ಭಾರತಕ್ಕೆ ಭೇಟಿ ನೀಡಲು ಉತ್ಸುಕನಾಗಿದ್ದೇನೆ : ಝೆಲೆನ್ಸ್ಕಿ

ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಕೈವ್ ಭೇಟಿ ಐತಿಹಾಸಿಕ ಎಂದು ಝೆಲೆನ್ಸ್ಕಿ ಬಣ್ಣಿಸಿದ್ದಾರೆ. ದ್ವಿಪಕ್ಷೀಯ ಮಾತುಕತೆ ವೇಳೆ ಮೋದಿ ಅವರು ಭಾರತಕ್ಕೆ ಭೇಟಿ ನೀಡುವಂತೆ ಝೆಲೆನ್ಸ್ಕಿ ಅವರನ್ನು ಆಹ್ವಾನಿಸಿದರು.

Update: 2024-08-24 08:57 GMT

ಕೈವ್: ಉಕ್ರೇನ್‌ ಮತ್ತು ರಷ್ಯಾ ನಡುವಿನ ಯುದ್ಧವನ್ನು ಕೊನೆಗೊಳಿಸುವ ಜಾಗತಿಕ ರಾಜತಾಂತ್ರಿಕ ಪ್ರಯತ್ನಗಳಲ್ಲಿ ಪ್ರಮುಖ ಕೀಲಿಕೈ ಆಗಬಹುದಾದ ಭಾರತಕ್ಕೆ ಭೇಟಿ ನೀಡಲು ಉತ್ಸುಕನಾಗಿದ್ದೇನೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದರು.

ಭಾರತ ಒಂದು ಭಾರಿ ಪ್ರಭಾವಶಾಲಿ ದೇಶ ಎಂದು ಭಾರತೀಯ ಮಾಧ್ಯಮಗಳೊಂದಿಗೆ ನಡೆದ ಸಂವಾದದಲ್ಲಿ ಹೇಳಿದರು.

ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಕೈವ್ ಭೇಟಿ ಐತಿಹಾಸಿಕ ಎಂದು ಝೆಲೆನ್ಸ್ಕಿ ಬಣ್ಣಿಸಿದ್ದಾರೆ. ದ್ವಿಪಕ್ಷೀಯ ಮಾತುಕತೆ ವೇಳೆ ಮೋದಿ ಅವರು ಭಾರತಕ್ಕೆ ಭೇಟಿ ನೀಡುವಂತೆ ಝೆಲೆನ್ಸ್ಕಿ ಅವರನ್ನು ಆಹ್ವಾನಿಸಿದರು.

ʻನಿಮ್ಮ ದೇಶ ನಮ್ಮ ಪರ ಇರಬೇಕು; ಯುಎಸ್ ಮತ್ತು ರಷ್ಯಾ ನಡುವೆ ಸಮತೋಲಗೊಳಿಸುತ್ತ ಕೂರಬಾರದು,ʼ ಎಂದು ಝೆಲೆನ್ಸ್ಕಿ ಹೇಳಿ ದರು. ಯುದ್ಧವನ್ನು ಕೊನೆಗೊಳಿಸಲು ಸಮಯ ವ್ಯರ್ಥ ಮಾಡದೆ ಉಕ್ರೇನ್ ಮತ್ತು ರಷ್ಯಾ ಒಟ್ಟಿಗೆ ಕುಳಿತುಕೊಳ್ಳಬೇಕು; ಫೆಬ್ರವರಿ 2022 ರಲ್ಲಿ ಸಂಘರ್ಷ ಆರಂಭವಾದಾಗಿನಿಂದ ಭಾರತವು ಶಾಂತಿಯ ಪರವಿದೆ ಎಂದು ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಝೆಲೆನ್ಸ್ಕಿ ಅವರಿಗೆ ಮೋದಿ ಹೇಳಿದ್ದರು.

