟೆಕ್ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು. ಇಲ್ಲಿಯೇ ಓದಿ, ಇಲ್ಲಿಯೇ ಕೆಲಸ ಮಾಡಿಕೊಂಡಿದ್ದ ದೇವಿಗೆ ಸಿಲಿಕಾನ್ ಸಿಟಿಯೊಂದಿಗೆ ಆಳವಾದ ನಂಟಿತ್ತು. ತಮಿಳುನಾಡಿನವಳಾದರೂ ಆಕೆ ಆರ್ಸಿಬಿಯ ಕಟ್ಟಾ ಅಭಿಮಾನಿಯಾಗಿದ್ದಳು. ಅವಳು ಒಂದೇ ಒಂದು ಮ್ಯಾಚ್ ಕೂಡಾ ಮಿಸ್ ಮಾಡದೆ ನೋಡುತ್ತಿದ್ದರಂತೆ.