Battle for Bastar Part 1: ಮಾವೋವಾದಿಗಳ ಭದ್ರಕೋಟೆ ಛಿದ್ರವಾಗಿದ್ದು ಹೇಗೆ?

ಕಳೆದ ಎರಡೂವರೆ ದಶಕಗಳಿಂದ ಇಲ್ಲಿ ನೆಲೆಸಿದ್ದುದು ಭಯದ ವಾತಾವರಣ. ಬುಡಕಟ್ಟು ಜನರೇ ತುಂಬಿರುವ ಇಡೀ ಬಸ್ತರ್ ವಲಯ ಈಗ ಭಯಮುಕ್ತ. ಅಲ್ಲೀಗ ಜನ ಮೈಕೊಡವಿ ನಿಂತಿದ್ದಾರೆ.;

Update: 2025-06-23 01:30 GMT

ಕಳೆದ ಎರಡು ತಿಂಗಳಿನಿಂದ ನಡೆಯುತ್ತಿರುವ ಎರಡು ಪ್ರಮುಖ ಮಾವೋವಾದಿ ನಿಗ್ರಹ ಕಾರ್ಯಾಚರಣೆಗಳು ಈಗ ನಿರ್ಣಾಯಕ ಹಂತ ತಲುಪಿವೆ. ನಿರಂತರ ಸಶಸ್ತ್ರ ಚಳವಳಿಯಲ್ಲಿ ತೊಡಗಿದ್ದ ಮಾವೋವಾದಿಗಳು ಈಗ ಸಂಪೂರ್ಣ ಕಂಗಾಲಾಗಿದ್ದಾರೆ. ಭದ್ರತಾ ಪಡೆಗಳು ನಡೆಸಿರುವ ಈ ಆಪರೇಷನ್-ಗಳು ನಿಷೇಧಿತ ಭಾರತೀಯ ಕಮ್ಯುನಿಸ್ಟ್ ಪಕ್ಷಕ್ಕೆ ಭಾರೀ ಹಿನ್ನಡೆಯಾಗಿವೆ.

ಬಿಜಾಪುರ ಜಿಲ್ಲೆಯ ಕರೆಗುಟ್ಟ ಬೆಟ್ಟಗಳಲ್ಲಿ ಮೊದಲಿಗೆ ನಡೆದಿದ್ದು 21 ದಿನಗಳ ಕಾರ್ಯಾಚರಣೆ. ಅದರಲ್ಲಿ ಭಾಗಿಯಾದವರು ಭರೋಬ್ಬರಿ ಹತ್ತು ಸಾವಿರ ಭದ್ರತಾ ಸಿಬ್ಬಂದಿ. ಈ ಕಾರ್ಯಾಚರಣೆ 31 ಮಾವೋವಾದಿಗಳನ್ನು ಬಲಿತೆಗೆದುಕೊಂಡಿತ್ತು. ಎರಡನೆಯ ಕಾರ್ಯಾಚರಣೆ ನಾರಾಯಣಪುರ ಜಿಲ್ಲೆಯ ಅಬುಜಾಮದ್ ನಲ್ಲಿ ಮೂರು ದಿನಗಳ ಕಾಲ ನಡೆಯಿತು. ಅಬುಜಾಮದ್-ನ್ನು ತಮ್ಮ ಭದ್ರಕೋಟೆಯನ್ನಾಗಿ ಮಾಡಿಕೊಂಡು ಅಜೇಯರಾಗಿ ಉಳಿದಿದ್ದ ಮಾವೋವಾದಿಗಳನ್ನು ಬಗ್ಗುಬಡಿಯಲಾಗಿತ್ತು. ಇದರ ಬಹುದೊಡ್ಡ ಯಶಸ್ಸು ಎಂದರೆ ನಿಷೇಧಿತ ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಸವರಾಜುವಿನ ಹತ್ಯೆ.

ಛತ್ತೀಸಗಢ ರಾಜ್ಯದ ದಕ್ಷಿಣ ಭಾಗದಲ್ಲಿರುವ ಬಸ್ತರ್ ಸಮೃದ್ಧ ಖನಿಜ ಸಂಪತ್ತು ಮತ್ತು ಸಸ್ಯ ಹಾಗೂ ಪ್ರಾಣಿ ಸಂಕುಲಗಳನ್ನು ಒಳಗೊಂಡಿರುವ ನಿಸರ್ಗ ಸಿರಿಯ ಜಿಲ್ಲೆ. ಅಸಲಿಗೆ ಗಾತ್ರದಲ್ಲಿ ಕೇರಳ ರಾಜ್ಯಕ್ಕಿಂತ ದೊಡ್ಡದಾಗಿರುವ ಇಲ್ಲಿ ಹೆಚ್ಚಾಗಿ ವಾಸಿಸುವವರು ಬುಡಕಟ್ಟು ಜನಾಂಗದ ಜನ. ದಟ್ಟವಾದ ಕಾಡು ಮತ್ತು ಪರ್ವತ ಪ್ರದೇಶಗಳ ಕಾರಣದಿಂದ ಈ ಜಿಲ್ಲೆ ಕಳೆದ ಎರಡೂವರೆ ದಶಕಗಳಿಂದ ಸಶಸ್ತ್ರ ಗೆರಿಲ್ಲಾಗಳ ಭದ್ರಕೋಟೆಯಾಗಿತ್ತು.

2005ರ ಆರಂಭಿಕ ದಿನಗಳಿಂದಲೂ ತಮ್ಮ ತಮ್ಮ ಪತ್ರಿಕೆಗಳಿಗಾಗಿ ಈ ವಲಯದಲ್ಲಿ ನಿರಂತರ ವರದಿ ಮಾಡುತ್ತ ಬಂದವರು ಇಬ್ಬರು ಸ್ವತಂತ್ರ ವರದಿಗಾರರು. ಅವರು ಭದ್ರತಾ ಪಡೆಗಳ ಇತ್ತೀಚಿನ ಕಾರ್ಯಾಚರಣೆಗಳ ಬಳಿಕ ಬಸ್ತರ್-ನಲ್ಲಿ ಹೇಗೆ ಪರಿಸ್ಥಿತಿ ಗಮನಾರ್ಹವಾಗಿ ಬದಲಾಗಿದೆ ಎಂಬುದನ್ನು ತಿಳಿದುಕೊಳ್ಳುವ ದೃಷ್ಟಿಯಿಂದ ದ ಫೆಡರಲ್ ಗಾಗಿ ಈ ವಲಯಕ್ಕೆ ಮರುಭೇಟಿ ನೀಡಿದ್ದಾರೆ. ದಂಡಕಾರಣ್ಯದ ಭಾಗವಾಗಿರುವ ಹಾಗೂ ಮಾವೋವಾದಿ ದಂಗೆಯ ಕೇಂದ್ರವಾಗಿದ್ದ ಈ ವಿಶಾಲ ದಟ್ಟಡವಿಯಲ್ಲಿ ಈಗಿನ ಪರಿಸ್ಥಿತಿಯು, 15-20 ವರ್ಷಗಳ ಹಿಂದೆ ಇದ್ದ ಪರಿಸ್ಥಿತಿಗೆ ತದ್ವಿರುದ್ಧವಾಗಿದೆ.

ನಮ್ಮ ಈ ಸರಣಿಯು ಬಸ್ತರ್ ನಲ್ಲಿ ನಡೆಯುತ್ತಿರುವ ಬದಲಾವಣೆಗಳನ್ನು ಗುರುತಿಸುವ ಪ್ರಯತ್ನವಾಗಿದೆ. ಈಗ ಕಾಣಿಸುತ್ತಿರುವ ಬದಲಾವಣೆಯು ಸ್ವತಂತ್ರ ಭಾರತದ ಇತಿಹಾಸದಲ್ಲಿ ಅತ್ಯಂತ ಸುದೀರ್ಘ ಕಾಲ ನಡೆದ ಸಶಸ್ತ್ರ ಚಳವಳಿಗಳಲ್ಲಿ ಒಂದಕ್ಕೆ ಅಂತ್ಯ ಹಾಡುವ ಸಾಧ್ಯತೆ ದಟ್ಟವಾಗಿದೆ.

ಸುಮಾರು ಹದಿನೈದು ವರ್ಷಗಳ ಹಿಂದಿನ ಮಾತು. 110 ಕಿ.ಮೀ. ಉದ್ದದ ಅಂಕುಡೊಂಕಾದ ಆ ಹೆದ್ದಾರಿ ಹಗಲು ಹೊತ್ತಿನಲ್ಲೂ ಕರ್ಫ್ಯೂ ವಿಧಿಸಿದಂತೆ ಕಾಣುತ್ತಿತ್ತು. ಅದು ಬಸ್ತರ್ ಜಿಲ್ಲೆಯ ಕೇಂದ್ರ ಕಚೇರಿಯಾದ ಜಗದಲಪುರವನ್ನು ಸುಕ್ಮಾಗೆ ಸಂಪರ್ಕಿಸುವ ಹೆದ್ದಾರಿ. ಈ ಸುಕ್ಮಾ ಛತ್ತೀಸಗಢದ ದಕ್ಷಿಣ ಬಸ್ತರ್ ಪ್ರದೇಶದ ಅಂದಿನ ತಹಸಿಲ್ ಆಗಿತ್ತು.

ಈ ಹೆದ್ದಾರಿಯು ಮಾವೋವಾದಿಗಳ ಮಾರಣಾಂತಿಕ ದಂಗೆಯ ಪಾಲಿನ ಜೀವನಾಡಿಯಾಗಿ ಪರಿವರ್ತಿತವಾಯಿತು. ಅಧಿಕೃತವಾಗಿ ಎಡಪಂಥೀಯ ಉಗ್ರವಾದ (LWA) ಎಂದು ಕರೆಯಲ್ಪಡುವ ಇಲ್ಲಿ ಉಗ್ರರು ಮನಸೋಯಿಚ್ಛೆ ಪಾಶವೀಯವಾಗಿ ದಾಳಿಮಾಡಬಹುದಿತ್ತು. ಇದು ದಕ್ಷಿಣ ಬಸ್ತರ್ ನಿಂದ ಪಶ್ಚಿಮ ಒಡಿಶಾಗೆ ಬಂಡುಕೋರರು ಮುಕ್ತವಾಗಿ ಸಂಚರಿಸಲು ರಹದಾರಿಯಾಗಿತ್ತು. ಅವರ ಕಾರ್ಯತಂತ್ರಕ್ಕೆ ಇದಕ್ಕಿಂತ ಉತ್ತಮ ತಾಣ ಇನ್ನೊಂದಿರಲಿಲ್ಲ.

ಮಾವೋವಾದಿಗಳು ತಮ್ಮ ಭಯಾನಕ ಮುಖವನ್ನು ಪ್ರದರ್ಶಿಸಿದ್ದು 2013ರ ಮೇ ತಿಂಗಳಲ್ಲಿ ನಡೆದ ಝೀರಂ ಹತ್ಯಾಕಾಂಡದ ಮೂಲಕ. ಅಂದು 27 ಮಂದಿ ಕಾಂಗ್ರೆಸ್ ಕಾರ್ಯಕರ್ತರನ್ನು ಅತ್ಯಂತ ಕ್ರೂರ ರೀತಿಯಲ್ಲಿ ಹತ್ಯೆ ಮಾಡಲಾಗಿತ್ತು. ಆ ಹತ್ಯಾಕಾಂಡವು ಇಡೀ ರಾಜ್ಯದಲ್ಲಿ ಪಕ್ಷದ ನಾಯಕತ್ವವನ್ನೇ ಸಂಪೂರ್ಣವಾಗಿ ನಿರ್ಮೂಲ ಮಾಡಿತು ಎಂದರೆ ಉತ್ಪ್ರೇಕ್ಷೆಯಾಗದು.

ಇದಕ್ಕೂ ಮೊದಲು 2010ರಲ್ಲಿ ಸುಕ್ಮಾದಿಂದ ಸುಮಾರು ನೂರು ಕಿ.ಮೀ. ದೂರದಲ್ಲಿರುವ ದೋರ್ನಪಾಲ ಗ್ರಾಮದಿಂದ ಸುಮಾರು 50 ಕಿ.ಮೀ. ಪಶ್ಚಿಮಕ್ಕಿರುವ ತಡಮೆಟ್ಲಾದಲ್ಲಿ ಮಾವೋವಾದಿಗಳು ಕೇಂದ್ರೀಯ ಮೀಸಲು ಪಡೆಯ ಮೇಲೆ ಭಯಾನಕ ದಾಳಿ ನಡೆಸಿದ್ದರು. ಅದರಲ್ಲಿ ಸತ್ತ ಜವಾನರ ಸಂಖ್ಯೆ 76ಕ್ಕೂ ಅಧಿಕ.


ದೋರ್ನಪಾಲದಿಂದ ತಡಮೇಟ್ಲಾ ವರೆಗೂ ಇರುವ ಶಿಥಿಲವಾದ ರಸ್ತೆಯ ಉದ್ದಕ್ಕೂ ಮಾವೋವಾದಿಗಳು ಇಟ್ಟಿದ್ದು ಸುಧಾರಿತ ಸ್ಪೋಟಕ ಸಾಧನಗಳನ್ನು. ಆ ಕಾರಣದಿಂದಾಗಿ ಬಂಡುಕೋರರು ನಿಖರವಾಗಿ ದಾಳಿಮಾಡುತ್ತ ಹೋದರು. ಇದರ ಫಲವಾಗಿ 2014-15ರ ಅವಧಿಯಲ್ಲಿ ಭದ್ರತಾ ಪಡೆ ಅನೇಕ ಜೀವಗಳನ್ನು ಕಳೆದುಕೊಳ್ಳಬೇಕಾಯಿತು.

ಅದೃಷ್ಟದ ತಿರುವು

ಇಂದು ಅಂದರೆ 2025ರ ಈ ಕಾಲಘಟ್ಟಕ್ಕೆ ಬಂದು ನಿಂತರೆ, ಹಚ್ಚಹಸಿರಿನಿಂದ ಕೂಡಿದ ಈ ಸುಂದರ ಕಣಿವೆಯ ರಾಷ್ಟ್ರೀಯ ಹೆದ್ದಾರಿ 30ರ ಈ ಭಾಗವು ಕಳೆದುಕೊಂಡಿದ್ದ ನೆಮ್ಮದಿ ಮತ್ತು ಗೌರವವನ್ನು ಮರಳಿಪಡೆದುಕೊಂಡಿದೆ. ಇಲ್ಲೀಗ ಶಾಂತಿಯ ಗಾಳಿ ಬೀಸುತ್ತಿದೆ. ಅದು ಶಾಶ್ವತವಾಗಿ ನೆಲೆನಿಲ್ಲುವ ಭರವಸೆ ಮೂಡಿದೆ.

ಜಗದಾಲ್-ಪುರ ಮತ್ತು ಸುಕ್ಮಾ ರಸ್ತೆಯಲ್ಲಿ ನೆಲೆಸಿರುವ ಈ ಪರಿಸ್ಥಿತಿಯು ಇಂದು ಬಸ್ತರ್ ವಲಯದ ವಿಶಾಲ ಭೂಪ್ರದೇಶದಲ್ಲಿಯೂ ಪ್ರತಿಧ್ವನಿಸುತ್ತಿದೆ. ಅಸಲಿಗೆ ಗಾತ್ರದಲ್ಲಿ ಕೇರಳಕ್ಕಿಂತ ದೊಡ್ಡದಾಗಿರುವ ದಟ್ಟಡವಿಯಿಂದ ಕೂಡಿದ ಗುಡ್ಡಗಾಡು ಹಾಗೂ ಅಸಮ ಭೂಪ್ರದೇಶಗಳಿಂದ ಆವೃತವಾದ ಬಸ್ತರ್, ಸುಕ್ಮಾ, ನಾರಾಯಣಪುರ, ಕಂಕೇರ್, ಕೊಂಡಗಾಂವ್, ದಂತೇವಾಡ ಮತ್ತು ಬಿಜಾಪುರದಂತಹ ಎಡಪಂಥೀಯ ಉಗ್ರವಾದದಿಂದ ಪೀಡಿತವಾದ ಜಿಲ್ಲೆಗಳಲ್ಲಿಯೂ ಇದೇ ಕಥೆ ಕೇಳಿಬರುತ್ತಿದೆ.

ಬಸ್ತರ್ ನ ತುಂಬಾ ನಿಮಗೆ ಕಾಣುವುದು ಅನೇಕ ಬುಡಕಟ್ಟು ಸಮುದಾಯಗಳು. ಅಂಥವುಗಳಲ್ಲಿ ಒಂದೆಂದರೆ ಅಬುಜ್ಮದಿಯಾ. ಇದು ಅತ್ಯಂತ ಆದಿಮ ದುರ್ಬಲ ಬುಡಕಟ್ಟು ಗುಂಪುಗಳಲ್ಲಿ ಒಂದಾಗಿದೆ.

ದಶಕಗಳಲ್ಲಿ ಮೊದಲ ಬಾರಿಗೆ ನಂಬಿ ಗ್ರಾಮದ ನಿವಾಸಿಗಳು ಬಸ್ ಸೇವೆಗಳನ್ನು ಪಡೆಯುತ್ತಿದ್ದಾರೆ. (ಛಾಯಾಚಿತ್ರಗಳು: ದೀಪಕ್ ದಾವರೆ)

ಇನ್ನು ಕಂಕೇರ್ ಮತ್ತು ಕೊಂಡಗಾಂವ್ ನಂತಹ ಜಿಲ್ಲೆಗಳು 2015-16ರ ಹೊತ್ತಿಗೆ ಅಭಿವೃದ್ಧಿಗೆ ತೆರೆದುಕೊಳ್ಳಲು ಆರಂಭಿಸಿದವು. ಇತ್ತೀಚನ ವರೆಗೂ ಮಾವೋವಾದಿಗಳು ಹಿಡಿತ ಸಾಧಿಸಿದ್ದ ಕೆಲವು ದುರ್ಗಮ ಪ್ರದೇಶಗಳು, ಅದರಲ್ಲೂ ಮುಖ್ಯವಾಗಿ ದಕ್ಷಿಣ ಬಸ್ತರ್ ಪ್ರದೇಶದಲ್ಲಿ ಅಭಿವೃದ್ಧಿ ಚಟವಟಿಕೆಗಳು ಶುರುವಾಗಿವೆ. ಹೊಚ್ಚ ಹೊಸ ರಸ್ತೆಗಳನ್ನು ನಿರ್ಮಿಸಲಾಗಿದೆ. ಉದ್ದಗಲಕ್ಕೂ ತಲೆ ಎತ್ತಿರುವ ಮೊಬೈಲ್ ಟವರ್ ಗಳು ಕಣ್ಣಿಗೆ ಕಟ್ಟುತ್ತವೆ.

