ಕುಕ್ಕೆ ಸುಬ್ರಹ್ಮಣ್ಯಕ್ಕೆ ನಟಿ ನಯನತಾರಾ ದಂಪತಿ ಭೇಟಿ: ಸರ್ಪಸಂಸ್ಕಾರ ಪೂಜೆ ನೆರವೇರಿಸಿದ ತಾರಾ ಜೋಡಿ

ಸರ್ಪದೋಷ ನಿವಾರಣೆಗಾಗಿ ಮತ್ತು ಸಂತಾನ ಭಾಗ್ಯಕ್ಕಾಗಿ ಹೆಸರುವಾಸಿಯಾಗಿರುವ ಈ ಪವಿತ್ರ ಕ್ಷೇತ್ರದಲ್ಲಿ ನಯನತಾರಾ ದಂಪತಿ ಪೂಜಾ ಕೈಂಕರ್ಯಗಳಲ್ಲಿ ಭಾಗಿಯಾಗಿದ್ದಾರೆ.

Update: 2025-11-13 09:57 GMT

ಕುಕ್ಕೆ ಸುಬ್ರಹ್ಮಣ್ಯಕ್ಕೆ ನಟಿ ನಯನತಾರಾ ದಂಪತಿ ಭೇಟಿ ಮಾಡಿದ್ದಾರೆ. 

Click the Play button to listen to article

 ದಕ್ಷಿಣ ಭಾರತದ ‘ಲೇಡಿ ಸೂಪರ್‌ಸ್ಟಾರ್’ ಎಂದೇ ಮನೆಮಾತಾಗಿರುವ ನಟಿ ನಯನತಾರಾ ಮತ್ತು ಅವರ ಪತಿ, ಖ್ಯಾತ ನಿರ್ದೇಶಕ ವಿಘ್ನೇಶ್ ಶಿವನ್ ಅವರು ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಗುರುವಾರ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿದರು.

ದೋಷ ನಿವಾರಣೆಗಾಗಿ ಅತ್ಯಂತ ಪ್ರಸಿದ್ಧಿ ಪಡೆದಿರುವ ‘ಸರ್ಪಸಂಸ್ಕಾರ’ ಪೂಜೆಯನ್ನು ಈ ತಾರಾ ದಂಪತಿ ಶ್ರದ್ಧಾಭಕ್ತಿಯಿಂದ ನೆರವೇರಿಸಿದರು. ಸಂತಾನ ಪ್ರಾಪ್ತಿ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ನಡೆಸಲಾಗುವ ಈ ಮಹತ್ವದ ಪೂಜಾ ಕೈಂಕರ್ಯಗಳಲ್ಲಿ ನಯನತಾರಾ ಮತ್ತು ವಿಘ್ನೇಶ್ ಶಿವನ್ ಪಾಲ್ಗೊಂಡು, ಶ್ರೀ ಕುಕ್ಕೆನಾಥನ ದರ್ಶನ ಪಡೆದರು. ದೇವಾಲಯದ ಪ್ರಧಾನ ಅರ್ಚಕರು ಪೂಜಾ ವಿಧಿವಿಧಾನಗಳನ್ನು ನೆರವೇರಿಸಿಕೊಟ್ಟರು.

 

ಕ್ಷೇತ್ರಕ್ಕೆ ಆಗಮಿಸಿದ ತಾರಾ ದಂಪತಿಯನ್ನು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಇಂಜಾಡಿ ಅವರು ಆತ್ಮೀಯವಾಗಿ ಸ್ವಾಗತಿಸಿ, ಶಾಲು ಹೊದಿಸಿ ಗೌರವಿಸಿದರು. ತಮ್ಮ ನೆಚ್ಚಿನ ನಟಿ ಮತ್ತು ನಿರ್ದೇಶಕರ ಆಗಮನದ ಸುದ್ದಿ ತಿಳಿಯುತ್ತಿದ್ದಂತೆ, ನೂರಾರು ಅಭಿಮಾನಿಗಳು ಹಾಗೂ ಭಕ್ತರು ಅವರನ್ನು ನೋಡಲು ದೇವಾಲಯದ ಆವರಣದಲ್ಲಿ ಜಮಾಯಿಸಿದ್ದರು.

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ಕೇವಲ ಸಾಮಾನ್ಯ ಭಕ್ತರಿಗಷ್ಟೇ ಅಲ್ಲ, ಚಿತ್ರರಂಗ ಮತ್ತು ಕ್ರೀಡಾ ಲೋಕದ ಗಣ್ಯರಿಗೂ ನೆಚ್ಚಿನ ಧಾರ್ಮಿಕ ಕೇಂದ್ರವಾಗಿದೆ. ಈ ಹಿಂದೆ ಬಾಲಿವುಡ್‌ನ ತಾರಾ ದಂಪತಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಸೇರಿದಂತೆ ಅನೇಕ ದಿಗ್ಗಜರು ಇಲ್ಲಿಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿರುವುದು ಉಲ್ಲೇಖನೀಯ. ಇದೀಗ ನಯನತಾರಾ ದಂಪತಿಯ ಭೇಟಿಯ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ. 

Tags:    

Similar News