ʻನೀವು ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತು ಮಾತುಕತೆಯನ್ನು ಆರಂಭಿಸಿದಾಗ, ಸಮಯ ವ್ಯರ್ಥಗೊಳಿಸಬಾರದು. ಅದಕ್ಕಾಗಿಯೇ ಮತ್ತೊಮ್ಮೆ ಒಟ್ಟಿಗೆ ಭೇಟಿಯಾಗುವುದು ಒಳ್ಳೆಯದು ಎಂದು ಭಾವಿಸುತ್ತೇನೆ. ಸಭೆ ಭಾರತದಲ್ಲಿ ನಡೆದರೆ, ಸಂತೋಷ ಪಡುತ್ತೇನೆ,ʼ ಎಂದು ಝೆಲೆನ್ಸ್ಕಿ ಹೇಳಿದರು.

ʻನನ್ನ ಪ್ರಕಾರ, ದೇಶವನ್ನು ಅರ್ಥಮಾಡಿಕೊಳ್ಳುವುದು ಎಂದರೆ ಜನರನ್ನು ಅರ್ಥಮಾಡಿಕೊಳ್ಳುವುದು. ನಿಮ್ಮ ದೇಶದಲ್ಲಿ ಸಭೆ ನಡೆಯುವುದು ಉತ್ತಮ. ಏಕೆಂದರೆ, ನಿಮ್ಮ ದೇಶ ನಮ್ಮ ಪರ ಇರಬೇಕು. ಇದು ನಿಮ್ಮ ಐತಿಹಾಸಿಕ ಆಯ್ಕೆ ಅಲ್ಲದೆ ಇರಬಹುದು. ಆದರೆ, ರಾಜತಾಂತ್ರಿಕ ಪ್ರಭಾವದಲ್ಲಿ ನಿಮ್ಮ ದೇಶ ಪ್ರಮುಖ ಆಗಿರಬಹುದು. ಅದರಿಂದಾಗಿಯೇ ನೀವು ಆಹ್ವಾನಿಸಿದಾಗ, ನಾನು ಭಾರತಕ್ಕೆ ಬರಲು ಇಚ್ಛಿಸುತ್ತೇನೆ,ʼ ಎಂದರು.

ಇನ್ನೊಂದು ಪ್ರಶ್ನೆಗೆ ಉತ್ತರಿಸಿ,ʻ ಮೋದಿ ಅವರು ಶಾಂತಿ ಸಭೆ ನಡೆಸಬೇಕು ಎಂದು ಬಯಸುತ್ತೇವೆ. ಆ ಸಂಬಂಧ ಕೆಲಸ ಮಾಡಲು ಸಂತೋಷಪಡುತ್ತೇವೆ. ಅವರ ಯಾವುದೇ ಆಲೋಚನೆಗಳ ಬಗ್ಗೆ ಚರ್ಚಿಸಲು ಸಿದ್ಧರಿದ್ದೇವೆ,ʼ ಎಂದರು.

ʻಆದರೆ, ನಮ್ಮ ಪ್ರಸ್ತಾಪಗಳನ್ನು ಅಥವಾ ಗಡಿಗಳನ್ನು ಬದಲಿಸುವುದಿಲ್ಲ. ನಮ್ಮ ಎಲ್ಲೆಕಟ್ಟು, ಮೌಲ್ಯಗಳು, ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ವನ್ನು ಬದಲಿಸುವುದಿಲ್ಲ. ಮೋದಿಯವರು ಶಾಂತಿಯನ್ನು ಬಯಸುತ್ತಾರೆ. ಸಮಸ್ಯೆಯೆಂದರೆ ಪುಟಿನ್ ಅವರಿಗೆ ಶಾಂತಿ ಬೇಕಿಲ್ಲ.ಮೋದಿ-ಪುಟಿನ್‌ ಭೇಟಿ ವೇಳೆ ಏನು ಮಾತನಾಡಿದ್ದಾರೆ ಎನ್ನುವುದು ನನಗೆ ತಿಳಿದಿಲ್ಲ,ʼ ಎಂದು ಝೆಲೆನ್ಸ್ಕಿ ಹೇಳಿದರು.