ಆಂತರಿಕ ಮತ್ತು ಬಾಹ್ಯ ಪ್ರಪಂಚಗಳ ನಡುವಿನ ಸಂಪರ್ಕದ ಚಿಹ್ನೆಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ.

15 ವರ್ಷಗಳ ಹಿಂದಿನ NH30 ರ ಜಗದಲ್ಪುರ್-ಸುಕ್ಮಾ ಮಾರ್ಗವು ಇಂದು ಬಹಳ ದೂರದಲ್ಲಿದೆ. ಈ ಸುಂದರವಾಗಿ ಕಾಣುವ ರಸ್ತೆಯು ಆಗ ಮಾರಕ ಮಾವೋವಾದಿ ದಂಗೆಗೆ ಜೀವನಾಡಿಯಾಗಿತ್ತು.

ಭಯದ ಗೂಡಿನಿಂದ ಹೊರಗೆ

ಈಗ ನಂಬಿ ಎಂಬ ಪುಟ್ಟ ಹಳ್ಳಿಯನ್ನೇ ಉದಾಹರಣೆಯಾಗಿ ತೆಗೆದುಕೊಳ್ಳಿ. ಇದು ಮಾವೋವಾದಿಗಳ ಭದ್ರಕೋಟೆ ಕರೆಗುಟ್ಟಾ ಬೆಟ್ಟ (ಅಥವಾ ಕಪ್ಪು ಬೆಟ್ಟಗಳು)ದ ಮಗ್ಗುಲಲ್ಲಿರುವ ಚಿಕ್ಕ ಗ್ರಾಮ. ದಟ್ಟ ಅರಣ್ಯದಿಂದ ಆವೃತವಾಗಿರುವ ಇದು ಬಿಜಾಪುರದ ಪಶ್ಚಿಮ ಮೋದಕಪಲ್-ಪೂಜಾರಿ ಕಂಕರ್ ಎಂಬ ಸೂಕ್ಷ್ಮ ಪ್ರದೇಶದಲ್ಲಿ ಬರುತ್ತದೆ. ಕಳೆದ ಏಪ್ರಿಲ್ 21ರಿಂದ ಮೇ 11ರ ತನಕ ಮಾವೋವಾದಿಗಳ ವಿರುದ್ಧ ನಡೆದ ಬೃಹತ್ ಕಾರ್ಯಚರಣೆ ನಡೆದಿದ್ದೂ ಇದೇ ವಲಯದಲ್ಲಿ. ಈ ನಂಬಿ ಎಂಬ ಗ್ರಾಮದ ಜನ ಭಯದ ನೆರಳಿನಿಂದ ಹೊರಬಂದಂತೆ ಕಾಣುತ್ತಿದೆ. ಜನರು ತಮ್ಮ ಜೀವನ ಹೇಗೆ ಬದಲಾಗುತ್ತಿದೆ ಎಂಬುದನ್ನು ಮುಕ್ತವಾಗಿ ಮಾತನಾಡುತ್ತಿದ್ದಾರೆ.

ಗ್ರಾಮದ ಎರೆಡೂ ಕಡೆಗಳಲ್ಲಿ ಎರಡು ಪ್ರಮುಖ ಮುಂಚೂಣಿ ಭದ್ರತಾ ನೆಲೆಗಳನ್ನು ನಿರ್ಮಿಸಲಾಗಿದೆ. ಗ್ರಾಮದ ಮೇಲೆ ದಿನದ 24 ಗಂಟೆಯೂ ಅರೆಸೇನಾ ಪಡೆಗಳು ಕಣ್ಣಿಟ್ಟಿವೆ. ಈ ಭದ್ರತಾ ಶಿಬಿರಗಳು ಪ್ರಾಥಮಿಕ ಆಡಳಿತಾತ್ಮಕ ಬೆಳವಣಿಗೆಗಳ ಕೇಂದ್ರಬಿಂದುವಾಗಿವೆ.

“ಅಭಿ ಪೆಹಲಿ ಬಾರ್ ಕೊಯಿ ಬಸ್ ಯಹಾಂ ಚಲ್ ರಹಿ ಹೇ” (ದಶಕಗಳ ಬಳಿಕ ಮೊದಲ ಬಾರಿಗೆ ಇಲ್ಲಿಗೆ ಬಸ್ ಬಂದಿದೆ) ಎಂದು ನಂಬಿ ಗ್ರಾಮದ ದೋರ್ಲಾ ಗುಂಪಿಗೆ ಸೇರಿದ 35 ವರ್ಷ ವಯಸ್ಸಿನ ಚಂದ್ರಶೇಖರ್ ರೆಂಗಾ ಹೇಳುತ್ತಾರೆ. ರೆಂಗಾ ಇತ್ತೀಚೆಗಷ್ಟೆ ಟ್ರಾಕ್ಟರ್ ಖರೀದಿಸಿದ್ದಾರೆ. ‘ಇಲ್ಲೊಂದು ಅಂಗನವಾಡಿಯನ್ನೂ ತೆರೆಯುತ್ತಿದ್ದಾರಂತೆ” ಎಂದು ಆತ ದ ಫೆಡರಲ್ ಗೆ ತಿಳಿಸಿದ್ದಾರೆ.

ಈಗ ಗ್ರಾಮಕ್ಕೆ ಪ್ರಾಥಮಿಕ ಶಾಲೆ ಕೂಡ ಬಂದಿದೆ. ಇಲ್ಲದೆ ಹೋದರೆ ಇಲ್ಲಿನ ಮಕ್ಕಳು ಶಾಲೆಗೆ ಹೋಗುತ್ತಿರಲಿಲ್ಲ. ಅಥವಾ ಸುಮಾರು ಹತ್ತು ಕಿ.ಮೀ. ದೂರದ ಉಸೂರು ಎಂಬ ಗ್ರಾಮದಲ್ಲಿರುವ ಬುಡಕಟ್ಟು ಜನಾಂಗದ ವಸತಿ ಶಾಲೆಗೆ ಹೋಗಬೇಕಾಗುತ್ತಿತ್ತು.

ಇಲ್ಲಿ ನಿರ್ಮಿಸಲಾಗಿರುವ ಸರ್ವಋತು ರಸ್ತೆ ನಂಬಿಯಿಂದ ತೆಹಸಿಲ್ ಮತ್ತು ಜಿಲ್ಲಾ ಕೇಂದ್ರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದರಿಂದ ಗ್ರಾಮಸ್ಥರು ನಿಜಕ್ಕೂ ನಿರಾಳರಾಗಿದ್ದಾರೆ ಎಂದು ರೆಂಗಾ ಹೇಳುತ್ತಾರೆ.

ನರೇಗಾ ನಿಧಿಯ ಅಗತ್ಯವಿದೆ

ದಾಂತೇವಾಡದ ದಕ್ಷಿಣಕ್ಕಿರುವ, ಒಂದು ಕಾಲದಲ್ಲಿ ಅತ್ಯಂತ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಲಾಗಿದ್ದ ಸುಕ್ಮಾದಲ್ಲಿನ ತಾಲೂಕು ಪ್ರದೇಶ ಜಗರ್ಗುಂಡಾದಲ್ಲಿ ಕಳೆದ ತಿಂಗಳು ಇಂಡಿಯನ್ ಓವರ್ಸೀಸ್ ಬ್ಯಾಂಕಿನ ಶಾಖೆ ಆರಂಭವಾಗಿದೆ. ಬಹಳ ಹಿಂದೆ ಇಲ್ಲಿದ್ದ ಗ್ರಾಮೀಣ ಬ್ಯಾಂಕ್ ಶಾಖೆಯನ್ನು ಮಾವೋವಾದಿಗಳು ಸುಟ್ಟುಹಾಕಿದ್ದರು. ಅದಾದ ಬಳಿಕ ಇಲ್ಲಿ ಯಾವ ಬ್ಯಾಂಕುಗಳೂ ಬರುವ ಧೈರ್ಯಮಾಡಿರಲಿಲ್ಲ.

ಬ್ಯಾಂಕಿನ ಈ ಶಾಖೆ ಆರಂಭವಾಗಿರುವುದು ಸುತ್ತಮುತ್ತಲ ಗ್ರಾಮಸ್ಥರಿಗೆ ಬಹಳ ಸಹಾಯವಾಗಲಿದೆ ಎಂದು ಇಲ್ಲಿನ ಸರಪಂಚ ಪೂರನ್ ಸಿಂಗ್ ಕೋಸ್ಮಾ ಹೇಳುತ್ತಾರೆ. ಇನ್ನು ಮುಂದೆ ಅದಕ್ಕಾಗಿ ಸುಕ್ಮಾಗೆ ಹೋಗುವುದು ತಪ್ಪಿತು ಎಂದು ಅವರು ಹೇಳಿದರು.

‘ಈಗ ಗ್ರಾಮಸ್ಥರಿಗೆ ಉದ್ಯೋಗದ ಅಗತ್ಯವಿದೆ” ಎಂದು ಹೇಳುವ ಸ್ಥಳೀಯ ಶಾಲೆಯಲ್ಲಿ ಗುಮಾಸ್ತನಾಗಿಯೂ ಕೆಲಸಮಾಡುವ ಕೋಸ್ಮಾ, ಗ್ರಾಮಕ್ಕೆ ಒಂದಷ್ಟು ಎಂನರೇಗಾ ಹಣ ಬಿಡುಗಡೆಯಾದರೆ ಜನರಿಗೆ ಜೀವನಾಧಾರಕ್ಕೆ ಏನಾದರೂ ಸಿಕ್ಕಂತಾಗುತ್ತದೆ ಎನ್ನುತ್ತಾರೆ. ಕಳೆದ ಅನೇಕ ದಶಕಗಳಿಂದ ಜಗರ್ಗುಂಡಾ ಸಂಘರ್ಷಗಳನ್ನು ಬಿಟ್ಟರೆ ಬೇರೆ ಯಾವ ಅಭಿವೃದ್ಧಿಯನ್ನೂ ಕಂಡಿಲ್ಲ ಎಂಬುದಕ್ಕೆ ಈ ಮಾತುಗಳು ಸಾಕ್ಷಿ.

ಸುಕ್ಮಾದ ಜಾಗರಗುಂಡದಲ್ಲಿ, ಒಂದು ತಿಂಗಳ ಹಿಂದೆ ಇಂಡಿಯನ್ ಓವರ್‌ಸೀಸ್ ಬ್ಯಾಂಕಿನ ಶಾಖೆಯನ್ನು ತೆರೆಯಲಾಯಿತು, ಬಹಳ ಹಿಂದೆ ಮಾವೋವಾದಿಗಳು ಗ್ರಾಮೀಣ ಬ್ಯಾಂಕಿನ ಶಾಖೆಯನ್ನು ಸುಟ್ಟುಹಾಕಿದ ನಂತರ ಮತ್ತೆ  ಮೊದಲ ಬಾರಿಗೆ ತೆರೆದ ಬ್ಯಾಂಕ್

ಮುಂದಿರುವ ಸವಾಲುಗಳು

ಅದು ಜಗರ್ಗುಂಡಾ ಅಥವಾ ನಂಬಿಯಾಗಿರಲಿ ಅಥವಾ ಇಡೀ ಬಸ್ತಾರ್ ಸುತ್ತಮುತ್ತಲಿನ ಗ್ರಾಮಗಳ ಜನ ಆಡಳಿತಾತ್ಮಕವಾಗಿ ಅಥವಾ ರಾಜಕೀಯವಾಗಿ ಶೂನ್ಯವನ್ನು ಎದುರಿಸುತ್ತಿದ್ದಾರೆ. ಉದಾಹರಣೆಗೆ ದಕ್ಷಿಣ ಬಸ್ತಾರ್ ನಲ್ಲಿ ಅನೇಕ ಸಮುದಾಯಗಳಿಗೆ ಅಥವಾ ವ್ಯಕ್ತಿಗಳಿಗೆ 2008ರ ಪರಿವರ್ತನಾತ್ಮಕ ಅರಣ್ಯ ಹಕ್ಕುಗಳ ಕಾಯ್ದೆಯ ಅಡಿಯಲ್ಲಿ ಅರಣ್ಯ ಹಕ್ಕುಗಳೇ ಸಿಕ್ಕಿಲ್ಲ. ಮಹಾರಾಷ್ಟ್ರದ ಗಡಚಿರೋಲಿಯಲ್ಲಿ ಇದು ಪ್ರಮುಖ ಪಾತ್ರವಹಿಸಿದ್ದನ್ನು ಗಮನಿಸಬಹುದು. ಆದರೆ ಇಲ್ಲಿ ಆವರಿಸಿದ್ದ ರಕ್ತಸಿಕ್ತ ಸಂಘರ್ಷದ ಛಾಯೆಯಿಂದ ಗ್ರಾಮಸ್ಥರು ಬಿಡುಗಡೆ ಕಾಣುತ್ತಿರುವುದು ಸ್ಪಷ್ಟವಾಗಿದೆ.

ಕಳೆದ ಫೆಬ್ರುವರಿ ತಿಂಗಳಲ್ಲಿ ದಕ್ಷಿಣ ಬಸ್ತಾರಿನ ಅನೇಕ ಗ್ರಾಮಗಳಲ್ಲಿ ಪಂಚಾಯತ್ ಚುನಾವಣೆಗಳು ನಡೆದಿವೆ. ಅದೂ ಯಾವುದೆ ಅಹಿತಕರ ಘಟನೆಗಳಿಲ್ಲದೆ. ಅದು ಕಳೆದ ಅನೇಕ ದಶಕಗಳಲ್ಲಿ ನಡೆದ ಮೊದಲ ಬೆಳವಣಿಗೆ. ಇಲ್ಲಿ ಬೀಡುಬಿಟ್ಟಿದ್ದ ಭದ್ರತಾಪಡೆಯ ದೊಡ್ಡ ಟೀಮ್ ಈ ಚುನಾವಣೆಯನ್ನು ಆಗುಮಾಡಿದ್ದವು.

ಈಗ ಪಂಚಾಯತ್ ವ್ಯವಹಾರಗಳನ್ನು ನಡೆಸುವುದೇ ಗ್ರಾಮಸ್ಥರ ಪಾಲಿಗೆ ದೊಡ್ಡ ಸವಾಲಾಗಿದೆ ಎನ್ನುವ ಕೋಸ್ಮಾ, ಕ್ರಮೇಣ ಅವರು ಎಲ್ಲವನ್ನೂ ಕಲಿಯುತ್ತಾರೆ ಎಂಬ ಭರವಸೆ ವ್ಯಕ್ತಪಡಿಸುತ್ತಾರೆ.

ಬಿಜಾಪುರದ ಅತ್ಯಂತ ಕುಗ್ರಾಮವಾದ ಆವಪಳ್ಳಿಯ ಮೂವರು ಬುಡಕಟ್ಟು ಜನಾಂಗದ ವಿದ್ಯಾರ್ಥಿಗಳು ರಾಜ್ಯದ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶಾತಿಯನ್ನು ಪಡೆದಿರುವುದು ಈ ಭಾಗದ ಪಾಲಿಗೆ ಬಹುದೊಡ್ಡ ಆಶಾಕಿರಣವಾಗಿ ಪರಿಣಮಿಸಿದೆ.

ಸಲ್ವಾಂ ಜುಡುಂ ಆಂದೋಲನ

ಛತ್ತೀಸಗಢದ ಅಂದಿನ ರಮಣ ಸಿಂಗ್ ಸರ್ಕಾರವು ಮಾಡಿದ ದೊಡ್ಡ ತಪ್ಪಿನಿಂದ ದಕ್ಷಿಣ ಬಸ್ತಾರ್ ವಲಯ ನರಳಿ ನುಪ್ಪಾಗಿಹೋಯಿತು. ಅದು ‘ಸಲ್ವಾ ಜುಡುಂ ಆಂದೋಲನ’. ಅದರ ಫಲವಾಗಿ ಸರ್ಕಾರವು ನಾಗರಿಕರ ಕೈಗೇ ಶಸ್ತ್ರಾಸ್ತ್ರಗಳನ್ನು ಕೊಟ್ಟಿತ್ತು. ಆ ಮೂಲಕ ನಕ್ಸಲ್ ನಿಗ್ರಹ ಆಂದೋಲನವನ್ನು ಸಹೋದರತ್ವದ ಯುದ್ಧವಾಗಿ ಪರಿಣಮಿಸಿತು. ಅದರಿಂದ ಗ್ರಾಮಸ್ಥರು ಅಕ್ಷರಶಃ ನರಕಯಾತನೆ ಅನುಭವಿಸಬೇಕಾಯಿತು. ಇದು ಸಂವಿಧಾನ ಬಾಹಿರ ಹಾಗೂ ಅಕ್ರಮ ಎಂದು ಸುಪ್ರೀಂ ಕೋರ್ಟ್ ಹೇಳುವ ತನಕವೂ ಮುಂದುವರಿಯಿತು. 

ದಾಂತೇವಾಡ, ಸುಕ್ಮಾ ಅಥವಾ ಬಿಜಾಪುರಕ್ಕೆ ಸೇರಿದ ಜಗರ್ಗುಂಡಾ, ತಡಮೆಟ್ಲಾ, ನಂಬಿಯಂತಹ ಅನೇಕ ಗ್ರಾಮಗಳು ಇಬ್ಭಾಗವಾಗಿದ್ದವು. ಬುಡಕಟ್ಟು ಜನರು ಪೊಲೀಸರ ಪರವಾಗಿ ಅಥವಾ ಮಾವೋವಾದಿಗಳ ಪರವಾಗಿ ಬಂದೂಕು ಹಿಡಿದು ಪರಸ್ಪರ ಕಾದಾಡಿದರು.

