ಬಾಂಗ್ಲಾದೇಶ: ಅಕ್ರಮ ಶಸ್ತ್ರಾಸ್ತ್ರ ಒಪ್ಪಿಸಲು ಮನವಿ

ಢಾಕಾದಲ್ಲಿ ನಡೆದ ಪ್ರತಿಭಟನೆ ವೇಳೆ ಅರೆಸೇನಾ ಪಡೆಗಳ ಮೇಲೆ ಗುಂಡು ಹಾರಿಸಿದ ಯುವಕರನ್ನು ಅಧಿಕಾರಿಗಳು ಗುರುತಿಸಲಿದ್ದಾರೆ ಎಂದು ಗೃಹ ವ್ಯವಹಾರಗಳ ಸಲಹೆಗಾರ ಸಖಾವತ್ ಹುಸೇನ್ ಹೇಳಿದ್ದಾರೆ.

Update: 2024-08-12 12:06 GMT
ಢಾಕಾದ ಸ್ಟುಪ್ರಂ ಕೋರ್ಟ್‌ ನ್ನು ಕಾವಲು ಕಾಯುತ್ತಿರುವ ಸೇನೆ ಮತ್ತು ನೌಕಾಪಡೆ ಅಧಿಕಾರಿಗಳು

ಇತ್ತೀಚೆಗೆ ಹಿಂಸಾಚಾರದ ಸಮಯದಲ್ಲಿ ಭದ್ರತಾ ಸೇವೆಗಳಿಂದ ಲೂಟಿ ಮಾಡಿದ ಶಸ್ತ್ರಾಸ್ತ್ರಗಳು ಸೇರಿದಂತೆ ಎಲ್ಲ ಅಕ್ರಮ ಆಯುಧಗಳನ್ನು ಆಗಸ್ಟ್‌ 19ರೊಳಗೆ ಒಪ್ಪಿಸಬೇಕೆಂದು ಬಾಂಗ್ಲಾ ದೇಶದ ಮಧ್ಯಂತರ ಸರ್ಕಾರ ಸೋಮವಾರ (ಆಗಸ್ಟ್ 12) ಒತ್ತಾಯಿಸಿದೆ.

ಶಸ್ತ್ರಾಸ್ತ್ರಗಳನ್ನು ಹತ್ತಿರದ ಪೊಲೀಸ್ ಠಾಣೆಗಳಿಗೆ ಹಿಂತಿರುಗಿಸದಿದ್ದರೆ ಅಧಿಕಾರಿಗಳು ಹುಡುಕಾಟ ಆರಂಭಿಸುತ್ತಾರೆ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ ಎಂದು ಗೃಹ ವ್ಯವಹಾರಗಳ ಸಲಹೆಗಾರ ಎಂ. ಸಖಾವತ್ ಹುಸೇನ್ ಅವರು ಹೇಳಿದ್ದಾರೆ ಎಂದು ವರದಿಯಾಗಿದೆ.

ಪ್ರಧಾನ ಮಂತ್ರಿ ಶೇಖ್ ಹಸೀನಾ ಅವರ ಪದಚ್ಯುತಿಗೆ ಕಾರಣವಾದ ಸಾಮೂಹಿಕ ಪ್ರತಿಭಟನೆಯಲ್ಲಿ ಗಾಯಗೊಂಡ ಅರೆಸೈನಿಕ ಸಿಬ್ಬಂದಿ ಯನ್ನು ಢಾಕಾದ ಸಂಯೋಜಿತ ಮಿಲಿಟರಿ ಆಸ್ಪತ್ರೆಯಲ್ಲಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

500 ಮಂದಿ ಸಾವು: ಉದ್ಯೋಗಗಳಲ್ಲಿ ಮೀಸಲು ಸಂಬಂಧಿಸಿದಂತೆ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆ ನಂತರ ಶೇಖ್ ಹಸೀನಾ ಅವರು ರಾಜೀನಾಮೆ ನೀಡಿ, ಭಾರತಕ್ಕೆ ಪಲಾಯನ ಮಾಡಿದ್ದಾರೆ. ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 500 ಜನ ಸಾವನ್ನಪ್ಪಿದ್ದಾರೆ ಮತ್ತು ಹಲವು ಸಾವಿರ ಜನ ಗಾಯಗೊಂಡಿದ್ದಾರೆ ಎಂದು ಹುಸೇನ್ ಹೇಳಿದರು. 

ರೈಫಲ್ ಲೂಟಿ: ಯುವಕನೊಬ್ಬ 7.62 ಮಿಮೀ ರೈಫಲ್ ತೆಗೆದುಕೊಂಡು ಹೋಗುತ್ತಿರುವುದು ವಿಡಿಯೋದಲ್ಲಿದೆ. ಆತ ರೈಫಲ್ ಹಿಂತಿರುಗಿಸಿಲ್ಲ. ಶಸ್ತ್ರಾಸ್ತ್ರ ಹಸ್ತಾಂತರಿಸಲು ಭಯವಾದರೆ, ಬೇರೆಯವರ ಮೂಲಕ ವಾಪಸು ಮಾಡಿ,ʼ ಎಂದು ಹೇಳಿದರು.

ಅರೆ ಸೈನಿಕ ಪಡೆಗಳ ಮೇಲೆ ಗುಂಡು ಹಾರಿಸಿದ ನಾಗರಿಕರ ಉಡುಪಿನಲ್ಲಿದ್ದ ಯುವಕರನ್ನು ಅಧಿಕಾರಿಗಳು ಗುರುತಿಸುತ್ತಾರೆ ಎಂದು ಹುಸೇನ್ ಹೇಳಿದರು.

ಮಾಧ್ಯಮಗಳ ಮೇಲೆ ಕ್ರಮವಿಲ್ಲ: ಸುಳ್ಳು ಅಥವಾ ತಪ್ಪುದಾರಿಗೆಳೆಯುವ ಸುದ್ದಿಗಳನ್ನು ಪ್ರಕಟಿಸಿದರೆ ಅಥವಾ ಪ್ರಸಾರ ಮಾಡಿದರೆ, ಮಾಧ್ಯಮಗಳನ್ನು ಮುಚ್ಚುವುದಾಗಿ ಹೇಳಿದ್ದ ತಮ್ಮ ಹಿಂದಿನ ಹೇಳಿಕೆಯನ್ನು ಬದಲಿಸಿದ ಅವರು, ʻನಾನು ಆ ಮಾತು ಕೋಪದಿಂದ ಹೇಳಿದ್ದೆ. ಯಾವುದೇ ಮಾಧ್ಯಮವನ್ನು ಮುಚ್ಚುವುದನ್ನು ಎಂದಿಗೂ ಬೆಂಬಲಿಸುವುದಿಲ್ಲ,ʼ ಎಂದರು.

ಹಸೀನಾ ಅವರ ಪಲಾಯನದ ಬಳಿಕ ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನಸ್ ಅವರು ಜುಲೈ 8 ರಂದು ಮಧ್ಯಂತರ ಸರ್ಕಾರದ ಮುಖ್ಯಸ್ಥರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಅವರಿಗೆ ನೆರವಾಗಲು 16 ಸದಸ್ಯರ ಸಲಹೆಗಾರರ ಮಂಡಳಿಯನ್ನು ನೇಮಿಸಲಾಗಿದೆ.


Tags:    

Similar News