IPL Cricket | ಕುಂಬ್ಳೆ, ವೆಟೋರಿ, ವಿರಾಟ್‌ ಸಾಲಿಗೆ ಪಾಟೀದರ್‌ ; ಕಪ್‌ ಗೆಲ್ಲಲು ಒಂದೇ ಮೆಟ್ಟಿಲು ಬಾಕಿ

ಐಪಿಎಲ್‌ನಲ್ಲಿ ಪ್ಲೇ ಆಪ್‌ನಲ್ಲಿ 60 ಎಸೆತಗಳ ಅಂತರದಲ್ಲಿ ದಾಖಲಾದ ಬೃಹತ್‌ ಗೆಲುವು ಇದಾಗಿದೆ. 2024 ರ ಫೈನಲ್‌ನಲ್ಲಿ 57 ಎಸೆತಗಳು ಬಾಕಿ ಇರುವಾಗಲೇ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಕೊಲ್ಕತ್ತಾ ನೈಟ್‌ ರೈಡರ್ಸ್‌ ಗೆಲುವು ಸಾಧಿಸಿತ್ತು.;

Update: 2025-05-30 06:38 GMT

ಪಂದ್ಯ ಗೆದ್ದ ನಂತರ ಆರ್‌ಸಿಬಿ ಆಟಗಾರರು ಸಂಭ್ರಮಾಚರಣೆ ನಡೆಸಿದರು.

ಕಿಂಗ್ಸ್‌ ಇಲೆವೆನ್‌ ಪಂಜಾಬ್‌ ವಿರುದ್ದ ರೋಜಕ ಜಯ ಸಾಧಿಸಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡವು ಐಪಿಎಲ್‌ 2025 ನೇ ಆವೃತ್ತಿಯ ಫೈನಲ್‌ ಪ್ರವೇಶಿಸಿದ ಮೊದಲ ತಂಡ ಎಂಬ ಶ್ರೇಯಕ್ಕೆ ಭಾಜನವಾಗಿದೆ. ಅಲ್ಲದೇ ನಾಲ್ಕನೇ ಬಾರಿಗೆ ಐಪಿಎಲ್‌ ಫೈನಲ್‌ ಪ್ರವೇಶಿಸಿದ ಹೆಗ್ಗಳಿಕೆಗೂ ಪಾತ್ರವಾಗಿದೆ. 

ಐಪಿಎಲ್‌ ಕಪ್‌ ಗೆಲ್ಲಲು ಒಂದೇ ಒಂದು ಮೆಟ್ಟಿಲು ಬಾಕಿ ಇದ್ದು, ಅಭಿಮಾನಿಗಳಲ್ಲಿ ಉತ್ಸಾಹ ಪುಟಿಯುವಂತೆ ಮಾಡಿದೆ. ಆರ್‌ಸಿಬಿ ಗೆಲುವಿನ ಬೆನ್ನಲ್ಲೇ ತಂಡದ ಹಿಂದಿನ ಸಾಧನೆಗಳನ್ನು ಅಭಿಮಾನಿಗಳು ಮೆಲುಕು ಹಾಕುತ್ತಿದ್ದಾರೆ. ಮೂರು ಬಾರಿ ಅದೃಷ್ಟ ಕೈಕೊಟ್ಟಿರುವುದರಿಂದ ಈ ಬಾರಿ ಕೊಂಚ ಆತಂಕವೂ ಅಭಿಮಾನಿಗಳನ್ನು ಕಾಡುತ್ತಿದೆ. 

2009 ರಲ್ಲಿ ಅನಿಲ್‌ ಕುಂಬ್ಳೆ, 2011 ಡೇನಿಯಲ್‌ ವೆಟ್ಟೋರಿ, 2016 ರಲ್ಲಿ ವಿರಾಟ್‌ ಕೊಹ್ಲಿ ಸಾರಥ್ಯದಲ್ಲಿ ತಂಡವನ್ನು ಫೈನಲ್‌ಗೆ ಕರೆದೊಯ್ದಿದ್ದರು. ಆದರೆ, ಮೂರು ಬಾರಿಯೂ ರನ್ನರ್‌ ಅಪ್‌ ಗೆ ತೃಪ್ತಿಪಟ್ಟುಕೊಂಡಿತ್ತು. ಈಗ ಅವರ ಸಾಲಿಗೆ ರಜತ್‌ ಪಾಟೀದರ್‌ ಸೇರ್ಪಡೆಯಾಗಿದ್ದು ಈ ಬಾರಿ ಆರ್‌ಸಿಬಿ ಫೈನಲ್ ಗೆಲ್ಲುವ ವಿಶ್ವಾಸ ಮೂಡಿಸಿದೆ.  