ಈ ಸಹೋದರತ್ವದ ಯುದ್ಧದ ಪರಿಣಾಮ ಸ್ಪಷ್ಟ. ಹಳ್ಳಿಗಳು ರಣರಂಗವಾದವು. ಜನ ತಮ್ಮ ಮನೆಗಳನ್ನು ತೊರೆದು ಊರಿನಿಂದಲೇ ಪಲಾಯನ ಮಾಡಿದರು. ಮಾವೋವಾದಿಗಳ ದಾಳಿಗಳಿಂದ ರಕ್ಷಿಸಿಕೊಳ್ಳಲು ನೂರಾರು ಜನರು ಜುಡುಂ ಶಿಬಿರಗಳಲ್ಲಿ ಆಶ್ರಯಪಡೆದರು. ಈ ಹಳ್ಳಿಗಳ ಅನೇಕ ಮಂದಿ ಯುವಕ-ಯುವತಿಯರು ಭದ್ರತಾ ಪಡೆಗಳ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದಲೇ ಮಾವೋವಾದಿ ಕೇಡರ್ ಗಳಾಗಿ ಸೇರಿಕೊಂಡರು.

ಇಂದು ಆ ಜುಡುಂ ಶಿಬಿರಗಳು ಮುಚ್ಚಿವೆ. ಪಕ್ಕದ ಆಂಧ್ರ ಪ್ರದೇಶಕ್ಕೆ ವಲಸೆ ಹೋದವರನ್ನು ಹೊರತುಪಡಿಸಿ ಸಾಕಷ್ಟು ಜನರು ತಮ್ಮ ಗ್ರಾಮಗಳಿಗೆ ಮರಳಿದ್ದಾರೆ. ಹಾಗೆ ಬಂದವರ ಜೀವನ ಇನ್ನೂ ಅತಂತ್ರವಾಗಿದೆ.

ಇಂದು, ಬಸ್ತಾರ್‌ನಾದ್ಯಂತ, ದೂರದ ಭಾಗಗಳಲ್ಲಿಯೂ ಸಹ, ಗ್ರಾಮಸ್ಥರು ಮೋಟಾರ್‌ಸೈಕಲ್‌ಗಳನ್ನು ಓಡಿಸುವುದು, ಸ್ಮಾರ್ಟ್‌ಫೋನ್‌ಗಳನ್ನು ಬಳಸುವುದು ಮತ್ತು ಕೃಷಿಗಾಗಿ ಟ್ರ್ಯಾಕ್ಟರ್‌ಗಳನ್ನು ಬಳಸುವುದನ್ನು ಕಾಣಬಹುದು.

ಬದಲಾವಣೆಯ ಗಾಳಿ

ಬಸ್ತರ್ ಪಯಣ ಆರಂಭವಾಗುವುದು 2010ರ ತಡಮೆಟ್ಲಾ ದಾಳಿ ಮತ್ತು 2013ರ ಝೀರಂ ಕಣಿವೆ ಹತ್ಯಾಕಾಂಡದಿಂದ. ಅದು ಕೊನೆಗೊಳ್ಳುವುದು ಮೊನ್ನೆ ಮೊನ್ನೆ ನಡೆದ ಕರೇಗುಡ್ಡ ಆಪರೇಷನ್ ನಲ್ಲಿ. ಈ ಆಪರೇಷನ್ ಮಾವೋವಾದಿಗಳ ಪಾಲಿಗೆ ಮರ್ಮಾಘಾತವೇ ಆಯಿತು. ಇವೆಲ್ಲದರ ಹಿಂದೆ ಭದ್ರತಾ ಪಡೆಗಳ ದೃಢ ಸಂಕಲ್ಪ ಮತ್ತು ಸಹಿಷ್ಣುತೆ ಕೆಲಸ ಮಾಡಿದೆ. ಕತ್ತಲಲ್ಲಿ ತಡಕಾಡುತ್ತಿದ್ದ ಭದ್ರತಾಪಡೆ ತಮ್ಮಿಚ್ಛೆಗೆ ತಕ್ಕಂತೆ ಹೊಡೆದುರುಳಿಸುವ ಬಲಾಢ್ಯ ಶಕ್ತಿಯಾಗಿ ಹೊರಹೊಮ್ಮಿದೆ.

ಒಂದೂವರೆ ದಶಕದ ಹಿಂದಿನ ಭದ್ರತಾ ಸನ್ನಿವೇಶಕ್ಕೆ ಹೋಲಿಸಿದರೆ ಇಂದಿನ ಸ್ಥಿತಿ ಅಜಗಜಾಂತರ. ಇದು ಕೇವಲ ಬಸ್ತರ್ ವಲಯಕ್ಕೆ ಮಾತ್ರ ಅನ್ವಯವಾಗುವುದಿಲ್ಲ. ಬದಲಾಗಿ ಆಂಧ್ರ ಪ್ರದೇಶ, ತೆಲಂಗಾಣ ಮತ್ತು ಪಶ್ಚಿಮ ಬಂಗಾಲ ಸೇರಿದಂತೆ ಮಾವೋವಾದಿಗಳು ಕಾರ್ಯಾಚರಣೆ ನಡೆಸುತ್ತಿದ್ದ ರಾಷ್ಟ್ರದ ಅನೇಕ ಭಾಗಗಳಲ್ಲಿ ಇದೇ ಪರಿಸ್ಥಿತಿ ಇದೆ.

“ಮಾವೋವಾದಿಗಳು ಇಂದು ಅತ್ಯಂತ ದಯನೀಯ ಸ್ಥಿತಿಯಲ್ಲಿದ್ದಾರೆ” ರಾಯಪುರದಲ್ಲಿರುವ ಗುಪ್ತಚರ ಅಧಿಕಾರಿಯೊಬ್ಬರು ದ ಫೆಡರಲ್ ಗೆ ತಿಳಿಸಿದ್ದಾರೆ. ಭದ್ರತಾ ಪಡೆಗಳು ನಿರ್ಣಾಯಕ ವಿಜಯ ಸಾಧಿಸಲು ಕಾರಣವಾದ ಅನೇಕ ಅಂಶಗಳನ್ನು ಅವರು ಪಟ್ಟಿಮಾಡುತ್ತಾರೆ.

ಈ ಪಟ್ಟಿಯಲ್ಲಿರುವ ಅಂಶಗಳೆಂದರೆ ಮಾವೋವಾದಿ ಕಾರ್ಯಕರ್ತರ ಶರಣಾಗತಿ, ಸ್ಥಳೀಯರ ಬೆಂಬಲದ ಕೊರತೆ, ಉನ್ನತ ಹಂತದ ಕಾರ್ಯಕರ್ತರನ್ನು ಹೊಡೆದುರುಳಿಸಿದ್ದು, ಭದ್ರತೆ ಮತ್ತು ಆಡಳಿತಾತ್ಮಕ ವಿಚಾರದಲ್ಲಿದ್ದ ಶೂನ್ಯವನ್ನು ಭರ್ತಿಮಾಡಿರುವುದು, ಮೂಲಸೌಕರ್ಯಗಳಲ್ಲಿ ಬದಲಾವಣೆ, ಮಾವೋವಾದಿ ಬಂಡುಕೋರರ ಉನ್ನತ ನಾಯಕರ ಚಲನವಲನದ ಬಗ್ಗೆ ನೈಜ ಸಮಯದಲ್ಲಿ ಗುಪ್ತಚರ ಮಾಹಿತಿ ಸಂಗ್ರಹ ಮತ್ತು ಬದಲಾದ ಸಾಮಾಜಿಕ ಸ್ಥಿತಿಗತಿಗಳು.

ವರ್ಷದ ಪ್ರಮುಖ ಸಾಧನೆಗಳು

ಬಹುಮುಖ್ಯವಾದ ಪಾಕೆಟ್ ಗಳಲ್ಲಿ ನಿಯೋಜನೆಗೊಂಡಿರುವ ಭದ್ರತಾ ಶಿಬಿರಗಳು ಇದ್ದಕ್ಕಿದ್ದಂತೆ ಸಿಬ್ಬಂದಿಯಿಂದ ತುಂಬಿತುಳುಕಲು ಆರಂಭವಾಯಿತು. ಕೇವಲ ಐವತ್ತು ದಿನಗಳಲ್ಲಿ ಭದ್ರತಾ ಕಾರ್ಯಾಚರಣೆ ಪರಾಕಾಷ್ಠೆ ತಲುಪಿತು. ಬಸ್ತರ್ ನಲ್ಲಿ, ಅದರಲ್ಲೂ ಮುಖ್ಯವಾಗಿ ಬಿಜಾಪುರ ಮತ್ತು ನಾರಾಯಣಪುರ ಜಿಲ್ಲೆಗಳಲ್ಲಿ ಮಾವೋವಾದಿಗಳ ಕಾರಸ್ಥಾನಗಳ ಮೇಲೆ ಭಾರೀ ದಾಳಿಗಳು ನಡೆದವು.

ಸುಮಾರು ಐದು ದಶಕಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಮಾವೋವಾದಿ ಸಂಘಟನೆಯ ಜಂಘಾಬಲವೇ ಉಡುಗಿಹೋಯಿತು. ಮೇ ತಿಂಗಳ ಕೊನೆಯ ಭಾಗದಲ್ಲಿ ಮೂರು ದಿನಗಳ ಕಾಲ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ ನಿಷೇಧಿತ ಸಿಪಿಐ-ಎಂನ ಪ್ರಧಾನ ಕಾರ್ಯದರ್ಶಿ ಹಾಗೂ ಉನ್ನತ ನಾಯಕನನ್ನು ಧರೆಗುರುಳಿಸಲಾಯಿತು.

