ಜುಲೈನಿಂದ ಅನರ್ಹರಿಗೆ ಗ್ಯಾರಂಟಿ ಯೋಜನೆ ಬಂದ್: ಬಸವರಾಜ ರಾಯರೆಡ್ಡಿ
ಅರ್ಹರಲ್ಲದವರಿಗೂ ಯೋಜನೆ ತಲುಪುತ್ತಿದೆ. ಮನೆ ಬಾಡಿಗೆ ನೀಡುವ ಮಾಲೀಕರು ಗೃಹಜ್ಯೋತಿ ಸೌಲಭ್ಯ ಪಡೆಯುತ್ತಿದ್ದರೆ. ಜಿಎಸ್ಟಿ ಹಾಗೂ ತೆರಿಗೆ ಪಾವತಿಸುವ ಕುಟುಂಬಕ್ಕೂ ಗೃಹಲಕ್ಷ್ಮಿ ಹಣ ಪಾವತಿಯಾಗುತ್ತಿದೆ.;
ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳ ಲಾಭ ಅನರ್ಹ ಫಲಾನುಭವಿಗಳಿಗೂ ತಲುಪುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ, ರಾಜ್ಯಾದ್ಯಂತ ತನಿಖೆ ನಡೆಸಿ ಜುಲೈ ತಿಂಗಳಿನಿಂದ ಅನರ್ಹರಿಗೆ ಯೋಜನೆ ತಲುಪದಂತೆ ಕಡಿವಾಣ ಹಾಕಲಾಗುವುದು ಎಂದು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ರಾಯರೆಡ್ಡಿ ಅವರ ಪ್ರಕಾರ, ಅರ್ಹರಲ್ಲದವರಿಗೂ ಯೋಜನೆಗಳು ತಲುಪುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆ. ಉದಾಹರಣೆಗೆ, ಮನೆ ಬಾಡಿಗೆ ನೀಡುವ ಮಾಲೀಕರು 'ಗೃಹಜ್ಯೋತಿ' ಸೌಲಭ್ಯ ಪಡೆಯುತ್ತಿದ್ದಾರೆ. ಇದಲ್ಲದೆ, ಜಿಎಸ್ಟಿ (ಸರಕು ಮತ್ತು ಸೇವಾ ತೆರಿಗೆ) ಹಾಗೂ ಇತರೆ ತೆರಿಗೆ ಪಾವತಿಸುವ ಕುಟುಂಬಗಳಿಗೂ 'ಗೃಹಲಕ್ಷ್ಮಿ' ಯೋಜನೆಯಡಿ ಹಣ ಪಾವತಿಯಾಗುತ್ತಿದೆ. ಪಡಿತರ ಕಾರ್ಡ್ಗಳಲ್ಲಿಯೂ ವ್ಯತ್ಯಾಸಗಳು ಕಂಡುಬಂದಿದ್ದು, ಈ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಅವರು ತಿಳಿಸಿದರು.
ಅನ್ನಭಾಗ್ಯದಲ್ಲಿ ಬದಲಾವಣೆ ಸಾಧ್ಯತೆ
'ಅನ್ನಭಾಗ್ಯ' ಯೋಜನೆಯಲ್ಲಿ ಪ್ರಸ್ತುತ 10 ಕೆ.ಜಿ ಪಡಿತರ ಧಾನ್ಯದಲ್ಲಿ 5 ಕೆ.ಜಿ ಅಕ್ಕಿ ಜತೆಗೆ 5 ಕೆ.ಜಿ ಪಡಿತರದ ಹಣವನ್ನು ಫಲಾನುಭವಿಗಳ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತಿದೆ. ಆದರೆ, ಹಣ ನೀಡುವ ಬದಲು ತೊಗರಿ ಬೇಳೆ, ಕೊಬ್ಬರಿ ಎಣ್ಣೆ, ಸಕ್ಕರೆ, ಜೋಳ ಹೀಗೆ ಆಹಾರಧಾನ್ಯಗಳ ಕಿಟ್ ಮಾಡಿ ವಿತರಿಸುವ ಯೋಚನೆ ಇದೆ ಎಂದು ರಾಯರೆಡ್ಡಿ ಹೇಳಿದರು. ಈ ಕುರಿತು ಆಹಾರ ಸಚಿವರ ಜತೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದೂ ಅವರು ಮಾಹಿತಿ ನೀಡಿದರು.
ಗ್ಯಾರಂಟಿ ಯೋಜನೆಗಳಿಗೆ ವಾರ್ಷಿಕ 65,000 ಕೋಟಿ ರೂ. ವೆಚ್ಚ
ರಾಜ್ಯ ಸರ್ಕಾರವು ಐದು ಗ್ಯಾರಂಟಿ ಯೋಜನೆಗಳಿಗಾಗಿ ಪ್ರತಿ ವರ್ಷಸ ಅಂದಾಜು 65,000 ಕೋಟಿ ರೂ. ವೆಚ್ಚ ಮಾಡುತ್ತಿದೆ ಎಂದು ಬಸವರಾಜ ರಾಯರೆಡ್ಡಿ ಮಾಹಿತಿ ನೀಡಿದರು. ಅವರು ನೀಡಿದ ಅಂಕಿಅಂಶಗಳ ಪ್ರಕಾರ, 'ಅನ್ನಭಾಗ್ಯ' ಯೋಜನೆಯಿಂದ 4.10 ಕೋಟಿ ಜನರಿಗೆ ಆಹಾರ ಧಾನ್ಯ, 'ಗೃಹಲಕ್ಷ್ಮಿ' ಯೋಜನೆಯಡಿ 1.29 ಕೋಟಿ ಮಹಿಳೆಯರಿಗೆ ತಿಂಗಳಿಗೆ 2500 ಕೋಟಿ ರೂ. ಹಣ ಪಾವತಿಸಲಾಗುತ್ತಿದೆ. 'ಶಕ್ತಿ' ಯೋಜನೆಯಲ್ಲಿ ಮಹಿಳೆಯರಿಗೆ ಉಚಿತ ಬಸ್ ವ್ಯವಸ್ಥೆ ಇದ್ದು, ನಿತ್ಯ 62 ಲಕ್ಷ ಜನ ಪ್ರಯಾಣ ಮಾಡುತ್ತಿದ್ದಾರೆ. 'ಗೃಹ ಜ್ಯೋತಿ' ಯೋಜನೆಯಡಿ ಉಚಿತ ವಿದ್ಯುತ್ಗಾಗಿ 1.24 ಕೋಟಿ ಗ್ರಾಹಕರಿಗೆ ಸೌಲಭ್ಯ ನೀಡಲಾಗುತ್ತಿದೆ. ಒಟ್ಟಾರೆ, ಎಲ್ಲಾ ಯೋಜನೆಗಳಿಂದ ಒಂದು ವಿಧಾನಸಭಾ ಕ್ಷೇತ್ರಕ್ಕೆ ಅಂದಾಜು 250 ಕೋಟಿ ರೂ. ಹಣ ನೀಡಲಾಗುತ್ತಿದೆ ಎಂದು ರಾಯರೆಡ್ಡಿ ವಿವರಣೆ ನೀಡಿದರು.