ಐಪಿಎಲ್‌ ಪ್ಲೇ ಆಪ್‌ನಲ್ಲಿ 60 ಎಸೆತಗಳ ಅಂತರದಲ್ಲಿ ದಾಖಲಾದ ಬೃಹತ್‌ ಗೆಲುವು ಇದಾಗಿದೆ. 2024 ರ ಫೈನಲ್‌ನಲ್ಲಿ 57 ಎಸೆತಗಳು ಬಾಕಿ ಇರುವಾಗಲೇ ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ಧ ಕೊಲ್ಕತ್ತಾ ನೈಟ್‌ ರೈಡರ್ಸ್‌ ಗೆಲುವು ಸಾಧಿಸಿತ್ತು.  ಇನ್ನು 100 ಅಥವಾ ಅದಕ್ಕಿಂತಲೂ ಹೆಚ್ಚಿನ ಗುರಿಯನ್ನು ವೇಗದಲ್ಲಿ ಬೆನ್ನಟ್ಟಿದ ದಾಖಲೆಯೂ ಆರ್‌ಸಿಬಿ ಹೆಸರಲ್ಲೇ ಇದೆ. 2015 ರಲ್ಲಿ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿ ಕೆಕೆಆರ್‌ ಒಡ್ಡಿದ 112 ರನ್‌ ಗುರಿಯನ್ನು 9.4 ಓವರ್‌ಗಳಲ್ಲಿ ಬೆನ್ನಟ್ಟಿತ್ತು.  

ಪ್ರಶಸ್ತಿಗೆ ಇನ್ನೊಂದೇ ಹೆಜ್ಜೆ, ಪತ್ನಿಗೆ ವಿರಾಟ್‌ ಸನ್ನೆ 

ಪಂಜಾಬ್‌ ವಿರುದ್ದದ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿ ಫೈನಲ್‌ ಪ್ರವೇಶಿಸಿದೆ. ಗೆಲುವಿನ ನಂತರ ಸಂಭ್ರಮಾಚರಣೆಯಲ್ಲಿದ್ದ ವಿರಾಟ್‌ ಕೊಹ್ಲಿ ಅವರು ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರಿಗೆ ಪ್ರಶಸ್ತಿ ಗೆಲ್ಲುಲು ಇನ್ನೊಂದೇ ಹೆಜ್ಜೆ ಎಂದು ಸನ್ನೆ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. 

ಕಿಂಗ್ಸ್‌ಗೆ ಇನ್ನೊಂದು ಅವಕಾಶ 

ಲೀಗ್‌ ಹಂತದಲ್ಲಿ ಅಗ್ರಸ್ಥಾನ ಪಡೆದು ಕ್ವಾಲಿಫೈಯರ್‌ ಪ್ರವೇಶಿಸಿದ್ದ ಪಂಜಾಬ್‌ ತಂಡಕ್ಕೆ ಫೈನಲ್‌ ಪ್ರವೇಶಿಸಲು ಇನ್ನೊಂದು ಅವಕಾಶ ಬಾಕಿ ಇದೆ. ಶುಕ್ರವಾರ (ಮೇ30) ನಡೆಯಲಿರುವ ಎಲಿಮಿನೇಟರ್‌ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡವು ಮೊದಲ ಕ್ವಾಲಿಫೈಯರ್‌ನಲ್ಲಿ ಸೋತಿರುವ ಪಂಜಾಬ್‌ ವಿರುದ್ಧ ಎರಡನೇ ಕ್ವಾಲಿಫೈಯರ್‌ ಪಂದ್ಯ ಆಡಬೇಕಾಗಿರುತ್ತದೆ.  

ಸಿಎಂಗೆ ಆರ್‌ಸಿಬಿ ಅಭಿಮಾನಿ ಪತ್ರ 

ಬೆಳಗಾವಿ ಜಿಲ್ಲೆಯ ಗೋಕಾಕ್‌ ಮೂಲದ ಶಿವಾನಂದ ಮಲ್ಲನ್ನವರ್‌ ಎಂಬುವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ಕಪ್ ಗೆದ್ದ ಬಳಿಕ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿರುತ್ತದೆ. ಪ್ರತೀ ಮನೆ ಮನೆಯಲ್ಲೂ ಹಬ್ಬದ ವಾತಾವರಣ ಇರುತ್ತದೆ.

ಹಾಗಾಗಿ ಜೂನ್ 3ರಂದು ನಡೆಯುವ ಪಂದ್ಯದಲ್ಲಿ ಆರ್‌ಸಿಬಿ ಗೆದ್ದರೆ ಆ ದಿನವನ್ನು ರಾಜ್ಯ "ಆರ್‌ಸಿಬಿ ಫ್ಯಾನ್ಸ್ ಹಬ್ಬ" ಎಂದು ಘೋಷಿಸಿ, ಪ್ರತಿ ವರ್ಷ ರಾಜ್ಯಾದ್ಯಂತ ಸರ್ಕಾರಿ ರಜೆ ಘೋಷಣೆ ಮಾಡುವಂತೆಯೂ ಮನವಿ ಮಾಡಿದ್ದಾರೆ. 

Tags:    

Similar News