ಬಂಡುಕೋರರ ಅಡಗುದಾಣದ ಮೇಲೆ ನಡೆದ ದಾಳಿಯಲ್ಲಿ ಮಾವೋವಾದಿಗಳ ಅತ್ಯುನ್ನತ ನಾಯಕ ನಂಬಳ ಕೇಶವರಾವ್ ಅಲಿಯಾಸ್ ಬಸವರಾಜು (74) ಮತ್ತು 27 ಮಂದಿ ನಕ್ಸಲರು ಹತರಾದರು. ನಿಷೇಧಿತ ಸಂಘಟನೆಯಲ್ಲಿ ಸುದೀರ್ಘ ಕಾಲ ಪ್ರಧಾನ ಕಾರ್ಯದರ್ಶಿಯಾಗಿದ್ದ ಗಣಪತಿ ಯಾನೆ ಮುಪ್ಪಳ ಲಕ್ಷ್ಮಣ ರಾವ್ ಉತ್ತರಾಧಿಕಾರಿಯಾಗಿ ಬಸವರಾಜು ಕೆಲಸ ಮಾಡುತ್ತಿದ್ದ.

ಈ ಆಪರೇಷನ್ ನಡೆದ ಕೇವಲ 15 ದಿನಗಳಲ್ಲಿ ಬಿಜಾಪುರದಲ್ಲಿ ನಡೆದ ಇನ್ನೊಂದು ಕಾರ್ಯಾಚರಣೆಯಲ್ಲಿ ಭದ್ರತಾ ಪಡೆ ಮತ್ತೊಬ್ಬ ಉನ್ನತ ಮಾವೋವಾದಿ ನಾಯಕ, 66 ವರ್ಷದ ತೆಂತು ಲಕ್ಷ್ಮೀನರಸಿಂಹ ಚಲಂ ಯಾನೆ ಸುಧಾಕರನನ್ನು ಹೆಡೆಮುರಿ ಕಟ್ಟಲಾಯಿತು. ಈತ ಸಿಪಿಐ-ಎಂನ ಸೆಂಟ್ರಲ್ ಕಮಿಟಿಯ ಸದಸ್ಯನಾಗಿದ್ದ.

ಹೊಸದಾಗಿ ನಿರ್ಮಿಸಲಾದ ಡೋರ್ನಪಾಲ್-ಜಗರಗೊಂಡ ರಸ್ತೆ, ಒಂದು ಕಾಲದಲ್ಲಿ ಅತ್ಯಂತ ಸೂಕ್ಷ್ಮ ವಲಯವಾಗಿತ್ತು. 2010 ರಲ್ಲಿ, ಡೋರ್ನಪಾಲ್‌ನಿಂದ ಪಶ್ಚಿಮಕ್ಕೆ ಸುಮಾರು 50 ಕಿ.ಮೀ ದೂರದಲ್ಲಿರುವ ಟಾಡ್ಮೆಟ್ಲಾದಲ್ಲಿ ಮಾವೋವಾದಿಗಳು ಹೊಂಚುಹಾಕಿ ದಾಳಿ ನಡೆಸಿ 76 ಸಿಆರ್‌ಪಿಎಫ್ ಯೋಧರನ್ನು ಕೊಂದಿದ್ದರು.

ದಿಕ್ಕೆಟ್ಟ ನಾಯಕರು

‘ಆಪರೇಷನ್ ಕರೇಗುಡ್ಡ’ ಯಾವತ್ತು ಯಶಸ್ವಿಯಾಯಿತೋ ಆ ಕಾರ್ಯಾಚರಣೆಯಿಂದ ತಪ್ಪಿಸಿಕೊಂಡಿದ್ದ ಇತರ ಉನ್ನತ ಮಾವೋವಾದಿ ನಾಯಕರು ಅಕ್ಷರಶಃ ದಿಕ್ಕಾಪಾಲಾಗಿದ್ದಾರೆ. ಅವರು ಆಶ್ರಯಕ್ಕಾಗಿ ಪರದಾಟ ನಡೆಸಿದ್ದಾರೆ ಎಂದು ನಕ್ಸಲ್ ನಿಗ್ರಹ ಕಾರ್ಯಾಚರಣೆಯ ಮೇಲ್ವಿಚಾರಣೆ ಹೊಣೆಹೊತ್ತಿರುವ ಅಧಿಕಾರಿಗಳು ತಿಳಿಸಿದ್ದಾರೆ.

ಇವರಲ್ಲಿ ಪ್ರಮುಖರೆಂದರೆ ತಡಮೆಟ್ಲಾ ದಾಳಿಯೂ ಸೇರಿದಂತೆ ಅನೇಕ ಮಾರಣಾಂತಿಕ ದಾಳಿಗಳಲ್ಲಿ ನಿರ್ಣಾಯಕ ಪಾತ್ರವಹಿಸಿದ್ದ ಮಾವೋವಾದಿ ಮಿಲಿಟರಿ ಕಮಾಂಡರ್ ಮಾದ್ವಿ ಹಿದ್ಮಾ, ಸೆಂಟ್ರಲ್ ಮಿಲಿಟರಿ ಕಮಿಷನ್ ನ ನಿಯಂತ್ರಣ ಹೊಂದಿದ್ದ ದೇವಜೀ ಮತ್ತು ಸೆಂಟ್ರಲ್ ಕಮಿಟಿಯ ಹಿರಿಯ ಸದಸ್ಯ ಭೂಪತಿ ಸೇರಿದ್ದಾರೆ.

ಮಾವೋವಾದಿಗಳ ಅಬೇಧ್ಯ ತಾಣವಾಗಿದ್ದುದು ಕರೇಗುಡ್ಡ ಪರ್ವತ. ಇದು ಛತ್ತೀಸಗಢ-ತೆಲಂಗಾಣ ಗಡಿಯಲ್ಲಿರುವ 800 ಮೀಟರ್ ಎತ್ತರದ, 60 ಕಿ.ಮೀ. ಉದ್ದ ಹಾಗೂ 20 ಕಿ.ಮೀ. ಅಗಲದ ಸುಭದ್ರ ಕೋಟೆ. ಏಪ್ರಿಲ್ 21ರಿಂದ ಮೇ 11ರ ತನಕ ಇಂತಹ ಕೋಟೆಯನ್ನೇ ಸುತ್ತುವರಿದವರು ಸಿಆರ್ಪಿಎಫ್, ಕಮಾಂಡೋ ಬಟಾಲಿಯನ್ ಫಾರ್ ರೆಸಲ್ಯೂಟ್ ಆಕ್ಷನ್ (ಕೋಬ್ರಾ), ಛತ್ತೀಸ್ಗಢ ಪೊಲೀಸರ ಜಿಲ್ಲಾ ಮೀಸಲು ಪಡೆ (ಡಿಆರ್ಜಿ) ಮತ್ತು ಬಸ್ತರ್ ಫೈಟರ್ಸ್ಗೆ ಸೇರಿದ ಸುಮಾರು 10,000 ಸಿಬ್ಬಂದಿ. 21 ದಿನಗಳ ಈ ಜಂಟೀ ಕಾರ್ಯಾಚರಣೆ ನಕ್ಸಲ್ ವಿರೋಧಿ ಆಪರೇಷನ್ ಇತಿಹಾಸದಲ್ಲಿಯೇ ಅತಿ ದೊಡ್ಡದು ಎನ್ನಲಾಗಿದೆ. ಇದರಲ್ಲಿ 31 ಮಾವೋವಾದಿಗಳು ಹತರಾದರು.

ಭದ್ರತಾ ಪಡೆಗಳ ಈ ಮಹಾಕಾರ್ಯಾಚರಣೆಯಿಂದ ಬಂಡುಕೋರರು ನಿಜಕ್ಕೂ ತತ್ತರಿಸಿ ಹೋದರು. ಸದಾ ದಟ್ಟಡವಿಯಲ್ಲಿ ಅಡಗಿ ಕಾಳಗ ನಡೆಸುತ್ತಿದ್ದ ನಕ್ಸಲೀಯರು ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಾವೋವಾದಿಗಳು ಬಳಸುತ್ತಿದ್ದ ಗೆರಿಲ್ಲಾ ಯುದ್ಧ ತಂತ್ರಗಳನ್ನೇ ಭದ್ರತಾ ಪಡೆಗಳು ಪ್ರಯೋಗಿಸುತ್ತಿರುವುದು ಇನ್ನೊಂದು ಹಿನ್ನಡೆಯಾಗಿ ಪರಿಣಮಿಸಿದೆ. ಮಾವೋವಾದಿಗಳ ಸುರಕ್ಷತೆಗೆ ಇದು ಮಾರಕವಾಗಿದೆ. ಇದರಿಂದ ಅಳಿದುಳಿದಿರುವ ಬಂಡುಕೋರರ ಕಾರ್ಯಾಚರಣೆ ಪ್ರದೇಶವು ಈಗ ಕೆಲವೇ ನೂರು ಚದರ ಕಿ.ಮೀ.ಗೆ ಕುಗ್ಗಿರುವುದು ವಿಶೇಷ.

