ʼದಿವ್ಯ ದರ್ಶನʼ ಪ್ರವಾಸ ಯೋಜನೆಗೆ ಚಾಲನೆ; ಒಂದೇ ದಿನ ಬೆಂಗಳೂರಿನ 8 ಪ್ರಸಿದ್ಧ ದೇವಾಲಯಗಳ ದರ್ಶನ
ಸಾರ್ವಜನಿಕರಿಗೆ ಹೊಸದಾಗಿ ಒಂದು ದಿನದ ಪ್ರವಾಸ ಪ್ಯಾಕೇಜ್ ಆರಂಭಿಸಿದ್ದು, ನಗರದ ಪ್ರಮುಖ ಎಂಟು ದೇವಾಲಯಗಳನ್ನು ದರ್ಶನ ಮಾಡಿಸಲಾಗುತ್ತದೆ. ಒಂದೇ ದಿನದಲ್ಲಿ ನಗರದ ಎಲ್ಲಾ ದೇವಾಲಯಗಳಿಗೆ ಭೇಟಿ ನೀಡಬೇಕು ಎಂದುಕೊಂಡವರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ.;
ದಿವ್ಯ ದರ್ಶನ ಯೋಜನೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ನೀಡಿದರು.
ಬೆಂಗಳೂರಿನ ಪ್ರಮುಖ ದೇವಸ್ಥಾನಗಳಿಗೆ ಭೇಟಿ ನೀಡಿ ದೇವರ ದರ್ಶನ ಪಡೆಯಬೇಕೆಂಬ ಆಸ್ತಿಕರಿಗೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(ಬಿಎಂಟಿಸಿ) ಸಿಹಿ ಸುದ್ದಿ ನೀಡಿದೆ. ಒಂದೊಂದು ಭಾಗದಲ್ಲಿರುವ ಒಂದೊಂದು ದೇವಸ್ಥಾನಕ್ಕೆ ತೆರಳಲು ಭಕ್ತರಿಗೆ ಸಂಚಾರ ದಟ್ಟಣೆಯ ಬಿಸಿಯ ಜೊತೆಗೆ ಬೇರೆ ಬೇರೆ ಬಸ್ ಹಿಡಿಯಬೇಕಾದರೆ ಹರಸಾಹಸ ಪಡಬೇಕು.
ಇದ್ಯಾವುದರ ಗೊಡವೆ ಬೇಡ ಎನ್ನುವುದಾದರೆ ದುಬಾರಿ ಹಣ ತೆತ್ತು ಆಟೊ, ಕ್ಯಾಬ್ಗಳಲ್ಲಿ ಸಂಚರಿಸಬೇಕಾಗಿದೆ. ಭಕ್ತರ ಇಂತಹ ಸಂಕಷ್ಟಗಳನ್ನು ಗಮನಿಸಿಯೇ ಬಿಎಂಟಿಸಿ ಒಂದು ದಿನದ ʼದಿವ್ಯ ದರ್ಶನʼ ಎಂಬ ಹೊಸ ಪ್ರವಾಸ ಯೋಜನೆ ಆರಂಭಿಸಿದೆ.
ಸಾರ್ವಜನಿಕರಿಗೆ ಒಂದೇ ದಿನದಲ್ಲಿ ಪ್ರಮುಖ ಎಂಟು ದೇವಾಲಯಗಳ ದರ್ಶನ ಭಾಗ್ಯ ಒದಗಿಸುವುದು ಯೋಜನೆ ಉದ್ದೇಶವಾಗಿದೆ. ಈಗಾಗಲೇ ಬೆಂಗಳೂರು ದರ್ಶಿನಿ ಹಾಗೂ ಈಶಾ ಫೌಂಡೇಶನ್ ವತಿಯಿಂದ ಪ್ರವಾಸಿ ಬಸ್ಗಳು ಆರಂಭಿಸಿವೆ. ಇದೀಗ ಹವಾನಿಯಂತ್ರಿತ ಬಸ್ಗಳಲ್ಲಿ ಕಡಿಮೆ ದರದಲ್ಲಿ ʼದಿವ್ಯ ದರ್ಶನʼ ಯೋಜನೆಯನ್ನು ಬಿಎಂಟಿಸಿ ಪ್ರಾರಂಭಿಸಿದೆ.
ಮುಂದಿನ ದಿನಗಳಲ್ಲಿ ಪರಿಸರ ಹಾಗೂ ವಾಸ್ತುಶಿಲ್ಪದ ಪರಿಕಲ್ಪನೆಯಡಿಯಲ್ಲೂ ಪ್ರವಾಸ ಪ್ಯಾಕೇಜ್ ಆರಂಭಿಸುವ ಯೋಜನೆ ಹಾಕಿಕೊಂಡಿದೆ ಎಂದು ದಿವ್ಯದರ್ಶನ ಪ್ರವಾಸ ಯೋಜನೆಗೆ ಚಾಲನೆ ನೀಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಯಾವ್ಯಾವ ದೇವಸ್ಥಾನಗಳ ದರ್ಶನ ?
ಬನಶಂಕರಿ ದೇವಾಲಯ, ಆರ್ಟ್ ಆಫ್ ಲಿವಿಂಗ್, ಓಂಕಾರ್ ಹಿಲ್ಸ್, ಇಸ್ಕಾನ್ ದೇವಾಲಯ, ದೇವಿ ಕರುಮಾರಿ ಅಮ್ಮನವರ ದೇವಾಲಯ, ಶೃಂಗಗಿರಿ ಶ್ರೀ ಷಣ್ಮುಖ ದೇವಾಲಯ, ರಾಜರಾಜೇಶ್ವರಿ ದೇವಾಲಯ, ಗಾಳಿ ಆಂಜನೇಯಸ್ವಾಮಿ ದೇವಾಲಯಗಳಿಗೆ ದಿವ್ಯ ದರ್ಶನ ಪ್ರವಾಸ ಯೋಜನೆಯಡಿ ಭೇಟಿ ನೀಡಬಹುದಾಗಿದೆ.
ಶುಲ್ಕ ಎಷ್ಟಿದೆ?
ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಗ್ಗೆ 8.30ಕ್ಕೆ ಹೊರಡುವ ಬಸ್ ಸಂಜೆ 6 ಗಂಟೆಗೆ ವಾಪಸ್ಸಾಗಲಿದೆ. ದಿವ್ಯದರ್ಶನದಲ್ಲಿ ವಯಸ್ಕರಿಗೆ 450 ರೂ. ಹಾಗೂ ಮಕ್ಕಳಿಗೆ 350 ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ. ಮೇ 31 ರಿಂದ ಪ್ರವಾಸ ಪ್ರಾರಂಭವಾಗಲಿದೆ.
ಪ್ರತಿ ಶನಿವಾರ, ಭಾನುವಾರ ಹಾಗೂ ಸಾರ್ವಜನಿಕ ರಜಾದಿನಗಳಲ್ಲಿ ಮಾತ್ರ ಈ ಪ್ರವಾಸ ಇರಲಿದ್ದು ಪ್ರಯಾಣಿಕರು ಮುಂಗಡ ಬುಕ್ಕಿಂಗ್ಗಾಗಿ ಕೆಎಸ್ಆರ್ಟಿಸಿ ವೆಬ್ಸೈಟ್ಗೆ ಭೇಟಿ ನೀಡಿ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ.