ಕರ್ನಾಟಕದಲ್ಲಿ ʼಥಗ್ಲೈಫ್ʼ ಚಿತ್ರ ಬಿಡುಗಡೆಗೆ ನಿರ್ಬಂಧ; ಹೈಕೋರ್ಟ್ ಮೊರೆ ಹೋದ ಕಮಲ್ ಹಾಸನ್
ಕನ್ನಡ ಭಾಷೆ ಕುರಿತ ತಮ್ಮ ಹೇಳಿಕೆಗೆ ಕರ್ನಾಟಕದಲ್ಲಿ ವಿವಾದ ಎದ್ದಿರುವ ಕಾರಣ ʼಥಗ್ ಲೈಫ್ʼ ಚಿತ್ರಕ್ಕೆ ನಿರ್ಬಂಧ ಹೇರಲಾಗಿದೆ. ನಾನು ಭಾಷಾ ತಜ್ಞರು ಹೇಳಿದ್ದನ್ನೇ ಹೇಳಿದ್ದೇನೆ ಹೊರತು ಬೇರೆ ಉದ್ದೇಶ ಇರಲಿಲ್ಲ. ತಮ್ಮ ಚಿತ್ರಕ್ಕೆ ನಿರ್ಬಂಧ ಹೇರಿರುವುದನ್ನು ತೆರವು ಮಾಡಬೇಕು ಎಂದು ಕಮಲ್ ಹಾಸನ್ ಅರ್ಜಿಯಲ್ಲಿ ಕೋರಿದ್ದಾರೆ.;
ʼಕನ್ನಡ ತಮಿಳಿನಿಂದ ಹುಟ್ಟಿದೆʼ ಎಂಬ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ತಮ್ಮ ನಟನೆಯ ʼಥಗ್ಲೈಪ್ʼ ಚಿತ್ರ ಬಿಡುಗಡೆಗೆ ನಿರ್ಬಂಧ ಹೇರಿರುವುದನ್ನು ಪ್ರಶ್ನಿಸಿ ಕಮಲ್ ಹಾಸನ್ ಅವರು ಹೈಕೋರ್ಟ್ ಮೊರೆ ಹೋಗಿದ್ದಾರೆ.
ಕರ್ನಾಟಕದಲ್ಲಿ ʼಥಗ್ಲೈಪ್ʼ ಬಿಡುಗಡೆಗೆ ಅವಕಾಶ ನೀಡದ ಕರ್ನಾಟಕ ಚಲನಚಿತ್ರಮಂಡಳಿ ನಿರ್ಣಯವನ್ನು ರದ್ದುಪಡಿಸುವಂತೆ ಹೈಕೋರ್ಟ್ಗೆ ಸಲ್ಲಿಸಿರುವ ಅರ್ಜಿಯಲ್ಲಿ ಕೋರಿದ್ದಾರೆ.
ಇತ್ತೀಚೆಗೆ ಚೆನ್ನೈನಲ್ಲಿ ನಡೆದ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕಮಲ್ ಹಾಸನ್ ಅವರು, "ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದೆ" ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆ ಕರ್ನಾಟಕದಲ್ಲಿ ಭಾರೀ ವಿವಾದ ಸೃಷ್ಟಿಸಿತ್ತು.
ಕಮಲ್ ಹಾಸನ್ ಕ್ಷಮೆ ಕೇಳುವಂತೆ ಕರ್ನಾಟಕ ಚಲನಚಿತ್ರ ಮಂಡಳಿ ಅಧ್ಯಕ್ಷ ನರಸಿಂಹಲು, ರಾಜಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ಕನ್ನಡ ಪರ ಸಂಘಟನೆಗಳ ಮುಖಂಡರು ಹಾಗೂ ಕನ್ನಡ ಚಿತ್ರರಂಗದ ನಟ-ನಟಿಯರು ಒತ್ತಾಯಿಸಿದ್ದರು.
ತಮ್ಮ ಹೇಳಿಕೆ ವಿವಾದವಾಗಿ ಬದಲಾದರೂ ಕಮಲ್ ಹಾಸನ್ ಅವರು, "ಭಾಷಾ ತಜ್ಞರು ಹೇಳಿದ್ದನ್ನು ನಾನು ಹೇಳಿದ್ದೇನೆ. ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲʼʼ. ಕನ್ನಡಿಗರು ನನಗೆ ಅಪಾರ ಪ್ರೀತಿ ನೀಡಿದ್ದಾರೆ. ತಮಿಳುನಾಡಿನಲ್ಲಿ ನನಗೆ ತೊಂದರೆಯಾದಾಗ ಕರ್ನಾಟಕಕ್ಕೆ ಬಂದು ನೆಲೆಸುವಂತೆ ಅಭಿಮಾನಿಗಳು ತಿಳಿಸಿದ್ದರು. ಅವರ ಪ್ರೀತಿಗೆ ಸಾಟೀಯೇ ಇಲ್ಲ. ಪ್ರೀತಿ ಇರುವ ಕಡೆ ಕ್ಷಮೆ ಕೆಳುವುದರಲ್ಲಿ ಅರ್ಥವಿಲ್ಲ" ಎಂದು ತಿಳಿಸಿದ್ದರು.
ʼಥಗ್ ಲೈಪ್ʼ ಚಿತ್ರ ಜೂನ್ 5ರಂದು ಬಿಡುಗಡೆಯಾಗಲಿದ್ದು ರಾಜ್ಯಾದ್ಯಂತ ಚಿತ್ರ ಬಿಡುಗಡೆಗೆ ವಿರೋಧ ವ್ಯಕ್ತವಾಗುತ್ತಿದೆ.
ಅರ್ಜಿ ಪ್ರಮುಖ ಅಂಶಗಳು
ʼಥಗ್ ಲೈಪ್ʼ ಚಿತ್ರ ಪ್ರದರ್ಶನ ತಡೆಯದಂತೆ ಸರ್ಕಾರ, ಪೊಲೀಸ್ ಇಲಾಖೆ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಗೆ ಸೂಚಿಸಬೇಕು. ಚಿತ್ರ ಬಿಡುಗಡೆಗೆ ಹೇರಿರುವ ನಿರ್ಬಂಧ ತೆರವು ಮಾಡಬೇಕು. ಚಿತ್ರಮಂದಿರಗಳಿಗೆ ಸೂಕ್ತ ಭದ್ರತೆ ಒದಗಿಸಬೇಕೆಂದು ಅರ್ಜಿಯಲ್ಲಿ ಮನವಿ ಮಾಡಿದ್ದಾರೆ.