ಸ್ಥಳೀಯವಾಗಿ ಭದ್ರತಾ ಪಡೆಯನ್ನು ಇನ್ನಷ್ಟು ಭದ್ರಪಡಿಸಿರುವುದು ಇನ್ನೊಂದು ಮಹತ್ವದ ಬದಲಾವಣೆ. 2015ರಲ್ಲಿ ರಚಿಸಲಾದ ಜಿಲ್ಲಾ ರಿಸರ್ವ್ ಗಾರ್ಡ್ (ಡಿಆರ್ಜಿ) ಮತ್ತು 2022ರಲ್ಲಿ ಕಟ್ಟಿದ ಬಸ್ತರ್ ಫೈಟರ್ಸ್ ಇದಕ್ಕೆ ಉತ್ತಮ ಉದಾಹರಣೆ. ಈ ಪಡೆಗಳಿಗೆ ಮುಖ್ಯವಾಗಿ ಸ್ಥಳೀಯ ಯುವಕರನ್ನು ಸೇರಿಸಿಕೊಂಡಿರುವುದು ಇನ್ನೊಂದು ಪ್ಲಸ್-ಪಾಯಿಂಟ್. ಹಿಂದೆ ಶರಣಾದ ನಕ್ಸಲೀಯರು ಮತ್ತು ಸಲ್ವಾ ಜುಡುಂ ಸಶಸ್ತ್ರ ಪಡೆಯಿಂದ ಪಡೆದುಕೊಳ್ಳಲಾದ ಮಾಜಿ ವಿಶೇಷ ಪೊಲೀಸ್ ಅಧಿಕಾರಿಗಳನ್ನು ನೇಮಕ ಮಾಡಿಕೊಂಡು ರಚಿಸಲಾದ ತಂಡವೇ ಡಿಆರ್ಜಿ. ಬಸ್ತರ್ ಫೈಟರ್ಸ್ನಲ್ಲಿ ಇರುವವರು ಸ್ಥಳೀಯ ಆದಿವಾಸಿ ಯುವಕರು - ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು. ಇವರೆಲ್ಲರಿಗೂ ಛತ್ತೀಸಗಢದ ಏಳೂ ಜಿಲ್ಲೆಗಳ ಭೂಪ್ರದೇಶ ಮತ್ತು ಭಾಷೆಯ ಪರಿಚಯವಿರುವುದು ವಿಶೇಷ.

ಇನ್ನೊಂದು ಮುಖ್ಯ ಸಂಗತಿ ಎಂದರೆ ಈ ಪಡೆಗಳಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿರುವವರು ಮಹಿಳೆಯರು. ಅವರು ಮಾವೋವಾದಿಗಳ ವಿರುದ್ಧದ ಸಂಘರ್ಷದಲ್ಲಿ ಪುರುಷ ಭದ್ರತಾ ಸಿಬ್ಬಂದಿಯೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕಾದಾಡಿದ್ದಾರೆ.

2024ರ ಆಗಸ್ಟ್ ತಿಂಗಳಲ್ಲಿ ಮಾವೋವಾದಿಗಳು ಒಂದು ಸುತ್ತೋಲೆ ಹೊರಡಿಸಿದ್ದರು. ಅದರ ಪ್ರಕಾರ ಡಿಆರ್ಜಿ ಮತ್ತು ಬಸ್ತರ್ ಫೈಟರ್ಸ್ ಬಗ್ಗೆ ಎಚ್ಚರಿಕೆ ವಹಿಸುವಂತೆ ತಮ್ಮ ಕೇಡರ್ ಗಳಿಗೆ ತಿಳಿಸಲಾಗಿತ್ತು. ಜೊತೆಗೆ ದೇಶದ ನಾನಾ ಭಾಗಗಳಲ್ಲಿರುವ ತಮ್ಮ ನೆಲೆಗಳಿಂದ ಹಿಮ್ಮೆಟ್ಟುವಂತೆಯೂ, ಎರಡರಿಂದ ಮೂರು ಸಣ್ಣ ಸಣ್ಣ ತಂಡಗಳಾಗಿ ವಿಭಜನೆ ಹೊಂದುವಂತೆ ಹಾಗೂ ಜನರೊಂದಿಗೆ ಬೆರೆಯುವಂತೆ ಸೂಚಿಸಲಾಗಿತ್ತು. ಜೊತೆಗೆ ಇಂತಹ ಅಪಾಯದ ಸಂದರ್ಭಗಳಲ್ಲಿ ತಗ್ಗು ಪ್ರದೇಶಗಳಲ್ಲಿ ಅಡಗಿಕೊಳ್ಳುವಂತೆ ತಿಳಿಸಲಾಗಿತ್ತು.

ಮಳೆಗಾಲ ಹತ್ತಿರವಾಗುತ್ತಿದ್ದಂತೆ ಭದ್ರತಾ ಪಡೆ ಚಟುವಟಿಕೆ ತಗ್ಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದ ಮಾವೋವಾದಿಗಳು ಈ ಅವಧಿಯಲ್ಲಿ ವಿಶ್ರಾಂತಿ ಪಡೆಯುವ ಯೋಜನೆ ರೂಪಿಸಿದ್ದರು ಎಂದು ಅಧಿಕಾರಿಗಳು ತಿಳಿಸುತ್ತಾರೆ.

ಯಶಸ್ಸಿನ ಹಿಂದಿನ ಗುಟ್ಟು

ಈ ನಕ್ಸಲ್ ಕಾರ್ಯಾಚರಣೆಯಲ್ಲಿನ ಯಶಸ್ಸಿಗೆ ಮುಖ್ಯ ಕಾರಣ ಡಿಆರ್ಜಿ ಮತ್ತು ಬಸ್ತರ್ ಫೈಟರ್ಸ್. ಈ ತಂಡದ ಯುವಕರಿಗೆ ಬೆಟ್ಟಗುಡ್ಡಗಳು, ಕೊರಕಲು-ಕಂದರಗಳು, ಸ್ಪೋಟಕಗಳು ತುಂಬಿರುವ ಬೆಟ್ಟದ ಮಗ್ಗುಲುಗಳ ಇಂಚಿಂಚೂ ವಿವರಗಳು ಗೊತ್ತು. ಮಾವೋವಾದಿಗಳ ಅಡಗುದಾಣಗಳು ಮತ್ತು ಅವರು ವಿಶ್ರಾಂತಿ ಪಡೆಯುವ ತಾಣಗಳ ಮಾಹಿತಿಗಳೂ ಬೆರಳ ತುದಿಯಲ್ಲೇ ಲಭ್ಯ. ಹಾಗಾಗಿ ಮಾವೋವಾದಿಗಳ ಯಾವ ತಂತ್ರಗಳೂ ಫಲಿಸಲಿಲ್ಲ. ಅವರಿಟ್ಟ ನೆಲಬಾಂಬ್ ಗಳು ಸ್ಪೋಟಿಸದಂತೆ ಈ ಭದ್ರತಾ ಪಡೆ ಸಿಬ್ಬಂದಿ ಎಚ್ಚರಿಕೆ ವಹಿಸಿತು. ಹಾಗಾಗಿ ಡಿಆರ್ಜಿ ಮತ್ತು ಬಸ್ತರ್ ಫೈಟರ್ಸ್ ಪಂಟರ್ ಗಳು ಸುರಕ್ಷಿತವಾಗಿ ಉಳಿದರು.

ಹತ್ತು ವರ್ಷಗಳ ಹಿಂದೆ ಅರೆಸೇನಾ ಪಡೆಗಳಿಗೆ ಬೆಟ್ಟಗುಡ್ಡಗಳ ಪರಿಚಯ ಇರಲಿಲ್ಲ. ಬುಡಕಟ್ಟು ಜನಾಂಗದ ಭಾಷೆಗಳೂ ಗೊತ್ತಿರಲಿಲ್ಲ. ಈಗ ಸ್ಥಳೀಯ ಯುವಕರ ಎರಡು ಪ್ರಮುಖ ಪಡೆಗಳು ಆ ಎಲ್ಲ ಕೊರತೆಗಳನ್ನು ನೀಗಿಸಿವೆ. ಅದರಿಂದಾಗಿ ಕಾರ್ಯಾಚರಣೆಗಳು ಯಶಸ್ವಿಯಾಗುತ್ತಿವೆ.

“ಒಂದು ಯಶಸ್ಸು ಇನ್ನೊಂದು ಯಶಸ್ಸಿಗೆ ದಾರಿಮಾಡಿಕೊಡುತ್ತದೆ. ಒಂದು ಯಶಸ್ವೀ ಕಾರ್ಯಾಚರಣೆ ಇನ್ನೊಂದು ಕಾರ್ಯಾಚರಣೆಯ ಮೇಲೆ ಪರಿಣಾಮವನ್ನು ಬೀರುತ್ತದೆ” ಎಂದು ಗುಪ್ತಚರ ಅಧಿಕಾರಿಯೊಬ್ಬರು ಫೆಡರಲ್ ಗೆ ತಿಳಿಸಿದರು.