ರಕ್ಷಣಾ ಉತ್ಪಾದನೆ ಕುರಿತು ಕೇಳಿದಾಗ, ʻಕೆಲವು ತಂತ್ರಜ್ಞಾನಗಳ ಬಗ್ಗೆ ಮಾತನಾಡಿದ್ದೇವೆ. ಭಾರತ ಸಿದ್ಧವಾಗಿದ್ದರೆ ನಾವು ಬಹಳ ಭಾರಿ ವ್ಯವಹಾರಕ್ಕೆ ಮುಕ್ತರಾಗಿದ್ದೇವೆ,ʼ ಎಂದು ಝೆಲೆನ್ಸ್ಕಿ ಹೇಳಿದರು. ಭಾರತ ಯುಎನ್ ನಿರ್ಣಯವನ್ನು ಬೆಂಬಲಿಸಿಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಝೆಲೆನ್ಸ್ಕಿ, ʻಈ ಹಿಂದೆ ಏನಾಯಿತು ಎಂಬುದನ್ನು ಬಿಟ್ಟುಬಿಡೋಣ. ಹೊಸ ನಿರ್ಣಯಗಳ ಕುರಿತು ಮಾತನಾಡೋಣ. ನಮ್ಮ ದೇಶಗಳ ನಡುವೆ ಬಲವಾದ ಸಂಬಂಧ ಹೊಂದಬೇಕು. ಭವಿಷ್ಯದಲ್ಲಿ ನಮ್ಮನಡುವಿನ ಸಂಬಂಧದಲ್ಲಿ ದೊಡ್ಡ ಸವಾಲುಗಳಿಲ್ಲ,ʼ ಎಂದು ಹೇಳಿದರು.

ಭಾರತ ಮತ್ತು ರಷ್ಯಾ ನಡುವೆ ತೈಲಕ್ಕೆ ಸಂಬಂಧಿಸಿದಂತೆ ಬಹಳ ಮಹತ್ವದ ಒಪ್ಪಂದಗಳಿವೆ ಎಂದ ಝೆಲೆನ್ಸ್ಕಿ, ʻಪುಟಿನ್ ಬಳಿ ತೈಲವನ್ನು ಹೊರತುಪಡಿಸಿದರೆ, ಬೇರೆ ಏನೂ ಇಲ್ಲ. ತೈಲ ಅವರ ಮುಖ್ಯ ಕರೆನ್ಸಿ. ಅವರು ತೈಲ ಆಧರಿತ ಆರ್ಥಿಕತೆಯನ್ನು ಹೊಂದಿದ್ದಾರೆ ಮತ್ತು ತೈಲ ರಫ್ತು ಆಧರಿತ. ಆದ್ದರಿಂದ, ರಷ್ಯಾ ಒಕ್ಕೂಟದಿಂದ ಇಂಧನ ಆಮದು ಮಾಡಿಕೊಳ್ಳುವ ದೇಶಗಳು ಇಡೀ ಜಗತ್ತಿಗೆ ಸಹಾಯ ಮಾಡುತ್ತವೆ,ʼ ಎಂದು ಹೇಳಿದರು.

ಉಕ್ರೇನಿಯನ್ ಜೈಲಿನಲ್ಲಿ ಭಾರತೀಯ ಪ್ರಜೆಗಳು ಇಲ್ಲ. ಇದ್ದರೆ ಬಿಡುಗಡೆ ಮಾಡಲಾಗುತ್ತದೆ. ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾದ ಸೇನೆಯಲ್ಲಿ ಕೆಲಸ ಮಾಡುತ್ತಿದ್ದ ಭಾರತೀಯರ ಸಾವಿನ ಬಗ್ಗೆ ವರದಿಗಳನ್ನು ಓದಿದ್ದೇನೆ ಎಂದು ಅವರು ಹೇಳಿದರು. 

Tags:    

Similar News