ಇಂದು ಇಲ್ಲಿನ ಇಡೀ ವಲಯದ ಅತ್ಯಂತ ಕುಗ್ರಾಮದಲ್ಲಿಯೂ ನಿರಂತರ ಚಟುವಟಿಕೆಗಳು ಕಾಣುತ್ತಿವೆ. ಮೋಟಾರ್ ಸೈಕಲ್ ಓಡಿಸುವ ಗ್ರಾಮಸ್ಥರು, ಸ್ಮಾರ್ಟ್-ಫೋನ್ ನಲ್ಲಿ ಬ್ಯುಸಿಯಾಗಿರುವ ಯುವಕರು, ಕೃಷಿ ಚಟುವಟಿಕೆಗಳಿಗೆ ಟ್ರಾಕ್ಟರ್ ಬಳಸುತ್ತಿರುವ ರೈತರು… ಹೀಗೆ ಜನಜೀವನ ಕಾಯಕನಿರತವಾಗಿದೆ. ಕಟ್ಟಕಡೆಯ ಗ್ರಾಮದಂತಿರುವ ನಂಬಿಯಂತಹ ಹಳ್ಳಿಯಲ್ಲಿಯೂ ಮೂರು ಟ್ರಾಕ್ಟರ್ ಗಳು ಕೆಲಸಮಾಡುತ್ತಿವೆ ಎಂದರೆ ಅಲ್ಲಿನ ಪ್ರಗತಿ ಯಾವ ಮಟ್ಟದಲ್ಲಿದೆ ಎಂಬುದು ಅರ್ಥವಾಗುತ್ತದೆ. ನಾವು ಗಮನಿಸಿದ ಇನ್ನೊಂದು ಮಹತ್ವದ ಸಂಗತಿ ಎಂದರೆ ಈ ಊರಿನ ಜನ ಹೊರಗಿನ ಪ್ರಪಂಚದ ಜನರ ಜೊತೆ ನಿರ್ಭೀತಿಯಿಂದ ಸಂವಹನ ನಡೆಸುತ್ತಿರುವುದು. ಕಳೆದ ಕೆಲವು ವರ್ಷಗಳ ಹಿಂದೆ ಇದು ಸಾಧ್ಯವೇ ಇರಲಿಲ್ಲ.

ಮೊಬೈಲ್ ನೆಟ್ವರ್ಕ್ ನಲ್ಲಿ ಆಗಿರುವ ಸುಧಾರಣೆಯಿಂದಾಗಿ ಮಾವೋವಾದಿಗಳ ಪ್ರತಿಹೆಜ್ಜೆಯ ಮೇಲೂ ಕಣ್ಣಿಡಲು ಸಾಧ್ಯವಾಗಿದೆ. “ಮಾವೋವಾದಿಗಳನ್ನು ಈ ಪ್ರದೇಶದಿಂದಲೇ ಗುಡಿಸಿಹಾಕಿರುವುದರಿಂದ ಜನರಲ್ಲಿದ್ದ ಭಯ ಕಡಿಮೆಯಾಗಿದೆ. ಸಂವಹನ ಸುಲಭವಾಗಿದೆ ಮತ್ತು ತ್ವರಿತವಾಗಿದೆ. ಮಾಹಿತಿ ಕೊಟ್ಟವರಿಗೆ ಬಹುಮಾನವನ್ನೂ ನೀಡಲಾಗುತ್ತಿದೆ. ಇದರಿಂದಾಗಿ ನಿಖರವಾದ ಗುಪ್ತಚರ ಮಾಹಿತಿಗಳು ಲಭ್ಯವಾಗುತ್ತಿವೆ. ಇದು ನಮ್ಮ ಆಪರೇಷನ್ ಯಶಸ್ವಿಯಾಗಲು ಮುಖ್ಯ ಕಾರಣ” ಎನ್ನುತ್ತಾರೆ ಇನ್ನೊಬ್ಬ ಹಿರಿಯ ಗುಪ್ತಚರ ಅಧಿಕಾರಿ. 

ಬಿಜಾಪುರ ಜಿಲ್ಲೆಯ ಕರ್ರೆ ಗುಟ್ಟ ಬೆಟ್ಟಗಳ ತಪ್ಪಲಿನಲ್ಲಿರುವ ನಂಬಿ ಗ್ರಾಮದಲ್ಲಿ ಇತ್ತೀಚೆಗೆ ನೀರಿನ ಟ್ಯಾಂಕ್ ನಿರ್ಮಿಸಲಾಗಿದೆ.

ಗೋಡೆಗೆ ಮುಖಮಾಡಿದ ನಕ್ಸಲರು

ಸ್ಪಷ್ಟವಾಗಿ ಹೇಳಬೇಕೆಂದರೆ ಮಾವೋವಾದಿಗಳು ಈಗ ಅಕ್ಷರಶಃ ಗೋಡೆಗೆ ಮುಖಮಾಡಿ ನಿಂತಿದ್ದಾರೆ. ಅವರಿಗೀಗ ಯಾವ ಆಯ್ಕೆಗಳೂ ಕಾಣುತ್ತಿಲ್ಲ. ಒಂದು ಕಡೆ ತಾವು ‘ಸುರಕ್ಷಿತ ಸ್ವರ್ಗ’ ಎಂದು ಭಾವಿಸಿದ್ದ ಪ್ರದೇಶಗಳೆಲ್ಲ ಮುಷ್ಟಿ ಗಾತ್ರಕ್ಕೆ ಬಂದು ತಲುಪಿದೆ. ಹಿಂದೆ ಅವರು ಪ್ರಭಾವ ಬೀರಲು, ತಮ್ಮ ಪಡೆಗೆ ನೇಮಕಮಾಡಿಕೊಳ್ಳಲು ಗ್ರಾಮಗಳು ಅವರ ಕೈತಪ್ಪಿವೆ. ನಿಷೇಧಿತ ಸಂಘಟನೆಯ ರಾಜಕೀಯ ಚಟುವಟಿಕೆಗಳಿಗೆ ಅಂಕುಶ ಹಾಕಲಾಗಿದೆ. ದಶಕದ ಹಿಂದೆ ಹಳ್ಳಿಗರೊಂದಿಗೆ ಮುಕ್ತವಾಗಿ ಸಭೆ ನಡೆಸಬಹುದಿತ್ತು. ಅದನ್ನೀಗ ಕಲ್ಪಿಸಲೂ ಸಾಧ್ಯವಿಲ್ಲ.

ಈಗಾಗಲೇ ಶರಣಾಗತರಾಗಿರುವ ಕೇಡರ್ ಗಳು ಮತ್ತು ಗ್ರಾಮಸ್ಥರು ಪೊಲೀಸರಿಗೆ ಫಟಾಫಟ್ ಮಾಹಿತಿಗಳನ್ನು ನೀಡುತ್ತಿರುವುದು ನುಂಗಲಾರದ ತುತ್ತಾಗಿದೆ. ಇದರಿಂದ ಅವರು ಅನಿರೀಕ್ಷಿತ ದಾಳಿಗೆ ಒಳಗಾಗುವಂತಾಗಿದೆ. ಅವರ ಘಟಾನುಘಟಿ ನಾಯಕರು ಭದ್ರತಾ ಪಡೆ ತೋಡಿದ ಖೆಡ್ಡಾಕ್ಕೆ ಬಿದ್ದು ಪ್ರಾಣ ಚೆಲ್ಲಿದ್ದಾರೆ. ಈಗವರಿಗೆ ಮಾರ್ಗದರ್ಶನಕ್ಕೆ ನಾಯಕರೂ ಇಲ್ಲ. ಮಾವೋವಾದಿಗಳು ಇಂತಹ ಬಿಕ್ಕಟ್ಟನ್ನು ಹಿಂದೆಂದೂ ಎದುರಿಸಿರಲಿಲ್ಲ. ಈಗ ಅವರಿಗೆ ಅಸ್ತಿತ್ವದ ಪ್ರಶ್ನೆ. ಅವನ್ನೆಲ್ಲ ಹೇಗೆ ಅವರು ನಿಭಾಯಿಸುತ್ತಾರೆ ಎಂಬುದೇ ಈಗಿರುವ ಕುತೂಹಲ.

ಇಷ್ಟೆಲ್ಲಾ ಇದ್ದೂ ಅವರನ್ನು ಸಾರಾಸಗಟಾಗಿ ತಳ್ಳಿಹಾಕಲು ಸಾಧ್ಯವಿಲ್ಲ.

(ಕಳೆದ ಎರಡೂವರೆ ದಶಕಗಳಿಂದ ಇಲ್ಲಿ ನೆಲೆಸಿದ್ದುದು ಭಯದ ವಾತಾವರಣ. ಮಾವೋವಾದಿಗಳು ನಡೆಸುತ್ತಿದ್ದುದು ಭೀಭತ್ಸ ದಾಳಿಗಳನ್ನು. ಜನರನ್ನು ದಿಗಿಲು ಹುಟ್ಟಿಸುವಂತೆ ಮಾಡಿದ್ದ ನಕ್ಸಲರನ್ನು ಈಗ ಧರೆಗುರುಳಿಸಲಾಗಿದೆ. ಬುಡಕಟ್ಟು ಜನರೇ ತುಂಬಿರುವ ಇಡೀ ಬಸ್ತರ್ ವಲಯ ಈಗ ಭಯಮುಕ್ತ. ಅಲ್ಲೀಗ ಜನ ಮೈಕೊಡವಿ ನಿಂತಿದ್ದಾರೆ. ಐದು ಭಾಗಗಳ ಬಸ್ತರ್ ಕದನ ಸರಣಿಯ ಮೊದಲ ಭಾಗ ಇಲ್ಲಿದೆ)

Tags:    

Similar News